ಜೀವನ್ ಪ್ರಕಾಶನ ಹಮ್ಮಿಕೊಂಡಿದ್ದ ದಸರಾ ಕಾವ್ಯ ಸ್ಪರ್ಧೆಯೆಲ್ಲಿ
ಮೊದಲ ಬಹುಮಾನ ಪಡೆದ ಕವಿತೆ
ಗುಲ್ಬರ್ಗಾ ಸೊಸೈಟಿ
0
ಕು.ಸ.ಮಧುಸೂಧನ್ ನಾಯರ್, ರಂಗೇನಹಳ್ಳಿ
ಭುಗಿಲೆದ್ದ ಹಿಂಸೆಯ ನಡುವೆ ಯಾರೊ ಹಚ್ಚಿದ ಬೆಂಕಿ
ನೋಡನೋಡುತ್ತಲೇ ಇಡೀ ಕಟ್ಟಡವ ವ್ಯಾಪಿಸಿ
ಆರಿಸಲು ಅಸಲಿಗೆ ಅಲ್ಯಾರೂ
ಮನುಷ್ಯರೆ ಇರಲಿಲ್ಲ
ಇದ್ದ ಅಷ್ಟೂ ಮುಖವಾಡಗಳ ಕೈಯ್ಯಲ್ಲು
ಸೀಮೆ ಎಣ್ಣೆ ದೊಂದಿಗಳು
ಭೇದದ ಮಾತೆಲ್ಲಿಯದು ಬೆಂಕಿಗೆ
ಸುಡಲು ಶುರು ಮಾಡಿದ ಮೇಲೆ?
ಆಗ ಹುಟ್ಟಿದ ಹಸುಗೂಸಿನ ಜೊತೆಗೆ
ಹಲ್ಲಗಳುದುರಿದ ಹಣ್ಣುಹಣ್ಣು ಮುದುಕರೂ ಭಸ್ಮವಾದರು
ಶಾಸ್ತ್ರೋಕ್ತ ಚಿತೆಯ ಹಂಗಿರದೆ.
ಅವತ್ತೊಂದು ದಿನ ಮಾತ್ರ ಆ ಕಾಲೋನಿಯಲ್ಲಿ
ಇರುಳು ಹಗಲಿನಂತೆ ಹೊತ್ತಿ ಉರಿಯಿತು
ಮಾರನೇ ದಿನ ಸತ್ತ ಅಷ್ಟೂ ಜನರ ಹೆಸರುಗಳಲ್ಲಿ
ಸಾಮೂಹಿಕ ಶ್ರದ್ದಾಂಜಲಿ ಅರ್ಪಿಸಲಾಯಿತು
ಹಾಗೆ ಸಲ್ಲಿಸಿದವರಲ್ಲಿ
ರಾತ್ರಿಯ ಮುಖವಾಡದವರೂ ಇದ್ದರು
ಎಂಬುದನ್ನು ಮರೆಯಲಾಗದು!
ಈಗಲ್ಲಿ ಅಲ್ಲಿಯ ಶಾಲೆಗಳಲ್ಲಿ
ಹೊಸ ಪಾಠ ಹೇಳಿಕೊಡಲಾಗುತ್ತದೆ:
ಬೆಂಕಿಯಿಂದ ರೊಟ್ಟಿಯನ್ನು ಮಾತ್ರವಲ್ಲ
ಮನುಷ್ಯರನ್ನೂ ಸುಡಬಹುದು!





ನಿರಂತರವಾದ ದುರಂತ