ಕಚ್ಚದ ಚೇಳಿನ ಏರದ ಬೇನೆಗೆ..
-ಗೀತಾ ನಾರಾಯಣ್
ಆಗಸ ಮುನಿದು ದಿನ ಮುಗಿದವು
ಅವನಿಯ ಮೃಚ್ಛಕೀಗ ಸಂಕಟ
ಹೊಂಗೆಯ ಮರದಲ್ಲಿ ಹಕ್ಕಿಗಣ್ಗಳು ಸೋರುತ್ತಿವೆ
ಮುಖವಾಡದ ಜನಮಾತ್ರ
ರೋಬೋಟ್ ಹಿಡಿದು ಮಾರುಕಟ್ಟೆಯಲ್ಲಿ ಬೆವರುತ್ತಿದ್ದಾರೆ
ಕಚ್ಚದ ಚೇಳ ಕಂಡು ಅಲ್ಲಮನಿಗೆ ಕಳವಳ
ಏರದ ಬೇನೆಗೆ ಜನ ತತ್ತರಿಸುತ್ತಾರೆ
ನಷ್ಟವೆಂದರೆ ಹಣಕಾಸಿನ ಗಣಿತದಲ್ಲಿ ಜೇಬು ಖಾಲಿಯಾಗಬಾರದು !!
ನಂಬಿಕೆ ಎಂದರೆ ಭಾವಬೆಳಕಲ್ಲ
ವಿಷದ ವರ್ಣ!!!! ಛೇ ತಾಯ ಬೆನ್ನೇರಿ ಕುರುಕುವ ಮರಿ ತ್ವಾರ್ಕಾಗುವಾಗ ಚೇಳಮ್ಮ ಕಳೇಬರವಾದಳು!!!
ಗಂಡಪ್ಪ ಮಾತ್ರ ಕುಟುಕುತ್ತ
ಸಂತತಿ ಹೆಚ್ಚಿಸಿಕೊಳ್ಳುವ ನಶೆಯಲ್ಲಿದ್ದಾನೆ….ಸದ್ದೇ ಆಗದಂತೆ ಕೊಂಡಿ ಹಿಗ್ಗಿಸಿಕೊಂಡು ನಂಜರಡಿ ಹೋದಮೇಲೆ ನಂಬಿಕೆ ಎಂದರೆ
ಸಂವಿಧಾನಬದ್ಧ ಪ್ರಜ್ಞೆಯ ಚೆಲುವು ಎಂದು ಅರ್ಥವೇ ಆಗುವುದಿಲ್ಲ ಮುಖವಾಡಗಳಿಗೆ
ಈಗ ಮಳೆಗಾಲ ಮಾತು ನಿಲ್ಲಿಸಿದೆ… ಪಶ್ಚಿಮದ ಬಿರುಗಾಳಿಗೆ ಎದುರಾಗದ ಮಳೆಗೆ ಮೌನವೇ ರಾಗದೊರತೆ
ಪೂರ್ವದ ಬೆಳಕಲ್ಲಿ ಅಮರತ್ವವಿಲ್ಲ…….
ಬೆಳಕೆಂಬುದು ಬೆಳಕ ಕಳಚಿ ಹೊರಟಮೇಲೂ ಬೆಳಕೇ ಆಗಿರುತ್ತದೆ….
ಹಣತೆಯ ಹದವಾದ ಕಾವು ನೆತ್ತಿಗಡರಿದ ಬೇನೆಗೆ ಮದ್ದಾಗಲಿ……
ರಸನೆಯ ಮೇಲೆ ಬುಸುಗುಡುವ ಚೇಳಿಗೆ ನಿದ್ದೆಹತ್ತಿದರೆ ಎಚ್ಚರವಾಗಿ ಬದುಕಬಹುದು…..






0 Comments