ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಗಿಯ ಚಳಿಯಲ್ಲಿ…

ರಾಘವೇಂದ್ರ ಕೆಸವಿನಮನೆ ಅವರ ‘ಇಂಚರ’ ಬ್ಲಾಗ್ ನಲ್ಲಿ ಬಂದ ಒಂದು ಬರಹವನ್ನು ಮೆಚ್ಚಿ ಮತ್ತೊಬ್ಬ ಬ್ಲಾಗಿಗ ಡಿ ಎಸ್ ಶ್ರೀನಿಧಿ ಮೇಲ್ ಕಳುಹಿಸಿದ್ದಾರೆ. ‘ಬ್ಲಾಗರ್ ಗೆ ಬ್ಲಾಗರ್ ಮುನಿವಂ’ ಎಂಬ ಮಾತು ಮತ್ತೆ ಸುಳ್ಳಾಗಿದೆ. 

winter-flower-1

ಮಾಗಿ ಚಳಿಗೆ ಮೈಯೊಡ್ಡಿ

ಮಾಗಿ ಚಳಿ ಮತ್ತೆ ಮೈ ಸೆಟೆದುಕೊಂಡು ಎದ್ದು ನಿಂತಿದೆ. ಬೀಸುವ ಕುಳರ್ಗಾಳಿ ಚರ್ಮದ ಒಳ ಹೊಕ್ಕು ಬೆನ್ನುಹುರಿಯ ಆಳದಿಂದ ನಡುಕ ಹುಟ್ಟಿಸುತ್ತಿದೆ. ಮಹಾ ‘ಮಡಿವಂತ’ ಮನಸು ಕೂಡ ಬೆಳ್ಳಂಬೆಳಿಗ್ಗೆಯ ಹಬೆ ಕಾಫಿಗೆ ಕೈ ಚಾಚುತ್ತದೆ.

ಳೆಯಂತೆ ಚಳಿಗೂ ಸಹ ಅದರದೇ ಸೊಗಸಿದೆ. ಅದನ್ನು ನೀವು ಇಲ್ಲಿ, ನಗರದಲ್ಲಿ ಕೂತು ಕಾಣುವುದು ಸಾಧ್ಯವಿಲ್ಲ. ಇಲ್ಲಿ ಹೆಚ್ಚೆಂದರೆ ಉಲನ್ ಟೋಪಿ, ಮಫ್ಲರ್ ಧರಿಸಿ ಹಾಲು, ಪೇಪರ್ ಹಾಕುವವರನ್ನು ನೋಡಿಯೋ; ಕಣ್ಣೆರಡು ಬಿಟ್ಟು ಇಡೀ ದೇಹವನ್ನು ಅಮ್ಮಂದಿರು ಸುತ್ತಿದ ಮಫ್ಲರಿನಲ್ಲಿ ಮುಚ್ಚಿಕೊಂಡು ಹಿಂಸೆಪಡುತ್ತ ಓಡಾಡುವ ಷೋಕೇಸ್ ಬೇಬಿಗಳನ್ನು ನೋಡಿಯೋ ಚಳಿಗಾಲವನ್ನು ನೆನಪಿಸಿಕೊಳ್ಳಬೇಕು.

ನೀವು ಚಳಿಗಾಲದ ಛಳಕು, ಸೊಗಸು ಸವಿಯಬೇಕೆಂದರೆ ಮಲೆನಾಡಿಗೇ ಹೋಗಬೇಕು. ಅದರಲ್ಲೂ ತೋಟ, ಗದ್ದೆಗಳಿಂದ ಸುತ್ತುವರಿದ ಮನೆಯಾಗಿಬಿಟ್ಟರಂತೂ ನಿಮಗೆ ಚಳಿಯ ದಿವ್ಯದರ್ಶನವಾಗುವುದು ಖಂಡಿತ. ದೀಪಾವಳಿ ಮುಗಿಯುವುದೇ ಗಡಿ. ಕಂಬಳಿ ಹೊದ್ದು ಕಟ್ಟೆ ತುದಿಯಲ್ಲಿ ಕೂರುವ ತಳವಾರನಂತೆ ಚಳಿ ಸದ್ದಿಲ್ಲದೆ ಮಲೆನಾಡಿಗೆ ಕಾಲಿಟ್ಟುಬಿಡುತ್ತದೆ. ನವೆಂಬರ್ ಮುಗಿದು ಡಿಸೆಂಬರ್ ಕಾಲಿಡುತ್ತಿದ್ದಂತೆ ಮೈ ಕೊಡವಿ ಮೇಲೇಳುವ ಚಳಿ ಪೂರ್ತಿ ಬಿಡುವುದು ಶಿವರಾತ್ರಿ ಹೊತ್ತಿಗೆ. “ಶಿವರಾತ್ರಿ ಬಂದಾಗ ಶಿವ ಶಿವಾ…. ಅನ್ನುತ್ತ ಚಳಿ ಓಡಿಹೋಗುತ್ತೆ” ಅನ್ನೋ ಮಾತು ಮಲೆನಾಡಿನ ಹಳಬರ ಬಾಯಲ್ಲಿ ಇಂದಿಗೂ ಪ್ರಚಲಿತ.

ಲೆನಾಡಿನ ಚಳಿಗಾಲದ ಮುಂಜಾವು, ಮುಸ್ಸಂಜೆ – ಎರಡೂ ರಮಣೀಯವೇ. ನಸುಕಿನಲ್ಲೇ ಎದ್ದು ಗದ್ದೆಯ ಬದುವಿನ ಮೇಲೆ ನಡೆಯುತ್ತಾ, ಹುಲ್ಲುಹಾಸಿನ ಮೇಲೆ ಬಿದ್ದಿರುವ ಮಂಜಿನ ಹನಿಗಳನ್ನು ತುಳಿಯುತ್ತಾ ನಡೆಯುತ್ತಿದ್ದರೆ ಅಂಗಾಲಿನಿಂದ ನೆತ್ತಿಯವರೆಗೂ ಅವ್ಯಕ್ತ ರೋಮಾಂಚನ! ಅದೃಷ್ಟವಿದ್ದರೆ ಕಟಾವು ಮಾಡಿದ ಗದ್ದೆಗಳಲ್ಲಿ ಮೇಯುತ್ತಿರುವ ನವಿಲುಗಳ ದರ್ಶನಭಾಗ್ಯವೂ ಲಭ್ಯ. ಬಿದ್ದ ಇಬ್ಬನಿಯ ಭಾರ ಕಳೆದು
ಕೊಳ್ಳಲು ಅವು ಉದುರಿಸಿದ ರೇಷ್ಮೆ ನುಣುಪಿನ ನವಿಲುಗರಿಗಳು ಸಿಕ್ಕಲೂಬಹುದು. 

ಬಾನಲ್ಲಿ ಬೆಳ್ಳಿ ಕಿರಣ ಮೂಡುತ್ತಿದ್ದಂತೆ ಅಡಿಕೆ ತೋಟಕ್ಕೆ ಹೋದರೆ ಬರಲೋ ಬೇಡವೋ ಎಂಬಂತೆ ಅಡಿಕೆ ಮರದ ಸಂದುಗಳಿಂದ ಇಣುಕುವ ಸೂರ್ಯನನ್ನು ನೋಡುವುದೇ ಚಂದ.ಮಲೆನಾಡಿನಲ್ಲಿ ಚಳಿಗಾಲದ ಬಿಸಿಲೆಂದರೆ ಬಂಗಾರಕ್ಕೆ ಸಮ. ಬೆಳಗಿನ ತಿರುಗಾಟ, ತಿಂಡಿ ಮುಗಿಸಿ ಹಬೆಯಾಡುವ ಕಾಫಿ ಹೀರುತ್ತ ಅಂಗಳದಲ್ಲಿ ಕೂತು ಬಿಸಿಲಿಗೆ ಬೆನ್ನೊಡ್ಡಿದರೆ ಆಹಾ ಮಹದಾನಂದಂ!! ಗಂಟೆ ಹನ್ನೊಂದಾದರೂ ಬಿಸಿಲೇರಿದ್ದೇ ತಿಳಿಯುವುದಿಲ್ಲ.

 

ಳಿಗಾಲದಲ್ಲಿ ಸಂಜೆ ನಾಲ್ಕಕ್ಕೇ ಬಿಸಿಲು ತಾಪ ಕಳೆದುಕೊಂಡು ತಣ್ಣಗಾಗಿಬಿಡುತ್ತದೆ. ಮೂರುಸಂಜೆಯಾಗುತ್ತಿದ್ದಂತೆ ಬೀಸುವ ಕುಳಿರ್ಗಾಳಿ ಕೈಕಾಲು ತಣ್ಣಗಾಗಿಸಿಬಿಡುತ್ತದೆ. ಆಗ ಕಾವೇರಿಸಲು ಹೊಡಸಲು ಬೆಂಕಿಯೇ ಬೇಕು. ಅಡಿಕೆ ಕೊಯ್ಲು ಈ ಸಮಯದಲ್ಲೇ ನಡೆಯುವುದರಿಂದ ಅಡಿಕೆ ಒಲೆಯ ಬೆಂಕಿಯಲ್ಲಿ ಮೈ ಕಾಯಿಸುವುದೂ ಹಿತವಾಗಿರುತ್ತದೆ. ಅಡಿಕೆ ಒಲೆಯ ಮುಂದೆ ಕೂತು ಅಡಿಕೆ ಸುಲಿಯುವವರು ಹೇಳುವ ಹಾಡು, ಲಾವಣಿ, ತರಹೇವಾರಿ ಕಥೆಗಳನ್ನು ಕೇಳುತ್ತಿದ್ದರೆ ಸಮಯ ತಡರಾತ್ರಿ ತಲುಪಿದ್ದೇ ತಿಳಿಯುವುದಿಲ್ಲ.

 

ಹೀಗೆ ಮಲೆನಾಡಿನ ಚಳಿಗಾಲದ ದಿನಚರಿ ಸೊಗಸಾಗಿ ಕಳೆಯುತ್ತದೆ. ಏನೇ ಘನಕಾರ್ಯವಿದ್ದರೂ ಚಳಿಗಾಲದಲ್ಲಿ ಮಲೆನಾಡು ರಾತ್ರಿ ಹತ್ತಕ್ಕೇ ದೀಪವಾರಿಸಿಕೊಂಡು ಸ್ತಬ್ಧವಾಗಿಬಿಡುತ್ತದೆ. ಆಮೇಲಿನ ಸಮಯವೇನಿದ್ದರೂ ‘ಅಪ್ಪಿಕೋ’ ಚಳುವಳಿಗೆ ಮೀಸಲು.! ಮದುವೆಯಾಗದವರು ‘ಒಂದು ಚಳಿಗಾಲ ವ್ಯರ್ಥವಾಯಿತಲ್ಲ’ ಎಂದು ಕೊರಗುವುದು ಮಾಮೂಲು. ಹಾಗಿರುತ್ತದೆ ಮಲೆ(ಳೆ)ನಾಡಿನ ಚಳಿಯ ಛಳಕು. ಜೀವನದಲ್ಲೊಮ್ಮೆ ಆ ಮಾಗಿ ಚಳಿಗೆ ಮೈ ಒಡ್ಡದಿದ್ದರೆ ಏನೋ ಕಳದುಕೊಂಡಂತೆ ಎಂಬುದು ಮಲೆನಾಡಿನ ಚಳಿಗಾಲ ಕಂಡವರ ಅಂಬೋಣ!
ಈ ಬಾರಿಯ ಚಳಿಗಾಲ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿಯಿದೆ!

 

[ಟಿಪ್ಪಣಿ:ಇದು ಪ್ರತಿ ವರ್ಷದ ಮಲೆನಾಡಿನ ಚಳಿಗಾಲದ ದಿನಚರಿ, ನನ್ನ ನಿಲುಕಿಗೆ ಸಿಕ್ಕಷ್ಟು ಚಳಿಯ ಛಳಕುಗಳನ್ನು ಇಲ್ಲಿ ಬರೆದಿದ್ದೇನೆ. ನಿಜಕ್ಕೂ ಮಲೆನಾಡಿನ ಚಳಿಗಾಲ ಅದ್ಭುತವಾಗಿರುತ್ತದೆ. 
ಈ ಬಾರಿ ಜೋರು ಚಳಿಯಲ್ಲಿ ಊರಿನಲ್ಲೇ ಇದ್ದರೂ ‘ಪೇಷೆಂಟ್’ ಪಟ್ಟ ಹೊತ್ತುಕೊಂಡಿದ್ದ ಕಾರಣ ಅಮ್ಮನೆಂಬ ಸೆಕ್ಯುರಿಟಿ ಸೂಪರ್ವೈಸರ್ ಅಂಗಳಕ್ಕೇ ಕಾಲಿಡಲು ಬಿಡಲಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಹಾಗಾಯಿತು.]

‍ಲೇಖಕರು avadhi

12 February, 2009

1 Comment

  1. ಅಶೋಕ ಉಚ್ಚಂಗಿ

    ತನ್ನ ಸುತ್ತಲಿನ ಸಂಗತಿಗಳನ್ನು ಚೆನ್ನಾಗಿ ಅನುಭವಿಸಿ ಬರೆಯಬಲ್ಲ ಬರಹಗಾರ
    ನಮ್ಮ ರಾಘವೇಂದ್ರ ಕೆಸವಿನಮನೆ.ಇಲ್ಲಿ ಪ್ರಕಟಿಸಿದ್ದಕ್ಕೆ ಧನ್ಯವಾದಗಳು
    ಅಶೋಕ ಉಚ್ಚಂಗಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading