ಮಲ್ಲಿಕಾರ್ಜುನ ಹೊಸಪಾಳ್ಯ
ಇಂದು ಬುದ್ಧ ಪೂರ್ಣಿಮೆ. ಈ ನೆಪದಲ್ಲಿ ಕಾಲಾನಮಕ್ ಎಂಬ ದೇಸಿ ಭತ್ತದ ತಳಿ ನೆನಪಾಯಿತು. ಬುದ್ಧನಿಗೂ ಈ ದೇಸಿ ಭತ್ತಕ್ಕೂ ಏನು ಸಂಬಂಧ ಅಂದಿರಾ. ಈ ಸುವಾಸನಾಭರಿತ ಕಪ್ಪಕ್ಕಿ ತಳಿ ಬುದ್ಧನ ಕಾಲದಿಂದಲೂ (ಕ್ರಿ.ಪೂ 600) ಇದೆ. ಅದೇ ದೊಡ್ಡ ಅಚ್ಚರಿ. ಕಿಸಾ ಗೌತಮಿ ಬುದ್ಧನಿಗೆ ನೀಡಿದ ಪಾಯಸ ಇದೇ ಅಕ್ಕಿಯಿಂದ ತಯಾರಿಸಿದ್ದು ಎನ್ನುತ್ತಾರೆ ಪಶ್ಚಿಮ ಬಂಗಾಳದ ಭತ್ತ ವಿಜ್ನಾನಿ ಡಾ. ಅನುಪಮ್ ಪೌಲ್.
ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಸಾಕಷ್ಟು ಜನಪ್ರಿಯವಾಗಿದೆ ಮತ್ತು ಇದನ್ನು ಉತ್ತರ ಪ್ರದೇಶದ ಪರಿಮಳಭರಿತ ಕಪ್ಪು ಮುತ್ತು ಎಂದೂ ಕರೆಯುತ್ತಾರೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಈ ತಳಿಯನ್ನು ‘ವಿಶ್ವದ ವಿಶೇಷ ಅಕ್ಕಿಗಳಲ್ಲಿ ಒಂದು ಎಂದು ಗುರುತಿಸಿದೆ.
ನೇಪಾಳ ಗಡಿಯಲ್ಲಿರುವ ಅಲಿಗರ್ವಾ (ಸಿದ್ಧಾರ್ಥನಗರ ಜಿಲ್ಲೆ, ಉತ್ತರ ಪ್ರದೇಶ) ಪ್ರದೇಶದಲ್ಲಿ ಉತ್ಖನನ ಮಾಡುವಾಗ ಅಲ್ಲಿನ ಅಡುಗೆ ಕೋಣೆಯೊಂದರಲ್ಲಿ ಈ ಭತ್ತದ ಕಾಳು ಪತ್ತೆಯಾಗಿವೆ. ಅಲಿಗರ್ವಾ ಪ್ರದೇಶವೇ ನಿಜವಾದ ಕಪಿಲ ವಸ್ತು ಎನ್ನಲಾಗುತ್ತದೆ.
ಬಾಸುಮತಿಗಿಂತಲೂ ಸುವಾಸನೆಯುಳ್ಳ ಈ ತಳಿಯ ಅಕ್ಕಿ ಅಮೆಜಾನ್ ಹಾಗೂ ಇನ್ನಿತರೆ ಆನ್ ಲೈನ್ ಮಾರಾಟ ತಾಣಗಳಲ್ಲಿ 300 ರೂ. ಕಿಲೋ ಮಾರಾಟವಾಗುತ್ತಿದೆ. ಕೆಲವರಂತೂ ಬುದ್ಧ ರೈಸ್ ಅಂತಲೇ ಬ್ರ್ಯಾಂಡ್ ಮಾಡಿದ್ದಾರೆ.
ವಿಶೇಷ ಮಾಹಿತಿ. ಹಂಚಿಕೊಂಡದ್ದಕ್ಕೆ ಧನ್ಯವಾದಗಳು
ಧನ್ಯವಾದಗಳು, ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ