ಪುರುಷೋತ್ತಮ ಬಿಳಿಮಲೆ
ಕಾರಣವೇ ಇಲ್ಲದೆ ನಮ್ಮನ್ನೆಲ್ಲ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಹಿರಿಯ ವಿದ್ವಾಂಸ ಪ್ರೊ. ಎಚ್ ಜೆ ಲಕ್ಕಪ್ಪ ಗೌಡರು ಇನ್ನಿಲ್ಲ (ಮೇ ೮, ೧೯೩೯- ಜುಲಾಯಿ ೨೬, ೨೦೨೧). ಅವರಿಗೆ, ಜಾನಪದ, ಶಿಕ್ಷಣ, ಸಾಹಿತ್ಯ, ಅನುವಾದ, ಸಂಘಟನೆ, ಮೊದಲಾದ ಹಲವು ಕ್ಷೇತ್ರಗಳಲ್ಲಿ ಹಿಡಿತವಿತ್ತು.
ಶಿವಮೊಗ್ಗದ ಬಿ.ಆರ್. ಪ್ರಾಜೆಕ್ಟ್ನ ಸ್ನಾತಕೋತ್ತರ ಕೇಂದ್ರದಲ್ಲಿ (ಕನ್ನಡ ಭಾರತಿ) ಅವರು ಇನ್ನೊಬ್ಬ ಹಿರಿಯ ವಿದ್ವಾಂಸರಾದ ಪ್ರೊ.ಎಚ್. ತಿಪ್ಪೆರುದ್ರಸ್ವಾಮಿಯವರೊಡನೆ ಸೇರಿಕೊಂಡು ನಡೆಸಿದ ಕನ್ನಡ ಚಟುವಟಿಕೆಗಳು ಬಹಳ ಉಪಯುಕ್ತವಾಗಿದ್ದುವು. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ನೂರಾರು ಜನಪದ ಕಲಾವಿದರನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಅವರದು.
೧೯೯೫ರಲ್ಲಿ ಅವರು ಕರ್ನಾಟಕದ ಜಾನಪದ ಮತ್ತು ಯಕ್ಷಗಾನ ಆಕಾಡಮಿ’ಯ ಅಧ್ಯಕ್ಷರಾಗಿದ್ದಾಗ ಅವರೊಡನೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಮುಂದೆ ೧೯೯ರಲ್ಲಿ ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ರಾಗಿಯೂ ಕೆಲಸ ಮಾಡಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅವರು ನೇಮಕಗೊಂಡಾಗ ನಾನು ಕರ್ನಾಟಕ ಬಿಟ್ಟಿದ್ದೆ.
ವಸಂತಗೀತ, ಊರ ಮುಂದಿನ ಬಾವಿ, ಪದ್ದು-ಹದ್ದು, ಅಕ್ಷತೆ, ಕಿರುಗೆಜ್ಜೆ, ಸೂಜಿಸಂಪಿಗೆ ಮತ್ತು ವಚನ, ಹೊನ್ನಾರು ಮತ್ತು ಹುಲಿಯ ಹೆಜ್ಜೆ, ಸಿದ್ಧರಾಮ, ತಮಸ್ಸಿನಿಂದ ಜ್ಯೋತಿಗೆ, ಕಾಯಕ ಯೋಗಿ, ದಲಿತ ಸೂರ್ಯ, ಸಮತೆಯ ಶಿಲ್ಪಿ, ವಿಶ್ವಕವಿ ಕುವೆಂಪು, ಡಾಅಂಬೇಡ್ಕರ್, ಅಂತರಂಗ, ಸಂಗಮ, ಗೋಪುರದ ದೀಪಗಳು, ಅಂತರಾಳ, ಬಾಳದೇಗುಲದ ನೋಟಗಳು, ವಿಲೋಕನ, ಸಾಹಿತ್ಯ: ಬಹುಮುಖಿ ಚಿಂತನೆ, ಪುಸ್ತಕ ರೇಖೆಗಳು, ಕನಕ ಮುಖಗಳು, ಜಾನಪದ ಕಥಾವಳಿ, ಒಗಟುಗಳು, ಮಲೆನಾಡು ಜಾನಪದ, ವಿಶಿಷ್ಟ ಜಾನಪದ, ಡೊಳುಮೇಳ, ಮಲ್ಲಿಗೆ ಮೊಗ್ಗು ಸುರಿದಾವೆ, ಹೊಂಬಾಳೆ, ಇಲಿಯಡ್, ಒಡಿಸ್ಸಿ, ಕಾಯಕವೇ ಕೈಲಾಸ, ದೀನಬಂಧು, ಭೋಗ-ಯೋಗ, ಕಾಮನಬಿಲ್ಲು ನಾಗಸಂಪಿಗೆ, ಕುರುಬರು ಮತ್ತು ಉಣ್ಣೆ ನೇಕಾರರು, ಕನಕಕಿರಣ, ಜನಪ್ರಿಯ ಕನಕ ಸಂಪುಟ, ಸಹ್ಯಾದ್ರಿ ಸಿರಿ, ಮೊದಲಾದ ೭೦ ಕ್ಕೂ ಹೆಚ್ಚು ಕೃತಿಗಳನ್ನು ಅವರು ಬರೆದಿದ್ದಾರೆ.
ಜೀಶಂಪ ಮತ್ತು ಲಕ್ಕಪ್ಪ ಗೌಡರೆಂದರೆ ನನಗೆ ತುಂಬಾ ಇಷ್ಟ. ಈಗ ಅವರಿಬ್ಬರೂ ಇಲ್ಲ, ಅಷ್ಟರ ಮಟ್ಟಿಗೆ ನಾನು ಬಡವಾದೆ. ಅವರಿಗೆ ನಮನಗಳು.
0 ಪ್ರತಿಕ್ರಿಯೆಗಳು