
ಉಷಾ ಪಿ ರೈ
ನಿಮಗೆ
ಗುಡ್ಡೆ ಕಡಿದು ಹಾಕುವಂತಹ
ಮಹತ್ಕಾರ್ಯ ಏನೂ ಇಲ್ಲದಿದ್ದರೆ ನೀವು ನಿಮ್ಮ (ಅತಿ )ಪ್ರೀತಿ ಪಾತ್ರರೊಂದಿಗೆ
ಈವತ್ತು(೧೫-೦೧-೧೭)
ಸಂಜೆ ೪ ಕ್ಕೆ
ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ
ನನ್ನ ಜೊತೆ ನಮ್ಮ ( ಪಿ ಶೇಷಾದ್ರಿ) ಸಿನೆಮಾ -ಭೇಟಿ-ನೋಡಬಹುದು.
-ಈ ಆಮಂತ್ರಣದ ರೀತಿಯೇ ನಮ್ಮೂರಿನ ಸಲುಗೆಯ ಭಾಷೆಯ ಆತ್ಮೀಯತೆಯನ್ನು ನೆನಪಿಸಿ ಹೋಗದಿರಲಾಗಲಿಲ್ಲ.
ಬೊಳುವಾರರ ಆಮಂತ್ರಣವನ್ನು ಕೇಳಿ ರೈಗಳೂ ಬರುವೆನೆಂದಾಗ ಇಬ್ಬರೂ ಹೋದೆವು. ಅಲ್ಲಿ ಹೋಗುವಾಗ ಅದು ಒಂದನೇ ಮಹಡಿಯಲ್ಲಿ ಎಂದು ತಿಳಿದಾಗ ರೈಗಳು ವಾಪಾಸು ಹೋಗುವಾ ಎಂದಾಗ ನನಗಾದ ನಿರಾಸೆ ಅಷ್ಟಿಷ್ಟಲ್ಲ. ಆಗಷ್ಟೇ ಅಲ್ಲಿಗೆ ಬಂದ ದತ್ತಣ್ಣ ಇಲ್ಲಿ ಲಿಫ್ಟ್ ಇದೆ ಎಂದು ಅಲ್ಲಿದ್ದವರ ಹತ್ತಿರ ಮಾತಾಡಿ ಹಿಂದುಗಡೆ ಇದ್ದ ಲಿಫ್ಟ್ ನಲ್ಲಿ ನಾವು ಮೇಲೆ ಹೋಗುವಂತೆ ಮಾಡಿದರು.
ನನಗೆ ಅವರು ಗೊತ್ತಿದ್ದರೂ ಅವರಿಗೆ ನನ್ನ ಪರಿಚಯವಿಲಿಲ್ಲ. ಅವರು ಮಾಡಿದ ಸಹಾಯದಿಂದ ಒಂದು ಉತ್ತಮ ಚಿತ್ರವನ್ನು ಪ್ರೀಮಿಯರ್ ಶೋದಲ್ಲಿ ನೋಡಲು ಸಾಧ್ಯವಾಯಿತು. ಅವರಿಗೆ ಮನದಾಳದಿಂದ thanks ಹೇಳಿ ಸಿನಿಮಾದ ಬಗ್ಗೆ ಒಂದೆರಡು ಮಾತು.
ಬೊಳುವಾರು ಅವರು ನಮ್ಮ ತಲೆಮಾರಿನ ಅತ್ಯಂತ ಸಂವೇದನಾಶೀಲ ಲೇಖಕ. ಅವರ ‘ಸ್ಪಾತಂತ್ರ್ಯದ ಓಟ’ ಮತ್ತು ‘ಓದಿರಿ’ ಓದಿ ಬಹಳ ಖುಷಿ ಪಟ್ಟಿದ್ದೇನೆ. ಮಂಗಳೂರು ಭಾಷೆಯನ್ನು ಬಹಳ ಸಮರ್ಪಕವಾಗಿ ಬಳಸುವ ಲೇಖಕ. ಅವರ ಎಲ್ಲ ಕಥೆಗಳ ಭಾಷೆಯೂ ಮಂಗಳೂರು ಭಾಷೆಯೇ.
ಮಂಗಳೂರಿನ ಬ್ಯಾರಿಗಳು (ಮುಸ್ಲಿಮರು) ಮಾತಾಡುವ ಭಾಷೆ ಇದೇ. ಅದನ್ನು ಸಿನೀಮಾಕ್ಕೆ ತರುವಾಗ ಹೇಗಿರಬಹುದು ಎನ್ನುವುದಕ್ಕೆ ಉತ್ತರ ಈ ಚಿತ್ರ. ಚಿಕ್ಕಂದಿನಲ್ಲಿ ನೋಡಿದ ಬ್ಯಾರಿ ಕುಟುಂಬಗಳ ಮತ್ತು ಎಲ್ಲ ಜಾತಿಗಳೊಳಗಿದ್ದ ಸಾಮರಸ್ಯದ ನೆನಪು ಮರುಕಳಿಸಿತು.
ಒಂದು ಮುಸ್ಲಿಮ್ ಕುಟುಂಬದ ಕಥೆಯಾದರೂ ಹೆಣ್ಣೊಬ್ಬಳ ನೋವಿನ ಕಥೆ ಇಲ್ಲಿದೆ. ಹೆಣ್ಣುಮಕ್ಕಳು ಬೇಡ ಎನ್ನುವ ಅಪ್ಪಂದಿರಿಗೆ ಒಂದು ಹೆಣ್ಣು ಮಗುವಿನ ಮೂಲಕ ಸರಿಯಾದ ಉತ್ತರ ಕೊಟ್ಟಿದ್ದಾರೆ. ಕಥೆಯ ಬಗ್ಗೆ ಹೆಚ್ಚು ಹೇಳುವುದಿಲ್ಲ. ನೋಡಿಯೇ ಕಣ್ಣು ಒದ್ದೆಯಾಗಬೇಕು. ಎಲ್ಲ ಹೊಸಬರೇ ನಟಿಸಿದ್ದು. ಆ ಮುದ್ದು ಮಗುವಂತೂ ಮನಸೆಳೆಯುತ್ತೆ.
ರೇಡಿಯೋ ಮಿರ್ಚಿಯ ಸಿರಿ ಮೂಕ ಹಿರೋಯಿನ್ ಆಗಿ ಉತ್ತಮ ಅಭಿನಯದಿಂದ ಮನಕ್ಕೆ ಲಗ್ಗೆ ಇಡುತ್ತಾಳೆ. ಅವಳ ಗಂಡನಾಗಿ ನಟಿಸಿದವನೂ ಮೊದಲ ಚಿತ್ರದಲ್ಲೇ ಜಯಗಳಿಸಿದ್ದಾನೆ. ಕೆಲವೇ ಪಾತ್ರಗಳಲ್ಲಿ ಒಂದು ಒಳ್ಳೆಯ ಚಿತ್ರವನ್ನು ನಿರ್ಮಿಸಿದ್ದಾರೆ ಶೇಷಾದ್ರಿಯವರು.
ಬೊಳುವಾರು ಹಾಗೂ ಶೇಷಾದ್ರಿಯವರಿಗೆ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು. ಎಲ್ಲರೂ ಮಿಸ್ ಮಾಡದೆ ನೋಡಲೇ ಬೇಕಾದ ಅತ್ಯುತ್ತಮ ಚಿತ್ರ. ಮೊದಲ ಶೋ ನೋಡಿದ ಸಂತಸ ನನ್ನದು.





0 Comments