ಅಹಲ್ಯಾ ಬಲ್ಲಾಳ್
ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ ಮತ್ತು ಸಾಹಿತಿ ಆದ್ಯ ರಂಗಾಚಾರ್ಯ ಅಥವಾ ಶ್ರೀರಂಗರ ಹೆಸರನ್ನು ಕೇಳಿಯೇ ಇರುತ್ತೀರಿ.
ಅವರ ಮಗಳು ಶ್ರೀಮತಿ ಉಷಾ ದೇಸಾಯಿ ತನ್ನ ತಂದೆಯ ನೆನಪಿಗಾಗಿ ವರ್ಷವರ್ಷವೂ ಮುಂಬಯಿ ಮೈಸೂರು ಅಸೋಸಿಯೇಷನ್ನಿನ ಜೊತೆಗೂಡಿ, ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶ್ರೀರಂಗರ ಗೌರವಾರ್ಥ ನಾಟಕೋತ್ಸವ ನಡೆಸಿಕೊಂಡು ಬಂದಿರುವ ಸಂಗತಿ ಗೊತ್ತೆ?
“ನಮ್ಮ ತಂದೆಯ ಕಾಲವಾಗಿ ಎಷ್ಟೋ ವರ್ಷಗಳಾಗಿತ್ತು. ನಮ್ಮಮ್ಮ ಶಾರದೆ ಹೇಳಿದ ಮಾತಿಗೆ, ತಂದೆಯವರ ಸಲುವಾಗಿ, ಅವರ ಪ್ರೀತಿಯ ಕ್ಷೇತ್ರವಾದ ರಂಗಭೂಮಿಗಾಗಿ ಏನಾದರೂ ಮಾಡಬೇಕು ಎಂದು ನನಗೆ ಅನಿಸಿತು. ಮೈಸೂರು ಅಸೋಸಿಯೇಷನ್ ಬಳಗದವರಲ್ಲಿ ಈ ವಿಚಾರ ಹೇಳಿಕೊಂಡೆ. ಅಲ್ಲಿಂದ ಶುರುವಾಯಿತು ಈ ಬಹುಭಾಷಾ ನಾಟಕೋತ್ಸವ. ಕನ್ನಡ ಮಾತ್ರವಲ್ಲ, ಇತರ ಭಾಷೆಗಳ ನಾಟಕಗಳು, ತರುಣ ನಿರ್ದೇಶಕರ ನಾಟಕಗಳು ಇದರಲ್ಲಿ ಪ್ರದರ್ಶನಗೊಳ್ಳುತ್ತವೆ’ ಎಂದು ಉಷಾ ಅವರು ಹೇಳಿಕೊಳ್ಳುವಾಗ ಕೇಳುಗರ ಮುಖದ ಮೇಲೆ ಮುಗುಳ್ನಗೆ ಬರದಿರಲು ಸಾಧ್ಯವಿಲ್ಲ. ಅಷ್ಟು ಉಮೇದಿ, ಉತ್ಸಾಹ ಅವರಿಗೆ.
ಈ ಸಲ ಜನವರಿ 24, 25 ಮತ್ತು 26ರಂದು ಮುಂಬೈ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯುವ ಶ್ರೀರಂಗ ರಂಗೋತ್ಸವದಲ್ಲಿ ಒಂದು ಮರಾಠಿ ( ಶ್ರೀ ಅಭಿಜಿತ್ ಜುಂಜಾರರಾವ್ ಅವರ ನಿರ್ದೇಶನದ ‘ ಘಟೋತ್ಕಚ’) ಮತ್ತು ಎರಡು ಕನ್ನಡ ನಾಟಕಗಳಿವೆ. 25ರಂದು (ಶನಿವಾರ) ಅಸೋಸಿಯೇಷನ್ನಿನ ಲಲಿತ ಕಲಾ ವಿಭಾಗದವರು ಉಡುಪಿಯ ಗಣೇಶ್ ಮಂದರ್ತಿಯವರ ನಿರ್ದೇಶನದಲ್ಲಿ, ಡಾ. ಮಮತಾ ರಾವ್ ರವರ ‘ಚಂದ್ರನಖಾಯಣ’ವನ್ನು ಆಧರಿಸಿ ಆಡಲಿರುವ ನಾಟಕವಿದೆ. 26 ರಂದು (ಭಾನುವಾರ ) ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ರಂಗ ತಂಡವು ಶ್ರೀ ವಿಕ್ರಂ ಜಿ. ಟಿ. ಮತ್ತು ಶ್ರೀಮತಿ ಚಾಂದನಿ ಪಿ. ಇವರ ನಿರ್ದೇಶನದಲ್ಲಿ ಶ್ರೀಮಟಿ ಉಷಾ ನರಸಿಂಹನ್ ಅವರ ‘ಕಂಚುಗನ್ನಡಿ’ ಯನ್ನು ಅಭಿನಯಿಸಲಿದೆ.
2020ರ ಶ್ರೀರಂಗ ರಂಗೋತ್ಸವಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ.
ಸಹೃದಯರೇ, ಬಂದುಬಿಡಿ !
ಅವಧಿಗೆ ತುಂಬಾ ಥ್ಯಾಂಕ್ಸು!