ಮಂಜುನಾಥ್ ಲತಾ
ಮೊನ್ನೆ ತಾನೇ ಹಿಂದಿಯ ‘ಬೇಗಂ ಜಾನ್’ ಚಿತ್ರ ನೋಡಿದೆ.
ಹಿಮದಂತಹ ವಿಷಾದ ಎದೆಯನ್ನು ಕೊರೆಯುತ್ತಾ ಹೋದಂತಹ ಅನುಭವ..
ವೇಶ್ಯಾಕೂಟವೊಂದರ ಹೆಣ್ಣುಮಕ್ಕಳ ಅಸಹಾಯಕತೆ, ವೇದನೆ-ಸಂವೇದನೆ, ಸಾಮರ್ಥ್ಯಗಳನ್ನು ದೃಶ್ಯಮಾಧ್ಯಮದ ಒರೆಗಲ್ಲಿಗೆ ಹಚ್ಚುವ ಉತ್ತಮ ಪ್ರಯತ್ನ. ಸ್ವಾತಂತ್ರ್ಯ ಸಂದರ್ಭದ ಭಾರತ-ಪಾಕೀಸ್ತಾನ ವಿಭಜನೆಯ ನೋವುಗಳು ಯಾವೆಲ್ಲ ಗಡಿಗಳನ್ನೂ ಕೊಂದು-ತಿಂದು ಹಾಕಿದವು ಎಂಬುದನ್ನು ಚಿತ್ರ ವಿಶದವಾಗಿ ಬಿಡಿಸುತ್ತಾ ಹೋಗುತ್ತದೆ.

ಅಂದ ಹಾಗೆ ಇದು ಬೆಂಗಾಲಿಯ ಯುವ ನಿರ್ದೇಶಕ ಶ್ರೀಜಿತ್ ಮೊದಲ ಹಿಂದಿ ಸಿನಿಮಾ.
‘ಬೇಗಂ ಜಾನ್’ 2015ರಲ್ಲಿಯೇ ಶ್ರೀಜಿತ್ ನಿರ್ದೇಶನದಲ್ಲಿ ಬೆಂಗಾಲಿಯಲ್ಲಿ ತಯಾರಾದ ‘ರಾಜ್ ಕಹಾನಿ’ಯ ಹಿಂದಿ ಆವೃತ್ತಿ.
ಶ್ರೀಜಿತ್ ಮುಖರ್ಜಿಯ ಪ್ರೊಫೈಲ್ ನೋಡಿ ಬೆರಗಾದೆ..ತನ್ನ 39ನೇ ವಯಸ್ಸಿಗೇ ಹಲವು ರಾಷ್ಟ್ರಪ್ರಶಸ್ತಿಗಳನ್ನು ತನ್ನ ಚಿತ್ರಗಳಿಗಾಗಿ ದಕ್ಕಿಸಿಕೊಂಡ ಕ್ರಿಯಾಶೀಲ ನಿರ್ದೇಶಕನ ಸಿನಿಮಾಗಳನ್ನು ನೋಡಲು ಆಗೇ ಇಲ್ಲವಲ್ಲ ಎಂಬ ಕೊರಗು ಒಂದೆಡೆಯಾದರೆ ‘ಬಾಹುಬಲಿ’ಯಂತ ಕೇವಲ ಅದ್ಧೂರಿತನ, ಗ್ರಾಫಿಕ್ಸ್ ಚಮತ್ಕಾರವನ್ನಷ್ಟೇ ನಂಬಿಕೊಂಡು ತಯಾರಾದ ಚಿತ್ರಗಳನ್ನು ನಮ್ಮ ಮಾಧ್ಯಮಗಳು ವೈಭವೀಕರಿಸುತ್ತಿರುವ ಕುರಿತು ವಿಷಾದವೆನ್ನಿಸತೊಡಗಿತು..
ಸತ್ಯಜಿತ್ ರೇ, ಮೃಣಾಲ್ ಸೇನ್, ಋತ್ವಿಕ್ ಘಟಕ್ ಪರಂಪರೆಯ ಮುಂದುವರಿಕೆಯಂತಿರುವ ಶ್ರೀಜಿತ್ ನಂತಹ ನಿರ್ದೇಶಕರ ಚಿತ್ರಗಳನ್ನು ಮಿಸ್ ಮಾಡಿಕೊಳ್ಳಬಾರದೆನ್ನಿಸುತ್ತಿದೆ…





0 Comments