ಮಾಧ್ಯಮ ಅಭಿವ್ಯಕ್ತಿ ಮತ್ತು ಸಾಮಾಜಿಕ ಹೊಣೆಗಾರಿಕೆ

 
 
ನಾ ದಿವಾಕರ
 
 
ನಾಗರಿಕತೆಯ ಬೆಳವಣಿಗೆಯಲ್ಲಿ ಮತ್ತು ಮಾನವನ ಅಭ್ಯುದಯದ ಹಾದಿಯಲ್ಲಿ ಸಂವಹನ ಕ್ರಿಯೆ ಮಹತ್ತರ ಪಾತ್ರ ವಹಿಸುತ್ತದೆ. ಎರಡು ಧೃವಗಳಲ್ಲಿರುವ ಜನಸಮುದಾಯಗಳನ್ನು ಪರಸ್ಪರ ಸಂಪರ್ಕ ಹೊಂದುವಂತೆ ಮಾಡುವ ಸಂವಹನ ಕ್ರಿಯೆ ಸಮಾಜವನ್ನು ಒಂದುಗೂಡಿಸುವಲ್ಲಿ ಸಫಲವಾಗುತ್ತದೆ. ಸಂವಹನ ಕ್ರಿಯೆಗೆ ಪೂರಕವಾದ ಸಂಪರ್ಕ ಮಾಧ್ಯಮಗಳು ಈ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ನಿಜ, ಆಧುನಿಕ ತಂತ್ರಜ್ಞಾನ ಸಾಮಾಜಿಕ ವಲಯದಲ್ಲಿ ಸಂವಹನವನ್ನು ಜಂಗಮ ಸ್ವರೂಪಿಯಾಗಿಸಿದ್ದು ವ್ಯಕ್ತಿಗಳ ನಡುವೆ ನೇರಾನೇರ ಸಂಪರ್ಕ ಸಾಧಿಸಲು ನೆರವಾಗಿದೆ. ಇಂದು ಜಗತ್ತಿನ ಮತ್ತೊಂದು ತುದಿಯಲ್ಲಿ ನಡೆಯುವ ಘಟನೆಗಳ ಬಗ್ಗೆ ತಿಳಿಯಲು ಯಾವುದೇ ಒಂದು ನೆಲೆಯನ್ನು ಹುಡುಕುವ ಅವಶ್ಯಕತೆ ಇಲ್ಲ. ಎಲ್ಲವೂ ತಂತ್ರಜ್ಞಾನದ ಚೌಕಟ್ಟಿನಲ್ಲಿ ಪಸರಿಸುತ್ತಿದೆ.
ವಿದ್ಯುನ್ಮಾನ ಕ್ಷೇತ್ರದಲ್ಲಿನ ಕ್ರಾಂತಿಕಾರಿ ಬೆಳವಣಿಗೆಗಳು ಸುದ್ದಿ ಸಂಗ್ರಹ ಪ್ರಕ್ರಿಯೆಯನ್ನು ಬೆರಳ ತುದಿಯಲ್ಲಿನ ವಿದ್ಯಮಾನವನ್ನಾಗಿ ಮಾಡಿದೆ. ವ್ಯಕ್ತಿಗತ ಅಗತ್ಯತೆ ಮತ್ತು ಆದ್ಯತೆಗಳನ್ನೂ ಲೆಕ್ಕಿಸದೆ ಇಂದು ಜಗತ್ತಿನ ಸುದ್ದಿ ವಾಟ್ಸಪ್, ಫೇಸ್‍ಬುಕ್, ಟ್ವಿಟರ್ ಮೂಲಕ ಎಲ್ಲರನ್ನು ತಲುಪುತ್ತಿರುವುದು ಸಂವಹನ ಕ್ರಿಯೆಯ ಒಂದು ಬೃಹತ್ ಹೆಜ್ಜೆ ಎನ್ನಬಹುದು. ಆದರೆ ಆಧುನಿಕ ಜಗತ್ತು ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದಿದ್ದರೂ ಸಂವಹನ ಪ್ರಕ್ರಿಯೆ ಇನ್ನೂ ಸಾರ್ವತ್ರಿಕ ದೃಷ್ಟಿಕೋನವನ್ನು ಹೊಂದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.
ಈ ಸಾರ್ವತ್ರಿಕತೆಯನ್ನು ಏಕೆ ಸಾಧಿಸಲಾಗಿಲ್ಲ ? ಶೀಘ್ರಗತಿಯಲ್ಲಿ ಪ್ರವಹಿಸುವ ತಂತ್ರಜ್ಞಾನ, ತಂತ್ರಾಂಶಗಳು ಏಕೆ ಜನತೆಯ ರಕ್ಷಣೆಯ ಸಾಧನಗಳಾಗದೆ, ಸಂವೇದನೆಯ ಆಕರಗಳಾಗದೆ, ಜನಸಾಮಾನ್ಯರ ಸಾರ್ವತ್ರಿಕ ಹಿತಾಸಕ್ತಿಗೆ ವಿರುದ್ಧವಾಗಿ ಚಲಿಸುತ್ತಿವೆ ? ಇಲ್ಲಿ ಮಾಧ್ಯಮಗಳ ಉತ್ತರದಾಯಿತ್ವ ಮತ್ತು ಹೊಣೆಗಾರಿಕೆ ಮುನ್ನೆಲೆಗೆ ಬರುತ್ತದೆ. ಒಂದು ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎಂದು ಮಾಧ್ಯಮ ಕ್ಷೇತ್ರವನ್ನ ಬಣ್ಣಿಸಲಾಗುತ್ತಿತ್ತು. ಅಂದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಆಳುವ ವರ್ಗಗಳ ಸರಿ ತಪ್ಪುಗಳನ್ನು, ಪ್ರಮಾದಗಳನ್ನು, ತಪ್ಪು ಹೆಜ್ಜೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಸ್ತಂಭ ಕಾರ್ಯಪ್ರವೃತ್ತವಾಗಿರಬೇಕು ಎಂದರ್ಥ.
ಸ್ವತಂತ್ರ ಅಭಿವ್ಯಕ್ತಿ, ನಿಷ್ಪಕ್ಷಪಾತ ವರದಿ, ಪ್ರಾಮಾಣಿಕ ವಿಶ್ಲೇಷಣೆ, ಪಾರದರ್ಶಕ ಧೋರಣೆ ಮತ್ತು ಜನಪರ ಕಾಳಜಿ ಮಾಧ್ಯಮಗಳ ಮೂಲ ಮಂತ್ರಗಳಾಗಬೇಕು ಎಂದರ್ಥ. ಆದರೆ ಭಾರತದ ಮಾಧ್ಯಮ ಲೋಕ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ. 1970ರ ದಶಕದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕಂಡುಬಂದಿದ್ದ ಮಾಧ್ಯಮಗಳ ಕ್ರಿಯಾಶೀಲತೆ, ಸಂವೇದನೆ ಮತ್ತು ಸಾಮಾಜಿಕ ಬದ್ಧತೆಯನ್ನು ಪ್ರಸ್ತುತ ಸಂದರ್ಭದಲ್ಲಿ ಕಾಣಲಾಗುತ್ತಿಲ್ಲ.
ಈ ಬೆಳವಣಿಗೆಗೆ ಕಾರಣಗಳನ್ನು ಗ್ರಹಿಸಲು ಭೂತಗನ್ನಡಿ ಬೇಕಿಲ್ಲ. ಔದ್ಯಮಿಕ ಹಿತಾಸಕ್ತಿ, ರಾಜಕೀಯ ಒಲವು, ಕಾರ್ಪೋರೇಟ್ ರಾಜಕಾರಣ ಮತ್ತು ಲಾಭ ಗಳಿಕೆಯ ಹಪಾಹಪಿ ಆವರಿಸುವ ಎಲ್ಲ ಕ್ಷೇತ್ರಗಳೂ ಬಹುಶಃ ಹೀಗೆಯೇ ಇರುತ್ತವೆ. ಮೂರು ನಾಲ್ಕು ದಶಕಗಳ ಹಿಂದೆ ಮುದ್ರಣ ಮಾಧ್ಯಮಗಳೇ ಪ್ರಧಾನವಾಗಿದ್ದ ಸಂದರ್ಭದಲ್ಲಿಯೂ ಔದ್ಯಮಿಕ ಹಿತಾಸಕ್ತಿ ಪ್ರಧಾನವಾಗಿತ್ತು. ಮಾಧ್ಯಮ ಸಮೂಹಗಳು ರಾಜಕೀಯ ನಿಲುವುಗಳಲ್ಲೂ ಸಹ ತಮ್ಮದೇ ಆದ ಆಯ್ಕೆಯನ್ನು ಪ್ರದರ್ಶಿಸುತ್ತಿದ್ದವು. ಆದರೆ ಅಂದಿನ ಮಾಧ್ಯಮಗಳಿಗೆ ರಾಜಕೀಯ ಉದ್ದೇಶ ಅಥವಾ ರಾಜಕೀಯ ಹಿತಾಸಕ್ತಿಗಳು ಪ್ರಧಾನವಾಗಿರಲಿಲ್ಲ. ಹಾಗಾಗಿಯೇ 1970ರ ದಶಕದ ಬೆಳವಣಿಗೆಗಳಿಗೆ ಮುದ್ರಣ ಮಾಧ್ಯಮಗಳು ಸಾಕ್ಷಿ ಪ್ರಜ್ಞೆಗಳ ಸ್ವರೂಪದಲ್ಲಿ ಜನಸಾಮಾನ್ಯರ ದನಿಯಾಗಿದ್ದವು. ಬೆಲೆ ಏರಿಕೆ, ನಿರುದ್ಯೋಗ, ತುರ್ತುಪರಿಸ್ಥಿತಿ, ಯುದ್ಧ ವಿರೋಧಿ ಧೋರಣೆ, ಮಹಿಳಾ ಸ್ವಾತಂತ್ರ್ಯ, ದಲಿತ ಚಳುವಳಿ, ಬಂಡಾಯ, ಎಡಪಂಥೀಯ ಚಳುವಳಿ, ಕಾರ್ಮಿಕ ಚಳುವಳಿ ಹೀಗೆ ವಿಭಿನ್ನ ನೆಲೆಗಳ ಸಾಮಾಜಿಕ ಅಭಿವ್ಯಕ್ತಿಗೆ ಮಾಧ್ಯಮಗಳು ಬೌದ್ಧಿಕ ನೆಲೆಯಾಗಿ ಪರಿಣಮಿಸಿದ್ದವು.
ದುರಂತ ಎಂದರೆ ಇಂದು ಯಾವುದೇ ಮಾಧ್ಯಮ ಸಮೂಹವೂ ಈ ಸಾಕ್ಷಿ ಪ್ರಜ್ಞೆಯನ್ನು ಪ್ರತಿನಿಧಿಸುವ ಮನಸ್ಥಿತಿಯಲ್ಲಿಲ್ಲ. ತಂತ್ರಜ್ಞಾನ ಕ್ಷೇತ್ರದ ಮುನ್ನಡೆಯಲ್ಲಿ, ಸಾಕ್ಷರತೆಯಲ್ಲಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರತಿನಿಧಿಸುವಲ್ಲಿ ಕೊಂಚ ಮುನ್ನಡೆ ಸಾಧಿಸಿರುವುದನ್ನು ಬಿಟ್ಟರೆ 1970ರ ದಶಕದ ಭಾರತಕ್ಕೂ 2017ರ ಭಾರತಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಕಾಣುವುದಿಲ್ಲ. ಅಂದಿನ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಭ್ರಮನಿರಸನರಾಗಿದ್ದರು, ಶ್ರಮಜೀವಿಗಳ ಜೀವನ ದುರ್ಭರವಾಗಿತ್ತು, ಮಹಿಳೆಯರ ಮೇಲಿನ ದೌರ್ಜನ್ಯ ಪರಾಕಾಷ್ಠೆ ತಲುಪಿತ್ತು, ಜಾತಿ ದೌರ್ಜನ್ಯ ಹೆಚ್ಚಾಗಿತ್ತು, ಅರ್ಥ ವ್ಯವಸ್ಥೆ ಕುಸಿಯುತ್ತಿತ್ತು, ಪ್ರಭುತ್ವದ ಹಿಡಿತ ಬಿಗಿಯಾಗುತ್ತಿತ್ತು, ಕರಾಳ ಶಾಸನಗಳು ಪ್ರತಿರೋಧದ ದನಿಗಳನ್ನು ಅಡಗಿಸುತ್ತಿದ್ದವು. ಈ ಎಲ್ಲ ವಿದ್ಯಮಾನಗಳನ್ನು 2017ರಲ್ಲಿ ಪುನಃ ಕಾಣುತ್ತಿದ್ದೇವೆ. ನಾವು ಕಾಣಬಹುದಾದ ಒಂದೇ ವ್ಯತ್ಯಾಸ ಎಂದರೆ ಅಂದು ಮಾಧ್ಯಮಗಳು ಜನಸಾಮಾನ್ಯರ ದನಿಯಾಗಿದ್ದವು ಇಂದು ಪ್ರಭುತ್ವದ ದನಿಯಾಗಿವೆ, ಕೆಲವು ಅಪವಾದಗಳನ್ನು ಹೊರತುಪಡಿಸಿ.
ಪ್ರಭುತ್ವ ಸುಳ್ಳು ಹೇಳುತ್ತದೆ. ಮಾಧ್ಯಮ ಸತ್ಯವನ್ನು ಬಿತ್ತರಿಸುತ್ತದೆ. ಪತ್ರಿಕೋದ್ಯಮ ಮತ್ತು ಮಾಧ್ಯಮಗಳು ಸತ್ಯವನ್ನು ಸಾಕಾರಗೊಳಿಸಲು ಶ್ರಮಿಸುತ್ತವೆ. ಹಾಗಾಗಿಯೇ ಮಾಧ್ಯಮ ಕ್ಷೇತ್ರವನ್ನು ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎಂದು ಹೇಳಲಾಗುತ್ತದೆ. ಆದರೆ ಇಂದು ಮಾಧ್ಯಮಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತಿವೆ. ಕಾರ್ಪೋರೇಟ್ ಸಂಸ್ಕೃತಿಯ ಅಡಿಯಾಳುಗಳಾಗಿವೆ. ಹಾಗಾಗಿ ಪ್ರಭುತ್ವದ ತಪ್ಪು ಹೆಜ್ಜೆಗಳನ್ನು ಗುರುತಿಸಲು ಹಿಂಜರಿಯುತ್ತವೆ. ಇದರ ನೇರ ಪರಿಣಾಮವನ್ನು ಇಂದು ಶ್ರಮಜೀವಿ ವರ್ಗ ಎದುರಿಸುತ್ತಿದೆ. ನರೇಂದ್ರ ಮೋದಿ ಸರ್ಕಾರದ ಅಮಾನ್ಯೀಕರಣ ಅಥವಾ ನೋಟು ರದ್ದತಿಯ ನಂತರ, ಗೋರಕ್ಷಣೆಯ ನೆಪದಲ್ಲಿ ದೇಶಾದ್ಯಂತ ಅವ್ಯಾಹತವಾಗಿ ನಡೆದ ಹತ್ಯೆಗಳ ನಂತರ, ಆಹಾರ ಪದ್ಧತಿಯ ಮೇಲಿನ ಪ್ರಹಾರದ ನಂತರ, ದಾದ್ರಿ, ಊನ, ಪೆಹ್ಲುಖಾನ್, ಆಲ್ವಾರ್ ಘಟನೆಗಳ ನಂತರ ಮಾಧ್ಯಮಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಸತ್ಯ ನುಡಿದಿದ್ದರೆ ಬಹುಶಃ ಪನ್ಸಾರೆ, ಧಬೋಲ್ಕರ್, ಕಲಬುರ್ಗಿ ಮತ್ತು ಗೌರಿ ಲಂಕೇಶರ ಹಂತಕರು ಇಷ್ಟು ನಿರ್ಭೀತಿಯಿಂದ ಇರುತ್ತಿರಲಿಲ್ಲ.
ಇಂದಿಗೂ ಕಾಲ ಮಿಂಚಿಲ್ಲ. ಅಮಾನ್ಯೀಕರಣ ವಿಫಲವಾಗಿದೆ. ಅಷ್ಟೇಕೆ ಜಾಗತೀಕರಣ ವಿಫಲವಾಗಿದೆ. ಹಣಕಾಸು ಬಂಡವಾಳದ ಅಧಿಪತ್ಯ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಜನಸಾಮಾನ್ಯರ ಬವಣೆ ಹೇಳತೀರದಾಗಿದೆ. ನಿರುದ್ಯೋಗ ಶಿಖರ ತಲುಪಿದೆ. ಅರ್ಥಿಕ ಹಿಂಜರಿತ ಮತ್ತು ಕುಸಿತ ಖಚಿತವಾಗಿದೆ. ಲಕ್ಷಾಂತರ ಕಾರ್ಮಿಕರು ನೌಕರಿ ಕಳೆದುಕೊಳ್ಳಲಿದ್ದಾರೆ. ನಿತ್ಯಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಮಧ್ಯಮ ವರ್ಗಗಳ ಜೀವನವೇ ತತ್ತರಿಸಿ ಹೋಗುವಂತಿದೆ. ಶ್ರಮಜೀವಿಗಳ ಬದುಕು ಮೂರಾಬಟ್ಟೆಯಾಗಲಿದೆ. ನಾವು ರೋಹಿಂಗ್ಯಾ ವಲಸಿಗರನ್ನು ಕುರಿತು ಚರ್ಚೆ ಮಾಡುತ್ತಿದ್ದೇವೆ. ನವ ಉದಾರವಾದದ ನೀತಿಗಳು ಮತ್ತು ಮೋದಿ ಸರ್ಕಾರದ ಧೋರಣೆ ಭಾರತದಲ್ಲೇ ವಲಸಿಗರ ಸೈನ್ಯಗಳನ್ನು ಸೃಷ್ಟಿಸುತ್ತಿದೆ. ಕೈಗಾರಿಕೆ, ಉತ್ಪಾದನಾ ಕ್ಷೇತ್ರ, ಕೃಷಿ, ಸಾಫ್ಟ್‍ವೇರ್ ಮತ್ತು ಔದ್ಯಮಿಕ ಕ್ಷೇತ್ರ ಹಿನ್ನಡೆ ಅನುಭವಿಸಿದೆ. ಭಾರತದಲ್ಲಿ ನಗರೀಕರಣ ಎಂದರೆ ಗ್ರಾಮೀಣ ಪ್ರದೇಶದಿಂದ ಉದ್ಯೋಗವನ್ನು ಅರಸಿ ನಗರಕ್ಕೆ ದಂಡು ದಂಡಾಗಿ ಬರುವವರಿಗೆ ಆಶ್ರಯ ನೀಡುವುದಷ್ಟೇ ಆಗಿರುತ್ತದೆ. ಈ ಸ್ಥಳೀಯ ನಿರಾಶ್ರಿತರ ಬವಣೆಯನ್ನು ಕೇಳುವವರಾರು ? ನಿರುದ್ಯೋಗ ಮತ್ತು ಆರ್ಥಿಕ ಅಸ್ಥಿರತೆ ತೀವ್ರವಾಗುತ್ತಿದ್ದಂತೆಲ್ಲಾ ಈ ನಿರಾಶ್ರಿತರು ಸ್ಥಳೀಯ ರೋಹಿಂಗ್ಯಾಗಳಾಗಿ ಪರಿಣಮಿಸುವುದು ಸತ್ಯ.
ದ್ವೇಷ ರಾಜಕಾರಣ, ಮತಾಂಧತೆ, ಸಾಮಾಜಿಕ ಕ್ಷೋಭೆ, ಜಾತಿ ದ್ವೇಷ, ನಿರುದ್ಯೋಗ, ಬಡತನ, ಜಾತಿ ದೌರ್ಜನ್ಯ, ಮಹಿಳೆಯರ ಮೇಲಿನ ದೌರ್ಜನ್ಯ, ಸಾಮಾಜಿಕ ತಾರತಮ್ಯ ಇವೆಲ್ಲವೂ ಭಯೋತ್ಪಾದನೆಗಿಂತಲೂ ಗಂಭೀರವಾದ ಸಮಸ್ಯೆಗಳು. ಭಯೋತ್ಪಾದನೆ ಒಂದು ಸಾಂಕ್ರಾಮಿಕ ಸೋಂಕು ರೋಗ. ಈ ಸಮಸ್ಯೆಗಳು ಆಂತರಿಕವಾಗಿ ಉಲ್ಬಣಿಸುವ ಅರ್ಬುಧ ರೋಗ. ಈ ರೋಗ ನಿವಾರಣೆಗೆ ಶ್ರಮಿಸಬೇಕಾದ ವಿದ್ಯುನ್ಮಾನ ಮಾಧ್ಯಮಗಳು ಮನರಂಜನೆಯ ಚೌಕಟ್ಟಿನಲ್ಲಿ, ಮುದ್ರಣ ಮಾಧ್ಯಮಗಳು ಅಸ್ತಿತ್ವದ ಚೌಕಟ್ಟಿನಲ್ಲಿ ಬಂಧಿಯಾಗಿರುವುದು ಈ ದೇಶದ ದುರಂತ. 2100ರಲ್ಲಿ, ಇನ್ನು 83 ವರ್ಷಗಳ ನಂತರ ಜಗತ್ತು ವಿನಾಶದತ್ತ ಸಾಗುತ್ತದೆ ಎಂಬ ಕಲ್ಪಿತ ವಿಚಾರವನ್ನು ರಂಗುರಂಗಾಗಿ ಬಿತ್ತರಿಸುವ ಮಾಧ್ಯಮಗಳಿಗೆ, ತಮ್ಮ ಸುತ್ತಲಿನ ಸಮಾಜದಲ್ಲಿ ಪ್ರಳಯಾಂತಕ ಸನ್ನಿವೇಶ ಸೃಷ್ಟಿಯಾಗುತ್ತಿರುವುದು ಏಕೆ ಕಾಣುತ್ತಿಲ್ಲ ? ಈ ಸನ್ನಿವೇಶಕ್ಕೆ ಯಾವುದೇ ಗ್ರಹಗತಿ ಕಾರಣವಲ್ಲ. ಆಳುವ ವರ್ಗಗಳು ಮತ್ತು ಪ್ರಭುತ್ವ ಪೋಷಿತ ಕಾರ್ಪೋರೇಟ್ ಜಗತ್ತು ಕಾರಣ. ಈ ವಾಸ್ತವವನ್ನು ವಸ್ತುನಿಷ್ಠವಾಗಿ ಜನಸಾಮಾನ್ಯರ ಮುಂದಿರಿಸುವ ಆತ್ಮ ಸ್ಥೈರ್ಯ ಮಾಧ್ಯಮಗಳಿಗೆ ಇರಬೇಕಿತ್ತು. ಇದರೊಂದಿಗೆ ಸಾಮಾಜಿಕ ಹೊಣೆಗಾರಿಕೆಯೂ ಇರಬೇಕಿತ್ತು. ಇಲ್ಲವಲ್ಲಾ !!!!

‍ಲೇಖಕರು avadhi

October 1, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: