1.
ನೀನು ನನಗೆ ಸತ್ಯದ ಪಾಠಗಳನ್ನು ಹೇಳಿದ್ದು ಹೀಗೆ:
ಕಾಗದದ ಮೇಲೆ ಬರೆಯುವುದ ನಿಲಿಸಿ
ಎದೆಮೇಲೆ ಬರೆಯಲು ಹಚ್ಚಿದೆ
ಆಗಲೇ ನನಗೆ ಜ್ಞಾನೋದಯವಾಗಿದ್ದು
ಎದೆ ಮೇಲೆ ಸತ್ಯವಲ್ಲದೆ ಬೇರೇನೂ ಬರೆಯಬಾರದು..
ಎದೆಗೆ ದೌರ್ಬಲ್ಯಗಳ ಕ್ಷಮಿಸುವ ಗುಣವಿದ್ದಮೇಲೆ
ಅಲ್ಲಿ ಸುಳ್ಳನ್ನೇಕೆ ಬರೆಯುವುದು?
2.
ನಿನ್ನಾಣೆ ಎಲ್ಲವನ್ನು ಹೇಳಿಬಿಡುತ್ತೇನೆ
ಮನ್ನಿಸು
ನಿನ್ನೆದುರಿಗಿದ್ದಾಗ ನಾನು ಬೋಳೆ ಬಸವನಾಗಿಲ್ಲ ನಿಜ
ನನ್ನೊಳಗಿನ ರಾಕ್ಷಸ ಪ್ರೀತಿ ಬೆಳೆದಷ್ಟೂ
ನಿನ್ನೆದುರಿನ ಈ ಆಕೃತಿ
ಕ್ಷಣಕ್ಷಣವೂ ಮನುಷ್ಯ ಮುಖಿಯಾಗುವುದು
3.
ಸಿಪ್ಪೆ ಬಿಡಿಸಿ ಹಣ್ಣ ತೊಳೆ ಬಾಯಿಗಿಟ್ಟುಕೊಂಡಹಾಗೆ
ಬಟ್ಟೆ ಬಿಡಿಸಿ ನಿನ್ನ ಕೂಡಿಕೊಳ್ಳುವುದು
ಬೆನ್ನ ಹಿಂದಿನ ಬೆಳಕನ್ನು ಇದಿರುಗೊಳ್ಳುವ ಹಾಗೆ
ಎದೆಗೆ ನಿನ್ನುಸಿರ ತಾಗಿಸಿಕೊಳ್ಳುವುದು
ಎಲ್ಲ ಮುಗಿದಾದ ಮೇಲೆ
ಶಿಲ್ಪಿಯ ಕೈಗೆ ಸಿಕ್ಕರಷ್ಟೇ ಕಲ್ಲು ಶಿಲ್ಪವಾಗುವುದು
ನಿಜವೆನಿಸಿತು.
4.
ಎಲ್ಲ ದೀಪಗಳ ಆರಿಸಿಯೇ ನೀನು
ಬೆತ್ತಲಾದ ಮೇಲೆ ಅರಿವಾಯಿತು ಕಣೆ
ಸೂರ್ಯ ಉದಯಿಸಿದ ಮೇಲೆ ದೀಪಗಳಿಗೆ
ಕೆಲಸವಿಲ್ಲ.
5.
ಕಾಲದ ಬಾವಿಯೊಳಗೆ ತೇಲುವ ಬದುಕಿನ ಶವವನ್ನು
ಕಂಗಳು ನೋಡುತ್ತ ನಿಂತಿವೆ
ಇನ್ನೆಲ್ಲಿಯ ತಳಮಳ ಇನ್ನೆಲ್ಲಿಯ ದುಃಖ
ಒದ್ದೆ ಎವೆಯೊಳಗಿರುವುದು
ಗಂಟೆ ಮೊಳಗಿದ ಮೇಲುಳಿಯುವ ಮೌನವಷ್ಟೇ.
]]>
ಏನಾಗಿದೆ ಈ ಸೂಲಿಬಾವಿಯವರಿಗೆ…ಸೂಫಿಯೋಬ್ಬನನ್ನು ಆವಾಹಿಸಿಕೊಂಡವರಂತೆ ಬರೆಯುತ್ತಿದ್ದಾರೆ.
ಬಸವರಾಜ್ ಸೂಳಿಬಾವಿ ತಮ್ಮ ಸೃಜನ ಶೀಲ ಭಾವಿಯಿಂದ ಮೊಗೆ ಮೊಗೆದು ಕೊಡುವ ಸಾಲುಗಳು, ಯಾಕೋ ಸೂಫಿಯೊಬ್ಬನ ಮಾತುಗಳಂತೆ ನಮ್ಮನ್ನು ಸಂತೈಸುತ್ತಿವೆ. ಇನ್ನಷ್ಟು ಕವಿತೆಗಳ ನಿರೀಕ್ಷೆಯಲ್ಲಿ.
tuuuuuuuuumba ishtavaythu
ಅನುಭಾವ ಮತ್ತು ಅನುರಾಗಗಳನ್ನು ಅನನ್ಯ ರೀತಿಯಲ್ಲಿ ಬೆರೆಸುವ ಬಸವರಾಜ್ ಅವರ ಕನ್ನಡದ ಮೇಲಿನ ಹಿಡಿತ ಕೂಡ ಗಂಭೀರ ಅಧ್ಯಯನಕ್ಕೆ ಯೋಗ್ಯವಾದುದು
ಗುಡಿಯೊಳಗೆ ಹಣತೆ ಹಚ್ಚಿಟ್ಟ ಹಾಗಿವೆ