ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಸನ್ನರ ಉಪವಾಸದ ಹಿಂದಿನ ರಾಜಕೀಯ

ಪವಿತ್ರ ಆರ್ಥಿಕತೆಗಾಗಿ ಖ್ಯಾತ ರಂಗಕರ್ಮಿ, ದೇಸಿ ಚಳವಳಿಯನ್ನು ಹುಟ್ಟು ಹಾಕಿದ ಪ್ರಸನ್ನ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ‘ಇದೇನಿದು ಪವಿತ್ರ ಆರ್ಥಿಕತೆ?’ ಎನ್ನುವ ಪ್ರಶ್ನೆಗಳೂ ಎದ್ದಿವೆ.

ಇಲ್ಲಿ ನಮ್ಮ ನಡುವಿನ ಸಂವೇದನಾಶೀಲ ಚಿತ್ರ ಇರ್ದೆಶಕ ಕೇಸರಿ ಹರವೂ ಪ್ರಸನ್ನರ ನೋಟದ ಹಿಂದಿನ ರಾಜಕೀಯವನ್ನು ಬಿಡಿಸಿಟ್ಟಿದ್ದಾರೆ.

ಇದು ‘ಜುಗಾರಿ ಕ್ರಾಸ್’. ಚರ್ಚೆಗಾಗಿ ಇರುವ ಅಂಗಳ 

ನೀವೂ ಚರ್ಚೆಯಲ್ಲಿ ಭಾಗವಹಿಸಿ. avadhimag@gmail.com ಗೆ ನಿಮ್ಮ ಅಭಿಪ್ರಾಯವನ್ನು ಕಳಿಸಿಕೊಡಿ 

ಕೇಸರಿ ಹರವೂ 

ಪ್ರಸನ್ನರ ಈ ಸಾಂಧರ್ಭಿಕ ಉಪವಾಸ ಸತ್ಯಾಗ್ರಹ ಶ್ರಮ ಮತ್ತು ಸಂಪನ್ಮೂಲ ಆಧಾರಿತ ಆರ್ಥಿಕತೆಯ ದೃಷ್ಠಿಯಿಂದ ಮೇಲುನೋಟಕ್ಕೆ ಸರಿಯೆನಿಸಿಬಿಡಬಹುದು. ಏಕೆಂದರೆ ಅಲ್ಲಿ ಉಪವಾಸದ ಭಾವೋದ್ವೇಗದ ಹೇರಿಕೆಯಿದೆ. ಉದಾತ್ತ ಬೇಡಿಕೆಯ ಒಂದಂಶವೂ ಇದೆ. ಅವರ ದೇಸೀ ನಿಲುವುಗಳನ್ನೂ, ಸರಳ ಬದುಕಿನ ಪ್ರಸ್ತಾವವನ್ನೂ, ನಾಳಿನ ದೇಶದ/ಜಗತ್ತಿನ ಸುಸ್ಥಿರ ಕಾಣ್ಕೆಯ, ಗಾಂಧೀವಾದದ ಮುಂದುವರಿದ ಆಗ್ರಹ ಎಂದುಕೊಂಡು ಒಪ್ಪಬಹುದು.

ಆದರೆ ಎಡಪಂಥದೊಂದಿಗೆ ಬೆಳೆದು, ಗಾಂಧೀವಾದಕ್ಕೆ ತಿರುಗಿ, ಅಲ್ಲಿಂದ ಮುಂದಕ್ಕೆ ಹೊರಟ ಪ್ರಸನ್ನರು ಗಾಂಧೀವಾದವನ್ನೂ ಬಿಟ್ಟುಕೊಡುತ್ತಾ, ಸ್ವದೇಶೀ ಜಾಗರಣ ಮಂಚದ ಅಂದಿನ ಭಾಷೆಯನ್ನು ಇಂದು ಬಹುತೇಕ ಆಡುತ್ತಿದ್ದಾರೆ. ಪ್ರಸನ್ನರು ಮತ್ತು ಅವರೊಡನೆ ಇರುವವರು ಸರ್ಕಾರಕ್ಕೆ ಸಲ್ಲಿಸಿರುವ ಅಹವಾಲಿನಲ್ಲಿ ಅದು ನಿಚ್ಚಳವಾಗಿದೆ. ಈ ಬೆಳಕಿನಲ್ಲಿ “ಪವಿತ್ರ” ಎನ್ನುವ ಪದವೇ ಕಲುಷಿತವೇನೋ ಎನ್ನುವ ಅನುಮಾನ ಹುಟ್ಟುವುದು ಸಹಜ. ಆದರೆ ಸ್ವದೇಶೀ ಜಾಗರಣ ಮಂಚವನ್ನೇ, ಅದರ ಭಾಷೆಯನ್ನೇ ಆರೆಸ್ಸೆಸ್-ಬಿಜೆಪಿ ಇಂದು ಮೂಲೆಗುಂಪು ಮಾಡಿದ್ದನ್ನು ನಾವೆಲ್ಲ ನೋಡುತ್ತಾ ಬಂದಿದ್ದರೂ, ಭಾಗವತರ ವಿಜಯದಶಮಿ ಭಾಷಣದಲ್ಲಿ ಅದು ಸ್ಪಷ್ಟವೇ ಆಯಿತು.

ಇಷ್ಟಾದರೂ, ‘ಶ್ರಮಿಕ ಮತ್ತು ಕರಕುಶಲ ವಸ್ತುಗಳನ್ನಾದರೂ ಜಿಎಸ್ಟಿಯಿಂದ ಮುಕ್ತಗೊಳಿಸಿ’ ಎನ್ನುವುದು ಸರ್ಕಾರದೊಂದಿಗಿನ ಅನುಸಂಧಾನ ಎಂದೇ ನೋಡಬೇಕಾಗುತ್ತದೆ. ಇದು ಅಂಧರು ಆನೆಯನ್ನು ಮುಟ್ಟಿ ಅವರವರ ಅನುಭವಕ್ಕೆ ತಕ್ಕಂತೆ ಆನೆಯನ್ನು ವಿವರಿಸಿದ ಕತೆಯಲ್ಲದೇ ಬೇರೇನಲ್ಲ. ಕೃಷಿ ಉತ್ಪನ್ನಗಳು, ದಿನಬಳಕೆಯ ಅಗತ್ಯ ವಸ್ತುಗಳು, ಬಡವರಿಗೆ ಅವಶ್ಯವಾದ ಆರೋಗ್ಯ ಮುಂತಾದ ಮೂಲಭೂತ ಸೇವೆಗಳು ಇವರಿಗೆ ಕಾಣಲಿಲ್ಲವೇ? ಇದೊಂದು ಉದಾಹರಣೆ, ಅಷ್ಟೇ.

ಇಂದು ದೇಶದಲ್ಲಿನ ಕುಂಠಿತ ಆರ್ಥಿಕತೆ ಮತ್ತು ಅಥಾರಿಟೇರಿಯನಿಸಂ ಎರಡಕ್ಕೂ ಅತಿನಿಕಟ ಸಂಬಂಧವಿದೆ. ದೇಶದ ಬಲಪಂಥೀಯ ರಾಷ್ಟ್ರೀಯತೆಗೂ ಮತ್ತು ಜಾಗತೀಕರಣದ ಇಂದಿನ ಗರಿಷ್ಟ ವಿಸ್ತಾರಕ್ಕೂ ದೊಡ್ಡ ಸಂಬಂಧವಿದೆ. ನಮ್ಮಲ್ಲಿರುವುದು ಕೇವಲ ರಾಕ್ಷಸ ಆರ್ಥಿಕತೆಯಲ್ಲ. ರಾಕ್ಷಸ ರಾಜಕೀಯ ಮತ್ತು ರಾಕ್ಷಸ ಸಮಾಜವೂ ಇದೆ.

ಇವೆಲ್ಲವೂ ಕಪೋಲಕಲ್ಪಿತ, ದೇಶ ಎಲ್ಲ ರೀತಿಯಲ್ಲೂ ಉತ್ತಮವಾಗಿಯೇ ಸಾಗುತ್ತಿದೆ ಎನ್ನುವ ಗ್ಯಾಸ್-ಲೈಟಿಂಗ್ ಅನ್ನು ಜಗತ್ತಿನಗಲಕ್ಕೂ ಹರಿಬಿಡುತ್ತಿರುವ ಈ ಹೊತ್ತಿನಲ್ಲಿ ನಮಗೆ ಬೇಕಿರುವುದು ಈ ಎಲ್ಲವನ್ನೂ ವಿರೋಧಿಸುವ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ನೈತಿಕತೆ ಮತ್ತು ಸುಸ್ಥಿರತೆಯನ್ನು ಆಗ್ರಹಿಸುವ ಸಂಕಲಿತ ಹೋರಾಟ.

ಇದಕ್ಕೆ ನಮ್ಮನ್ನು ನಾವು ಸಿದ್ಧಗೊಳಿಸಿಕೊಳ್ಳಬೇಕಾದ ಹೊತ್ತಿನಲ್ಲಿ ದಿಕ್ಕುತಪ್ಪಿಸುವ ಇಂಥಾ ಸಾಂದರ್ಭಿಕ ಹೋರಾಟಗಳು “ನೀ ಹೊಡೆದಂಗೆ ಮಾಡು, ನಾ ಅತ್ತಂಗೆ ಮಾಡ್ತೀನಿ” ಎನ್ನುವ ಪ್ರಭುತ್ವದ ಮುಖವಾಣಿಯಾಗಿಯೇ ಕಾಣುತ್ತವೆ.

‍ಲೇಖಕರು avadhi

11 October, 2019

1 Comment

  1. M.R.Harish Babu

    nimma abhipraya hegidhy andhre Ýadbhavam tadhbavathi- Manisinanthe mahadeva”

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading