ನೀವು ಓದಲೇಬೇಕಾದ ಮಂಜುಳ ಕಿರುಗಾವಲು ಅನುವಾದಿಸಿದ ಕವಿತೆಗಳು

ಸರ್ವೇಶ್ವರ್ ದಯಾಳ್ ಸಕ್ಸೇನಾ ಅವರದು ಹಿಂದಿ ಸಾಹಿತ್ಯ ಮತ್ತು ಪ್ರಾಯೋಗಿಕ ಕವಿತ್ವದಲ್ಲಿ ಬಹುಮುಖ್ಯ ಹೆಸರು.

“ಆಗಾಗ ನೋಯುವುದನ್ನು ರೂಢಿಸಿಕೊಂಡರೆ ಕೊನೆಗದು ಒಂದು ಧೀರ್ಘ ಪ್ರಯಾಣವಾಗುತ್ತದೆ” ಎಂದ ಸರ್ವೇಶ್ವರ್ ಅವರ ಕವಿತೆಗಳು ಮಂಜುಳ ಕಿರುಗಾವಲು

ಅವರ ಕೈ ಹಿಡಿದು ಕನ್ನಡಕ್ಕೆ ಪ್ರಯಾಣಿಸಿವೆ!!

ದೇಶ ಕಾಗದದ ಮೇಲೆ ಬರೆದ ನಕ್ಷೆಯಂತಿಲ್ಲ

ಒಂದೊಮ್ಮೆ ನಿಮ್ಮ ಮನೆಯ ಒಂದು ಕೋಣೆಯಲ್ಲಿ ಬೆಂಕಿ ಬಿದ್ದಿದ್ದರೆ,
ನೀವು ಮತ್ತೊಂದು ಕೋಣೆಯಲ್ಲಿ ಮಲಗಬಲ್ಲೀರಾ..?
ಒಂದೊಮ್ಮೆ ನಿಮ್ಮ ಮನೆಯ ಒಂದು ಕೋಣೆಯಲ್ಲಿ ಶವಗಳು ಕೊಳೆಯುತ್ತಿದ್ದರೆ,
ಇನ್ನೊಂದು ಕೋಣೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದೇ..?
ಒಂದೊಮ್ಮೆ ಹೌದೆನ್ನುವಿರಾದರೆ
ನಾನು ನಿಮಗೆ ಏನು ಹೇಳುವುದಿಲ್ಲ

ದೇಶ ಕಾಗದದ ಮೇಲೆ ಬರೆದ ನಕ್ಷೆಯಾಗಿರುವುದಿಲ್ಲ
ಒಂದು ಭಾಗ ಹರಿದರೆ ಉಳಿದ ಭಾಗಗಳು ಹಾಗೆಯೇ ಸಾಕ್ಷಿಗಳಾಗಿರುತ್ತವೆ
ನದಿಗಳು, ಪರ್ವತ, ನಗರ, ಹಳ್ಳಿ
ಹಾಗೆಯೇ ತಮ್ಮ ತಮ್ಮ ಜಾಗದಲ್ಲಿ ವಿಚಲಿತವಾಗದಿವಿ ನೋಡಿ
ಒಂದೊಮ್ಮೆ ನೀ ಇದ ಒಪ್ಪುವುದಿಲ್ಲವೆಂದರೆ
ನಾ ನಿನ್ನೊಡನೆ ಇರಲಾರೆ

ಈ ಜಗತ್ತಿನಲ್ಲಿ ಮನುಷ್ಯನ ಪ್ರಾಣಕ್ಕಿಂತ ಯಾವುದು ದೊಡ್ಡದಲ್ಲ
ಈಶ್ವರನೂ ಅಲ್ಲ,
ಜ್ಞಾನವೂ ಅಲ್ಲ,
ಚುನಾವಣೆಯೂ ಅಲ್ಲ…
ಕಾಗದದ ಮೇಲೆ ಬರೆದ ಯಾವುದೇ ಪ್ರಾರ್ಥನೆ ಹರಿದು ಹೋಗಬಹುದು
ಮತ್ತದನ್ನು ನೆಲದ ಏಳು ಪದರಗಳಡಿ  ಹೂಳಲುಬಹುದು


ಎದ್ದು ನಿಂತ ಹೆಣಗಳು
ವಿವೇಕವನ್ನು
ಕುರುಡಾಗಿಸಿವೆ
ಯಾವ ಆಡಳಿತವು
ಬಂದೂಕಿನ ನಳಿಕೆಯಲ್ಲಿ ನಡೆಯುತ್ತಿದ್ದರೆ
ಅದು ಕೊಲೆಗಡುಕರ ದಂಧೆಯಾಗಿರುತ್ತದೆ
ನೀ ಇದ ಒಪ್ಪುವುದಿಲ್ಲವೆಂದರೆ
ನಾ ನಿನ್ನ ಒಂದು ಕ್ಷಣವೂ ಸಹಿಸಲಾರೆ

ನೆನಪಿರಲಿ,
ಒಂದು ಮಗುವಿನ ಹತ್ಯೆ
ಮಹಿಳೆಯ ಶವ
ಗುಂಡುಗಳಿಂದ ಛಿದ್ರಗೊಳಿಸಿದ ವ್ಯಕ್ತಿಯೊಬ್ಬನ ದೇಹ
ಯಾವುದೇ ಆಡಳಿತದಲ್ಲ
ಇಡೀ ರಾಷ್ಟ್ರದ ಪತನವಾಗಿರುತ್ತದೆ

ಹೀಗೆ ರಕ್ತ ಹರಿಸುವುದು
ನೆಲದ ಶೋಭೆಯಲ್ಲ,
ಆಗಸದಲ್ಲಿ ಹಾರುವ ಧ್ವಜಗಳನ್ನು
ಕಪ್ಪಾಗಿಸಿದಂತೆ…
ಯಾವ ನೆಲದ ಮೇಲೆ
ಯೋಧನ ಬೂಟಿನ ಗುರುತಿದಿಯೋ
ಅಲ್ಲಿ ಶವಗಳು ಉರುಳುತ್ತಿದ್ದರೆ…
ಆ ನೆಲ ನಿಮ್ಮ ರಕ್ತವನ್ನು ಬೆಂಕಿಯಾಗಿಸದಿರೇ ತಿಳಿದಿಕೋ
ನೀ ಬಂಜೆಯಾಗಿರುವೆ
ನಿನಗೆ ಇಲ್ಲಿ ಉಸಿರಾಡಲು ಸಹ ಅಧಿಕಾರವಿಲ್ಲವೆಂದರೆ
ನಿನಗಾಗಿಯಲ್ಲ ಈ ಜಗತ್ತು


ಕಡೆಯಾದಾಗೊಂದು
ಸ್ಪಷ್ಟವಾದ ಮಾತು
ಯಾವುದೇ ಕೊಲೆಗಡುಕನನ್ನು
ಎಂದಿಗೂ ಮನ್ನಿಸದಿರು
ಅವ ನಿನ್ನ ಗೆಳಯನಾಗಿರಲಿ,
ಧರ್ಮದ ಗುತ್ತಿಗೆದಾರನಾಗಿರಲಿ,
ಪ್ರಜಾಪ್ರಭುತ್ವದ ಸ್ವಯಂ ಘೋಷಿತ ಚೌಕಿದಾರನಾಗಿರಲಿ

 

ಚುಂಬಿಸಿ ಪಲ್ಲವಿಸು

ನನ್ನ ಚುಂಬಿಸಿ
ಮತ್ತೆ ಹೂವನ್ನಾಗಿಸು
ನನ್ನ ಚುಂಬಿಸಿ
ಮತ್ತೆ ಹಣ್ಣನ್ನಾಗಿಸು
ನನ್ನ ಚುಂಬಿಸಿ
ಮತ್ತೆ ಬೀಜವನ್ನಾಗಿಸು
ನನ್ನ ಚುಂಬಿಸಿ
ಮತ್ತೆ ಮರವನ್ನಾಗಿಸು
ಮತ್ತೆ ಪುನಃ ನನ್ನ ನೆರಳಿನಲ್ಲಿ ಕುಳಿತು ನರನರಗಳ ಒಗ್ಗೂಡಿಸು

ನನ್ನ ಚುಂಬಿಸಿ
ಮತ್ತೆ ಹಿಮಗಿರಿಯಾಗಿಸು
ನನ್ನ ಚುಂಬಿಸಿ
ಮತ್ತೆ ವಿಸ್ತಾರ ಸರೋವರವಾಗಿಸು
ನನ್ನ ಚುಂಬಿಸಿ
ಮತ್ತೆ ನದಿಯಾಗಿಸು
ಮತ್ತೆ ಪುನಃ ನನ್ನ ದಂಡೆಯ ಬಿಸಿಲಿನಲ್ಲಿ ನಿರ್ವಸ್ತ್ರನಾಗಿ ಜಳಕ ಮಾಡು

ನನ್ನ ಚುಂಬಿಸಿ
ಮತ್ತೆ ವಿಶಾಲ ಆಗಸವಾಗಿಸು
ನನ್ನ ಚುಂಬಿಸಿ
ಮತ್ತೆ ಜಲ ಭರಿತ ಮೇಘವಾಗಿಸು
ನನ್ನ ಚುಂಬಿಸಿ
ಮತ್ತೆ ತಂಗಾಳಿಯಾಗಿಸು
ಮತ್ತೆ ಪುನಃ ನನ್ನ ಅನಂತ ನೀಲಿಯನ್ನು ಕಾಮನಬಿಲ್ಲಿನಲ್ಲಿ ವಿಲೀನವಾಗಿಸು

‍ಲೇಖಕರು nalike

July 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಕಾಜೂರು ಸತೀಶ್

    ಹಿಂದುಳಿದವನು
    ———————

    ಎಲ್ಲರೂ ಏರುದನಿಯಲ್ಲಿ ಮಾತನಾಡುತ್ತಿದ್ದಾಗ
    ಇವನು ಸದಾ ಮೌನಿಯಾಗಿರುತ್ತಿದ್ದ

    ಎಲ್ಲರೂ ಸರಸರ ನಡೆಯುತ್ತಿದ್ದಾಗ
    ಇವನು ಸದಾ ಹಿಂದಿರುತ್ತಿದ್ದ

    ಎಲ್ಲರೂ ಗಬಗಬ ತಿನ್ನುವುದರಲ್ಲಿ ಮುಳುಗಿದ್ದಾಗ
    ಇವನು ಮಂಕಾಗಿ ಮೂಲೆಯಲ್ಲಿ ಕುಳಿತಿರುತ್ತಿದ್ದ

    ಎಲ್ಲರೂ ಮಲಗಿ ಗೊರಕೆ ಹೊಡೆಯುತ್ತಿದ್ದಾಗ
    ಇವನು ಕತ್ತಲ ಶೂನ್ಯದೊಳಗೆ ಕಣ್ಣುನೆಟ್ಟಿರುತ್ತಿದ್ದ

    ಆದರೂ
    ಗುಂಡಿನ ದಾಳಿ ನಡೆದಾಗ
    ಮೊದಲು ಸತ್ತುಬಿದ್ದದ್ದು ಇವನೇ ಆಗಿದ್ದ.
    *

    ಹಿಂದಿ ಮೂಲ- ಸರ್ವೇಶ್ವರ ದಯಾಳ್ ಸಕ್ಸೇನ
    ಕನ್ನಡಕ್ಕೆ- ಕಾಜೂರು ಸತೀಶ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: