ಪೋಲೇನಹಳ್ಳಿ ರಮೇಶ್ ಹೊಸ ಕವಿತೆ – ಆ ತೇರು…

ಪೋಲೇನಹಳ್ಳಿ ರಮೇಶ್

ಮಣ್ಣಿನಲಿ ಚಕ್ರಗಳ ಹೂತು ಆ ದೊಡ್ಡ ತೇರು ನಿಂತಲ್ಲೇ ನಿಂತಿತ್ತು.
ಗೆದ್ದಲು ಹಿಡಿದಿರಲಿಲ್ಲ: ಬಳ್ಳಿ, ಗುಬ್ಬಚ್ಚಿಗಳಿಗೆ ಆಸರೆ, ನೆರಳಲ್ಲಿ ಹಸು ಮಲಗಿತ್ತು
ಶ್ರೀಗಂಧ, ತೇಗ, ಕರಿಮರ, ಬಳಸಿರಬಹುದು
ಗೀತೆ ರಾಮಾಯಣ ಚಿತ್ರಗಳ ಪ್ರತಿ‌ ಮಜಲುಗಳಲಿ
ಕೆತ್ತಿದವರಾರೆಂದು ಕೇಳಿದರೆ ಓಬೀರಾಯನಕಾಲದ್ದು ಎನ್ನುತ್ತಾರೆ

ತೆಪ್ಪಗಿದ್ದ ತೇರಿಗೆ ಮೊನ್ನೆ ಒಮ್ಮೆಲೇ ಜೀವಬಂದಿದೆ
ಚೆಂಡು, ಮಲ್ಲಿಗೆ, ಮರುಗ, ಸೇವಂತಿಕೆ ದಂಡೆ ದಂಡೆ ನೇತಾಡಿವೆ
ಕೇಸರಿವಸ್ತ್ರ ಇಕ್ಕೆಲ ಹಾರಾಡಿವೆ
ಜಾಗಟೆ, ಕೊಂಬು, ಕಹಳೆ ಮೊಳಗಿವೆ
ಗೆಜ್ಜೆ ಕಟ್ಟಿದ ಮೇಲೆ ಹೆಜ್ಜೆ ಹಾಕದಿರೆ ಹೇಗೆ; ಹೊಸದೇ ನೃತ್ಯ ಮೈತಾಳಿದೆ
ಮಸುಕು ಉತ್ಸವಮೂರ್ತಿ ಚಹರೆ ಎಸೆದ ಹಣ್ಣು-ಹೂವುಗಳಿಂದ ಮರೆಯಾಗಿದೆ

ತಿಳಿಯದು, ಯಾರು ಮೊದಲೆಳೆದವರು ಎಂದು
ಹಗ್ಗಕ್ಕೆ ಸಾವಿರ ಕೈ ಸೇರಿವೆ
ಹಗ್ಗ ಹನುಮನ ಬಾಲ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ
ಬಟ್ಟೆ ಸುತ್ತುವುದೊಂದು ಬಾಕೀಯಿದೆ
ಎಡ ಬಲವಾಲುತ್ತ ಸಾಗಿದೆ

ಜಾತ್ರೆಯಲಿ ತೇರನೆಳೆಯುವುದು ಸುಲಭ ಹಗ್ಗ ಮುಟ್ಟಿದರಾಯಿತು, ಧನ್ಯ!
ಮತ್ಯಾರೋ ಎಳೆಯುತ್ತಾರೆ; ಆಯತಪ್ಪಿದವರು ಕಾಲಡಿ ಮಖಾಡೆ ಮಲಗುತ್ತಾರೆ.

ಆ ದೊಡ್ಡ ತೇರ ಎಳೆದಾಗಿದೆ
ಎಲ್ಲಿಯವರೆಗೆ?
ಯಾರಿಗೂ ತಿಳಿಯದಾಗಿದೆ

‍ಲೇಖಕರು Admin

April 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: