ಕಲಬುರ್ಗಿಯ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಇವರು ಲೆಕ್ಕಪತ್ರ ಅಧೀಕ್ಷಕ.
ಸದಾ ಬಸ್ಸುಗಳ ಲೋಕದಲ್ಲಿ ಕೆಲಸ ಮಾಡುವ ಇವರು ಬಸ್ಸಿನ ನೋವಿನ ದನಿಯನ್ನು ಮುಂದಿಟ್ಟಿದ್ದಾರೆ
ಬಸ್ಸಿನೊಡಲಳಲು ಬೇಡುವ ಬೊಗಸೆ ಮಮತೆ…

ವೆಂಕಟೇಶ ಕೆ. ಜನಾದ್ರಿ, ಕನಕಗಿರಿ
ನೀವೇಕೆ ಕಾಡುವಿರಿ ನಂಗ
ಕಲ್ಲೇಕೆ ಎಸೆವಿರಿ ಹಿಂಗ
ಬೆಂಕ್ಯಾಕ ಹಚ್ಚುವಿರಿ ಹಂಗ
ಬಿಸಿಲಿರಲಿ ಮಳೆಯಿರಲಿ
ಕಂಡಕ್ಟರ್ ಹೇಳ್ದಂಗ, ಡ್ರೈವರ್ ತಿರುವಿದಂಗ
ನಿಮ ಮಾತ ನಾನು ಕೇಳ್ತಿದ್ದೆ,
ಸುಖ ಪ್ರಯಾಣ ಸೇವೆ ಕೊಡ್ತಿದ್ದೆ.
ಮದುವೇನೆ ಇರಲಿ, ಹಬ್ಬಾನೆ ಇರಲಿ,
ಸುಖವೇ ಇರಲಿ ದುಃಖಾನೇ ಇರಲಿ
ಕೇಳಿದಲ್ಗೆ ನಿಮ್ಮನ ಕರಕೊಂಡೋಗ್ತಿದ್ದೆ
ನಿಮ್ಮ ಸಂಬ್ರಮದಲ್ಲಿ ನನ ನೋವ ಮರಿತಿದ್ದೆ.
ಪರೀಕ್ಷೆನೇ ಇರಲಿ, ಕೆಲಸಾನೇ ಇರಲಿ
ಟೈಮಿಗೆ ಸರ್ಯಾಗಿ, ಆರಾಮಾಗಿ ತಲುಪುಸ್ತಿದ್ದೆ
ಮದುಮಕ್ಳಿಗೆ ಬಸ್ನೊಳಗ ಮಧುಚಂದ್ರ ತೋರಸ್ತಿದ್ದೆ
ಹಿಂಗ ನಿಮ್ಮೆಲ್ಲರೊಳಗೊಂದಾಗಿದ್ದೆ.
ಇಂಥ ನಿಮ್ಮ ಸಂಗಾತಿಯಾಗಿದ್ದ
ನನ್ಮೇಲ್ಯಾಕಿಂಥ ಕೋಪ-ತಾಪ-ಆಕ್ರೋಶ?
ಏನ ಗಲಾಟೆಯಾಗ್ಲಿ ಯಾರ್ದೋ ತಪ್ಪಿರಲಿ
ಅದಕ್ಯಾರೋ ಕಾರಣವಾಗಿರ್ಲಿ ಸ್ಟ್ರೈಕ್ ಆತಂದ್ರ
ನನ್ಗ ಕಲ್ಲೊಡಿತೀರಿ, ಬೆಂಕಿ ಹಚ್ತೀರಿ, ಮೈ ಚರ್ಮ ಸುಲಿತೀರಿ…
ಇದ್ರಿಂದ ನಿಮ್ಗ ತೊಂದ್ರಿ, ಖರ್ಚು ಹೆಚ್ಚಾಗಿ ಪ್ರಯಾಣ ಕಷ್ಟಾಗ್ತದ.
ನಾ ನಿಮಗೇನ್ ಮಾಡಿದ್ದೆ? ಏನ್ ಕೇಡ ಬಯಸಿದ್ದೆ?
ನನ್ನೊಡಲಳಲು, ತಲ್ಲಣ, ಸಂಕಟ ಯಾರಿಗೇಳ್ಲಿ?
ನಾ ನಿಮಗ ಕೇಳದಿಷ್ಟ-
ನಿಮ್ಮೆಲ್ಲರಿಗೂ ಸಂಗಾತಿಯಾದ ನನ್ಗ
ನೀವೇಕೆ ಕಾಡುವಿರಿ ನಂಗ
ಕಲ್ಲೇಕೆ ಎಸೆವಿರಿ ಹಿಂಗ
ಬೆಂಕ್ಯಾಕ ಹಚ್ಚುವಿರಿ ಹಂಗ.
ನನ್ಮ್ಯಾಲೆ ಒಂದಿಡಿ ಪ್ರೀತಿ
ಬೊಗಸೆ ಮಮತೆ ತೋರ್ಸಿ.





0 Comments