ಡಾ. ಪದ್ಮಿನಿ ನಾಗರಾಜು
ಸಂಬಂಧಗಳ ಮರದಡಿ
ನಿಡುಸುಯ್ದು ಕುಳಿತಿಹೆನು
ಬೆಂಕಿ ಬಿಸಿಲಿಗೆ ನೆರಳಾಟ
ಮೌನ ಮಗುವಾಗಿದೆ
ಸಾಕು ಕಿತ್ತೊಗಿ ಮುಖವಾಡಗಳ
ನಗುವ ಮುಚ್ಚುವ ಮುಸುಕ
ಒಳಗಿನ ಹೊಟ್ಟೆಕಿಚ್ಚು ಹೊರಬರುವ
ಒಣ ಮಾತುಗಳ ಸುಟ್ಟು ಕರಕಾಗಿಸಿದೆ
ಶರೀರವೆಲ್ಲಾ ವಿಷಮಯ
ಅಮೃತದ ಮಾತಿಗದೆಲ್ಲಿ ಜಾಗ
ಒಳಗೇ ಒಸರುವ ಭಾವಕ್ಕೆ
ವಿದಾಯದ ವಿಲಕ್ಷಣಕ್ಕೆ
ಮನದ ಗೋಡೆ ಕುಸಿಯುತ್ತಿದೆ
ಅವ ನನ್ನ ನೋಡಿ ಅದೇಕೆ
ಮುಖ ದುಮ್ಮಿಕ್ಕಿದ
ಕೇಳಿಬಿಡಲೇ ಬಾಯಿತೆರೆಯುವ
ಮುನ್ನ ಮನ ಎಚ್ಚರಿಸಿದೆ
ಅವನ್ಯಾವ ನೆಂಟ?
ಅಲ್ಲವೇ,
ಅವ ಯಾವ ನೆಂಟ?
ಅವ ನನ್ನವನೆನ್ನುವ
ಸಾಕ್ಷಿಗಳೆಲ್ಲ ಕಣ್ಣ ಮುಂದೆ
ಮಣ್ಣು ಸೇರಿರುವಾಗ
ಅದೆಷ್ಟು ದಿನ ಜೀವಂತ
ಉಳಿಸುವ ನಾಟಕದಾಟ
ಕೊಳೆತ ಹೆಣವ ಮತ್ತೆ ಮತ್ತೆ
ಕೆದಕಿ ಬಗೆದು ನೋಡಿ ನೋಡಿ
ತಪ್ಪುಗಳನ್ನೇಕೆ ಪಟ್ಟಿ ಮಾಡುವೆ
ಬಿಡು,
ಕಾಪಿಡುವ ಸರಿದಿ ಮುಗಿದಿದೆ
ಕೈತೊಳೆದು ಹೊರನಡಿ
ಸಾಕು,
ಭರವಸೆಯ ಬಿಗಿದಾಟ
ಹತ್ತಿರವಿದ್ದಷ್ಟು ದೂರಾಗುವ ತವಕ
ತಡಕಾಡಿದಷ್ಟು ಬಿಡುಗಡೆಯ ಹಾದಿ
ಅಗ್ನಿಪರ್ವತ ತನ್ನದನ್ನೆಲ್ಲಾ
ಹೊರಹಾಕಿ ನಿರಾಳವಾಗಿದೆ
ಹಳಸಿದ ಸಂಬಂಧವ ಚಟ್ಟಕ್ಕೆರಿಸಿ
ಒಂದಷ್ಟು ದೂರ ಹೆಜ್ಜೆಯಿಡು
ತಿಲಾಂಜಲಿ ಬಿಟ್ಟು ಹೊರನಡೆ
ಹಳೆ ಫ್ರೇಮಿಗೆ ಹೊಸ ಚಿತ್ರ
ತಗುಲಿಸಿಬಿಡು
ರಿಪ್
ಚೆನ್ನಾಗಿ ದೆ ಪದ್ಮಿನಿ ಯವರೆ ಕವನ ಸೂಪರ್ ಶ್ರೀ ದೇವಿಯವರ ಕವನ ಸಹ ಚೆನ್ನಾಗಿದೆ. ಬರೆಯುತ್ತಿರಿ ಮೇಡಂ
Kavite chennagide padmini ma’am