ಈ ಬಾರಿಯ ಮಯೂರ ಕೊಳ್ಳಿ. ನಾಗತಿಹಳ್ಳಿ ಚಂದ್ರಶೇಖರ್ ಮೊನ್ನೆ ಜೋಗಿ ಪುಸ್ತಕ ಬಿಡುಗಡೆಯಲ್ಲಿ ಮಾತನಾಡಿದ ಪರಿ ಕಂಡು ಅಚ್ಚರಿಗೊಳಗಾದವರಿಗೆ ಈ ಬಾರಿಯ ಮಯೂರದಲ್ಲಿ ಇನ್ನಷ್ಟು ಒಳ್ಳೆಯ ಓದು ಇದೆ.
ನಾಗತಿಹಳ್ಳಿ ಮಯೂರ ಮುಂದಿಟ್ಟ ‘ಸಾಹಿತ್ಯದ ಜರೂರತ್ತು ಎಂತಹದು’ ಎಂಬ ಪ್ರಶ್ನೆಗೆ ಉತ್ತರ ನೀಡಿರುವುದನ್ನು ಖಂಡಿತಾ ಮಿಸ್ ಮಾಡಿಕೊಳ್ಳಬಾರದು. ಕಥೆ, ಕಾದಂಬರಿ, ಕವಿತೆ, ಧಾರಾವಾಹಿ, ಚಲನಚಿತ್ರ ಹೀಗೆ ಹಲವು ರಂಗದಲ್ಲಿ ತೊಡಗಿಸಿಕೊಂಡಿರುವ ನಾಗತಿಹಳ್ಳಿ ತಮ್ಮ ನೋಟ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಇದರೊಂದಿಗೆ ನಟರಾಜ್ ಹುಳಿಯಾರ್ ಬರೆದ ಕಾಡುವ ಕಥೆಯೊಂದಿದೆ-ಬಸವಲಿಂಗಪ್ಪನವರು ಹಾಗೂ ಡೆವೀಡ್ ಸಾಹೇಬರು’ ಅನ್ನುವ ಕಥೆ ‘ಸರ್ವಾಧಿಕಾರಿಯ ಚಿತ್ರ ‘ ಸಂಕಲನ ಕೊಟ್ಟ ನಟರಾಜ್ ಹುಳಿಯಾರ್ ಅವರ ಕಥೆಗಾರಿಕೆಗೆ ಕನ್ನಡಿ ಹಿಡಿದಿದೆ.
ಇದಲ್ಲದೆ ಎನ್ ಎಸ್ ಶಂಕರ್ ಸಾದತ್ ಹಸನ್ ಮಾಂಟೋ ಕಥೆಯನ್ನು ಕನ್ನಡಕ್ಕಿಟ್ಟಿದ್ದಾರೆ .
ನಾಗತಿಹಳ್ಳಿ ಬರೆದ ಲೇಖನದ ಆಯ್ದ ಭಾಗ ಇಲ್ಲಿದೆ. ಸಂಪೂರ್ಣ ಓದಿಗೆ ಜೂನ್ ತಿಂಗಳ ಮಯೂರಕ್ಕೆ ಮುಗಿಬೀಳಿ-
ಸಾಹಿತ್ಯ ಯಾಕೆ ಬೇಕು?
…..ಮಕ್ಕಳಿಗೆ ಬಾಲ್ಯವಿಲ್ಲ. ತರುಣರಿಗೆ ಸಾಹಿತ್ಯ ಆದ್ಯತೆಯಿಲ್ಲ. ಹೆತ್ತವರಿಗೆ ಮಾತೃಭಾಷೆಯ ಶಿಕ್ಷಣದಲ್ಲಿ ನಂಬಿಕೆಯಿಲ್ಲ. ಶಾಲೆಗಳಲ್ಲಿ ಸಾಹಿತ್ಯ ಎನ್ನುವುದು ಸೆಕೆಂಡರಿ. ಅಚ್ಚಾದ ಪುಸ್ತಕಗಳು ಓದುಗನನ್ನು ತಲುಪುತ್ತಿಲ್ಲ. ಅನೇಕ ಪುಸ್ತಕಗಳಿಗೆ ತತ್ಕ್ಷಣದ ವಿಮರ್ಶೆಯ ಭಾಗ್ಯವಿಲ್ಲ. ಕಾದಂಬರಿಗಳಿರಲಿ, ನೀಳ್ಗತೆ ಬರೆಯಲೂ ಪುರುಸೊತ್ತಿಲ್ಲ. ಯಾರೂ ಓದುವುದಿಲ್ಲ ಎಂಬ ಅಳುಕು ಬರೆಯುವವನದು.
ಬರೆಯುವುದನ್ನು ಸಂಕ್ಷಿಪ್ತವಾಗಿ ಬರೆಯಿರಿ ಎಂಬ ಆಗ್ರಹ ಓದುಗನದು. ಸಾಧ್ಯವಾದರೆ ಕುವೆಂಪು, ಪುತಿನ, ಬೇಂದ್ರೆ ಗೀತೆಗಳನ್ನು ಆಡಿಯೋ-ವಿಡಿಯೋ ಮಾಡಿಸಿ ಅಲ್ಲೇ ಕೇಳುತ್ತೇವೆ-ಅಲ್ಲೇ ನೋಡುತ್ತೇವೆ ಅನ್ನುತ್ತಾರೆ. ಕಾವ್ಯವನ್ನು ಓದಬೇಕೇಕೆ? ಕೇಳಲಾಗದೆ? ನೋಡಿದರಾಗದೆ? ಮಹಾಕಾವ್ಯವನ್ನು ಓದುವುದು ಬೇಡ-ಪ್ರವಚನ ಕೇಳಿದರೆ ಸಾಕು! ಹೀಗೆಂದ ಕೂಡಲೇ ಟೀವಿಯಲ್ಲಿ ಕಾಣಿಸಿಕೊಳ್ಳುವ ಖಯಾಲಿಯುಳ್ಳ ‘ವೃತ್ತಿ ಪ್ರವಚನಕಾರರು’ ಹೆಚ್ಚಾಗುತ್ತಾರೆ. ಈ ವ್ಯಾಖ್ಯಾನಕಾರರು ಸಾಹಿತ್ಯ ವಿಮರ್ಶಕರಂತೆಯೇ ಗೌರವಾನ್ವಿತ ನಿರುಪಯುಕ್ತರು.
ಅವರು ಸಾಹಿತ್ಯವನ್ನೂ ಬೆಳೆಸಲಾರರು; ಓದುಗನನ್ನೂ ಬೆಳೆಸಲಾರರು. ದಲ್ಲಾಳಿಗಳ ಹಸ್ತಕ್ಷೇಪವಿರುವ ಯಾವುದೂ ಊರ್ಜಿತವಾಗಲಾರದು. ಸಾವಿರಾರು ವರ್ಷಗಳ ಪರಂಪರೆ ಇರುವ ಸಾಹಿತ್ಯಕ್ಕೆ ದಲ್ಲಾಳಿ ಬೇಕೆ? ಮಹಾಕಾವ್ಯ ಅಥವಾ ಕಾದಂಬರಿಯೊಂದನ್ನು ನಾಲ್ಕು ಸಾಲುಗಳಲ್ಲಿ ಹೇಳಿ ಅರ್ಥೈಸುವ ವ್ಯಾಖ್ಯಾನಕಾರನೂ, ಅಷ್ಟರಲ್ಲೇ ತೃಪ್ತಿಪಡುವ ಸಹೃದಯನೂ ಈಗ ಹೆಚ್ಚಾಗುತ್ತಿದ್ದಾರೆ. ಎಲ್ಲಾ ಕ್ಷಿಪ್ರ, ವೇಗ ಮತ್ತು ಸಂಕ್ಷಿಪ್ತ! ಇದನ್ನು ಸ್ಪರ್ಧಾತ್ಮಕ ಎಂದು ತಪ್ಪಾಗಿ ಕರೆಯಲಾಗುತ್ತಿದೆ; ನಿರರ್ಥಕ ಎನ್ನುವುದನ್ನು ಬಿಟ್ಟು….
ನಿಜಕ್ಕೂ ಸಂಗ್ರಹಯೋಗ್ಯ ಸಂಚಿಕೆ, ಎಲ್ಲ ಲೇಖನಗಳು, ಕಥೆಗಳು ಚೆನ್ನಾಗಿವೆ.
ಅಂತಃಪಠ್ಯದಲ್ಲಿ ಅಕ್ಷರರ ವಿಮರ್ಶೆ, ನಾ. ಮೊಗಸಾಲೆಯವರ “ನುಗ್ಗೆ ಗಿಡ” ಕಥೆ ಓದಿಸಿಕೊಳ್ಳುತ್ತ ಚಿಂತನೆಗಖಚ್ಚುವುದಂತೂ ನಿಜ.
ನಿಜಕ್ಕೂ ಒಳ್ಳೆಯ ಓದು ಇದೆ
-ಶೆಟ್ಟರು
ಮಯೂರ ದಲ್ಲಿ ನಾಗತಿಹಳ್ಳಿ ಮೂಲಭೂತ ಪ್ರಶ್ನೆ ಎತ್ತಿದ್ದಾರೆ
ಲೇಖಕರಿಗೆ ಕಾಡುವ ಪ್ರಶ್ನೆ ಓದುವವರು ಇದ್ದಾರೆಯೆ
ಕನ್ನಡ ದ ಎಲ್ಲರು ಒಂದು ನಿಮಿಷ ವಿಚಾರ ಮಾಡಲೇ ಬೇಕು…
ಜೂನ್ ತಿಂಗಳ “ತಿಂಗಳು” ಪತ್ರಿಕೆ ಯನ್ನು ಯಾರಾದರು ಓದಿದ್ದರೆ ತಿಳಿಸಿ