ಕೋಟಿಗಟ್ಟಲೆ ಸುರಿದು ಮದುವೆಯಾಗುವುದೇ ಆದರ್ಶ ಎಂದು ಜಾಗತೀಕರಣ ಹಾಗೂ ಅದರ ಶಿಶುಗಳು ನಂಬಿಸುತ್ತಿರುವ ದಿನಗಳಲ್ಲಿ ಈ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ.
ಎಂತಹ ಆಯ್ಕೆಯ ಸ್ವಾತಂತ್ರ್ಯ ಇರುವವರೂ ಮೈಗೆ ಅರಿಶಿನ ತಿಕ್ಕಿಸಿಕೊಳ್ಳುತ್ತಾ, ಪ್ರಿ ಶೂಟ್ ಪೋಸ್ಟ್ ಶೂಟ್ ಗಳಿಗೆ ಮನಸೋಲುತ್ತಾ, ಒಂದು ಮುಹೂರ್ತ ಎರಡು ರಿಸೆಪ್ಶನ್ ಎನ್ನುವುದಕ್ಕೆ ತಲೆ ಆಡಿಸುತ್ತಾ ಅಂಗೀಕಾರದ ಮುದ್ರೆ ಒತ್ತುತ್ತಿರುವ ಈ ದಿನಗಳಲ್ಲಿ ನಿಜಕ್ಕೂ ಪ್ರವರ ಹಾಗೂ ಅಂಬಿಕಾ ಇಬ್ಬರೂ ತೆಗೆದುಕೊಂಡ ನಿರ್ಧಾರ ಎಲ್ಲರ ಮನ ಗೆಲ್ಲುವಂತಹದ್ದು.
ಚಿತ್ರದುರ್ಗದ ಮುರುಘಾ ಮಠದಲ್ಲಿ ಪ್ರತೀ ವರ್ಷ ಜರುಗುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅದರದ್ದೇ ಆದ ಅನನ್ಯತೆಯಿದೆ. ಅದರಲ್ಲಿ ಈ ಬಾರಿ ಪ್ರವರ ಕೊಟ್ಟೂರು ಹಾಗೂ ಅಂಬಿಕಾ ಮದುವೆಯಾಗಲು ನಿರ್ಧರಿಸಿದ್ದು ‘ಅವಧಿ’ಗೆ ತೀವ್ರ ಸಂತಸ ತಂದಿದೆ.
ಇಂತಹ ಮದುವೆಯನ್ನು ಮಾಡಿಕೊಡಲು ಅಷ್ಟೇ ದೊಡ್ಡ ಮನಸ್ಸು ಎರಡೂ ಕಡೆಯ ಪೋಷಕರಿಗಿದ್ದಾಗ ಮಾತ್ರ ಸಾಧ್ಯ. ಇಂತಹ ಒಂದು ಸರಳ ರೀತಿಯ ಸಮಾರಂಭಕ್ಕೆ ಕಾರಣರಾದ ಕುಂ ವೀರಭದ್ರಪ್ಪ ಹಾಗೂ ಅನ್ನಪೂರ್ಣ ದಂಪತಿಗಳು ಹಾಗೂ ಅಂಬಿಕಾರ ಪೋಷಕರಾದ ಸುಧಾ ಹಾಗೂ ಶೇಖರಪ್ಪ ಅವರಿಗೂ ಅಭಿನಂದನೆಗಳು.
ಒಂದು ಧೋತಿ, ಒಂದು ಊರುಗೋಲಿನ ಮೂಲಕ ಬದುಕಿ ತೋರಿಸಿದ ದೇಶ ನಮ್ಮದು. ಪ್ರವರ-ಅಂಬಿಕಾರಂತಹ ಜೋಡಿ ಸಾವಿರವಾಗಲಿ. ನಮ್ಮಗಳ ಮಕ್ಕಳ ಮದುವೆಯನ್ನೂ ಸರಳವಾಗಿ ಆಚರಿಸುವ ಪಣ ತೊಡೋಣ
0 ಪ್ರತಿಕ್ರಿಯೆಗಳು