ಮಲರ್‌ ವಿಳಿ ಕೆ ಅನುವಾದಿತ ಕವಿತೆ- ಮರಣದ ಸುದ್ದಿ ಸಾರುವವನ ಮರಣ…

ತಮಿಳು ಮೂಲ: ತಂಗಂ ಮೂರ್ತಿ
ಅನುವಾದ  ಡಾ. ಮಲರ್‌ ವಿಳಿ ಕೆ 

ತಂಗಂ ಮೂರ್ತಿ ಇವರು ತಮಿಳಿನ ಪ್ರಸಿದ್ಧ ಕವಿ ಇವರು ಪ್ರಸ್ತುತ ಪುದುಕೋಟ್ಟೈಯಲ್ಲಿ ವಾಸಿಸುತ್ತಿದ್ದಾರೆ.
ಸೂಚನೆ: ತಮಿಳು ನಾಡಿನ ಕೆಲವು ಹಳ್ಳಿಗಾಡಿನಲ್ಲಿ ಸತ್ತವರ ಸುದ್ದಿಯನ್ನು ಸಾರುವ ಪದ್ಧತಿ ಉಂಟು
.

“ದು:ಖದ ಸುದ್ದಿ
ಮರಣದ ಪ್ರಕಟಣೆ”
ಮುಂಜಾನೆ
ಆಟೋದಲ್ಲಿ ಕೇಳುವುದು
ಅವನ ದನಿ

ಆ ದನಿಯ ಮೂಲಕ
ತಿಳಿಯಲಾಗುವುದು
ಎಲ್ಲ ಮರಣವ
ಯಾವುದೇ ಮರಣವಾಗಲಿ
ಬಂಧು ಬಾಂಧವರಿಗಿಂತ ಮೊದಲು
ಅವನಿಗೇ
ಹೇಳಲ್ಪಡುವುದು

ಬಡಕಲಾದ ಒಡಲು
ಮಾಸಿದ ಉಡುಪು
ಗಡ್ಡದೊಂದಿಗೆ
ಆಟೋದ ಒಂದು ಮೂಲೆಯಲಿ
ಮುದುರಿ ಕುಳಿತಿರುವನು
ಮೈಕನ್ನು ಹಿಡಿದುಕೊಂಡು
ಗಾಳಿಯಲಿ ಪಸರಿಪ
ಆ ದನಿಯಲಿ
ಒಂದು ಗಾಂಭೀರ್ಯವುಂಟು
ನಿಂತು ನಿಧಾನಿಸಿ
ನಿಧಾನವಾಗಿ ಸಾರುವ
ಅವನನು ನಿರ್ಲಕ್ಷಿಸಿ
ಯಾರೂ ಸಾಗಲಾಗದು
ಕಾಲವಾದವರ
ಕುಟುಂಬ
ಪರಂಪರೆ
ಇತ್ಯಾದಿ
ಅಂತಿಮ ಮೆರವಣಿಗೆ
ಶವಸಂಸ್ಕಾರ
ಸಮಸ್ತವನ್ನೂ
ಸಂಕ್ಷಿಪ್ತವಾಗಿ ಹೇಳಿ
ಗಮನ ಸೆಳೆವನು
ನನ್ನ ಕಂಡರೆ
ಟೀ
ಕೊಡಿಸಿರೆಂದು ಕೇಳುವನು
ಪ್ರೀತಿಯಿಂದ ಮಾತನಾಡಿ
ಹೇಗೆ ಸಾಗುತ್ತಿದೆ
ಜೀವನ
ಎಂದು ಕೇಳುವೆನು
“ಯಾರೋ ಸತ್ತು
ನಾನು ಬದುಕುವೆನು”
ಎಂದು ನಗುವನು
ಮತ್ತೊಂದು ದಿನ
ಮಗದೊಂದು ಮರಣದ ಪ್ರಕಟಣೆಯಲಿ
ಹೊಸ ದನಿಯನಾಲಿಸಿ
ಆಟೋವನ್ನು ಇಣುಕಿ ನೋಡಿದರೆ
ಅವನಿರಲಿಲ್ಲ
ಮನೆಯ ಕಂಡುಹಿಡಿದು
ವಿಚಾರಿಸಿದೆನು
ಅಳುತ್ತಲೇ ತಿಳಿಸಿದಳು
ಆ ಮುದಿತಾಯಿ
ಶ್ವಾಸಕೋಶ ಹಾಳಾಯಿತು
ಗಂಟಲಲಿ ಹುಣ್ಣು
ಹಾಸಿಗೆ ಹಿಡಿದ
ಹೋಗಿ ಸೇರಿಬಿಟ್ಟ…
“ಸಕಲರ ಸಾವನು ಸಾರಲು
ಇವನೊಬ್ಬ ಮನುಷ್ಯನಿದ್ದ
ಇವನ ಸಾವನು ಸಾರಲು
ಒಬ್ಬ ಮನುಷ್ಯನೂ ಇಲ್ಲವಲ್ಲಾ”
ಮರಳಿ ಬರುವ ಮಾರ್ಗದಲ್ಲೆಲ್ಲಾ
ಅವನದೇ ದನಿ
ಕೇಳುತ್ತಲೇ ಇತ್ತು
ಅವನ ಮರಣವ
ಅವನೇ ಸಾರುವಂತೆ

‍ಲೇಖಕರು Admin

December 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: