ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕಲು ಅವಳಬಳಿ ಆಕಾಂಕ್ಷೆ ಇದೆ.. ಭರವಸೆಗಳಿಲ್ಲ..

ಸುರೇಶ ಎಲ್‌ ರಾಜಮಾನೆ

ನಡುಹಗಲಲ್ಲಿಯೂ ನಡುರಾತ್ರಿಯಲ್ಲಿಯೂ ನರಳುವ ಅವಳು
ಸಾವಿನೊಂದಿಗೆ ಮಾತಿಗಿಳಿದಿದ್ದಳು
ನೋವು ಅವಳನ್ನು ಮಾತನಾಡಲು
ಎಳೆದೆಳೆದು ತರುತ್ತಿತ್ತು
ಯುದ್ಧ ದೂರ ಉಳಿತು ತನ್ನಷ್ಟಕ್ಕೆ ತಾ
ಶುದ್ಧ ಆಗಲೂ ಕೂಡಾ ಆಗದಷ್ಟು
ಅಂಗಾಂಗಗಳು ಪ್ರತಿಕ್ರಿಯಿಸುತ್ತಿಲ್ಲ..
ಅವಳು ಜೀವನಾನುಭವದ
ಮಹಾಕಾವ್ಯದಂತೆ
ಮತ್ತೆ ಮತ್ತೆ ಮೌನದಲ್ಲಿಯೇ
ಭಾವಗಳ ಹರಿಸಿ ಮೌನದಲ್ಲೆ
ಮಾತಾಗುತ್ತಿದ್ದಳು..

ಹುಲುಸಾಗಿ ಬೆಳೆದು ಹಣ್ಣು ಕೊಟ್ಟ
ನಿಸ್ವಾರ್ಥದ ಮರಕ್ಕೆ ಸಿಡಿಲುತಾಕಿದೆ
ಪ್ರಕೃತಿಯು ಹಾಗೆ ಅಲ್ಲವೆ ಒಳ್ಳೆಯತನಕ್ಕೆ
ಉಳಿಪೆಟ್ಟು ಕೊಡುವಲ್ಲಿ
ಜಾನತನವನ್ನು ಮೆರೆಯುತ್ತದೆ
ಹೃದಯವಿಲ್ಲದ ಹಗಲು ರಾತ್ರಿಗಳು
ಅವಳ ಮನಸ್ಸನ್ನು ಹಿಂಡಿ ಹಾಕುತ್ತಿವೆ
ನೋಡಿಕೊಂಡು ಕೈಕಟ್ಟಿಕೊಂಡು
ಕೂಡುತ್ತಿರುವ ನಾನು ಇದ್ದು ಸತ್ತಂತೆ ಅನಿಸಿ
ಸಾವಿನತ್ತಲೆ ಮುಖಮಾಡಿರುವೆ
ಆಯಸ್ಸನ್ನು ಅವಳಿಗೆ
ನೀಡಿ ಆಯಾಸವನ್ನು ಕಡಿತಗೊಳಿಸೆಂದು
ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತ..

ಕೊನೆಯ ಕ್ಷಣದಲ್ಲಿನ ಅವಳ ಕೊನೆಯಮಾತುಗಳು
“ಏನಾಯ್ತೊ ನನಗೆ..”
“ಏನ್ ಗತಿ ಬಂತೊ ನನಗೆ..”
“ನಾ ಎಷ್ಟ ತ್ರಾಸ್ ಕೊಡ್ತಿದಿನೊ ನಿಮಗೆಲ್ಲ…”
“ನಾ ಸಾಯ್ತಿನ್ರೊ ಇನ್ನ ..”
ಏನ್ಮಾಡ್ಲಿ.. ಏನ್ಮಾಡ್ಲಿ..
ಬದುಕಲು ಅವಳ ಬಳಿ ಆಕಾಂಕ್ಷೆ ಇದೆ
ಬದುಕುವ ಭರವಸೆ ಇಲ್ಲ
ಉಳಿಸಿಕೊಳ್ಳಲು ಇರುವ ದಾರಿಗಳೆಲ್ಲ
ಮುಚ್ಚಿಹೋಗಿವೆ ನಾನಿಲ್ಲಿ
ಅಸಹಾಯಕ
ಏನ್ಮಾಡ್ಲಿ …ಏನ್ಮಾಡ್ಲಿ….
ಇದಿಷ್ಟೆ ಸಧ್ಯ ನನ್ನ ಬಾಯಲ್ಲಿಯೂ
ನಡುಕ ಹುಟ್ಟಿಸುತ್ತ ಬರುತ್ತಿರುವ
ಏಕೈಕ ಪದ.

ಹತ್ತಿರದಲ್ಲಿರುವವರು ಬರಿ
ಎತ್ತರದಲ್ಲಿ ಮಾತ್ರ ನಿಂತಿದ್ದಾರೆ
ದೂರ ಇದ್ದವ ನಾನು ಅವಳ ಮನದಲ್ಲಿ ನಿಂತಿರುವೆ
ಇರುವವರ ಮುಂದೆ ಇಲ್ಲದಿರುವ
ನನ್ನನ್ನು ಕೂಗಿ ಕರೆವ ಅವಳು
ನನ್ನ ಇರುವಿಕೆಯ ಸಾಭೀತುಪಡಿಸುತ್ತಿದ್ದಾಳೆ
ನಾನೀಗ ನನ್ನಲ್ಲಿ ನಾನಾಗಿ ಉಳಿಯುತ್ತಿಲ್ಲ..

ಅವಳ ಸಂಕಟಗಳಿಗೆ ಸಾವ ಕೊಡು
ದೇವರೇ..
ಪ್ರಾರ್ಥನೆ ಇದು.
ದೇವರಾದವನು ಮಾಡುವ ಮೊದಲ ಕರ್ತವ್ಯ
ಜಗತ್ತು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವದು
ನನ್ನ ಜಗತ್ತಿಗೆ ಎಷ್ಟೊ ಕಲ್ಲೇಟುಗಳು ಬಿದ್ದಿವೆ
ಈಗ ಮಾತಿನೇಟುಗಳು..
ದೇಹದ ನೋವನ್ನು
ಮನಸಿನ ಸಂಕಟವನ್ನು
ಕನಸಿನ ಪಟವನ್ನು
ನಿಯಂತ್ರಿಸು ಇದರ ಸೂತ್ರದಾರ ನೀನೆ
ನಾನು ಮನುಷ್ಯನಾಗಿಯೇ
ವಿನಂತಿಸಿಕೊಳ್ಳುತ್ತಿರುವೆ.

‍ಲೇಖಕರು Admin

2 February, 2022

1 Comment

  1. ಕೊಟ್ರೇಶ್ ಅರಸೀಕೆರೆ

    ನಮನಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading