ನಾ ಕಾರಂತ ಪೆರಾಜೆ
2017ರಲ್ಲಿ ಬಲಿಪ ನಾರಾಯಣ ಭಾಗವತರಿಗೆ ‘ಪದ್ಯಾಣ ಪ್ರಶಸ್ತಿ’. ಪ್ರಶಸ್ತಿ ಪ್ರದಾನದ ಪೂರ್ವದಿನಗಳಲ್ಲಿ ಅವರೊಂದಿಗೆ ಮಾತುಕತೆ. ಮಾತಿನ ಮಧ್ಯೆ ಹಾದುಹೋಗುತ್ತಿದ್ದ ರಂಗಕಾಳಜಿಗಳು…. ಆಯ್ದ ಕೆಲವು ಇಲ್ಲಿವೆ. ನಿನ್ನೆ ಅಂದರೆ 16-2-2023ರಂದು ಬಲಿಪರು ದೈವಾಧೀನರಾದರು. ಅವರು ಹೇಳುತ್ತಾ ಬಂದಿರುವ ರಂಗ ವಿನ್ಯಾಸಗಳನ್ನು ಮಾನಿಸುವುದು ಮತ್ತು ಅದನ್ನು ಅನುಷ್ಠಾನಿಸುವುದು ಅವರಿಗೆ ನಾವು ನಿಜವಾಗಿ ಸಲ್ಲಿಸುವ ಶ್ರದ್ಧಾಂಜಲಿ ಪಾಲಿಸಬೇಕಾದ ರಂಗ ಬದ್ಧತೆ .
ರಂಗಕ್ಕೆ ಯಾವ ಕ್ರಮದಲ್ಲಿ (ಪ್ರವೇಶ, ತೈತತಕತ..) ವೇಷಗಳು ಪ್ರವೇಶವಾಗುವವೋ ಅದೇ ಕ್ರಮದಲ್ಲಿ – ಕಾಲವನ್ನು ಹೊಂದಿಕೊಂಡು – ನಿರ್ಗಮಿಸಬೇಕು. ಚಿಟ್ಟಿ ಬರೆದ ಬಣ್ಣದ ವೇಷಕ್ಕೆ ಮಾತ್ರ ಅಟ್ಟಹಾಸ, ತೆರೆಪೊರಪ್ಪಾಡ್.. ಕ್ರಮಗಳು, ಕೃತಕ ಚಿಟ್ಟಿಯಿಟ್ಟ ವೇಷಕ್ಕೆ ತೆರೆಪೊರಪ್ಪಾಡ್ ಇಲ್ಲ. ಅಟ್ಟಹಾಸ ಬೇರೆ, ಆರ್ಭಟ ಬೇರೆ, ಬಣ್ಣದ ವೇಷಗಳಿಗೆ ಅಟ್ಟಹಾಸ, ಇಂದ್ರಜಿತು, ಹಿರಣ್ಯಾಕ್ಷ, ರಕ್ತಬೀಜ.. ಆರ್ಭಟವು ಅಟ್ಟಹಾಸಕ್ಕೆ ವೇಷದಿಂದ ವೇಷಕ್ಕೆ ವೇಗದಲ್ಲಿ ತುಸು ವ್ಯತ್ಯಾಸಗಳಿವೆ. ಬಣ್ಣದ ವೇಷಕ್ಕೆ ಮೂರು ಅಟ್ಟಹಾಸ, ಚೌಕಿಯಿಂದ ರಂಗಸ್ಥಳಕ್ಕೆ ಮುಖ ಮಾಡಿ ನಿಂತು ಒಂದನೇ ಅಟ್ಟಹಾಸ, ಚೌಕಿ ಮತ್ತು ರಂಗಸ್ಥಳದ ಮಧ್ಯೆ ಚೌಕಿಗೆ ಮುಖ ಮಾಡಿ ಎರಡನೇ ಅಟ್ಟಹಾಸ, ಕೊನೆಯದು ರಂಗಸ್ಥಳದ ಹತ್ತಿರ, ಬೇಕಾಬಿಟ್ಟಿ ಎಲ್ಲೆಲ್ಲೋ ಅಟ್ಟಹಾಸ ಮಾಡುವಂತಿಲ್ಲ. ಮಾಡಿದರೆ ಅದು ಯಕ್ಷಗಾನದ ಅಟ್ಟಹಾಸವಾಗುವುದಿಲ್ಲ.
ಒಡ್ಡೋಲಗದ ವೇಷವು ರಾಜವೇಷ (ಕೋಲು, ಕಿರೀಟ) ಆಗಿರಲೇಬೇಕು. ಬಣ್ಣ, ಸ್ತ್ರೀವೇಷ, ಪುಂಡುವೇಷಗಳು ಪೀಠಿಕೆಗೆ ಪ್ರವೇಶಿಸಬಾರದು. ಯಕ್ಷಗಾನದ ಪದ್ಯಗಳಿಗೆ ಅದರದ್ದೇ ಆದ ಮಟ್ಟು ಇದೆ. ಖಚಿತ ದಾರಿಯಿದೆ. ಸಂಗೀತದ ರಾಗಗಳು ಯಕ್ಷಗಾನಕ್ಕೆ ಆದೀತು. ಆದರೆ ಅದು ಯಕ್ಷಗಾನವಾಗಿಯೇ ಕೇಳಬೇಕು. ಇಡೀ ರಾತ್ರಿಯ ಪ್ರದರ್ಶನಕ್ಕೆ ಧ್ವನಿವರ್ಧಕ ಇಲ್ಲದ ಸಮಯದಲ್ಲಿ ಸುಮಾರು ಇಪ್ಪತ್ತು ರಾಗಗಳು ಬಳಕೆಯಾಗುತ್ತಿದ್ದುವು. ಮೈಕ್ ಬಂದ ಮೇಲೆ ರಾಗಗಳ ಸಂಖ್ಯೆ ಹೆಚ್ಚಾದುವು. ಹಿಂದೆಲ್ಲಾ ರಾತ್ರಿಯಿಡೀ ಪ್ರದರ್ಶನಕ್ಕೆ ಒಬ್ಬನೇ ಭಾಗವತ. ಒಬ್ಬ ಸಂಗೀತಗಾರ. ಇವರಿಗೆ ಬಿಳಿ ಮೂರರ ಶ್ರುತಿ. ಮುಖ್ಯ ಭಾಗವತನಿಗೆ ಬಿಳಿ ನಾಲ್ಕರ ಶ್ರುತಿ. ಭಾಗವತಿಕೆಗೆ ಸ್ವಲ್ಪಮಟ್ಟಿನ ಸಂಗೀತ ಜ್ಞಾನವಿದ್ದರೆ ಆರೋಹಣ, ಅವರೋಹಣಗಳ ಗಟ್ಟಿತನಕ್ಕೆ ಸಹಕಾರಿ.
0 ಪ್ರತಿಕ್ರಿಯೆಗಳು