ಬಾ ಹುಲಿಕಲ್ ನೆತ್ತಿಗೆ-7 -ಪ್ರೊ. ಶಿವರಾಮಯ್ಯ ಪಾತ್ರ ವರ್ಗ ಬಸವಲಿಂಗಯ್ಯನವರು ಮದುಮಗಳು ನಾಟಕಕ್ಕಾಗಿ ರಂಗಾಯಣದ ನುರಿತ 30 ಕಲಾವಿದರೊಂದಿಗೆ ಸುಮಾರು 50 ಜನ ಹೊಸ ಕಲಾವಿದರನ್ನು ನಾಡಿನಾದ್ಯಂತ ಜಾಹೀರಾತು ಕೊಟ್ಟು ಕರೆಸಿದ್ದರು. ರಂಗಾಯಣದ ಕಡೆ ಹೋದಾಗಲೆಲ್ಲ ನನಗೆ ಕುತೂಹಲ. ನಾಟಕದ ಯಾವ ಯಾವ ಪಾತ್ರಕ್ಕೆ ಯಾರು ಫಿಟ್ ಆಗಬಹುದು ಎಂದು ನನ್ನ ಕಣ್ಣು ಅಲ್ಲಿ ತರಬೇತಿಯಲ್ಲಿದ್ದ ಹುಡುಗ-ಹುಡುಗಿಯರಲ್ಲಿ, ಮುಖ್ಯವಾಗಿ ಯಾರು ತಿಮ್ಮಿ, ಗುತ್ತಿ, ಪೀಂಚಲು, ಐತ, ಚಿನ್ನಮ್ಮ, ಮುಕುಂದಯ್ಯ-ಈ ಮುಂತಾದ ಪಾತ್ರಗಳನ್ನು ವಹಿಸಬಲ್ಲರು? ಅವರು ಆ ಪಾತ್ರ, ಇವರು ಈ ಪಾತ್ರ ಮಾಡಿದರೆ ಹೇಗಿರುತ್ತದೆ? ಮುಂತಾಗಿ ಕಲ್ಪಿಸಿಕೊಂಡು ಅನ್ವೇಷಣೆಗೆ ತೊಡಗುತ್ತಿದ್ದೆ.
(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)
ಇಲ್ಲಿ ಯಾರೂ ಮುಖ್ಯರಲ್ಲ. ಯಾರೂ ಅಮುಖ್ಯರಲ್ಲ ಎಂದು ಕುವೆಂಪು ಹೇಳಿದ್ದರೂ ಸಹ ಭೀರುವಿಗೆ ಭಯಂಕರ ರಸಿಕ ಧೀರಂತೆ ಕಲಾಶಂಕರ ಎಂಬ ಮಾತಿಗೆ ಅಕ್ಷರಶಃ ಪ್ರತಿಮೆಯಾಗಿರುವ ಆ ಹುಲಿಕಲ್ಲು ನೆತ್ತಿಗೆ ಏರಿದವರು ಈ ಮೂರು ಜೋಡಿಗಳು ತಾನೆ? ಮದುವೆಗಿದ್ದ ಅಡ್ಡಿಗಳಿಂದ ಪಾರಾಗುವ, ಪಾರಾಗಲು ನೆರವಾಗುವ ಮೂರು ಜೋಡಿಗಳ ಸುತ್ತ ಕತೆ ಬೆಳೆಯುತ್ತದೆ. ಉಂಗುರದ ಆಮಿಷಕ್ಕೊಳಗಾಗಿ ಕಡೆಗೆ ಸಾಯುವ ಕಾವೇರಿಯ ಕತೆಯೂ ಆನುಷಂಗಿಕ. ಆದ್ದರಿಂದಲೇ ನನಗೆ ಈ ಪಾತ್ರಗಳ ಬಗ್ಗೆ ಕುತೂಹಲವಿತ್ತು. ಆ ಕಾರೆಂಬಕತ್ತಲು, ಭೋರೆಂಬ ಮಳೆಯಲ್ಲಿ ಹುಲಿಕಲ್ಲು ನೆತ್ತಿಗೆ ಹತ್ತುವ ಪಾತ್ರಗಳು ಹೇಗಿರಬೇಕೆಂದು ನನ್ನ ಕಣ್ಣೆದುರು ನಾನೇ ಕಲ್ಪಿಸಿಕೊಳ್ಳುತ್ತಿದ್ದೆ. ಆದರೆ ನನ್ನ ಕಲ್ಪನಾ ಲೋಕದ ತಿಮ್ಮಿ, ಗುತ್ತಿ, ಪೀಂಚಲು, ಐತ, ಚಿನ್ನಮ್ಮ, ಮುಕುಂದಯ್ಯ ಇವರನ್ನು ಹೋಲುವ ಕಲಾವಿದರನ್ನು ಅಲ್ಲಿ ಕಾಣಲಾರದೆ ಚಡಬಡಿಸುತ್ತ ಒಮ್ಮೆ ಬಸೂಗೆ, ‘ಆ ಹುಡುಗರ ಮಾತಿರಲಿ, ತಿಮ್ಮಿ, ಪೀಂಚಲು, ಚಿನ್ನಮ್ಮ ಈ ಹುಡುಗಿಯರ ಪಾತ್ರಕ್ಕೆ ಹೊಂದುವ ಹುಡುಗಿಯರೇ ಇಲ್ಲಿ ಕಾಣುತ್ತಿಲ್ಲವಲ್ಲ’ ಎಂದು ನನ್ನ ಅಳುಕನ್ನು ವ್ಯಕ್ತಪಡಿಸಿದೆ. ಅದಕ್ಕೆ ಅವರು ತಮ್ಮ ಎಂದಿನ ನಗೆ ನಕ್ಕು ‘ಇರಿಸಾರ್ ನೋಡುವಿರಂತೆ, ಆ ಪಾತ್ರಗಳಿಗೆ ಒಪ್ಪುವ ಹುಡುಗಿಯರು ಇವರಲ್ಲೇ ಇದ್ದಾರೆ. ಈ ಸ್ಥಳೀಯ ಪ್ರತಿಭೆಗಳಿಗೆ ‘ಸ್ಟಾರ್ ವ್ಯಾಲ್ಯೂ’ ಇಲ್ಲವಾದರೂ ಅವರಿಂದ ಉತ್ತಮ ನಟನೆಯನ್ನು ನೀವು ನಿರೀಕ್ಷಿಸಬಹುದು. ಆ ಗ್ಯಾರಂಟಿ ನಾನು ಕೊಡುತ್ತೇನೆ’ ಎಂದರು. ಮುಂದುವರಿದು ನಮ್ಮ ಸರ್ಕಾರ ಕೊಡುವ ‘ಪೇಮೆಂಟ್’ಗೆ ಇನ್ನೆಂಥ ಕಲಾವಿದರು ನಮಗೆ ಸಿಗುತ್ತಾರೆ. ಹೇಳಿ? ಎಂದು ನನ್ನನ್ನೇ ಕೇಳಿದರು. ಈ ಹೊತ್ತಿಗಾಗಲೇ ಹಂಪಿಯಲ್ಲಿ ನಡೆದ ಶ್ರೀ ಕೃಷ್ಣದೇವರಾಯನ 500ನೇ ವರ್ಧಂತಿ ಉತ್ಸವಕ್ಕೆ ಅಖಿಲ ಭಾರತಮಟ್ಟದ ಮುದಿಹಾಡುಗಾರ್ತಿಯರನ್ನು, ನೃತ್ಯಗಾತರ್ಿಯರನ್ನು ಕರೆಸಿ ಒಬ್ಬೊಬ್ಬರಿಗೂ ಲಕ್ಷಾಂತರ ರೂಪಾಯಿ ಸುರಿದದ್ದು ಒಟ್ಟಾರೆ ಆ ಉತ್ಸವಕ್ಕೆ ಸುಮಾರು 50 ಕೋಟಿಯಷ್ಟು ಹಣ ಬೊಕ್ಕಸದಿಂದ ವ್ಯವವಾಯಿತು ಎಂಬ ಟೀಕೆ ಮಾಧ್ಯಮಗಳಲ್ಲಿ ಬಂದಾಗಿತ್ತು. ಆದರೆ ಮದುಮಗಳು ಅಂಥ ನಾಟಕಕ್ಕೆ ಕೇವಲ 25 ಲಕ್ಷ ಬಡ್ಜೆಟ್ ಎಂದು ಗೊತ್ತಾಗಿತ್ತು. ಅದೂ ಸಹ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮನುಬಳೆಗಾರ್ ಮತ್ತು ರಂಗಾಯಣದ ಪ್ರಭಾರ ಹೊತ್ತಿದ್ದ ಕಾ.ತ. ಚಿಕ್ಕಣ್ಣ ಮುಂತಾದವರ ವಿಶೇಷ ಮುತುವಜರ್ಿಯಿಂದ. ಆಮೇಲೆ ಬಸು ಇದೇ 70 ಜನ ಕಲಾವಿದರಿಂದ ನಾಟಕ ಆಡಿಸಿ ಸೈ ಎನಿಸಿಕೊಂಡದ್ದು ಈಗ ಇತಿಹಾಸ ಮುಂದುವರೆಯುವುದು…….. ]]>
0 ಪ್ರತಿಕ್ರಿಯೆಗಳು