ಮಂಜುಳ ಜಿ ಎಚ್
ಪ್ರತಿ ಪುಸ್ತಕವು ತನ್ಮೂಲಕ ಹೊಸ ಆಲೋಚನ ಕ್ರಮವನ್ನು, ತಿಳುವಳಿಕೆಯ ಪರಿಯನ್ನು ಹೆಚ್ಚಿಸುವ ಆಸ್ಥೆ ಮೂಡಿಸುತ್ತಿರುತ್ತವೆ. ಆ ಪಟ್ಟಿಗೆ ಮಾರ್ಗಾನ್ವೇಷಣೆ ಕೃತಿಯು ಒಂದು. ಮಾರ್ಗಾನ್ವೇಷಣೆಯು ಸಂಶೋಧನಾ ಪರಿಭಾಷೆ/ಪರಿಕಲ್ಪನೆಗಳನ್ನು ಆ ಪ್ರಕಾರಗಳಲ್ಲಿ ಅರ್ಥೈಸಿದೆ. ಕೃತಿಯಲ್ಲಿ ಬರುವ ಅಧ್ಯಾಯಗಳಲ್ಲಿ ಒಂದಾದ ‘ಕನ್ನಡ ಸಂಶೋಧನೆ: ಆರಂಭದ ದಾರಿಗಳು.’ ಎಂಬ ಅಧ್ಯಾಯ ಮತ್ತು ‘ಸಾಹಿತ್ಯ ಸಂಶೋಧನೆ-ಸಂಶೋಧನ ಸಂಸ್ಕೃತಿ ಎಂಬ ಅಧ್ಯಾಯವು ಸಂಶೋಧನೆಯಲ್ಲಿ ತೊಡಗುವ ಪ್ರತಿಯೊಬ್ಬರಿಗೂ ಗಮನಿಸಬೇಕಾದ ಅಧ್ಯಾಯಗಳಾಗಿವೆ. ಮತ್ತೊಂದು ಅಂಶವೆಂದರೆ ಕೃತಿಯು ಪಠ್ಯ ರಚನಾಕ್ರಮದಲ್ಲಿ ಅನುಸರಿಸಿದ ಸಂಶೋಧಕ/ಮಾರ್ಗದರ್ಶಕ, ಎಂಬ ಪಾತ್ರ ರೂಪದ ವಿಧಾನವು ಸೃಜನತ್ಮಾಕವಾಗಿದೆ. ಹಾಗು ಈ ಮಾದರಿ. ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ತನ್ಮೂಲಕ ತಿಳಿಸಿದೆ.
ಪ್ರತಿಯೊಂದು ವಿಷಯದ ಸಂಶೋಧನೆ ಒಂದು ಪರಂಪರೆಯನ್ನು ತೆರೆದಿಡುತ್ತಲೇ ವರ್ತಮಾನದ ಪರಂಪರೆಯನ್ನು ಕಟ್ಟುವ ಕೆಲಸ ಮಾಡುತ್ತಲಿರುತ್ತದೆ. ಆ ಅಂತಃಸತ್ವವಾದ ರೂಪವನ್ನು ಈ ಕೃತಿ ಒಳಗೊಂಡಿದೆ. ಸಂಶೋಧನೆ, ವಿಶ್ವವಿದ್ಯಾಲಯ, ವಿಷಯ, ಮಾರ್ಗದರ್ಶಕ, ಇವು ಜ್ಞಾನಪರಂಪರೆಯ ಧಾರೆಗಳು. ಈ ಧಾರೆಗಳು ಒದಗಿಸಿದ ತಿಳುವಳಿಕೆಯನ್ನು ಉಪಯೋಗಿಸಿಕೊಂಡು ಸಂಶೋಧಕ ತನ್ನದೇ ಬೌದ್ಧಿಕ ಮೀಮಾಂಸೆಯನ್ನು ರೂಪುಗೊಳಿಸಿಕೊಳ್ಳುವ ಪರಿಯ ಕುರಿತು ಈ ಕೃತಿ ಚರ್ಚಿಸಿದೆ. ಸಂಶೋಧನಾ ಕ್ಷೇತ್ರ ಹೇಗೆ ಸುಲಭದ ಹಾದಿಯಲ್ಲವೋ ಹಾಗೆ ಗುರುವಿನೊಂದಿಗೆ ಮುಖಾ-ಮುಖಿಯಾಗುವ ದಾರಿಯು ಸುಲಭದ್ದಲ್ಲ. ಅದಕ್ಕೂ ತಯಾರಿಬೇಕು ಎನ್ನುವುದನ್ನು ಸಂಶೋಧಕರು ಗಮನದಲ್ಲಿರಿಸಿಕೊಳ್ಳಬೇಕು.
“ಸಂಶೋಧನಾ ಭಾಷೆ, ಬರಹವನ್ನು ಮೊದಲಿಗೆ ಮಕ್ಕಳಿಗೆ ಕಲಿಸಿಕೊಡದ ಮೇಷ್ಟ್ರುಗಳು ನೇರವಾಗಿ ವಿಶ್ಲೇಷಣೆಯನ್ನು ಕಲಿಸಿಕೊಡುತ್ತಾರೆ.” ಎಂದು ಹೇಳುವ ಮಾತು ಸಂಶೋಧನೆಗೆ ಕ್ಷೇತ್ರಕ್ಕೆ ಬಂದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಪಾಠದ ಭಾಗವಾಗಿ ಮಾರ್ಗದರ್ಶಕರು, ವಿವರಿಸುವ, ವಿಷಯದ ಕುರಿತು ಗಮನಹರಿಸಿದ್ದು ತುಂಬಾ ಮುಖ್ಯವಾದ ಮಾತಾಗಿದೆ.
ಸಂಶೋಧನಾ ಕ್ಷೇತ್ರ ಎಂಬುದು ಕೇವಲ ಓದಿದವರು ಮಾತ್ರ ತೊಡಗಿಸಿಕೊಳ್ಳುವ ಕ್ಷೇತ್ರವಲ್ಲ ಆಸಕ್ತಿ ಇರುವ ಆ ಕ್ಷೇತ್ರದ ಕುರಿತು ತಿಳುವಳಿಕೆ ಇರುವ ಯಾರಾದರೂ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಬಹುದು ಎಂಬ ಅಂಶವನ್ನು ನೋಡಿದಾಗ ಸಂಶೋಧನಾ ಪ್ರಶ್ನೆಗಳು ಜನ ಸಾಮಾನ್ಯರಲ್ಲೂ ಮೂಡುವ ಬಗೆಯನ್ನು ವಿವರಿಸುವುದರ ಮೂಲಕ ಸಂಶೋಧಕ ಸಂದರ್ಶಕನಾಗಿ ಹೋದಾಗ ಜನರ ಅಭಿಪ್ರಾಯಗಳ ಕಡೆಗೆ ಗಮನ ಕೊಡಬೇಕೆಂಬ ಅಂಶವನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದ್ದು ಸಂಶೋಧಕರಿಗೆ ಉಪಯುಕ್ತ ಅಂಶವಾಗಿದೆ.
“ಕನ್ನಡ ಸಾಹಿತ್ಯ ಸಂಶೋಧನೆ ಎಂದರೆ ಕರ್ನಾಟಕ ಕವಿರಾಜಮಾರ್ಗದಿಂದ ಮೂಡಿದ ಹಲವು ಕರ್ನಾಟಕಗಳು”. ಎಂದು ಹೇಳುತ್ತಾ ಆಧುನಿಕ ಪೂರ್ವ ಕನ್ನಡದ ಸಾಹಿತ್ಯ ಸಂಶೋಧನೆಯಲ್ಲಿ ಕವಿ ಕಾಲ ಊರು ಮತ್ತು ಮತಧರ್ಮ ಇವುಗಳ ಬಗ್ಗೆಯೇ ಸಂಶೋಧನೆ ನಡೆದಿದೆ. ನಂತರ ಇವರ ಸಾಹಿತ್ಯಕ್ಕೆ ಪ್ರೇರಣೆ ಪ್ರಭಾವಗಳ ಕುರಿತು ದೊಡ್ಡ ಮಟ್ಟದ ಸಂಶೋಧನೆ ನಡೆದಿವೆ ಹೀಗೆ ಪ್ರತಿ ಅಧ್ಯಾಯನದಲ್ಲೂ ಆಯಾ ವಿಷಯದ ಸಂಶೋಧನೆಯ ಪ್ರಸ್ತಾವನೆಯಿಂದ ಹೇಗೆ ತಯಾರಿಸಬೇಕು ಎನ್ನುವ ವಿಚಾರದಿಂದ ಮಹಾಪ್ರಬಂಧದ ಮಾದರಿಯ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಎಷ್ಟೇ ಸಂಶೋಧನಾ ಕೃತಿಗಳು ಇದ್ದಾಗಲೂ ‘ಮಾರ್ಗಾನ್ವೇಷಣೆ.’
ಕೃತಿಯು ವಿಚಾರದ ಹೊಸತನದಿಂದ, ರಚನಾಕ್ರಮದ ಬೆರಗಿನಿಂದ ತನ್ನದೇ ಆದ ನೆಲೆಯನ್ನು ಪಡೆದುಕೊಂಡಿದೆ. ಹೀಗಾಗಿ ಹೊಸ ಮಾದರಿಯ ಭಿನ್ನ ಆಲೋಚನೆಯ ಮಾರ್ಗನ್ವೇಷಣೆಯ ಕೃತಿಯು ನಮ್ಮ ಜೊತೆಗಿರಬೇಕಾದ ಕೃತಿಗಳಲ್ಲೊಂದಾಗಿದೆ. ಈ ಮೂಲಕ ಲೇಖಕರಾದ ಡಾ. ನಿತ್ಯಾನಂದ ಬಿ ಶೆಟ್ಟಿ ಸರ್ ಅವರು ಅಭಿನಂದನಾರ್ಹರು.
0 ಪ್ರತಿಕ್ರಿಯೆಗಳು