ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾವನೆಗಳೇ ಹಾಗೆ ಎಲ್ಲವನ್ನೂ ಮರೆಸಿಬಿಡುತ್ತವೆ..

ಭಾವನೆಗಳ ಛಾಯೆಯಲ್ಲಿ

ನಾ ದಿವಾಕರ್

ಭಾವನೆಗಳೇ ಹಾಗೆ

ಎಲ್ಲವನ್ನೂ ಮರೆಸಿಬಿಡುತ್ತವೆ

ಅಂತರಂಗದ ಅವ್ಯಕ್ತ ಚಿಂತನೆಗಳನ್ನು

ಮನದಾಳದ ನೋವು ಹತಾಶೆಗಳನ್ನು

ಭೂತ ವಾಸ್ತವಗಳನ್ನು

ಭವಿಷ್ಯದ ಕನಸುಗಳನ್ನು

ಎಲ್ಲವನ್ನೂ !

ಕರಿ ಮೋಡದ ಹಿಂದಿನ

ಚುಕ್ಕೆಗಳು ನೊಂದ

ಹೃದಯದ ಕವಾಟದಲಿ

ಕುಳಿತು ಗಹಗಹಿಸುತ್ತವೆ ;

ಚಿಂತನೆಗಳ ಆವರಣದಲಿ

ಮನ ಹುಚ್ಚೆದ್ದು ಕುಣಿವಾಗ

ಬಂಧನದ ಸರಳುಗಳು

ಬಿಗಿದಪ್ಪುತ್ತವೆ

ಮಿಡಿತಗಳನ್ನು

ತುಡಿತಗಳನ್ನು !

ಒಂದು ಅಪ್ಪುಗೆ ಸಾಕಲ್ಲವೇ

ಮಿಲನವೆನ್ನಲು ;

ಆತ್ಮಗಳ ಸಮ್ಮಿಲನಕೆ

ನಂಟುಗಳ ಹೊರೆಯೇಕೆ ;

ಪಯಣದಂಚಿನ ಗಾಲಿಗೆ

ಕೀಲಿನ ಹಂಗೇಕೆ ;

ಕಣ್ಣಂಚಿನ ಹನಿಗಳಲಿ

ಸ್ನೇಹದ ಬೀಜಾಂಕುರವಾದಾಗ

ಬಂಧನಗಳ ಹಂಗೇಕೆ

ಭಾವವೊಂದೇ ಸಾಕು !

ಸರಿದು ಹೋಗಲಿ ಮನದ

ಪೊರೆ ಭೂತಗಳನಳಿಸಿ

ನಾಳೆಗಳನೆಣಿಸುತ್ತಾ

ಹರಿದು ಹೋಗಲಿ ಪೊರೆ ;

ಆತ್ಮಗಳ ಸಂವಹನಕೆ

ಆದಿ ಅಂತ್ಯಗಳೆಲ್ಲಿ

ಎಲ್ಲವೂ ಮುಕ್ತ

ವ್ಯೋಮಾಕಾಶದಲ್ಲಿನ

ಗೆರೆಗಳಂತೆ ;

ಉಳಿವುದೊಂದೇ ಭಾವ

ಸ್ನೇಹ ಪ್ರೀತಿ

ಸದ್ಭಾವ !

 

‍ಲೇಖಕರು G

7 November, 2012

6 Comments

  1. Manjula Narayanarao

    beautiful

  2. mmshaik

    nice one..

  3. ಶ್ರೀವತ್ಸ ಜೋಶಿ

    ನಾ.ದಿವಾಕರ್ ಅವರ ’ಪ್ರಖರ’ ಶೈಲಿಯ ಬರಹಗಳನ್ನು ನಾನು ಅವಧಿಯಲ್ಲಿ ಆಗಾಗ ಓದುತ್ತೇನೆ, ಮೆಚ್ಚುತ್ತೇನೆ. ಬಹಳ ಚೆನ್ನಾಗಿ ಮನಮುಟ್ಟುವಂತೆ ಬರೆಯುತ್ತಾರೆ. ಅವರದು ಸಮತೂಕದ ಬರವಣಿಗೆ ಎಂದು ನನಗೆ ಅನಿಸುತ್ತದೆ. ಪ್ರಸ್ತುತ ಈ ಕವನವೂ ಬಹುಶಃ ‘ತುಂಬಾ ಚೆನ್ನಾಗಿದೆ!’ ಕ್ಯಾಟೆಗರಿಯದೇ ಇರಬೇಕು. ಆದರೆ “poetry is not my cup of ಕಷಾಯ” ಆದ್ದರಿಂದ ನಾನು ಇಲ್ಲಿ ಒಂದು ಪ್ರಾಮಾಣಿಕ ಅನಿಸಿಕೆ/ಸಂದೇಹವನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇದು ನಾ.ದಿವಾಕರ್ ಅವರ ಕಾವ್ಯಸೃಜನಶೀಲತೆಯ ಬಗ್ಗೆ ಕೊಂಕು ಎಂದು ಯಾರೂ ತಿಳಿಯಬಾರದಾಗಿ ಕೋರುತ್ತೇನೆ.

    ನನ್ನ ಸಂದೇಹವೇನೆಂದರೆ (ಇದು ಕಾವ್ಯರಸಾಸ್ವಾದನೆಯ ಶಕ್ತಿ ನನ್ನಲ್ಲಿಲ್ಲವಾದ್ದರಿಂದ ಹೊರಹೊಮ್ಮಿದ ಸಂದೇಹವೆಂದು ಬೇರೆ ಹೇಳಬೇಕಿಲ್ಲ), ನಾ.ದಿವಾಕರ್ ಅವರ ಇದೇ ಕವನವನ್ನು ಈ ಕೆಳಗಿನಂತೆ ಒಂದು ಪ್ಯಾರಗ್ರಾಫ್ ರೀತಿಯಲ್ಲಿ ಬರೆದರೆ ಅದು ಸ್ಫುರಿಸಬಹುದಾದ ಭಾವನೆಗಳು ಬೇರೆ (ಅಥವಾ ಹೆಚ್ಚು/ಕಡಿಮೆ) ಇರುತ್ತವೆಯೇ?

    “ಭಾವನೆಗಳೇ ಹಾಗೆ ಎಲ್ಲವನ್ನೂ ಮರೆಸಿಬಿಡುತ್ತವೆ- ಅಂತರಂಗದ ಅವ್ಯಕ್ತ ಚಿಂತನೆಗಳನ್ನು, ಮನದಾಳದ ನೋವು ಹತಾಶೆಗಳನ್ನು, ಭೂತ ವಾಸ್ತವಗಳನ್ನು, ಭವಿಷ್ಯದ ಕನಸುಗಳನ್ನು ಎಲ್ಲವನ್ನೂ!
    ಕರಿ ಮೋಡದ ಹಿಂದಿನ ಚುಕ್ಕೆಗಳು ನೊಂದ ಹೃದಯದ ಕವಾಟದಲಿ ಕುಳಿತು ಗಹಗಹಿಸುತ್ತವೆ ; ಚಿಂತನೆಗಳ ಆವರಣದಲಿ ಮನ ಹುಚ್ಚೆದ್ದು ಕುಣಿವಾಗ ಬಂಧನದ ಸರಳುಗಳು ಬಿಗಿದಪ್ಪುತ್ತವೆ- ಮಿಡಿತಗಳನ್ನು, ತುಡಿತಗಳನ್ನು! ಒಂದು ಅಪ್ಪುಗೆ ಸಾಕಲ್ಲವೇ ಮಿಲನವೆನ್ನಲು? ಆತ್ಮಗಳ ಸಮ್ಮಿಲನಕೆ ನಂಟುಗಳ ಹೊರೆಯೇಕೆ? ಪಯಣದಂಚಿನ ಗಾಲಿಗೆ ಕೀಲಿನ ಹಂಗೇಕೆ? ಕಣ್ಣಂಚಿನ ಹನಿಗಳಲಿ ಸ್ನೇಹದ ಬೀಜಾಂಕುರವಾದಾಗ ಬಂಧನಗಳ ಹಂಗೇಕೆ ಭಾವವೊಂದೇ ಸಾಕು! ಸರಿದು ಹೋಗಲಿ ಮನದ ಪೊರೆ ಭೂತಗಳನಳಿಸಿ ನಾಳೆಗಳನೆಣಿಸುತ್ತಾ ಹರಿದು ಹೋಗಲಿ ಪೊರೆ; ಆತ್ಮಗಳ ಸಂವಹನಕೆ ಆದಿ ಅಂತ್ಯಗಳೆಲ್ಲಿ ಎಲ್ಲವೂ ಮುಕ್ತ ವ್ಯೋಮಾಕಾಶದಲ್ಲಿನ ಗೆರೆಗಳಂತೆ ; ಉಳಿವುದೊಂದೇ ಭಾವ ಸ್ನೇಹ ಪ್ರೀತಿ ಸದ್ಭಾವ!”

    [ವಿ.ಸೂ: ಇದು ’ಕಾವ್ಯ ರಸಾಸ್ವಾದನೆಯನ್ನು ಕಲಿಯಲೆತ್ನಿಸುವ ವಿದ್ಯಾರ್ಥಿಯೊಬ್ಬನ ಪ್ರಶ್ನೆ’ ಎಂದು ಭಾವಿಸಿ ಯಾರಾದರೂ ಬಲ್ಲವರು ವಸ್ತುನಿಷ್ಠವಾಗಿ ಉತ್ತರಿಸಿದರೆ ಅದನ್ನು ಸಂತೋಷದಿಂದ ಅರ್ಥಮಾಡಿಕೊಳ್ಳುತ್ತೇನೆ.]

    • ನಾ ದಿವಾಕರ

      If some one answers joshiji in right spirit and perspective i too welcome it as it will expose my weakness. In fact I will never consider myself as a poet unless i am considered so by recognised poets.But some of my poetries are highly appreciated by some eminents.Anyway Joshi has raised a pertinent question and I too am eager to get a right answer from right person.
      divakar

    • Sharadhi

      ನಾನು ಗಂಭೀರ ಸಾಹಿತ್ಯದ ವಿದ್ಯಾರ್ಥಿಯಲ್ಲ. ನನ್ನ ಗ್ರಹಿಕೆ ಹೀಗಿದೆ. ಕವಿತೆ ಇಂತದ್ದನ್ನೇ ಹೇಳುತ್ತೇನೆ ಎನ್ನುವಂತಿದ್ದರೆ ಅದು ಗದ್ಯವಾಗುತ್ತದೆ, ಅಥವಾ ಒಂದು ಟ್ಯಾಬ್ಲಾಯ್ಡ್ ನ ವರದಿಯಾಗುತ್ತದೆ. ತೀರಾ ವಾಚ್ಯವಾಗುತ್ತದೆ. ಒಂದೇ ನಿಖರ ವಿಷಯವನ್ನು (ಒಂದೇ ಎಂದರೆ ನಿಖರವಾಗಿ ಒಂದೇ) ಕಾವ್ಯಾತ್ಮಕ ಭಾಷೆಯಲ್ಲಿ ಬರೆದರೆ ಅದು ಕಾವ್ಯವಾಗುವುದಿಲ್ಲ. ಒಂದನ್ನು ಹೇಳಿದಂತೆ, ಇನ್ನೊಂದನ್ನು ಸೂಚಿಸಿದಂತೆ ಮತ್ತೇನನ್ನೋ ಯೋಚಿಸಿದಂತೆ, ಅನೇಕ ಅರ್ಥಗಳನ್ನು ಹೊಮ್ಮಿಸುವಂತೆ ವಾಕ್ಯಾರ್ಥ, ಭಾವಾರ್ಥ, ಲಕ್ಹ್ಸ್ನಾರ್ಥ, ಹಾಗೂ ದ್ವಾನ್ಯರ್ಥ – ಕನಿಷ್ಠ ಇವುಗಳ ಹದವಾದ ಮೇಲೈಸುವಿಕೆ ಇರಬೇಕು. ಇಲ್ಲಿ, “ಭಾವನೆಗಳೇ ಹಾಗೆ ಎಲ್ಲವನ್ನೂ ಮರೆಸಿಬಿಡುತ್ತವೆ” – ಇದರಲ್ಲಿ ಕಾವ್ಯವೇನೂ ಇಲ್ಲ, ಇದು ವಾಚ್ಯ. “ಪಯಣದಂಚಿನ ಗಾಲಿಗೆ ಕೀಲಿನ ಹಂಗೇಕೆ” ಇದರಲ್ಲಿ ಹಲವು ಪ್ರತಿಮೆಗಳು, ಹಾಗೂ ಲಕ್ಷ್ಯಾರ್ಥಗಳೂ ಅಡಗಿವೆ, ಕಾವ್ಯ ಈ ಒಂದು ಸಾಲಿನಲ್ಲಿದೆ.

      • ಶ್ರೀವತ್ಸ ಜೋಶಿ

        Sharadhi ಅವರ ಉತ್ತರದಲ್ಲಿ ತಿರುಳಿದೆ, ಅರ್ಥಮಾಡಿಕೊಳ್ಳುವಂಥದಿದೆ ಎಂದು ನನಗೆ ಅನಿಸಿತು. ಇನ್ನಷ್ಟು ವಿವರಗಳೊಂದಿಗೆ, ಉದಾಹರಣೆಗಳೊಂದಿಗೆ ಯಾರಾದರೂ ವಿಶ್ಲೇಷಿಸುವವರಿದ್ದರೆ ಸ್ವಾಗತ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading