ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು

ಆಶಾ ರಘು ಅವರು ‘ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು’ ಎಂಬ ಕೃತಿಯನ್ನು ರಚಿಸಿದ್ದಾರೆ. ‘ನವರಸ ಕಲಾಶಾಲೆ’ಯ ಮಕ್ಕಳಿಗಾಗಿ ಹತ್ತು ವರ್ಷಗಳ ಹಿಂದೆ ಆಶಾ ರಘು ಅವರು ರಚಿಸಿದ ನಾಲ್ಕು ನಾಟಕಗಳು ಇದರಲ್ಲಿವೆ. ಈಗಾಗಲೇ ಈ ನಾಟಕಗಳು ಎರಡರಿಂದ ಮೂರು ಪ್ರದರ್ಶನಗಳನ್ನು ಕಂಡಿವೆ.

ಸಾಹಿತ್ಯ ಲೋಕ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ನಾಟಕ ಕೃತಿಗೆ  ಡಾ.ನಾ.ದಾಮೋದರ ಶೆಟ್ಟಿಯವರು ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ-

-ಡಾ.ನಾ.ದಾಮೋದರ ಶೆಟ್ಟಿ (ಮುನ್ನುಡಿಯಿಂದ)

ನಾಟಕ ರಚನಾ ಕ್ಷೇತ್ರದಲ್ಲಿ ಮಹಿಳೆಯರು ಮುಂದಕ್ಕೆ ಬರುವ ಅಗತ್ಯತತೆ ಪ್ರಸ್ತುತ ಸಂದರ್ಭದಲ್ಲಿ ಕಾಣಿಸಿಕೊಂಡದ್ದು ಆಶಾರಘು ಅವರ ನಾಟಕ ಸಂಕಲನ. ಕತೆ, ಕಾದಂಬರಿ, ವಿಮರ್ಶೆಯ ವಲಯಗಳಲ್ಲಿ ಛಾಪು ಮೂಡಿಸಿರುವ ಆಶಾರಘು ಅವರು ನಾಟಕಗಳನ್ನೂ ಬರೆಯಬಲ್ಲರು ಎಂಬುದಕ್ಕೆ ಇಲ್ಲಿ ಒಡಮೂಡಿದ ನಾಲ್ಕು ಮಕ್ಕಳ ನಾಟಕಗಳು ನಿದರ್ಶನ.

ಇಲ್ಲಿನ ನಾಲ್ಕು ನಾಟಕಗಳು ನಾಲ್ಕು ವಿಭಿನ್ನ ಸಂದೇಶಗಳನ್ನು ನೀಡುತ್ತವೆ. ಜಾನಪದ, ಸಾಂಸಾರಿಕ, ಪೌರಾಣಿಕ ವಸ್ತುಗಳನ್ನಾಯ್ದು ಅದಕ್ಕೆ ಮಕ್ಕಳ ಭಾಷೆಯ, ನವುರಾದ ಹಾಸ್ಯದ ಲೇಪನ ಕೊಟ್ಟು ಮಿರುಮಿರುಗುವಂತೆ ಮಾಡುವ ಕೌಶಲ್ಯವನ್ನು ಶ್ರೀಮತಿ ಆಶಾರಘು ಅವರು ಹೊಂದಿದ್ದಾರೆ. ಭಾಷೆಯ ಮೇಲಿನ ಹಿಡಿತ, ರಂಗತಂತ್ರಗಳ ಬಳಕೆ, ಕಾಲ್ಪನಿಕತೆಯನ್ನು ಮಕ್ಕಳ ಮಟ್ಟಕ್ಕೆ ಹೊಂದುವಂತೆ ದುಡಿಸಿಕೊಳ್ಳುವಿಕೆ, ರಂಗಕ್ರಿಯೆಗೆ ಅವಕಾಶ ನಿರ್ಮಿಸುವಿಕೆ ಇತ್ಯಾದಿ ಕಾರಣಗಳಿಂದಾಗಿ ‘ಬಂಗಾರದ ಪಂಜರ ಮತ್ತು ಇತರ ನಾಟಕಗಳು’ ಸಂಕಲನ ಯಶಸ್ಸಿನೆಡೆಗೆ ಸಾಗದಿರುವುದಕ್ಕೆ ಕಾರಣಗಳಿಲ್ಲ ಎಂಬುದು ನನ್ನ ಅಚಲ ನಂಬಿಕೆ.

————-

ರಾಮ-ಸೀತೆಯರ ಪ್ರೇಮಕಥೆಯನ್ನು ಆಧರಿಸಿದ ’ಚೂಡಾಮಣಿ’ ಎಂಬ ಸಂಗೀತ ನಾಟಕವನ್ನೂ ಆಶಾ ರಘುವರು ರಚಿಸಿದ್ದಾರೆ. ಈ ಕೃತಿಯೂ ಸಾಹಿತ್ಯ ಲೋಕ ಪ್ರಕಾಶನದಿಂದ ಪ್ರಕಟಗೊಂಡಿದೆ. ಟಿ.ಎನ್.ವಾಸುದೇವ ಮೂರ್ತಿ ಮುನ್ನುಡಿ ಬರೆದಿದ್ದರೆ, ಬೇಲೂರು ರಘುನಂದನರವರು ಬೆನ್ನುಡಿ ಬರೆದಿದ್ದಾರೆ.

-ಡಾ.ಟಿ.ಎನ್.ವಾಸುದೇವ ಮೂರ್ತಿ

(ಮುನ್ನುಡಿಯಿಂದ)

ಕಾಳಿದಾಸನ ಅಭಿಜ್ಞಾನ ಶಾಕುಂತಲ ನಾಟಕದಲ್ಲಿ ‘ಉಂಗುರ’ ಪ್ರೇಮದ ಸಂಕೇತವಾದಂತೆ, ಒಂದು ನಿರ್ಣಾಯಕ ಉಪಾಧಿಯಂತೆ ಈ ನಾಟಕದಲ್ಲಿ ಚೂಡಾಮಣಿಯೇ ಸೀತಾರಾಮರ ಪ್ರೇಮದ ಸಂಕೇತವಾಗಿದೆ, ನಾಟಕದುದ್ದಕ್ಕೂ ಮತ್ತೆ ಮತ್ತೆ ಪುನರಾವರ್ತನೆಯಾಗುವ ‘ರೆಕರಿಂಗ್ ಮೆಟಫರ್’ ಆಗಿದೆ.

ಇದರ ಹಲವಾರು ದೃಶ್ಯಗಳು ಕಾವ್ಯಾತ್ಮಕ ಗುಣ ಪಡೆದಿರುವುದುಂಟು. ಮೂಲ ಉತ್ತರ ಕಾಂಡದ ಕತೆಗೆ ಹೋಲಿಸಿದರೆ ಇದರಲ್ಲಿ ಹಲವು ಮಾರ್ಪಾಟುಗಳೂ ಉಂಟು. ಉತ್ತರ ಕಾಂಡದಲ್ಲಿ ದುರಂತ ಅಂತ್ಯವಿದೆ. ಆದರೆ ಇಲ್ಲಿ ಸೀತಾರಾಮರು ರಾಜ್ಯವನ್ನು ಮಕ್ಕಳಿಗೊಪ್ಪಿಸಿ ಸ್ವತಂತ್ರರಾಗುತ್ತಾರೆ.

ಎಲ್ಲರಿಂದ ದೂರವಾಗಿ ಉಳಿದ ಆಯುಷ್ಯವನ್ನು ಏಕಾಂತದಲ್ಲಿ ಜೊತೆಯಾಗಿ ಕಳೆಯಲು ನಿರ್ಧರಿಸುತ್ತಾರೆ. ಹೆಂಡತಿಯಾದವಳು ಗಂಡನ ಸಹಚಾರಿಣಿಯೆಂಬುದು ನಮ್ಮ ಸಾಮಾನ್ಯ ನಂಬಿಕೆಯಾಗಿದೆ. ಆದರೆ ‘ಚೂಡಾಮಣಿ’ ನಾಟಕದಲ್ಲಿ ಕೊನೆಗೆ ರಾಮನೇ ಸೀತೆಯನ್ನು ಹಿಂಬಾಲಿಸಲು ಬಯಸುವ ಸನ್ನಿವೇಶ ನಿಜಕ್ಕೂ ಹೃದಯಂಗಮವಾಗಿದೆ. ಶ್ರೀಮತಿ ಆಶಾರಘು ಅವರ ಉತ್ಸಾಹ ಮತ್ತು ಧ್ಯಾನಶೀಲತೆಗಳು ಇಂದಿನ ಯುವಲೇಖಕರಿಗೆ ನಿಜಕ್ಕೂ ಒಂದು ಮೇಲ್ಪಂಕ್ತಿಯಾಗಿದೆ.

ಇದು ಯಾವುದೇ ರಂಗ ನಿರ್ದೇಶಕನಿಗೆ ಸವಾಲೆಸೆವ ನಾಟಕವಲ್ಲ, ಬದಲಾಗಿ ನಿರ್ದೇಶಕನಿಗೆ ಸರ್ವ ಸ್ವಾತಂತ್ರ್ಯ ನೀಡಬಲ್ಲ ನಾಟಕವಾಗಿದೆ.

-ಬೇಲೂರು ರಘುನಂದನ

(ಬೆನ್ನುಡಿಯಿಂದ)

ನೆನಪಿನ ಬುತ್ತಿಯಾಗಿ ದಾಂಪತ್ಯದ ದ್ಯೋತಕವಾಗಿ ಚೂಡಾಮಣಿಯ ನಿರ್ವಚನವಾಗುತ್ತಲೇ ಕುಟೀರ ಮತ್ತು ಅಯೋಧ್ಯೆ ಎಂಬ ಎರಡು ಚಿತ್ರಣಗಳ ಮೂಲಕ ಭಿನ್ನ ಸಾಮಾಜಿಕ ಸಂದರ್ಭಗಳನ್ನು ನಿರೂಪಣೆ ಮಾಡುವುದು ಈ ನಾಟಕದ ಶಕ್ತಿಗಳಲ್ಲಿ ಮುಖ್ಯವಾದುದು, ಆಪ್ತವಾಗಿ ಸಂವಹನ ಮಾಡುವ ಪಾತ್ರಗಳು, ದೇಸಿ ನುಡಿಗಟ್ಟು, ಕಥೆ ಹೇಳುವ ತಂತ್ರ, ಕಾವ್ಯಾತ್ಮಕ ಭಾಷೆ, ಕಥಾ ಹಂದರಕ್ಕೆ ಪೂರಕವಾಗಿ ನಿಲ್ಲುವ ಹಾಡುಗಳು, ಸನ್ನಿವೇಶ ಮತ್ತು ದೃಶ್ಯಗಳ ಕಟ್ಟುವಿಕೆ, ನವಿರು ಸಂಭಾಷಣೆ ಇತ್ಯಾದಿಗಳು ನಾಟಕವನ್ನು ಓದಲು ಪ್ರಿಯವೆನಿಸುತ್ತದೆ.

‍ಲೇಖಕರು avadhi

13 September, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading