ವಚನಗಳು
ಎಂ ಎಂ ಶೇಖ್ ಯಾದಗಿರಿ
ಕುರಿಮಂದೆಯಿದು
ನಡೆಯುತಿಹುದು
ಕಾಗೆಗಳ ಹಿಂಡಿದು
ಅರಚುತಿಹುದು
ಮುಂದಿಹುದು ಕಾಂಚಾಣ
ನಿಲ್ಲಿಸುವರಾರು ಪ್ರಿಯ ‘ಗರೀಬನವಾಜ್.’
***
ನಾನು ನನ್ನದೆಂದು
ಒದ್ದಾಡಿ ಸಾಯುತ್ತಿರುವೆ
ಬಸವನ ಹುಳುವಿನಂತೆ
ಪಾಪ ಹೊತ್ತು ನಡೆಯುತ್ತಿರುವೆ
ನಾಲ್ಕು ಜನರು ಸಿಗರು
ನನ್ನ ಹೊತ್ತು ಸಾಗಲು ಪ್ರಿಯ ‘ಗರಿಬ ನವಾಜ್’
***
ಧರ್ಮವೆಂದು ಹೇರುತಿಹರು
ಹೆಂಡ ಕುಡಿಸಿ ಕೋತಿಗೆ,
ಬಾವಿಯಲಿಳಿದು ನೋಡಲಾಗುತ್ತಿಲ್ಲ
ಕಂಡ ಪ್ರತಿಬಿಂಬ ನನ್ನದಲ್ಲ
ನೆತ್ತಿಗೇರಿದ ಕಣ್ಣುಗಳಿಗೆ
ಪಾದದ ನೆರಳು ಕಾಣುತ್ತಿಲ್ಲ ಪ್ರಿಯ ‘ಗರೀಬ್ ನವಾಜ್’
***
ಶುದ್ದವೆಂದ ನಾಲಿಗೆ ಕಚ್ಚಿ
ನುಡಿಯುವೆ ಬೇರೆಯವರ ಕರ್ಮ
ನಡೆವ ಹೆಜ್ಜೆ,ನುಡಿವ ಮಾತು
ಕದಡುತ್ತಿದೆ ತಿಳಿನೀರು
ತೋರಲಾಗದೆ ಹಂಚಲಾಗದೆ
ನನಗೂ ಕುಡಿಯಲಾಗುತ್ತಿಲ್ಲ ಪ್ರಿಯ ‘ಗರೀಬ್ ನವಾಜ್’
***
ನಾನಿಲ್ಲ ನನ್ನೊಡನಿಲ್ಲ ನೀನು
ಹೆಜ್ಜೆಹೆಜ್ಜೆಗೂ ಎದುರಾಗುತ್ತಿರುವೆ
ಕನ್ನಡಿಯಲಿ ಕಂಡ ಬಿಂಬ
ಗುರುತುಹಚ್ಚಲು ಬೆಳಕ ಹುಡುಕುತಿರುವೆ
ಬೆಳಕಿದ್ದ ಮನೆಯ ಕದ ಮುಚ್ಚಿ
ಕುಳಿತಿರುವೆ ಕೈಮೇಲೆತ್ತಿ ಪ್ರಿಯ ‘ಗರೀಬ್ ನವಾಜ್’
***
ನನ್ನ ನೋವು ನನ್ನ ನಲಿವು
ಅಡಗಿದೆ ಎಲ್ಲರಲ್ಲೂ
ಚಿವುಟಿ ನೋಡುತ್ತಿರುವೆ
ಕಚ್ಚಿ ನೆಕ್ಕುತ್ತಿರುವೆ
ತಿಳಿದ ರುಚಿ ತಿಳಿಸಲು
ತೆರೆದ ನಡೆಯ ಅರಿಯಲು ಪ್ರಿಯ ‘ಗರೀಬ್ ನವಾಜ್’
ಚೆನ್ನಾಗಿದೆ…..ಗರೀಬನವಾಜ್…..
ವಾಹಾ..
ಬಹಳ ಸೊಗಸಾಗಿವೆ ಜೊತೆಗೆ ನೀವು ಯಾದಗಿರಿಯವರು ಅಂತಾ ತಿಳಿದು ಖುಷಿಯಾಯಿತು
hosa dani, hosatana, please write more and more vachanas. your effort is really good.
haaryisida ,abhinandisida ellarigu dhanyavaadagaLu.