ಡಾ ಶಿವಾನಂದ ಕುಬಸದ

ಸುಳ್ಳೆನಿಸುತ್ತಿದೆ ನನಗೆ
ಅಂದು ನೀ ಅರ್ಜುನಗೆ
ಪಾಠ ಮಾಡುತ ಹೇಳಿದ್ದು
ಧರ್ಮ ಗ್ಲಾನಿಯಾದರೆ ಸಂಭವಾಮಿ
ಎಂದವ ಮರೆತುಬಿಟ್ಟಂತೆನಿಸುತ್ತಿದೆ
ಆ ನಿನ್ನ ಮಾತನ್ನು
ಇನ್ನೆಷ್ಟು ಗ್ಲಾನಿಯಾಗಬೇಕು
ಈ ಯುಗದಿ ನೀನವತರಿಸಲು
ಸಾಕೆನಿಸುತಿಲ್ಲವೇ ನಾವು ಧರ್ಮಗೆಟ್ಟಿದ್ದು
ರೆಪ್ಪೆ ಬಡಿವುದರೊಳಗೆ ಅಳಿಸಬಲ್ಲೆವು
ನಾವು ಹದಿನೆಂಟು ಅಕ್ಷೋಹಿಣಿಯ ಹಣೆಬರೆಹವನ್ನು
ಕೋಟಿ ದ್ರೌಪದಿಗಳ ಸೀರೆ
ಹರಿದು ಬೀಳುತಲಿಹವು
ಕಾಣುತಿಲ್ಲವೆ ಕೃಷ್ಣ ನಿನ್ನ ಒಳಗಣ್ಣಿಗೆ
ಕಂಸ ದುಶ್ಯಾಸನರೇನು
ಓಣಿಗೊಬ್ಬರೀಗ ಪೂತನಿಯ
ಬಳಗಕೆ ಉಡಿ ತುಂಬುವರೆಲ್ಲ
ಅದಕೆ,
ಹೊಕ್ಕುಳ ಕಮಲ ಕಿತ್ತಿಟ್ಟು
ಲಕುಮಿಯ ಕೈಗಷ್ಟು ಬಿಡುವು ಕೊಟ್ಟು
ಸುದರ್ಶನದ ಹಲ್ಲುಗಳ ಹದನ
ಮಾಡಿಟ್ಟು ಶಂಖ ಊದುತ ಒಮ್ಮೆ
ಬಂದು ಬಿಡಬಾರದೇ ಕೃಷ್ಣ….!!





nice..vastava..
NICE