ಬಾ ಹುಲಿಕಲ್ ನೆತ್ತಿಗೆ-9 -ಪ್ರೊ. ಶಿವರಾಮಯ್ಯ ಚಂದೂಪೂಜಾತರ್ಿ ದಕ್ಷಿಣ ಕನ್ನಡದಿಂದ ಬಂದು ಮೇಗರವಳ್ಳಿಯಲ್ಲಿ ಓಟಲ್ ಮನೆ ನಡೆಸುತ್ತಿದ್ದಳು. ಒಮ್ಮೆ ಈಕೆ ಹಾದಿ-ಬೀದಿಯಲ್ಲಿ, ಸಂತೆ_ಸಾಮಾನಿಗೆ ಓಡಾಡುತ್ತಿದ್ದ ಜನರನ್ನು ಚಪ್ಪಾಳೆತಟ್ಟಿ ಕರೆದು, ಪುಟ್ಟಪ್ಪನವರ ಭಿತ್ತಿ ಚಿತ್ರವನ್ನು ತೋರಿಸುತ್ತ ‘ಹೋಯ್ ಬನ್ನಿ ಇಲ್ಲಿ ಕಾಣಿ ಕೆ.ಯಿ. ಪುಟ್ಟಪ್ಪನವರ ಪಟ ಬಂದಿದೆ ಪತ್ರಿಕೆಯಲ್ಲಿ ಕಾಣಿ ಬನ್ನಿ’ ಎಂದು ಗಿರಾಕಿಗಳನ್ನು ಆಹ್ವಾನಿಸುತ್ತಿದ್ದಳಂತೆ. ಮಲೆನಾಡಿನ ಒಕ್ಕಲಿಗ ಗೌಡರು ಕುತೂಹಲದಿಂದ ಬರುವುದು, ಫೋಟೋ ಕಂಡು ‘ರಾಜಕುಮಾರ ಇದ್ದಾಂಗೆ ಇದ್ದಾರೆಂದು ಮಾತಾಡಿ, ಹಾಗೆ ಚಂದೂಪೂಜಾತರ್ಿ ಹೋಟೆಲ್ನಲ್ಲಿ ಕಾಫಿ ತಿಂಡಿ ಪೂರೈಸಿ ಹೋಗುತ್ತಿದ್ದರಂತೆ. ಕಡೆಯಲ್ಲಿ ರಾಮದಾಸ್ ಹೇಳಿದ್ದು ಈ ಚಂದೂಪೂಜಾತರ್ಿ ಬೇರೆ ಯಾರೂ ಅಲ್ಲ, ಮದುಮಗಳು ಕಾದಂಬರಿಯಲ್ಲಿ ಬರುವ ಅಂತಕ್ಕ ಸೆಡ್ತಿ ಎಂಬ ಪಾತ್ರ ಎಂದರು.
ಉದಯ ರವಿಯಲ್ಲಿ ಸುಬ್ಬೇಗೌಡರು ಇವರು ದೇವಂಗಿ ಸಾಹುಕಾರರು ಮೇಗರವಳ್ಳಿಯಲ್ಲಿ ನಡೆಸುತ್ತಿದ್ದ ರೈಸ್ಮಿಲ್ಲಿನ ಮೇಲ್ವಿಚಾರಕರು. ಆದ್ದರಿಂದ ಕುವೆಂಪು ಮಡದಿ ಹೇಮಾವತಿಯವರಲ್ಲಿ ಸ್ವಲ್ಪ ಸಲಿಗೆ ಇತ್ತು. ಇವರೊಮ್ಮೆ ಮೈಸೂರಿಗೆ ಹೋಗಬೇಕಾಗಿ ಬಂತು. ಹಾಗೇ ಉದಯರವಿಗೆ ಹೋಗಿ ಪುಟ್ಟಪ್ಪನವರನ್ನು (ಈಗಾಗಲೇ ಕುವೆಂಪು ದೊಡ್ಡ ಸಾಹಿತಿಯಾಗಿದ್ದರು) ಒಮ್ಮೆ ದರ್ಶನ ಮಾಡಿ ಹೋಗೋಣವೆಂದು ಹೋಗಿದ್ದರು. ಆದರೆ ಸದಾ ಬರವಣಿಗೆಯಲ್ಲಿ ತೊಡಗಿಕೊಂಡಿದ್ದ ಪುಟ್ಟಪ್ಪನವರು ಯಾರಿಗೂ ಭೇಟಿ ನೀಡುತ್ತಿರಲಿಲ್ಲ. ಸುಬ್ಬೇಗೌಡರಿಗೆ ಬೇಡ ಬೇಡವೆಂದು ಮನೆಮಂದಿ ಹೇಳಿದರಾದರೂ ಕುತೂಹಲ ತಣಿಯದೆ, ‘ಪುಟ್ಟಪ್ಪ ಏನು ಬರೆಯುತ್ತಿರಬಹುದೆಂದು’ ಬಾಗಿಲ ಸಂಧಿನಲ್ಲಿ ಇಣುಕಿದರು. ಪುಟ್ಟಪ್ಪನವರು ಅವರನ್ನು ಕಂಡಕೂಡಲೇ ಹೋಗಿ ಒಳಗೆ ಹೆಂಗಸರಿದ್ದಾರೆ, ಅವರ ಸಂಗಡ ಮಾತಾಡಿಕೊಂಡು ಹೊರಡಿ, ಇಲ್ಲಿ ತಲೆ ಹಾಕಿ ನನ್ನ ಸಮಯ ಹಾಳುಮಾಡಬೇಡಿ ಎಂದು ಗದರಿದರು. ಗೌಡರು ಮೇಗರವಳ್ಳಿಗೆ ಹಿಂತಿರುಗಿದರು. ಅಲ್ಲಿ ಕವಿಯ ಬಂಧುಗಳೂ ಹಿತೈಷಿಗಳೂ ಸುಬ್ಬೇಗೌಡರು ಏನಾದರೂ ಹೊಸ ಸುದ್ದಿ ತಂದಿರಬಹುದು ಎಂದು ಕೇಳಲು ಆತುರರಾಗಿದ್ದರು. ಆದರೆ ಗೌಡರು ಆ ಬಗ್ಗೆ ತುಟಿ ಬಿಚ್ಚದೆ ಮೌನವಾಗಿ ಉಳಿದು ಬಿಟ್ಟರಂತೆ. ಹೀಗೆ ಕುವೆಂಪು ಮಲೆನಾಡಿನ ಜನರಿಗೆ ಒಂದು ರೀತಿ ನಿಗೂಢ ಮನುಷ್ಯರೆಂಬಂತೆ ದೂರ ಉಳಿದರು. ಆದ್ದರಿಂದಲೇ ಅವರ ಜನಪ್ರಿಯತೆ ಅಷ್ಟಾಗಿ ಅಲ್ಲಿ ಕಂಡು ಬರುತ್ತಿರಲಿಲ್ಲ. ಕಾನೂರು ಸುಬ್ಬಮ್ಮನನ್ನು ಹೀಗೆ ಮಾಡಿದ್ದೇಕೆ? ಮೇಗರವಳ್ಳಿಯಲ್ಲಿ ಬಿಳುಮನೆ ರಾಮದಾಸ್ ಅವರ ತಂದೆ ಚಿನ್ನಪ್ಪಗೌಡರು ಮುಖ್ಯ ಬೀದಿಯಲ್ಲಿ ಒಂದು ಸಣ್ಣ ಬಟ್ಟೆ ಅಂಗಡಿ ಇಟ್ಟಿದ್ದರು. 1936ರಲ್ಲಿಯೇ ಕುವೆಂಪು ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯನ್ನು ಬರೆದಿದ್ದರು. ಆಗ ಅವರಿಗಿನ್ನೂ 32 ವರ್ಷ ವಯಸ್ಸು. ಅವರ ಬಗ್ಗೆ ಮಲೆನಾಡಿನ ಗೌಡರಿಗೆ ಒಂದು ಬಗೆಯ ಅಭಿಮಾನ, ಅಕ್ಕರೆ. ಹೆಗ್ಗಡತಿಯಲ್ಲಿ ಈ ಗೌಡರುಗಳ ಮತ್ತು ಆಳುಗಳ ಲೈಂಗಿಕ ಸಂಬಂಧ, ದರ್ಪ, ಧೋರಣೆ, ಕ್ರೌರ್ಯ ಮುಂತಾದವನ್ನು ಚೆನ್ನಾಗಿಯೇ ಅನಾವರಣ ಮಾಡಿದ್ದಾರೆ. ಆದ್ದರಿಂದ ಮಲೆನಾಡ ರೂಕ್ಷ ಗೌಡರಿಗೆ ಕುವೆಂಪು ಬಗ್ಗೆ ಕಸಿವಿಸಿ ಅಸಮಾಧಾನ. ಒಮ್ಮೆ ಹೀಗಾಯಿತಂತೆ; ಬಸ್ಸಿಗೆ ಅಥವಾ ಇನ್ಯಾವುದೂ ಕೆಲಸದ ಮೇಲೆ ಮೇಗರವಳ್ಳಿಗೆ ಬಂದು ಚಿನ್ನಪ್ಪ ಗೌಡರ ಬಟ್ಟೆ ಅಂಗಡಿ ಜಗಲಿಮೇಲೆ ಕುಳಿತು ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ ಒಬ್ಬರು ‘ಅದೆಲ್ಲ ಸರಿಯೇ; ನಮ್ಮ ಪುಟ್ಟಪ್ಪ ಪುಸ್ತಕ ಬರೆದು ತುಂಬ ಹೆಸರು ಮಾಡಿದ್ದು, ಆದರೆ ಕಾನೂರು ಹೆಗ್ಗಡತಿಯನ್ನು ಹೋಗಿ ಹೋಗಿ ಆ ಘಟ್ಟದ ಕೆಳಗಿನಿಂದ ಬಂದ ಸೇರೆಗಾರ ರಂಗಪ್ಪ ಸೆಟ್ಟಿಯ ಮಗ್ಗುಲಲ್ಲಿ ಮಲಗಿಸಿದ್ದಾರಂತಲ್ಲ ನಿಜವೇ?’ ಎಂದರಂತೆ. ಅದಕ್ಕೆ ಚಿನ್ನಪ್ಪಗೌಡರು ‘ಮತ್ತೇನು ನಿಮ್ಮ ಅಬಿಪ್ರಾಯ? ನಿಮ್ಮಂಥ (ಮಾನವಂತ) ಗೌಡರು ಇರಲಿಲ್ಲವೆ ಎಂದೊ? ಸಾಕು ಹೋಗ್ರಿ ಹೋಗ್ರಿ ಬಂದ ಕೆಲಸ ನೋಡ್ರಿ’ ಎಂದು ಗದರಿಸಿದಾಗ ಅಂಥ ಮಾತುಗಳು ಮುಂದೆ ಕೇಳಿಬರಲಿಲ್ಲವಂತೆ. ಹೀಗೆ ಮಲೆನಾಡಿನ ಜನ ಕುವೆಂಪು ಬಗ್ಗೆ ಕೊಂಚ ಸಣ್ಣದಾಗಿ ವತರ್ಿಸುವುದನ್ನು ಕಂಡು, ಅವರೂ ಸಹ ಕ್ರಮೇಣ ಅತ್ತ ಬರುವುದನ್ನೇ ನಿಲ್ಲಿಸಿಬಿಟ್ಟರಂತೆ. ಹೀಗೆ ರಾಮದಾಸ ಗಂಟೆಗಟ್ಟಲೆ ಮಾತಾಡಿದರೂ ಆ ಕಲಾವಿದರು ಸದ್ದಿಲ್ಲದೆ ಕುಳಿತಿದ್ದರು ಮುಂದುವರೆಯುವುದು……..]]>
0 ಪ್ರತಿಕ್ರಿಯೆಗಳು