ಮಂಜುಳ ಸಿ ಎಸ್
ನಾಲ್ಕು ಗೋಡೆಗಳ
ಮುಚ್ಚಿದ ಕಿಟಕಿಗಳ
ಕವಿದ ಇರುಳಲಿ
ಒಂದೆಳೆ ಚಂದ್ರನ ಬೆಳಕು
ನೀ
ನಿನ್ನ ಕವನವೆಂದಳು….
ತಂಪು ತೊರೆದು
ಸುಡುವ ಕಂಪನ ಸಹಿಸುವ
ಇಳೆಯ ಕಂಡು
ಸಂತೈಸಲಾಗದ ಪರಿಗೆ
ಚಂದಿರನಾದರೂ ತಂತಾನೆ
ತಾನೇ
ಸುಟ್ಟಾನು ! ಅವನೆಂದ..
ಆಗಗ ಉರಿವ
ಬೇಗೆಗೆ ತಾಳಲಾರದೆ
ಅಂದು ಕೊಳ್ಳುತ್ತಾಳೆ ಈ ಸಂಜೆ
ಒಪ್ಪಿಸಿ ಕೊಳ್ಳುವೆ !
ಅದೇನೋ
ಹುಟ್ಟಿಮೆಯಂತವನ
ಹೂನಗೆಗೆ
ಸೋತು
ಮುಗುಮ್ಮಾಗುವಳು ಮತ್ತೆ!

ಮೌನದ ಮುಸುಕೆಳೆದು
ನಿದಿರೆಗೆ ಜಾರಿದವಳ
ಮೊಗವನೊಮ್ಮೆ
ದಿಟ್ಟಿಸಿ
ನಿಟ್ಟುಸುರಿಟ್ಟು
ಇತ್ತ
ಕರಗ ತೊಡಗುತ್ತಾನೆ
ಅವಳ ಮೌನದ ಕುದಿಗೆ….
ನಿಧಾನವಾಗಿ….
ಎಂದಿನಂತೆ ತನ್ನದೇ
ಬೆಳಕ ಕಳೆಯುತ….
ಮರು ಸಂಜೆ
ಉತ್ತರಿಸಲಾಗದ
ಪ್ರಶ್ನೆಯಂತೆ ಇವ
ಮತ್ತೂ ಮೌನವಾದ
ಮತ್ತದೇ ಹುಣ್ಣುಮೆಯಾಗಿ
ಇಳೆ ಇನಿಯನ
ಬೆಳಕಿಗೆ
ತಂಪಾಗುವೆನೆಂದು
ಇವಳೆಂದಳು
ನೀ ಬೆಳಕು
ನನ್ನ ಕವನ…..






0 Comments