ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿಗೆ ವಲಸೆ ಬರುವ ಮಂಗಾಟೆ ಹಕ್ಕಿಗಳ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
। ಕಳೆದ ಸಂಚಿಕೆಯಿಂದ ।
ಒಂದು ಸಂಜೆ ಸುಮಾರು ನಾಲ್ಕು ಗಂಟೆ ಸಮಯ. ಕುಪ್ಪಳಿ ಕಾಡಿನ ತುಂಬ ವಿಚಿತ್ರತರ ವಾದ ಸಮೂಹ ಶಬ್ದ. ನಾಲ್ಕಾರು ಮಕ್ಕಳು ಒಟ್ಟಿಗೇ ಸೇರಿ ಅಳುತ್ತಿರುವಂತೆ ಭಾಸವಾಗುವ ಸದ್ದು.
ಹೇಮಾಂಗಣದ ನನ್ನ ಕೊಠಡಿಯಲ್ಲಿ ಮಲಗಿದ್ದ ನನಗೆ ಈ ವಿಚಿತ್ರತರ ಸದ್ದು ದಿಗಿಲು ಹುಟ್ಟಿಸಿತು. ಎದ್ದು ಕೊಠಡಿಯಿಂದ ಈಚೆ ಬಂದೆ. ಗುಂಡ ಕಾಣಲಿಲ್ಲ. ಹೇಮಾಂಗಣದ ಹಿಂಭಾಗದಲ್ಲಿ ಅರಣ್ಯ ಇಲಾಖೆಯ ಪುಟ್ಟ ವನವಿದೆ. ಅಲ್ಲಿ ಎತ್ತರದ ಮರಗಳೂ, ಮರಗಳ ನಡುವೆ ಒಂದು ನೀರಿನ ಸಹಜ ಕೊಳವೂ ಇದೆ. ಅಲ್ಲಿಂದ ಈ ಸದ್ದು ಹೊರ ಹೊಮ್ಮುತ್ತಿತ್ತು.
ಕುವೆಂಪು ಪ್ರತಿಷ್ಠಾನದ ನೌಕರ ಸುರೇಶ ಆಚೆ ನಿಂತಿದ್ದವನು ‘ನಮಸ್ಕಾರ ಸಾರ್’ ಅಂದ. ಅವನನ್ನು ಒಮ್ಮೆ ದಿಟ್ಟಿಸಿ ನೋಡಿದೆ. ಸಹಜವಾಗಿದ್ದ, ನನ್ನತರ ಯಾವುದೇ ದಿಗಿಲುಗೊಂಡವನಂತೆ ಇರಲಿಲ್ಲ. ಯೋಚಿಸಿದೆ, ಇದು ಯಾವುದೋ ಹಕ್ಕಿಯ ಸದ್ದಿರಬೇಕು, ಆದರೂ ಖಚಿತಪಡಿಸಿಕೊಳ್ಳಲು ‘ಏನೋ ಮಾರಾಯ ಈ ವಿಚಿತ್ರ ಸದ್ದು? ಮಕ್ಕಳು ಅತ್ತಂತಿದೆ ಎಂದೆ. ‘ಸಾರ್ ಅದು ಮಂಗಾಟೆ ಹಕ್ಕಿಗಳ ಸದ್ದು, ವರ್ಷಕ್ಕೊಮ್ಮೆ ಈ ತಿಂಗಳಲ್ಲಿ ಎಲ್ಲಿಂದಲೋ ಬಂದು ಬಿಡುತ್ತವೆ. ಅಯ್ಯೋ ಅವುಗಳ ರಂಪಾಟ ಹೇಳತೀರದು’ ಎಂದ.
ಈ ರೀತಿಯ ಹಕ್ಕಿಯ ಕೂಗನ್ನು ನಾನು ಎಂದೂ ಕೇಳಿರಲಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಪಶ್ಚಿಮ ಘಟ್ಟಗಳಲ್ಲಿ ಅಡ್ಡಾಡಿದ್ದೆನಾದರೂ ಈ ಬಗೆಯ ವಿಚಿತ್ರ ಸದ್ದಿನ ಹಕ್ಕಿ ನೋಡಿರಲಿಲ್ಲ. ‘ಇನ್ನೂ ಎಷ್ಟು ದಿನ ಇಲ್ಲಿರುತ್ತವೆ?’ ಎಂದು ಕೇಳಿದೆ. ‘ಇನ್ನೂ ತಿಂಗಳುಗಟ್ಟಲೆ ಇರ್ತವೆ ಸಾರ್’ ಎಂದು ಅವನು ಹೊರಟ. ನಾಳೆ ಗುಂಡನ ಜೊತೆ ಹೋಗಿ ಈ ಹಕ್ಕಿಗಳನ್ನು ಹತ್ತಿರದಿಂದ ನೋಡಬೇಕು ಎಂದು ನಿಶ್ಚಯಿಸಿದೆ. ಸಂಜೆಯ ನಂತರ ಹಕ್ಕಿಗಳ ಗಲಾಟೆ ಕಡಿಮೆಯಾಗಿ ಸ್ತಬ್ಧವಾಯಿತು.
ಬೆಳಿಗ್ಗೆ ಮತ್ತೆ ಹಕ್ಕಿಗಳ ಕೂಗಾಟ ಆರಂಭವಾಯಿತು. ಗುಂಡ ಏಳುವುದನ್ನೇ ಕಾಯುತ್ತ ಕೂತಿದ್ದ ನಾನು ಬೆಳಗಿನ ವಾಕಿಂಗ್ಗೆ ಅವನನ್ನೂ ಕರೆದುಕೊಂಡು ಹೊರಟೆ. ಕುಪ್ಪಳಿ ಪರಿಸರದ ಮರಗಳ ತೋಪಿನ ಅನೇಕ ಕಡೆಗಳಲ್ಲಿ ಆ ಮಂಗಾಟೆ ಹಕ್ಕಿಗಳು ಗುಂಪುಗೂಡಿಕೊಂಡು ತೀವ್ರತರದ ಸಂಭಾಷಣೆಯಲ್ಲಿ ತೊಡಗಿದ್ದವು. ನಮಗೆ ಅದು ಅಳುವಿನಂತೆ ಭಾಸವಿದ್ದರೂ ಅವುಗಳಿಗೆ ಅದು ಸುಗಮ ಸಂಭಾಷಣೆಯೇ ಇರಬಹುದು.
‘ಎಷ್ಟು ವರ್ಷಗಳಿಂದ ಈ ಮಂಗಾಟೆ ಹಕ್ಕಿಗಳನ್ನು ನೋಡಿದ್ದೀಯ ಗುಂಡ?’ ಎಂದು ಪ್ರಶ್ನಿಸಿದೆ. ‘ಹೇ ನಾನು ಹುಟ್ಟಾಗಿಂದ ವರ್ಷ ವರ್ಷ ಬತ್ತನೇ ಇರ್ತವೆ’ ಎಂದ. ನಾನು ಅಲ್ಲಲ್ಲಿ ನಿಂತು ಅವುಗಳ ಪೋಟೋ ತೆಗೆಯಲು ನೋಡಿದೆ. ಎತ್ತರದ ಮರಗಳ ತುದಿಯಲ್ಲಿ ಕೂರುವ ಹಕ್ಕಿಗಳು ಕ್ಷಣಕ್ಷಣಕ್ಕೆ ರೆಂಬೆಯಿಂದ ರೆಂಬೆಗೆ ಹಾರಾಡುತ್ತಲೇ ಇರುತ್ತವೆ. ಆದರೆ ಅವುಗಳ ಗಂಟಲಿಗಂತೂ ಬಿಡುವೇ ಇಲ್ಲ. ನನ್ನಲ್ಲಿ ಇರುವುದು ಸಾಮಾನ್ಯ ಮಟ್ಟದ ಕ್ಯಾನನ್ ಕ್ಯಾಮೆರಾ. ಅದಕ್ಕೆ ಜೂಂ ಅಳವಡಿಸಲು ಸಾಧ್ಯವಿಲ್ಲ. ಜೊತೆಗೆ ನಾನು ಹೇಳಿಕೊಳ್ಳುವಂಥ ನುರಿತ ಛಾಯಾಗ್ರಾಹಕನೂ ಅಲ್ಲ.
ಸ್ಪಷ್ಟವಾದ ಪೋಟೋ ತೆಗೆಯಲು ಸಾಧ್ಯವಾಗಲಿಲ್ಲ. ಆದರೆ ಅವುಗಳ ಆಕಾರ, ಬಣ್ಣ, ಚಲನವಲನ ಚೆನ್ನಾಗಿಯೇ ಗೋಚರವಾಯಿತು. ಅವುಗಳ ದೊಡ್ಡ ಗಂಟಲು ಸದ್ದು ಕೇಳಿ ಇವು ಬಾರಿ ಗಾತ್ರದ ಹಕ್ಕಿ ಇರಬಹುದು ಎಂದುಕೊಂಡಿದ್ದೆ. ನೋಡಿ ನನಗೆ ನಿರಾಸೆಯಾಯಿತು. ಅಷ್ಟೇನೂ ದೊಡ್ಡ ಹಕ್ಕಿಯಲ್ಲ. ಹೆಚ್ಚೆಂದರೆ ಪುಟ್ಟ ಹದ್ದಿನಷ್ಟು ಗಾತ್ರ ಇರಬಹುದು.
ಬೂದು ಬಣ್ಣದ ರೆಕ್ಕೆಗಳು, ಹಿಂದೆ ಉದ್ದನೆಯ ಕಪ್ಪು ಪುಕ್ಕ ಈ ಹಕ್ಕಿಗಳ ವಿಶೇಷ ವೆಂದರೆ ಅವುಗಳ ಶರೀರವನ್ನು ಮೀರಿದ ದೊಡ್ಡ ಕೊಕ್ಕುಗಳು! ಹಳದಿ ಬಣ್ಣದ ಆ ಕೊಕ್ಕುಗಳು ತುಂಬಾ ಗುಡುಸಾಗಿಯೇ ಇದ್ದಂತೆ ಕಂಡಿತು.
ಅವುಗಳ ವಿಕಾರ ಧ್ವನಿ ಮತ್ತು ದೊಡ್ಡ ಕೊಕ್ಕು ಅವುಗಳಿಗೊಂದು ವಿಶೇಷತೆ ತಂದುಕೊಟ್ಟಿದೆ. ಬೆಳಿಗ್ಗೆ ಆರರಿಂದ ಎಂಟು ಗಂಟೆಯವರೆಗೂ ಗುಂಡನ ಜೊತೆ ಅಡ್ಡಾಡಿ ಮಂಗಾಟೆ ಹಕ್ಕಿಗಳ ಗಲಾಟೆ ಸಂಸಾರವನ್ನು ನೋಡಿ ಬರುತ್ತಿರುವಾಗ ತೇಜಸ್ವಿಯವರು ಈ ಹಕ್ಕಿಗಳ ಬಗ್ಗೆ ಬರೆದಿರ ಬಹುದಲ್ಲವೇ? ಎಂಬ ವಿಷಯ ಹೊಳೆಯಿತು.
ಕಚೇರಿಗೆ ಬಂದವನೆ ಲೈಬ್ರರಿಯ ಬೀಗ ತೆಗೆದು ತೇಜಸ್ವಿಯವರ ‘ಕನ್ನಡ ನಾಡಿನ ಹಕ್ಕಿಗಳು’ ಪುಸ್ತ ಕವನ್ನು ಹೊರತೆಗೆದೆ. ಪೂರ್ಣಚಂದ್ರ ತೇಜಸ್ವಿಯವರು ಮುಟ್ಟದ ವಿಷಯವೇ ಇಲ್ಲವೇನೋ! ಮಂಗಾಟೆ ಹಕ್ಕಿಗಳ ಬಗ್ಗೆ ಅವರು ಹೀಗೆ ಬರೆದಿದ್ದಾರೆ.
ನಮ್ಮ ತೋಟದ ಬಳಿಯ ಕಾಡಿನ ನಿಃಶಬ್ದದಲ್ಲಿ ನೀವು ಸುಮ್ಮನೆ ಕೆಲಕಾಲ ಕುಳಿತಿದ್ದರೆ ನಿಮಗೆ ಆಗೀಗ ಕಾಡೊಳಗೆ ಯಾರೋ ಗಹಗಹಿಸಿ ನಕ್ಕಂತೆ ಸದ್ದು ಕೇಳುತ್ತದೆ. ಹೊಸಬರಾದರೆ ಇದ್ದಕ್ಕಿದ್ದಹಾಗೆ ಸಾಮೂಹಿಕವಾಗಿ ಕೇಳುವ ನಗುವಿನ ಶಬ್ದಕ್ಕೆ ಕಕ್ಕಾಬಿಕ್ಕಿಯಾಗಿ ಹೆದರಿಯೇ ಬಿಡುತ್ತಾರೆ. ವಾಸ್ತ ವವಾಗಿ ಕಾಡಿನ ಮಂಗಟ್ಟೆ ಹಕ್ಕಿಗಳು ಕೂಗುವ ಸದ್ದು ಇದು. ಮಂಗಟ್ಟೆ ಹಕ್ಕಿಗಳು ನಮ್ಮೂರಿನ ಬಳಿ ಅಪರೂಪವಾಗೇ ಇದ್ದುವು.
ಬಹುಶಃ ಅವು ದೊಡ್ಡ ಹಕ್ಕಿಗಳಾದ್ದರಿಂದ ಇಲ್ಲಿನ ಶಿಕಾರಿದಾರರು ಯಾವ ಶಿಕಾರಿಯೂ ಆಗದಿದ್ದರೆ ಇವುಗಳನ್ನೇ ಹೊಡೆದು ತೆವಲು ತೀರಿಸಿಕೊಳ್ಳುತ್ತಿದ್ದುದು ಕಾರಣ ಇರಬೇಕು. ಇದಲ್ಲದೆ ನಮ್ಮ ಕಾಡಿನಲ್ಲಿ ಮಂಗಟ್ಟೆ ಹಕ್ಕಿಗಳಿಗೆ ಅಗತ್ಯವಾದ ಗೋಣಿ, ಆಲ, ಬಸರಿ ಮೊದಲಾದ ಹಣ್ಣಿನ ಮರಗಳ ಕೊರತೆಯೂ ಒಂದು ಕಾರಣವಿರಬಹುದು.
ದಿನಗಳೆದಂತೆ ಕೋವಿಯ ತೋಟಾ ಬೆಲೆ ಏರಿ ಕೋವಿಯಲ್ಲಿ ಮಂಗಟ್ಟೆ ಹಕ್ಕಿಗಳನ್ನು ಶಿಕಾರಿ ಮಾಡುವುದು ನಷ್ಟದ ಬಾಬತ್ತಾದುದರಿಂದ ಶಿಕಾರಿದಾರರು ಇವುಗಳ ಮೇಲೆ ಕೋವಿಯೆತ್ತುವುದನ್ನು ನಿಲ್ಲಿಸಿದರು. ಅಲ್ಲದೆ ನಾನು ಕಾಫಿ ತೋಟದಲ್ಲಿ ನೆರಳಿಗೆಂದು ಮಿಸಾಪ್ಸಿಸ್ ಎಂಬ ಒಂದು ಬಗೆಯ ಮರ ತಂದು ನೆಟ್ಟೆ. ಪರದೇಶದ ಈ ಮರ ಬಹು ಬೇಗ ಬೆಳೆಯುತ್ತದೆ. ಜೊತೆಗೆ ನೇರಿಳೆ ಹಣ್ಣಿನ ಗಾತ್ರದ ಹಣ್ಣುಗಳನ್ನೂ ಬಿಡುತ್ತದೆ.
ಈ ಮರಗಳು ನಮ್ಮ ತೋಟದ ಆಸುಪಾಸಿನಲ್ಲಿ ತುಂಬಾ ಆದಮೇಲೆ ವರ್ಷವೀಡೀ ದೊರೆಯುವ ಇವುಗಳ ಹಣ್ಣಿಗಾಗಿ ಈಗ ಮಂಗಟ್ಟೆ ಹಕ್ಕಿಗಳು ಸದಾ ನಮ್ಮ ತೋಟದಲ್ಲಿ ಬಿದ್ದುಬಿದ್ದು ನಗುವಂತೆ ಸದ್ದು ಮಾಡುತ್ತಾ ಹಾರಾಡುತ್ತಿರುತ್ತವೆ. ಬೆಳಗಿನ ಹೊತ್ತಂತೂ ಮಿಕ್ಕೆಲ್ಲಾ ಹಕ್ಕಿಗಳ ಕೂಗನ್ನೂ ಮೀರಿಸಿ ಮಂಗಟ್ಟೆ ಹಕ್ಕಿಗಳು ಕೇಕೆ ಹಾಕುವುದು ಕೇಳಬಹುದು.
ನಮ್ಮಲ್ಲಿಗೆ ಬರುವ ಎಲ್ಲಾ ಅತಿಥಿಗಳೂ ಕಾಡಿನ ನಿಃಶಬ್ದದಲ್ಲಿ ಹಠಾತ್ತಾಗಿ ಕೇಳಿಬರುವ ಇವುಗಳ ನಗು ಕೇಕೆಗಳಿಗೆ ಚಕಿತರಾಗಿ ಕಾಡಿನಲ್ಲಿ ಯಾರೋ ಕೂಗುತ್ತಿದ್ದಾರೆಂದು ನನ್ನನ್ನು ಒಮ್ಮೆಯಾದರೂ ಎಚ್ಚರಿಸದೆ ಇರುವುದಿಲ್ಲ.
ಮಿಂಚುಳ್ಳಿಗಳ ಉದ್ದನೆಯ, ನಡುಭಾಗ ಚಪ್ಪಟೆ ಇರುವ ಕೊಕ್ಕುಗಳು ಅವಕ್ಕೆ ಮೀನು ಹಿಡಿಯಲು ಅನುಕೂಲವಾಗುವಂತೆ ಇವೆ. ಅದೇ ರೀತಿ ಜೇನು ಕುಟುರಗಳ ಉದ್ದನೆಯ ಭರ್ಜಿಯಂಥ ಕೊಕ್ಕುಗಳು ಜೇನು ಹಿಡಿದು ಅವುಗಳ ಕೈಲಿ ಕಚ್ಚಿಸಿಕೊಳ್ಳದೆ ಕೊಂದು ತಿನ್ನುವುದಕ್ಕೆ ಅನುಕೂಲವಾಗುವಂತೆ ಇದೆ. ಆದರೆ ಮಂಗಟ್ಟೆ ಹಕ್ಕಿಗಳ ಮಹಾ ಕೊಕ್ಕುಗಲು ಅದರ ಯಾವ ಅನುಕೂಲಕ್ಕಾಗಿ ಇವೆಯೋ ಹೇಳಲಾರೆ.
ಸದಾ ಹಣ್ಣಿನ ಮರಗಳಲ್ಲಿ ಗುಂಪುಕೂಡಿಕೊಂಡು ಗಲಭೆ ಮಾಡುತ್ತಾ ಹಣ್ಣು ತಿನ್ನುವ ಇವಕ್ಕೆ ತಮ್ಮ ತಲೆಯ ಎರಡು ಮೂರರಷ್ಟು ದೊಡ್ಡದಿರುವ ಅಗಾಧ ಕೊಕ್ಕುಗಳ ಅಗತ್ಯವೇನೋ ಅವನ್ನು ಸೃಷ್ಟಿಸಿದ ಬ್ರಹ್ಮನನ್ನೇ ಕೇಳಬೇಕು. ತುತ್ತೂರಿಯಂತಿರುವ ಈ ಕೊಕ್ಕುಗಳು ಅವುಗಳ ಕೇಕೆ ಸದ್ದನ್ನು ಕಾಡಿನಲ್ಲಿ ಎರಡು ಮೂರು ಪಟ್ಟು ಹೆಚ್ಚಿಸಬಹುದೇನೋ. ಇದು ಬಿಟ್ಟರೆ ಮಂಗಟ್ಟೆ ಹಕ್ಕಿಗಳಿಗೆ ಆ ಮಹಾ ಕೊಕ್ಕುಗಳು ಯಾವ ವಿಶಿಷ್ಟ ಉಪಯೋಗಕ್ಕೆ ಇವೆಯೆಂದು ಹೇಳಬರುವುದಿಲ್ಲ.
ನಾನು ನಮ್ಮ ಬಯಲುಸೀಮೆಯಲ್ಲಿ ಅನೇಕ ಬಗೆಯ ಹಕ್ಕಿಗಳನ್ನು ನೋಡುತ್ತಲೇ ಬೆಳೆದವನು. ಮನೆಯ ಸೂರಿನಲ್ಲೇ ವಾಸವಿರುತ್ತಿದ್ದ ಗುಬ್ಬಚ್ಚಿ, ಊರಾಚೆಯ ತೋಪಿನಲ್ಲಿ ತಲೆಕೆಳಗಾಗಿ ನೇತು ಹಾಕಿಕೊಳ್ಳುತ್ತಿದ್ದ ಹಿರೇಹಕ್ಕಿ (ದೊಡ್ಡ ಬಾವಲಿ), ನೆಲದಲ್ಲಿಯೇ ಬುಡಬುಡನೆ ಓಡುತ್ತಿದ್ದ ಗೌಜಲ ಹಕ್ಕಿಗಳು, ಎಲ್ಲೆಲ್ಲಿಯೂ ಅಡ್ಡ ಸಿಗುತ್ತಿದ್ದ ಕಾಡಕ್ಕಿ, ಮಾಳಿಗೆಯಿಂದ ಮಾಳಿಗೆಗೆ ಹಾರುತ್ತಿದ್ದ ಪಾರಿವಾಳಗಳು, ಹಸಿರೆಲೆಯ ನಡುವೆ ಹಸಿರಾಗಿಯೇ ಕುಂತು ಹತ್ತಿರ ಹೋಗುತ್ತಿದ್ದಂತೆ ಗುಂಪಾಗಿ ಹಾರುತ್ತಿದ್ದ ಗಿಳಿಗಳು, ಸೋರೆಹಕ್ಕಿ, ನೀರಹಕ್ಕಿ, ತೀನೆ ಹಕ್ಕಿ, ಕೊಕ್ಕರೆ, ಬುಂಡುಬಳಕ, ನವಿಲು, ಹದ್ದು, ರಣಹದ್ದು, ಗರುಡ, ಕಾಗೆ, ಕೋಗಿಲೆ… ಇತ್ಯಾದಿ ಇತ್ಯಾದಿ. ಕನ್ನಡ ವಿಶ್ವವಿದ್ಯಾಲಯದ ನಮ್ಮ ವಿಶಾಲ ವಿದ್ಯಾರಣ್ಯ ಆವರಣವೂ ಕಡಿಮೆ ಏನಿಲ್ಲ. ನೂರಾರು ಬಗೆಯ ಹಕ್ಕಿಗಳ ತಾಣ ಅದು.
ಆದರೆ ಮಲೆನಾಡಿನ ಹಕ್ಕಿಗಳ ವೈವಿಧ್ಯ ಇನ್ನೂ ಹೆಚ್ಚು. ಬೆಳಗಿನ ಹೊತ್ತು ಕವಿಶೈಲದಲ್ಲಿ ತಪಸ್ವಿಯಂತೆ ಕುಳಿತು ಕಿವಿಗೊಟ್ಟರೆ ಅದೆಷ್ಟು ಪಕ್ಷಿಗಳ ವೈವಿಧ್ಯಮಯ ಇಂಪು ದನಿಗಳು ನಿನಾದಿಸುತ್ತವೆ. ಹಕ್ಕಿ ಪಕ್ಷಿಗಳ ದನಿ ಕೇಳಲು ನಾನು ಒಂದಿಷ್ಟು ಸ್ಥಳಗಳನ್ನು ಗುರುತು ಮಾಡಿಕೊಂಡಿದ್ದೇನೆ. ಕವಿಶೈಲದ ಬಂಡೆ, ಕವಿ ಮನೆಯ ಕಾಡಿನ ತಪ್ಪಲು, ಹೇಮಾಂಗಣದ ಅರಣ್ಯ ಇಲಾಖೆಯವರು ನಿರ್ಮಿಸಿರುವ ವಿಶ್ರಾಂತಿ ಗೃಹ, ಹೇಮಾಂಗಣದ ಹಿಂಭಾಗದಲ್ಲಿ ಇರುವ ಅರಣ್ಯ ಇಲಾಖೆಯ ಪರಿದಿಯಲ್ಲಿರುವ ಮರಗಳ ತೋಪಿನ ಪುಟ್ಟ ಕೊಳದ ಅಂಚು.
ಇಲ್ಲೆಲ್ಲ ಹೆಚ್ಚು ಜನಸಂಚಾರವಿಲ್ಲ. ನೀರವತೆಯಲ್ಲಿ ಕುಂತು ಆ ಇಂಚರಗಳನ್ನು ಆಲಿಸಬೇಕು. ಒಮ್ಮೆ ಹೇಮಾಂಗಣದ ಒಂದು ಅಂಚಿನಲ್ಲಿ ಭೂಮಿಯಿಂದ ಮೇಲ್ಭಾಗಕ್ಕೆ ಎದ್ದು ಬಂದಂತಿರುವ ಮರದ ಬೇರೊಂದರ ಬಳಿ ಸುಮ್ಮನೆ ಕುಂತಿದ್ದೆ. ಯಾವುದೋ ಅದೃಶ್ಯ ಪಕ್ಷಿಯೊಂದು ತಾಳಬದ್ಧವಾಗಿ ಅತ್ಯಂತ ಆಪ್ಯಾಯಮಾನ ಸ್ವರದಲ್ಲಿ ಉಲಿಯತೊಡಗಿತು. ಒಂದೆರಡು ಸೆಕೆಂಡಿನಲ್ಲಿ ದೂರದಿಂದ ಮತ್ತೊಂದು ಅದೇ ಬಗೆಯ ಇಂಚರ? ಮರದ ಯಾವುದೋ ರೆಂಬೆಯಲ್ಲಿ ಎಲೆಗಳ ನಡುವೆ ಮರೆಯಾಗಿದ್ದ ಈ ಪಕ್ಷಿ ಏನೋ ಒಂದು ಸಂದೇಶವನ್ನು ರವಾನಿಸುತ್ತಿತ್ತು.
ಅತ್ತ ಕಡೆಯಿಂದ ಇನ್ನೊಂದು ಪಕ್ಷಿ (ಗೆಳೆಯನೋ, ಗೆಳತಿಯೋ?) ಇದಕ್ಕೆ ಉತ್ತರಿಸುತ್ತಿತ್ತು. ಬಹಳ ಹೊತ್ತು ಹೀಗೇ ನಡೆಯಿತು. ಅದು ಕೇವಲ ಆ ಹಕ್ಕಿಗಳ ಕೂಗಾಗಿರಲಿಲ್ಲ. ಅವುಗಳ ಆಂತರ್ಯವನ್ನು ಬಿಚ್ಚಿಕೊಳ್ಳುವ ಹೃದಯದ ಸಂವಾದವಾಗಿತ್ತು. ನಾವು ಮನುಷ್ಯರು ನಮಗೆ ಮಾತ್ರ ಮಾತು ಬರುವುದು, ಏನೆಲ್ಲ ವ್ಯಕ್ತಪಡಿಸಬಲ್ಲ ಚಾತುರ್ಯವಿರುವುದು ನಮಗೆ ಮಾತ್ರ ಎಂಬ ಅಹಂಕಾರ. ಆದರೆ ತಾಳ್ಮೆಯಿಂದ ಕುಳಿತು ಆ ಪಕ್ಷಿಗಳ ಎದೆಯ ದನಿಯನ್ನು ಆಲಿಸಿದರೆ ನಮ್ಮ ಅಹಂಕಾರ ಖಂಡಿತವಾಗಿಯೂ ಕರಗುತ್ತದೆ.
। ಮುಂದಿನ ವಾರಕ್ಕೆ ।
0 ಪ್ರತಿಕ್ರಿಯೆಗಳು