ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಂತಪ್ಪ ನಂದೂರ, ಅಲ್ಲಾಗಿರಿರಾಜ್‌ ಅವರಿಗೆ ಪ್ರಶಸ್ತಿ ಪ್ರದಾನ..

ಜೀವಕಾರುಣ್ಯ ಸಾಹಿತ್ಯ ವೇದಿಕೆಯು ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕವಿಗಳಾದ ಮಹಾಂತಪ್ಪ ನಂದೂರ ಮತ್ತು ಅಲ್ಲಾಗಿರಿರಾಜ್‌ ಅವರಿಗೆ ೨೦೧೯ ಮತ್ತು ೨೦೨೦ ನೇ ಸಾಲಿನ ‘ಕವಿ ಮೋಹನ ಕುರಡಗಿ ಕಾವ್ಯ ಪ್ರಶಸ್ತಿ’ಗಳನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿಯು ತಲಾ ರೂ.೧೦ ಸಾವಿರ ನಗದು ಬಹುಮಾನ ಹಾಗೂ ಫಲಕ ಒಳಗೊಂಡಿದೆ. ೨೦೧೯ ನೇ ಸಾಲಿನ ಪ್ರಶಸ್ತಿಯನ್ನು ಮಹಾಂತಪ್ಪ ನಂದೂರ ಅವರ ‘ಅರಿವೇ ಪ್ರಮಾಣು’ ಕೃತಿಗೆ ಹಾಗೂ ೨೦೨೦ ನೇ ಸಾಲಿನ ಪ್ರಶಸ್ತಿಯನ್ನು ಅಲ್ಲಾಗಿರಿರಾಜ್‌ ಅವರ ‘ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ’ ಕೃತಿಗೆ ಸಂದಿತ್ತು. ಹಿರಿಯ ಕವಿ ಸತೀಶ ಕುಲಕರ್ಣಿಯವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಕತೆಗಾರ್ತಿ ಸುನಂದಾ ಕಡಮೆ ‘ಅರಿವೇ ಪ್ರಮಾಣು’ ಕೃತಿ ಕುರಿತು ಮಾತನಾಡಿ ‘ಅಕ್ಕ ನಾಗಮ್ಮನನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿದ ಈ ಕೃತಿ ಶರಣ ಸಾಹಿತ್ಯದ ನುಡಿಗಟ್ಟುಗಳು ನಮ್ಮಕಾಲದ ಸ್ಪಂದನೆಗೆ ತಾಕಿಕೊಂಡು ೮೦೦ ವರ್ಷಗಳ ಹಳೆಯ ಜಗತ್ತನ್ನು ನಮ್ಮ ಸಂವೇದನೆಗೆ ತರುವಂತಿದೆ, ಸುನೀತ ಕಾವ್ಯ ಬಂಧದಲ್ಲಿ ಕಟ್ಟಿದ ಈ ಅಪರೂಪದ ಪುಸ್ತಕವು ಒಟ್ಟಾರೆಯಾಗಿ ಒಂದು ಹೆಂಗರುಳಿನ ಕಾವ್ಯವಾಗಿದೆ, ಬಸವಣ್ಣನನ್ನು ರೂಪಿಸಿದ್ದೇ ಅಕ್ಕನಾಗಮ್ಮ ಎಂಬ ಅಭಿವ್ಯಕ್ತಿಯೇ ಈ ಕೃತಿಯ ವಿಶೇಷವಾಗಿದೆ’ ಎಂದರು.

ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ ಕೃತಿಯ ಕುರಿತು ಮಾತನಾಡಿದ ಕವಿ ಪ್ರಕಾಶ ಕಡಮೆ ‘ಅಲ್ಲಾಗಿರಿರಾಜ್‌ ಅವರು ಹಸಿದವರ ತೊಳಲಾಟವನ್ನು ಈ ಕೃತಿಯಲ್ಲಿ ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ, ಅಧಿಕಾರದಿಂದ ರೈತರ ಪ್ರತಿಭಟನೆ ಹತ್ತಿಕ್ಕುವ ಹುನ್ನಾರಗಳನ್ನು ಸೊಗಸಾಗಿ ಚಿತ್ರಿಸಿಕೊಟ್ಟಿದ್ದಾರೆ’ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಹಾಂತಪ್ಪ ನಂದೂರ ‘ಕಾವ್ಯ ನನ್ನ ಮೊದಲ ಮತ್ತು ಕೊನೆಯ ಆದ್ಯತೆ, ನಾನಿದನ್ನು ಹದಿನೆಂಟು ತಿಂಗಳುಗಳ ಕಾಲ ನಿರಂತರವಾಗಿ ಧ್ಯಾನಿಸಿ ಅಧ್ಯಯನ ಕೈಗೊಂಡು ರಚಿಸಿದ ಕೃತಿಯಿದು, ಅಷ್ಟು ಕಾಲಾವಧಿಯಲ್ಲಿ ನಾನು ಶರಣರ ಕಾಲಘಟ್ಟದಲ್ಲೇ ಜೀವಿಸಿದ್ದೆ, ಅದೊಂದು ಅಭೂತಪೂರ್ವ ಅನುಭವ’ ಎಂದರು. ಅಲ್ಲಾಗಿರಿರಾಜ್ ಮಾತನಾಡಿ ‘ಯುವ ಸಮುದಾಯಕ್ಕೆಖಡ್ಗ ನೀಡುವ ಬದಲು ಪುಸ್ತಕ ದೀಕ್ಷೆ ಕೊಡಿಸುವ ಅವಶ್ಯಕತೆಯಿದೆ’ ಎಂದರು.

ಸಾಹಿತಿ ಡಾ. ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸಿದ್ದರು. ಜೀವ ಕಾರುಣ್ಯ ವೇದಿಕೆ ಅಧ್ಯಕ್ಷ ಗಣೇಶ ನಾಡೋರ ಪ್ರಾಸ್ತಾವಿಕ ಮಾತನಾಡಿದರು, ಡಾ. ಮಹೇಶ ಗಾಜಪ್ಪನವರ ಸ್ವಾಗತಿಸಿದರು. ಡಾ. ಗೀತಾಂಜಲಿ ಕುರಡಗಿ ನಿರೂಪಿಸಿದರು, ಅಶ್ವಿನಿ ಕುರಡಗಿ ವಂದಿಸಿದರು, ಮಂಜುನಾಥ ಪಟಗಾರ, ಸಿ.ಎಂ. ಮುನಿಸ್ವಾಮಿ, ಎಂಬಿ ಅಡ್ನೂರ, ಚನ್ನಪ್ಪ ಅಂಗಡಿ, ಸಿ.ಎಂ ಚನ್ನಬಸಪ್ಪ, ಬಸೂ ಬೇವಿನಗಿಡದ, ನಿರ್ಮಲಾ ಶೆಟ್ಟರ, ಪುಷ್ಪಾ ನಂದೂರ, ದೀಕ್ಷಾ ನಂದೂರ, ಭಗವತಿ, ಜಯಕುಮಾರ ಮುಂತಾದವರು ಪಾಲ್ಗೊಂಡಿದ್ದರು.

‍ಲೇಖಕರು Admin

2 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading