ಅರಿವೆಂಬುದುಂಟೇ
-ಮಲ್ಲಿಕಾರ್ಜುನಗೌಡ ತೂಲಹಳ್ಳಿ
ಮೌನಕ್ಕೆ
ಎಲ್ಲೆಲ್ಲಿಂದಲೋ ತಂತಿ
ಒಮ್ಮೆ ಬೆಳಕು
ಒಮ್ಮೆ ಬೆಂಕಿ
ಕಗ್ಗತ್ತಲಲ್ಲಿ
ಬೆಂಕಿ
ಬೀಡಿ
ಕುಕ್ಕರಗಾಲಿನ ಧ್ಯಾನ
ಬೆಂಕಿ ನಂದಿ
ಬೆಳಕಾಗಿ
ಕತ್ತಲಲ್ಲಿ ಕಡೆದಿಟ್ಟದ್ದೆಲ್ಲಾ ಭಂಗ
ಈ ತಂತಿಗಳ
ಸುಮ್ಮನೇ ಬಿಡದೆ
ಗಳ ಗಳ ಅಲ್ಲಾಡಿಸಿ
ಚಟರುಮಟರು ಬೆಂಕಿ ಹೊತ್ತಿಸಿ
ಭಂಗಕ್ಕೆ ಭಂಗಿ ಕುಡಿಸಿ
ಒಂದು ಅಭಂಗ ಪ್ರಸಂಗದಲ್ಲಿ
ಗೊಮ್ಮಟನ ಕಡೆದೆ
ಅವನು
ಬೆಳಕೆಂದರೆ ಬೆಳಕಲ್ಲ
ಬೆಂಕಿಯೆಂದರೆ ಬೆಂಕಿಯಲ್ಲ
ಕಣ್ಮುಂದೆ ಕಡೆದಿಟ್ಟುಕೊಂಡು
ಈಗ ಅರಿಯುವ ಪೀಕಲಾಟ
ಹೋಗಲಿ
ಈ ಅರಿವೆಂಬುದುಂಟೇ?
ಮರೆತೇ ಹೋಗಿತ್ತು
ಈ ತಂತಿಯೊಳಗೆ ಬಂದದ್ದು
ಬೆಳಕೋ
ಬೆಂಕಿಯೋ
ಸಮುದ್ರ ದಂಡೆಯಲಿ
ಮರಳ ಗೂಡ ಮಾಡಿ
ಸಮುದ್ರವನ್ನೇ
ವಾಸಿಸಲು ಕರೆದ ಮಗುವ
ಕೇಳಿ ನೋಡಲೇ?






0 Comments