ಅಭಿಜ್ಞಾ ಪಿ ಎಮ್ ಗೌಡ
ಕಾಲದ ನದಿ ನಿಲ್ಲದೆ ಸಾಗುವುದು
ನಿರ್ಭೀತಿ ನಿರ್ಭಿಡೆಯಾಗಿ
ಭೋರ್ಗರೆಯುತ ಸೇರುವುದು
ಯಾರಿಗಾಗಿಯೂ ಕಾಯದೆ
ಪಯೋನಿಧಿಯ ಒಡಲನು…
ಸಕಲ ಜೀವಿಗಳಿಗು ಅನ್ವಯವಲ್ಲವೆ.?
ಸಮಯವೆಂಬ ಈ ಸಮಯ
ಅದೇಕೆ ಸಾಲದಾಗಿದೆ.?
ಜೀವನವೆಂಬ ಸಂತೆಯೊಳಗೆ
ಜಂಜಾಟದ ಹಾರಾಟ
ಒತ್ತಡಗಳ ತಾರಾಟ
ವಿಶ್ರಾಂತಿಯ ಹುಡುಗಾಟ
ಸರ್ವೇಸಾಮಾನ್ಯವಾಗಿದೆಯಲ್ಲ.!
ವ್ಯರ್ಥ ಅಲಾಪಗಳ ಹಾದಿಯಲಿ
ಓಡುತಿದೆ ಸಮಯ
ಅರ್ಥಪೂರ್ಣ ಕೆಲಸಗಳಿಗೆ
ಸಹಕರಿಸುತಿದೆ ಸಮಯ
ಓಡುತಲಿ ಕಾಡುತಿರುವ
ಮನಸಿಗೂ ಕನಸಿಗೂ
ನಡುವೆ ಅದೇಕೆ
ಶತ್ರುವಿನಂತೆ ಆಗಿದೆ .?
ಒತ್ತಡದಲ್ಲೆ ಆರಂಭ
ಈ ಜೀವನಯಾನ.!
ಅನುಸರಿಸದೆ ಸಮಯದ
ಬೀಜಮಂತ್ರದ ಸೌರಭ
ಅದಕ್ಕಾಗಿಯೆ ಬಾಳೆಲ್ಲವು
ಪ್ರಾರಂಭವಾಗಿದೆ
ಕೃತಕಯಂತ್ರದಂತೆ.!
ಪುರುಸೊತ್ತಿಲ್ಲದ ದುನಿಯಾದಲ್ಲಿ
ನಲಿವಿಗೆಲ್ಲಿದೆ ಸಮಯ
ಮಾತಿಗಿಲ್ಲದ ಕಾಲದಲ್ಲಿ
ಉಳಿದೀತೆ ಒಡನಾಟದ ನಂಟು
ಜೊತೆಗಾರರ ಪ್ರಿಯನುಡಿಗಳ ಗಂಟು
ಮುರಿದು ಬೀಳುತಿವೆ
ಸಮಯದಿಂದಾಗಿ ಅದೆಷ್ಟೋ
ಸಂಬಂಧಗಳ ನಂಟು
ಕಳಚು ಬೀಳುತಿವೆ ಅದೆಷ್ಟೋ
ಸ್ನೇಹದ ಅನುಬಂಧದ ಗಂಟು..!!
ಸಮಯದ ಸದುಪಯೋಗ
ಬೇಕಾದರೆ ಇರಲಿ ನಿಮ್ಮೊಳಗೆ
ನಮ್ಮೊಳಗೆ ಪ್ರಯತ್ನ
ಆತ್ಮವಿಶ್ವಾಸ
ಫಲಾಫಲವೆಲ್ಲ ವಿಶ್ವಾಸದಲಿ ಸಖ್ಯ
ಆಗಷ್ಟೆ ಸಂಕಲ್ಪಗಳು
ಸಂಕಲ್ಪಗಳಾಗಿಯೆ ಉಳಿಯದೆ
ಜರುಗುವುದು ಯಶಸ್ಸಿನ ಸಾಹಸ..!!
0 ಪ್ರತಿಕ್ರಿಯೆಗಳು