ಕಾಜೂರು ಸತೀಶ್
ಎಷ್ಟು ನೆನಪುಗಳ ಭಾರ
ನಾನು ಧರಿಸಿದ ನಿನ್ನ ಅಂಗಿಯಲ್ಲಿ.
ಹೊರಡುವ ಮುನ್ನ
ಯಾವ ವಿಷಜಂತುಗಳಿರುವ ಕಾಡು ನುಗ್ಗಿದ್ದೆ ನೀನು –
ಅವುಗಳಿಗೆ ಸರಿದಾರಿ ತೋರಿಸಿ ಬರಲು.
ಅಂಗಿಗಂಟಿದ ಚುಂಗು ಎಷ್ಟು ಕಿತ್ತರೂ
ಅಲ್ಲೊಂದಿಲ್ಲೊಂದರಂತೆ ಚುಚ್ಚುತ್ತಾ
ನಿನ್ನ ನೆನಪಿಸಲೆಂಬಂತೆ ಉಳಿದುಕೊಂಡಿವೆ.

ನೀನು ಹೊರಟುಹೋದ ಮೇಲೂ
ನೀಲಿಗಟ್ಟಿದ ನಿನ್ನ ಮೈಗೆ ಅಂಟಿ
ಬಲೂನಾಗಲು ಹೊರಟ
ಉಣ್ಣಿಯ ನೆನಪು ನನಗೀಗ.
ನಿನ್ನಂಗಿಯ ಕ್ಯಾನ್ವಾಸಿನಲ್ಲಿ
ಗಾಯದ ಕೆಂಪುಗೆರೆ
ಗೇರು ಹಣ್ಣಿನ ಗುರುತು
ಬಾಳೆಯೆಲೆಯ ಕಲೆ
ಸೆಗಣಿ ಗೊಬ್ಬರದ ಕಂಪು.
ನೀನು ಗೀಚಿ ಜೇಬಲ್ಲಿಟ್ಟ ಪ್ರೇಮ ಕವಿತೆ
ಸುರಿದ ಹಾಳು ಮಳೆಯ ಕೃತಿಚೌರ್ಯಕ್ಕೆ ಸಿಲುಕಿದೆ
ಒದ್ದೆಯಾದ ಬಿಳಿಯ ಹಾಳೆ
ಅವಳ ಊದಿದ,ಬಿಳುಚಿಕೊಂಡ ಮುಖ
ಹೃದಯದ ಕೆಂಪು ಬಸಿದು
ಜೇಬಲ್ಲಿರಿಸಿದ ಗುಲಾಬಿಯದ್ದೂ ಅದೇ ಕಥೆ.
ಹಾದಿ-ಬೀದಿಯಲ್ಲಿ ನಿನ್ನ ಅಂಗಿ ತೊಟ್ಟು ನಡೆವಾಗ
ಹಿಂಬದಿಯಿಂದ ಯಾರೋ ನಿನ್ನ ಹೆಸರ ಕೂಗಿ ಕರೆವಾಗ
ಹಿಂತಿರುಗಿಯೂ ನೋಡದೆ ನಡೆದುಹೋಗುತ್ತೇನೆ
ನಿನ್ನ ಬದುಕಿಸುವ ಮಹದಾಸೆಯಿಂದ.
ವ್ಯಾಲಿಡಿಟಿ ಮುಗಿದ ನಿನ್ನ ಮೊಬೈಲ್ ಸಂಖ್ಯೆಯನ್ನು ರಿಚಾರ್ಜ್ ಮಾಡಲು ಹೊರಟಿದ್ದೇನೆ
ನಿನ್ನ ಬೇಟೆಯಾಡಿದ್ದಕ್ಕೆ
ನಮ್ಮ ಬೇಟೆಯಾಡುತ್ತಿರುವುದಕ್ಕೆ
ಕಾರಣ ಕೇಳಬೇಕು .
ಬೆಳಕಾಗುವವರೆಗೂ
ಕರೆಮಾಡಿ ಕೇಳುತ್ತಲೇ ಇರುತ್ತೇನೆ.






uttama kavite…
Arthagarbita sundara kavite. Thumbs ehtavaytu
olleya kavite..
Kajoor sathish ತುಂಬಾ ಚೆನ್ನಾಗಿದೆ ಕವಿತೆ..ನೀವು ಅನುವಾದಿಸಿದ ಕವಿತೆಗಳನ್ನು ಓದಿದ್ದೆ ತುಂಬಾ ಇಷ್ಟವಾಗಿತ್ತು especially ಅಲಂಕಾರ ಕವಿತೆ
ನಿನ್ನ ಹೆಸರ ಕೂಗಿ ಕರೆವಾಗ
ಹಿಂತಿರುಗಿಯೂ ನೋಡದೆ ನಡೆದುಹೋಗುತ್ತೇನೆ
ನಿನ್ನ ಬದುಕಿಸುವ ಮಹದಾಸೆಯಿಂದ.
—–
ಮೇಲಿನ ಸಾಲುಗಳು ಹಲವು ಕಾರಣಗಳಿಗಾಗಿ ಕಣ್ಣಂಚಿನಲ್ಲಿ ನೀರು ತಂದಿದ್ದು ಗೊತ್ತೇ ಆಗಲಿಲ್ಲ