ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನೋಯದಿರು ಒಲವೆ!’ – ಜ್ಯೋತಿ ಮಹಾದೇವ್ ಬರೀತಾರೆ

ಜಗದ ಪರಿ

ಜ್ಯೋತಿ ಮಹಾದೇವ್

ಮುದುಡದಿರು ಮನವೆ!
ಮುದುಡಿದರೆ ಕಸವೆಂದು ಎಸೆಯುವುದು ನಿನ್ನ
 
ಬಾಡದಿರು ಮೊಗವೆ!
ಬಾಡಿದರೆ ಬೇಡೆಂದು ಬಿಸುಟುವುದು ನಿನ್ನ
 
ಕೊರಗದಿರು ಎದೆಯೆ!
ಕೊರಗಿದರೆ ಕೇಡೆಂದು ಕೆರೆಯುವುದು ನಿನ್ನ
 
ಮರುಗದಿರು ಮಡಿಲೆ!
ಮರುಗಿದರೆ ಹೋಗೆಂದು ಕಳಿಸುವುದು ನಿನ್ನ
 
ಅಳಲದಿರು ಅರಿವೆ!
ಅಳಲಿದರೆ ಅಳಿಯೆಂದು ಹೊಸಕುವುದು ನಿನ್ನ
 
ನೋಯದಿರು ಒಲವೆ!
ನೋಯುತಿರೆ ಬೇಯೆಂದು ಉರಿಸುವುದು ನಿನ್ನ
 
ಅಂಜದಿರು ಛಲವೆ!
ಅಂಜಿದರೆ ನಲುಗೆಂದು ಅಲುಗಿಪುದು ನಿನ್ನ
 
ಬೆಚ್ಚದಿರು ಬಲವೆ!
ಬೆಚ್ಚಿದರೆ ಬೀಳೆಂದು ಬೆದರಿಪುದು ನಿನ್ನ
 
ಬೀಳದಿರು ಮತಿಯೆ!
ಬೀಳುತಿರೆ ಕೊಳೆಯೆಂದು ಕೊಚ್ಚುವುದು ನಿನ್ನ
 
ಸೋಲದಿರು ಧೃತಿಯೆ!
ಸೋಲುತಿರೆ ಸಾಯೆಂದು ಸೋಸುವುದು ನಿನ್ನ
 
ಪ್ರೀತಿಸುವ ಜೀವ,
ಮುನ್ನೋಟದೀವಟಿಗೆ ಹಿಡಿದು ನಡೆಸೆನ್ನ
 
ಉಚ್ಚರದ ಭಾವ,
ಮೆಚ್ಚಾಗುವಂದದಲಿ ಎಚ್ಚರಿಸು ಎನ್ನ
 

‍ಲೇಖಕರು avadhi

19 August, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading