ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿರಿದೆದೆಯ ಮಧ್ಯದಲ್ಲೂ ಕವಿತೆಗಳುಮೂಡಬಹುದು!

ನರೇಂದ್ರ ಶಿವನಗೆರೆ

ಒದ್ದೆ ಮಳೆಗಾಲದ

ಮೆತ್ತನೆಯ ಸಂಜೆಯಲ್ಲಿ!

ಕೌಲಂಲುಂಪುರದ

ಪುದುರಾಯ ಬೀದಿಗಳಲ್ಲಿ

ಬಾಂಗ್ಲಾದೇಶದ ವಲಸೆಕಾರ್ಮಿಕರು

ತಮ್ಮೂರಿನ, ತಮ್ಮವರಿಗಾಗಿ

ಚಳಿಗಾಲಕ್ಕೆ,

ಬೆಚ್ಚಗಿನ ರಗ್ಗು ಕೊಳ್ಳುತ್ತ

ಹಿಗ್ಗುವ ಕಣ್ಣಲ್ಲಿ!

ಕವಿತೆಗಳು

ಮೂಡಬಹುದು!

 

ಹದಿನೆಂಟರ ಹರೆಯಕ್ಕೆ

ಊರ ಬಿಟ್ಟು

ಈ ದುಡಿವ ದೇಶ ಸೇರಿ!

ಭಾನುವಾರದ ರಜೆಯ ಸಂಜೆಗೆ

ಈ ಮೂಲೆಯ, ಮಲೆಯಾಳಿ ಮಮಾಕ್ ಅಂಗಡಿಯಲ್ಲಿ

ಬಿಸಿ ಬಿಸಿ ತೇತಾರೆ ಹಿಡಿದು

ಊರಿನ, ಈ ವರ್ಷದ ಚಳಿಗಾಲದ ಹಿಮವ

ನೆನೆಯುತ್ತಾ ಕೂತ ನೇಪಾಳಿಯ

ಧ್ಯಾನದ ಮನಸಲ್ಲಿ

ಕವಿತೆಗಳು

ಮೂಡಬಹುದು!

ಮೂರೇ ಮೂರು ತಾಸಿನ

ವಿಮಾನ ಪ್ರಯಾಣದಲ್ಲಿ

ಮೂವತ್ತು ಬಾರಿ

ಇಣುಕಿ!

ಚಳಿಗೆ

ಶಾಲು ಹೊದಿಸಿ, ಮೆಲ್ಲಗೆ ಎದೆ ತಟ್ಟಿದ್ದ

ಸರವಾಕಿನ ಸುಂದರಿ

ಗಗನಸಖಿಯ

ಬಟ್ಟಲುಗಣ್ಣುಗಳಲ್ಲಿ

ಕವಿತೆಗಳು

ಮೂಡಬಹುದು!

 

ಎಂದೋ

ಒಂದು

ಮಳೆಗಾಲದ ಮಟಮಟ ಮಧ್ಯಾಹ್ನ

ಬಸ್ ಸ್ಟಾಂಡಿನಲ್ಲಿ  ಪರಿಚಯವಾಗಿ!

ಭಾನುವಾರ

ಜೊತೆಗೆ ಬಾ ಎಂದು ಕರೆದು

ಚೊವ್ ಕಿಟ್ ನ ಆಟಿಕೆ ಅಂಗಡಿಯಲ್ಲಿ

ಆಟದ ಕಾರು ಕೊಂಡು

ಫಿಲಿಫೀನ್ಸಿನಲ್ಲಿ ಇರುವ

ಮಗನಿಗೆ ಕಳಿಸಿದ

ಒಂಟಿತಾಯಿಯ!

ಮ್ರುದು ಕೆನ್ನೆಗುಳಿಯಲ್ಲಿ

ಕವಿತೆಗಳು

ಮೂಡಬಹುದು!

 

ಚೊವ್ ಕಿಟ್ ನ

ಶನಿವಾರದ, ಒದ್ದೆಸಂತೆಯ

ಮೂಲೆಯಂಗಡಿಯಲ್ಲಿ

ಜೀರಿಗೆ ಮಾವಿನಕಾಯಿ

ಕೊಳ್ಳುವಾಗ

ಎದುರು ಸಾಲಲ್ಲಿ ನಿಂತು

ಬಿಡದೇ ನೋಡಿದ್ದ

ಇಂಡೋನೇಶಿಯಾದ

ಶನಿವಾರ ಸುಂದರಿಯ

ಬಿರಿದೆದೆಯ ಮಧ್ಯದಲ್ಲೂ

ಕವಿತೆಗಳು

ಮೂಡಬಹುದು!

‍ಲೇಖಕರು Avadhi Admin

15 May, 2019

4 Comments

  1. ವಾಸುದೇವ ಎನ್ ನಾದೂರು

    ಕವಿತೆ ಮೂಡುವ ಹಾದಿ
    ಹೀಗೂ ಪಸರಿಸಿ
    ಎಲ್ಲಿಂದೆಲ್ಲಿಗೋ ದಾಟಿ
    ವಿಶ್ವ ಸಂಚಾರಿಯಾದ ನಿಮ್ಮಯ ಲಹರಿಯ ಕಂಡು
    ಸಂಮೋಹನ ಮೇಳೈಸಿತು….

  2. Narendra

    Dhanyavaadagalu nimma preethiya laharige!

  3. Lalitha Siddabasavaiah

    ಒಳ್ಳೆಯ ಕವಿತೆ. ಬಹುಕಾಲ ಮನದಲುಳಿಯುವ‌ ಕವಿತೆ

  4. ಬಿದಲೋಟಿ ರಂಗನಾಥ್

    Channgaide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading