ಪಿ ಪಿ ಉಪಾಧ್ಯ
ಹುಟ್ಟು ಸಾವಿನ ನಡುವೆ ಬಹಳಷ್ಟು ಕಷ್ಟಗಳು
ಸುಖವು ಇರಬಹುದೇನೋ ಎಲ್ಲೋ ಮೂಲೆಯಲ್ಲಿ
ಕಷ್ಟಗಳ ಹೆದರಿಕೆಯೇ ಹೂತಿರುವ ಬದುಕಲ್ಲಿ
ಎಲ್ಲಿದೆ ವ್ಯವಧಾನ… ಎಲ್ಲಿದೆ ಸಮಯ
ಸುಖದತ್ತ ಚಿಂತಿಸಲು… ಆ ಬಗ್ಗೆ ಯೋಚಿಸಲು
ಕಣ್ಮುಚ್ಚಿ ತೆರೆವಲ್ಲಿ ಇಲ್ಲವಾಗುವ ಸುಖವು
ನೆನಪಿನಿಂದಲೂ ಕೂಡ ಮಾಯವಾಗುವುದು
ಕಷ್ಟವೆಂದರೆ ಅದಕೆ ಅಷ್ಟೊಂದು ಹೆದರಿಕೆಯೇ.. ಅಲ್ಲ ಕೀಳರಿಮೆಯೇ
ಕಷ್ಟ ಸುಖವನು ತಾನೇ ಓಡಿಸುವ ಹಾಗೆ
ಸುಖವೆಂದೂ ಕಷ್ಟವನು ಓಡಿಸುವುದಿಲ್ಲ ಯಾಕೆ?
ನಿತ್ಯ ಬದುಕಿನ ತುಂಬ ಕಷ್ಟಗಳದ್ದೇ ಪೈಪೋಟಿ
ಸುಖವೆಂಬ ಮರೀಚಿಕೆಯ ಮಾಯದಾಟ.
ತಾಯಿ ತಂದೆಯರ ಹತೋಟಿಯದು ಸುರುವಷ್ಟೆ.
ಅಕ್ಕ ಅಣ್ಣಂದಿರ ದಬ್ಬಾಳಿಕೆಯ ಜೊತೆಗೆ
ತಮ್ಮ ತಂಗಿಯಂದಿರ ಗೋಳಾಟ.. ಮೇಲಾಟ!
ಸ್ನೇಹಿತರದಂತೂ ಕೇಳಲೇಬೇಡಿ.. ಬರೀ ಸ್ವಾರ್ಥದಾಟ.
ಸಹಿಸಲಾಗದ ಕಷ್ಟಗಳಲ್ಲ ಅವು ಆದರೂ ಕಿರಿಕಿರಿ
ಮುಂದೆ ಮದುವೆಯ ಸೊಗಸು ತುಸುಕಾಲ ಮಾತ್ರವೇ
ಅತ್ತೆಯ ಆ ಪಿರಿ ಪಿರಿ ಮಾವನಾ ಕಿರಿ ಕಿರಿ
ಅವುಗಳ ನಡುವೆಯೂ ಬದುಕ ಬದುಕುವ ಆಸೆ
ಮುಂದೆ…
ಮಕ್ಕಳೆಂದಾದಾಗ ಆ ಕಿರಿಕಿರಿಯದೇ ಬದುಕು.
ಮುಪ್ಪಡರಿತೇ ಮುಗಿಯಿತು..
ಆ ಮಕ್ಕಳದೇ ದರ್ಬಾರು!
ನಮ್ಮದೆಂಬ ದಿನಗಳೇ ಇಲವೇ ಬದುಕಿನಲಿ.
ಇಂದು ಯಾರದೋ… ಮತ್ತೆ ನಾಳೆ ಇನ್ಯಾರದೋ…
ಇದುವೆ ಜೀವನದಾಟ ಅದುವೆ ಬದುಕಿನ ಮಾಟ
ಬಯಸಿ ಬದುಕುತ್ತೇವೆ ಬಯಸದೇ ನರಳುತ್ತೇವೆ
ಹಾಗಾದರೆ….
ಬದುಕಿನಲಿ ಬೇಕೆ ಸುಖ? ಬಯಸದಿರುವುದೆ ಲೇಸು
ಬಯಕೆಯಿಲ್ಲದ ಬದುಕು ನೀಡುವುದು ಸುಖ ನಮಗೆ
ಸಿಕ್ಕಿದ್ದು ಸಾಕೆನ್ನಿ… ಇದ್ದದ್ದೇ ಇಷ್ಟವೆನ್ನಿ
ಇಲ್ಲದ್ದರಾಸೆಯಲಿ ಇದ್ದದ್ದ ಬಿಡಬೇಡಿ
ಇರುವ ಬದುಕನೆ ಸುಖಿಸಿ ಬದುಕಲು ಕಲಿಯೋಣ
ಇನ್ನೊಂದು ಮುಖವಿದೆಯೇ ಈ ಬದುಕಿನಾಲಯಕೆ
ನಾವೆಲ್ಲ ಗಮನಿಸದ, ನಮ್ಮ ಗಣನೆಗೆ ಬರದ
ಅಂದ ಚಂದ ಇದೆಯೇನು ಆ ಬದುಕಿನಂತರಂಗದಲ್ಲಿ
ಕಷ್ಟವೇ ಇಲ್ಲದಿಹ ಬದುಕೊಂದು ಇರಬಹುದೇ ಜಗದಲ್ಲಿ
ಇದೆ ಸೊಗದ ಬದುಕು ಇದೆ ನಿಜದ ಬಾಳು
ನಾವಿನ್ನೂ ನೋಡದಿಹ ಅದೇ ಸುಖದ ಸೊಬಗು
ಬಯಕೆಯಿಲ್ಲದ ಬದುಕ ಬದುಕನ್ನು ಸಾಗಿಸುತ
ಸಾವಧಾನದಿ ಹೆಜ್ಜೆಯಿಕ್ಕುತ್ತ ನಡೆಯುತ್ತ
ನಿರ್ಲಿಪ್ತ ಜೀವನವ ನಡೆಸುವುದೇ ನಿತ್ಯದಾನಂದ.
0 ಪ್ರತಿಕ್ರಿಯೆಗಳು