ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪೇಪರ್ ಹುಡುಗ ಮತ್ತು ರಂಗೋಲಿ' – ಚಿತ್ರಾ ಸಂತೋಷ್ ಬರೀತಾರೆ

ಚಿತ್ರಾ ಸಂತೋಷ್

ಆತ ಪೇಪರ್ ಹಾಕುವ ಹುಡುಗ.ನನ್ನ ಬಳಿ ನಿಂತು ನೋಡಿದರೆ ನನ್ನ ಭುಜದೆತ್ತರಕ್ಕೆ ಅಷ್ಟೇ. ಚುರುಕು ಮನಸ್ಸಿನವನು.
ಕೆಂಪು ಸ್ಟ್ಯಾಂಡಿನ ಸೈಕಲ್ ಅವನದು. ಮೂರು ವರ್ಷದಿಂದ ಅವನನ್ನು ನೋಡುತ್ತಿದ್ದೇನೆ. ಹುಡುಗ ಒಂದಷ್ಟು ಬೆಳೆದಿದ್ದಾನೆ, ನೋಡಲು ಗುಂಡು ಗುಂಡಾಗಿದ್ದಾನೆ. ಅವನ ಬದುಕು ಬದಲಾಗಿಲ್ಲ…ಸೈಕಲ್ ಬದಲಾಗಿಲ್ಲ…ನಿತ್ಯ ಅವನು ಬರುವ ಮುಂಜಾವು ಬದಲಾಗಿಲ್ಲ. ಅಸಲಿಗೆ ಅವನ ಬಳಿ ಇರುವ ಶರ್ಟ್ ಗಳ ಬಣ್ಣವೂ ಬದಲಾಗಿಲ್ಲ. ಕೆಂಪು ಮತ್ತು ನೀಲಿ ಅವನ ಫೇವರಿಟ್. ಹಾಕಿದ ಜೀನ್ಸ್ ಬಣ್ಣವೂ ನೀಲಿಯೇ. ಆ ಜೀನ್ಸ್ನ ತುದಿ ನೆಲಕ್ಕೆ ತಾಗಿ-ತಾಗಿ ಸವೆದೇ ಹೋಗಿದೆ. ಮಳೆಗಾಲದಲ್ಲಂತೂ ಜೀನ್ಸ್ ತುದಿಯೇ ಕೆಸರ ಗದ್ದೆ.
ದಿನಾ ಬೆಳಿಗ್ಗೆ ಆರೂವರೆ…ಸರಿಯಾದ ಸಮಯಕ್ಕೆ ಬಂದೇ ಬರುತ್ತಾನೆ. ಅವನ ಮೇಲೆ ನನಗೆ ಒಂಚೂರು ಪ್ರೀತಿ ಜಾಸ್ತಿ. ಲೇಟ್ ಬಂದ್ರೂ ಕೇಳೋದು…ಬೇಗ ಬಂದ್ರೂ ಕೇಳೋದು. ಪುಟ್ಟ ಹುಡುಗನಾದ್ರೂ ಮುಖದ ಮೇಲೆ ಗಂಭೀರ ಹೆಚ್ಚು. ಹೇಗಾದರೂ ಮಾಡಿ ಅವನ ನಗಿಸಬೇಕೆನ್ನುವ ಸಣ್ಣದೊಂದು ಹಠ ನನಗೆ. ಬೆಳಿಗೆದ್ದು ರಂಗೋಲಿ ಹಾಕುವಾಗ ಅವನ ತಿರುಗಿ ನೋಡಿ…ಅವನು ನಗದಿದ್ರೂ ನನ್ನ ಮುಖದಲ್ಲಿ ಸಣ್ಣದೊಂದು ನಗೆ. ಅದಕ್ಕವನು ಕಷ್ಟಪಟ್ಟು ನಗು ತಂದುಕೊಳ್ತಿದ್ದ. ಒಮ್ಮೊಮ್ಮೆ ನಾನು ನಕ್ಕರೂ ಅವನ ಮುಖ ಸ್ವಲ್ಪವೂ ಬದಲಾಗುತ್ತಿರಲಿಲ್ಲ. ನನ್ನದು ವ್ಯರ್ಥ ಪ್ರಯತ್ನ ಆಗಿಬಿಡುತ್ತಿತ್ತು!
ದಿನವೂ ಸೈಕಲನ್ನೇ ಕಾರು ಓಡಿಸಿದ ಸ್ಪೀಡ್ ನಲ್ಲಿ ಓಡಿಸಿಕೊಂಡು ಬರೋ ಅವನ ಮೊಬೈಲ್ ಸದ್ದು ಸುತ್ತಮುತ್ತಲ ಮನೆಯವರನ್ನು ಎಬ್ಬಿಸುತ್ತಿತ್ತು. ಸೂರ್ಯ ಮೂಡುವ ಹೊತ್ತು ಅಲ್ಲಿನ ಹೆಚ್ಚಿನ ಮನೆಗಳಲ್ಲಿ ಭಕ್ತಿಗೀತೆಗಳು ಕೇಳಿಬರುತ್ತಿದ್ದರೆ ಅವನ ಮೊಬೈಲ್ ನಲ್ಲಿ ಫಿಲಂಗೀತೆಗಳು. ಎಷ್ಟೋ ಸಲ ಎದುರುಮನೆಯ ಅಜ್ಜಿ “ಸ್ವಲ್ಪ ವಾಲ್ಯೂಮ್ ಕಮ್ಮಿ ಮಾಡ್ಕೋಪ್ಪ ಅಥವಾ ಬೆಳಿಗ್ಗೆದ್ದು ದೇವರನಾಮಗಳನ್ನು ಹಾಕ್ಕೋ’ ಎಂದು ತಮ್ಮ ದೇವರಭಕ್ತಿಯನ್ನು ಅವನ ಮೇಲೆ ಹೇರಿದರೂ ಧೃತಿಗೆಡದೆ ತನ್ನ ಪಾಡಿಗೆ ಸೈಕಲ್ ತಳ್ಳುತ್ತಾ ಹೋಗುತ್ತಿದ್ದ. ಆಗ ಅಜ್ಜಿಯ ಗುಳಿಬಿದ್ದ ಕಣ್ಣುಗಳು ಕೆಂಪಾಗಿದ್ದನ್ನು ನಾನು ಗಮನಿಸಿದ್ದೆ.
ಮೊನ್ನೆ..ಮೊನ್ನೆ ಬೆಳಿಗ್ಗೆ ಮಾಮೂಲಿ ಹೊತ್ತಿಗೆ ಬಂದು ಸೈಕಲ್ ನಿಂದ ಇಳಿಯದೆ ಬಾಗಿಲಲ್ಲಿ ಪತ್ರಿಕೆ ಎಸೆದು ಹೋದ. ಯಾವಾಗಲೂ ಗೇಟ್ ನಲ್ಲಿ ಸಿಕ್ಕಿಸಿಹೋಗುವವನು ಇವತ್ಯಾಕೆ ಬಿಸಾಡಿದ? ಒಂದು ಕೈಲೀ ಸೈಕಲ್ ಸ್ಟ್ಯಾಂಡ್ ಹಿಡಿದುಕೊಂಡು ಇನ್ನೊಂದು ಕೈಲೀ ಪೇಪರ್ ಬಿಸಾಡಿದ ರಭಸಕ್ಕೆ ನಾನು ಆಗ ತಾನೇ ಹೊಸಿಲು ತೊಳೆದು ಹಾಕಿದ್ದ ಬಣ್ಣದ ರಂಗೋಲಿ ಅಳಿಸಿಹೋಯಿತು. ಅಂದಿನವರೆಗೆ ಅವನ ನಗಿಸಲು ಪ್ರಯತ್ನಿಸುತ್ತಿದ್ದ ನನಗೆ ಪೇಪರ್ ಹುಡುಗನ ಮೇಲೆ ಕೆಟ್ಟ ಸಿಟ್ಟು ಬಂತು.
“ಏಕೆ ಬಿಸಾಡಿದೆ”? ಸ್ವಲ್ಲ ಗರಂ ಆಗೇ ಕೇಳಿದೆ. ಆದರೆ ಅವನು ಉತ್ತರ ಹೇಳದೆ ಸೈಕಲ್ ತುಳಿಯುತ್ತಾ ಮುಂದೆ ಹೋದ. ಮರುದಿನವೂ ಹಾಗೇ ಮಾಡಿದ. ರಂಗೋಲಿ ಮೇಲೆ ಪತ್ರಿಕೆ ಚೆಲ್ಲಾಪಿಲ್ಲಿಯಾಗಿ ಬಿತ್ತು. ನನಗೆ ಮತ್ತೆಮತ್ತೆ ಪೇಪರ್ ಜೋಡಿಸುವ ಕೆಲಸ. ನಾನು ಬಿಡಿಸಿದ ಚೆಂದದ ಹೂವ ಚಿತ್ತಾರ ಅಳಿಸಿಹೋಯಿತು. ಚುಕ್ಕೆಯಿಟ್ಟು ರಂಗೋಲಿ ಬಿಡಿಸಲು ಬಾರದ ನಾನು ಕಷ್ಟಪಟ್ಟು ಒಂದು ದಾಸವಾಳ ಹೂವ ಬಿಡಿಸಿ, ಅದರ ದಳಗಳಿಗೆ ಬಣ್ಣ ತುಂಬಿದ್ದೆ.
ಎಷ್ಟು ಕೊಬ್ಬು ಹುಡುಗಂಗೆ. ಮೂರನೇ ದಿನ ಕಾದು ಕುಳಿತೆ. ಎಂದಿನಂತೆ ಪೇಪರ್ ಎಸೆದ. ರಂಗೋಲಿ ಚೆಲ್ಲಾಪಿಲ್ಲಿ. ಹೋಗಿ ಅವನ ಹಿಡಿದು ನಿಲ್ಲಿಸಿದೆ.
ಯಾಕೋ “ನನ್ನ ರಂಗೋಲಿ ಅಳಿಸ್ತೀಯಾ ದಿನಾ?”
ಸೈಕಲ್ ಸ್ಟ್ಯಾಂಡ್ ಗಟ್ಟಿಯಾಗಿ ಹಿಡಿದುಕೊಂಡ ಹುಡುಗನ ಕಣ್ಣಲ್ಲಿ ನೀರು ಜಿನುಗಿತು.
“ಅಕ್ಕಾ, ನನ್ನ ಸೈಕಲ್ ಸ್ಟ್ಯಾಂಡ್ ನಿಲ್ತಿಲ್ಲ. ತುಂಬಾ ಹಳೇ ಸೈಕಲ್”
“ಬೇರೆ ಕೊಡಿಸಕೆ ಹೇಳು ನಿನ್ನ ಓನರ್” ಗೆ ನಾನಂದೆ.
“ಅವ್ರು ತೆಗೆಸಿಕೊಡಲ್ಲ. ಕೆಲ್ಸ ಬೇಕಾದ್ರೆ ಇದೇ ಸೈಕಲ್ ನಲ್ಲಿ ಹೋಗು ಅಂದಿದ್ದಾರೆ” ಅಂದುಬಿಟ್ಟು ಕಣ್ಣು ಕೆಂಪಗಾಗಿಸಿಕೊಂಡು ಸೈಕಲ್ ತುಳಿಯುತ್ತಾ ಮುಂದೆ ಹೋದ. ನೋಡುತ್ತಲೇ ನಿಂತೆ… ನನಗೆ ಮಾತು ಕಟ್ಟಿತು. ಅವನು ಎಸೆದ ಪೇಪರನ್ನು ಮತ್ತೆ ಎತ್ತಿ ಜೋಡಿಸಿದೆ. ಅಳಿಸಿ ಹೋದ ರಂಗೋಲಿಯನ್ನು ಮತ್ತೆ ಹಾಕಿ ಬಣ್ಣ ತುಂಬಿದೆ.
 

‍ಲೇಖಕರು avadhi

1 July, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading