ಜೀವನ್ ಪ್ರಕಾಶನ, ಕೋಲಾರ ಹಮ್ಮಿಕೊಂಡಿದ್ದ ದಸರಾ ಕವಿತೆ ಸ್ಪರ್ಧೆಯಲ್ಲಿ
ಮೆಚ್ಚುಗೆ ಪಡೆದ ಕವಿತೆ
ವಿರಕ್ತ

ಮಧು ಮಾಚಯ್ಯ ಎನ್.ಬಿ.
ಇಂದ್ರಿಯಗಳ ನಿಗ್ರಹಿಸಿ
ಸನ್ಯಾಸಿಯಾಗ ಬಂದ
ತರುಣನಿಗೆ
ಸ್ವಪ್ನ ಸ್ಖಲನದ ಅಳುಕು!

ಅದ ತ್ಯಜಿಸು ಇದ ವ್ಯರ್ಜಿಸು
ಎಂಬ ಪಾಠ-ಪರಿಪಾಠಗಳ
ನಡುವೆ ಬಿಟ್ಟ ವ್ಯಸನಗಳ
ನೆನಪು!
ಒಗೆದು ಒಣಗಲಿಟ್ಟ ಬಟ್ಟೆಗೆ
ಬಣ್ಣದ ಪತಂಗ ಮುತ್ತಿಟ್ಟಾಗ
ಮನದಲಿ
ಪ್ರೇಮ ಕಾವ್ಯದ ಹುಟ್ಟು!
ಆಶ್ರಮದ ಆಶೀರ್ವಚನಕೆ
ಆಗಮಿಸಿದ ನಾರಿಯರ
ಕಂಡಾಗ ಎದೆಯಲಿ
ಕುದುರೆ ಓಟದ ಸದ್ದು!
ಸಂಸಾರಿಗಳ ಸಂಸಾರ
ವಿರಕ್ತನ ವೈರಾಗ್ಯದ
ಕುರಿತ ದ್ವಂದ್ವ ಗೊಂದಲದ
ಕನಸು!
ಬೆದೆಗೆ ಬಂದ ಬಯಕೆಗೆ
ಬದು ಕಟ್ಟುವ ಗುರುವ
ಕಂಡಾಗ ಒಮ್ಮೊಮ್ಮೆ ಕಂಡರಿಯದ
ಸಾತ್ವಿಕ ಸಿಟ್ಟು!
ತಿಂದುಂಡು ಅತ್ತಿತ್ತ ಕಳ್ಳನಂತೆ
ಓಡಾಡುತ ಕಾಲಹರಣ ಮಾಡುವ
ಮಠದ ಬೆಕ್ಕ ಕಂಡಾಗ ಮನದಲಿ
ಪಶ್ಚಾತಾಪದ ಹೊಳಪು!





0 Comments