
ಎಂ ಎಸ್ ಮೂರ್ತಿ
ಯಾವುದೋ ಒಂದರಿಂದ
ಬಿಡಿಸಿ
ಸರಳ ರೇಖೆ
ಬಿಡಿ, ಬಿಡಿಯಾಗಿ
ನವಿರು ಸುರುಳಿಯಾಗಿ
ಬಂಧ ಮುಕ್ತ
ಮೊನಚುರೇಖೆ
ತಾನೊಂದರದರೊಳಗೆ
ಜೀವ
ದ್ರವ ತಣ್ಣಗೆ
ಹರಿದ ಕಾಲುವೆ
ನೀರರೇಖೆಯೊಳೊಳಗೆ
ತಾನಂಟಿಕೊಂಡ ಕರ್ಮ
ಹಿಂಗಲಾರದು ತೃಷೆ
ಬಿಡಿಸಿಕೊಂಡ ಗೆರೆಗಳ ನಶೆ
ಚಿತ್ತ ಚಿತ್ರ
ಬಿಡಿಸಿ ಗೆರೆಗಳು
ಚಿತ್ತದಾಚಿತ್ರ
ಬಿಂಬ ಬಿಡಿಸಿ
ಲೋಕವನಂಟಿಸಿ,
ಟಿಸಿಲೊಡೆದು ಚಿಗುರಿ
ಗೆರೆ, ಗೆರೆ ಬಿಡಿಸಿ
ಬಿಂದು, ಹಿಡಿದು
ಚಕ್ರ , ತಿರು ತಿರುಗಿದರೂ
ಗೆರೆಗೆ ದಣಿವಿಲ್ಲ
ಜೊತೆಗೆ ಕೈ
ದಣಿದರೂ ಕೊನೆ
ಮೊದಲಾಗಿ ಬಂದು
ಬಯಲಿಗೆ
ದರ್ಶನ

ವಿರಮಿಸಿಲ್ಲ ಗೆರೆ-
ಚಿತ್ತ ಬಿಡಿಸಿದೆ ಚಿತ್ರ
ಹಕ್ಕಿ ಬಳುಕು, ದುಂಬಿ
ಮೊರೆ, ನೇಗಿಲ ಗೆರೆ,
ಬಡವನೆಗಲ ಹೊರೆ
ಬದುಕಿನಂಚಿನ ಕಣ್ಣು
ನೀರಗೆರೆ ಒಂದೊಂದೇ
ಬಿಂದುಗಳು ಸೇರಿ
ಸಿಂಧು ಗೆರೆ
ಅಕ್ಷೋಹಿಣಿ ಕಣ್ಣಬಿಂಬದಲಿ
ಬೋರ್ಗರೆಯುತ್ತಿದೆ ಜಲಪಾತ
ತೆಳು ರೇಖೆ ಮಾಯ
ಮಳೆ ನಿಂತ ಮೇಲೆ
ತೇವ ನೆಲ
ಸಂಪನ್ನ

ಖಾಲಿ ನಿಶ್ಯಬ್ದ
ಗೆರೆ ಶಬ್ದ
ನೋಟದ ಸದ್ದಡದಗಿಸುವ ಮೌನ
ಕರಗಿತೆಲ್ಲ ನಿರಾಳ
ತುದಿ, ಮೊದಲಿಲ್ಲ
ಕೊನೆಗೆ
ಪೂರ್ಣಾಪೂರ್ಣಗಳ ಬೆಡಗು
ಸರಿ,ತಪ್ಪುಗಳಲಿಲ್ಲ ಬೆಳಕಿಗೆ
ಮದ್ಯದ ದಾರಿಯ ಸಂಚಲನ
ಪ್ರತಿ ನಡೆ ನಡೆಗೂ
ಅಕಾರಣ, ಸಕಾರಣ, ವ್ಯಾಕರಣ
ಅನುರಣ, ತೃಣ
ಸಮಾನ ಎಲ್ಲ
ಬಂಧನ ಬಿಡಿಸಿ,
ಬಿಡಿಸಿಕೊಂಡ ಗೆರೆಗಳು






0 Comments