
ಬೊಳುವಾರು ಮಹಮದ್ ಕುಂಇ
ನನಗೆ ನೆನಪಿರುವಂತೆ ನನ್ನ ತಾಯಿ ಬೀಡಿಯ ಎಲೆಗಳನ್ನು ಕತ್ತರಿಸುತ್ತಿದ್ದಾಗ, ಆಕೆಯ ಎಡಗೈಯಲ್ಲಿ ಎಲೆಯೂ, ಬಲಗೈಯಲ್ಲಿ ಕತ್ತರಿಯೂ ಇರುತ್ತಿದ್ದವು.
ನನ್ನ ಅಕ್ಕ ಅಮಿತಾಬ್ ಬಚನ್ ನಂತೆ ಡೆಮ್ಮೆ. ಆಕೆಯ ಬಲಗೈಯಲ್ಲಿ ಎಲೆಯೂ ಎಡಗೈಯಲ್ಲಿ ಕತ್ತರಿಯೂ ಇರುತ್ತಿದ್ದವು.
ಇಬ್ಬರ ಉದ್ದೇಶವೂ ಒಂದೆ.
ಬೀಡಿ ಎಲೆಗಳನ್ನು ಬೀಡಿ ಕಟ್ಟಲು ಅನುಕೂಲವಾಗುವಂತೆ ಸರಿಯಾದ ಆಕಾರದಲ್ಲಿ ಕತ್ತರಿಸುವುದು ಮಾತ್ರ.
ಆದರೆ, ಇಂದು ನಾವು ಧ್ವನಿವರ್ಧಕಗಳ ಎದುರು ಘರ್ಜಿಸುವಂತೆ, ಎಡ-ಬಲಗಳ ಬಗ್ಗೆ ಅವರು ತಲೆಕೆಡಿಸಿಕೊಂಡಿರಲಿಕ್ಕಿಲ್ಲ. ಅವರಿಗೆ ಅವೆರಡೂ ಅನ್ನದ ಬಟ್ಟಲುಗಳು ಅಷ್ಟೇ.
ಆದರೆ, ವೇದಿಕೆಗಳಲ್ಲಿ ‘ಎರಡು ಮಾತು’ ಆಡಲು ಕಲಿತಿರುವ ನಮಗೆ ಎಡಬಲಗಳು ಅನ್ನದ ಬಟ್ಟಲುಗಳಲ್ಲ.
ನಾವು ಭೂಮಿಗಿಳಿದಿರುವುದೇ ಇತರರಿಗೆ ಬುದ್ಧಿ ಹೇಳಲು. ಜಗತ್ತಿನ ಎಲ್ಲ ಸಮಸ್ಯೆಗಳನ್ನೂ ಪರಿಹರಿಸುವ ರಾಮಬಾಣಗಳು ನಮ್ಮ ಬತ್ತಳಿಕೆಗಳಲ್ಲಿರುತ್ತವೆ. ಸಮಯ ಸಂದರ್ಭಗಳನ್ನು ನೋಡಿಕೊಂಡು ಯಾವ ದಿಕ್ಕಿಗೂ ಬಾಣ ಹೂಡಬಲ್ಲ ಸವ್ಯಸಾಚಿಗಳು ನಾವು.
ಬೇರೊಬ್ಬರು ‘ಏನನ್ನು’ ಹೇಳುತ್ತಿದ್ದಾರೆ ಎಂಬುದಕ್ಕಿಂತ, ‘ಆ ಬೇರೊಬ್ಬರು ಯಾರು’ ಎಂಬುದರ ಆಧಾರದಲ್ಲಿ ‘ಅವರು’ ಹೇಳುವ ಮಾತುಗಳಲ್ಲಿ ‘ನಮ್ಮ’ ಮಾತುಗಳನ್ನು ಓದಿಕೊಳ್ಳುವವರು ನಾವು.
ಉದಾಹರಣೆಗೆ ಹಿರಿಯ ಲೇಖಕರಾದ ಬೈರಪ್ಪನವರು, ‘ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋದರೆ ಅಪಾಯ ಕಡಿಮೆ’ ಎಂಬುದಾಗಿ ಹೇಳಿಬಿಟ್ಟರೂ, ಅವರ ಸಲಹೆಯಲ್ಲಿ ಎಡ-ಬಲಗಳನ್ನು ಹುಡುಕುವ ನಾವು, ಮಹಮದನೊಬ್ಬ ‘ದೇಶಪ್ರೇಮಕಿಂತ ವಿಶ್ವಪ್ರೇಮ’ ಒಳ್ಳೆಯದು ಎಂಬುದಾಗಿ ಹೇಳಿದರೆ ಅವನ ಹಣೆಯಲ್ಲಿ ‘ಐ.ಎಸ್.ಐ.’ ಮಾರ್ಕ್ ಕಾಣಬಲ್ಲೆವು.
ಆದ್ದರಿಂದಲೇ ಇರಬೇಕು, ‘ಮೈಕ್’ ಮಾತುಗಾರರಲ್ಲದ ಓದುಗರು ಮತ್ತು ಕೇಳುಗರು, ಈ ಎಡ-ಬಲಗಳ ಬಗ್ಗೆ ತಲೆಕೆಡಿಸಿಕೊಳ್ಳದೆ,
ತಮಗಿಷ್ಟದ ದಿಕ್ಕುಗಳಿಗೆ ತಲೆಯಿಟ್ಟು ಮಲಗಿ ರಸಾನುಭೂತಿ ಅನುಭವಿಸುತ್ತಿರುವುದು.





ನೀವು ಹೇಳೋದು ನಿಜ. ಮಾತುಗಾರರಲ್ಲದವರು ಎಡ-ಬಲಗಳನ್ನು ಸಮವಾಗಿ ಕಾಣುವರು, ನಮಗೆ ರಸಾನುಭೂತಿ ಮುಖ್ಯ. ಬದುಕಿನಲ್ಲಿ ತೊಂದರೆಗಳಿರುವುದು ಖಚಿತ.
Beautifully said sir…