ಗೀತಾ ಜಿ ಹೆಗಡೆ ಕಲ್ಮನೆ
ಮಸಲತ್ತು ಮಾಡುವ ಕವಿತೆಗಳಿಗೆ
ಮನಸೋ ಇಚ್ಛೆ ರೆಕ್ಕೆಗಳು
ಪುಟಿದೇಳುತ್ತವೆ ಆಗಲೇ
ತಮ್ಮ ಹಕ್ಕು ಸ್ಥಾಪಿಸಲು.
ಇರೆ ಇರೆ ಸ್ವಲ್ಪ
ಬರಿ ಬರಿ ಬೇಗ
ಬದಿಗೊತ್ತಿಡು ನಿನ್ನ ಕೆಲಸ
ನಾ ಬಿಟ್ಟರೆ ಸಿಕ್ಕಾ
ಎಂದು ದುಂಬಾಲು ಬೀಳುತ್ತವೆ.
ಈ ಮಾತಿಗೆ ತಗಲಾಕ್ಕೊಳದೇ ಇರುವವರು ಯಾರು?
ಗೊತ್ತುಮಾಡಿಕೊಂಡು ಬಿಟ್ಟಿದೆ
ನಮ್ಮ ವೀಕ್ನೆಸ್ಸು!
ಇದಕ್ಕೆ ಸರಿಯಾಗಿ
ಅಲ್ಲೋ ಇಲ್ಲೋ ಎಲ್ಲೋ
ಪ್ರತೀ ಹಬ್ಬಕ್ಕೂ ಹುಣ್ಣಿಮೆಗೂ
ಸ್ಪರ್ಧೆ ಬೇರೆ
ಕಳಿಸಿ ಬೇಗ ಬೇಗ
ಗೀಟಾಕಿರ್ತಾರೆ ಅಂತಿಮ ದಿನಾಂಕ.
ಸರಿ ಹೋಯ್ತು….
ರೋಗಿ ಬಯಸಿದ್ದೂ ಹಾಲು ವೈದ್ಯ ಹೇಳಿದ್ದೂ ಅದೇ
ಮತ್ತಿನ್ನೇನು ಕೂತು ಗೀಚೋದೆ.
ತಿದ್ದಿ ತೀಡಿ ಒನಪು ಮಾಡಿ
ಕಳಿಸುವ ಗಡಿಬಿಡಿ ಆತುರ
ಒಂದಿಷ್ಟು ನಿರೀಕ್ಷೆಯಲ್ಲಿ
ಇನ್ನು ಹಬ್ಬ ಹುಣ್ಣಿಮೆ ಕೆಲಸದ ತಯಾರಿಗೆ ಹಿಂದೇಟು
ಮಾಡಿದರಾಯಿತು….
ಎಷ್ಟು ಹಬ್ಬಗಳಪ್ಪಾ…?
ಉದಾಸೀನ ಈಗೀಗ.
ಮೈ ತುಂಬಾ ದಂಡಿ ಕೆಲಸಗಳನ್ನು
ಸರಸರನೆ ಹೊತ್ತು ತರುವ ಹಬ್ಬಗಳ ಸಾಲು
ಮೈಗಳ್ಳತನ ದೂರ ಸರಿಸಿ ಮನೆ ಮನ ಶುಚಿಗೊಳಿಸುವುದಂತೂ ದಿಟವೇ…
ಆದರೆ ಬರೆಯುವ ಕೈಗೆ ಕೋಳ ತೊಡಿಸುತ್ತಲ್ಲಾ
ಅದೇ ಬೇಜಾರು
ಪುರುಸೊತ್ತಿಲ್ಲವೆಂದು ದೂರ ತಳ್ಳೋದಕ್ಕೂ ಆಗದೆ
ಬಿಡಲೂ ಆಗದೆ
ಭಯಂಕರ ಒದ್ದಾಟ…
ಆಗೆಲ್ಲಾ ಅನಿಸುವುದು
ಈ ಹಬ್ಬವಾದರೂ ಯಾಕೆ ಬರುವುದೋ…
ಈ ಶಾಸ್ತ್ರ ಸಂಪ್ರದಾಯ ಯಾರು ಮಾಡಿಟ್ಟರೋ…
ಈ ಹೆಣ್ಣು ಜನ್ಮಕ್ಕಿಷ್ಟು….
0 ಪ್ರತಿಕ್ರಿಯೆಗಳು