ನಿಸಾರ್ ಸರ್: ಎಚ್ಚೆಸ್ವಿ ಕಂಡ ‘ನಿಸಾರೆಂಬ ಸೂಟಾಂಬರಧಾರಿ’

ಎಚ್.ಎಸ್.ವೆಂಕಟೇಶಮೂರ್ತಿ

೧೯೬೦. ನಾನು ಚಿತ್ರದುರ್ಗದಲ್ಲಿ ಪಿ.ಯು.ಸಿ ವಿದ್ಯಾರ್ಥಿ. ಆಗ ನನಗೆ ಬರೋಬ್ಬರಿ ಹದಿನಾರರ ಹರಯ. ಅದು ಆ ಬಂಡೆಗಾಡಿನ ಊರಲ್ಲೂ ಎಲ್ಲೆಲ್ಲೂ ಹಸಿರನ್ನೇ ಕಾಣುವ ವಯಸ್ಸು! ಚಿತ್ರದುರ್ಗದ ಕೋಟೆ ಎಂದರೆ ನನಗೆ ವಿಚಿತ್ರ ಆಕರ್ಷಣೆ! ಸಂಜೆ ಕಾಲೇಜಿಂದ ಬಂದವನೇ ಕೋಟೆಗೆ ಹೋಗುತ್ತಿದ್ದೆ. ಸೂರ್ಯಾಸ್ತಮವನ್ನು ಹಿಡಿಂಬೇಶ್ವರ ದೇವಾಲಯದ ಹೊರಜಗಲಿಯಲ್ಲೇ ಕುಳಿತು ನೋಡುತ್ತಿದ್ದೆ. ಕೂದಲು ಕೆದರುವಂತೆ ಒತ್ತೊತ್ತಿ ಬೀಸುತ್ತಿದ್ದ ಪಶ್ಚಿಮದ ಗಾಳಿ. ತಂಗಾಳಿಯ ಒತ್ತಡವನ್ನು ಹಣೆ ಹುಬ್ಬು ಗಲ್ಲದ ಮೇಲೆ ತೆಗೆದುಕೊಳ್ಳುವುದೇ ಒಂದು ಸೊಗಸಾದ ಅನುಭವ. ಸೂರ್ಯಾಸ್ತಮವಾದ ಮೇಲೆ ಏಕನಾಥೇಶ್ವರಿ ದೇವಾಲಯದ ಎದುರಿಗಿರುವ ಉಯ್ಯಾಲೆ ಕಂಬಗಳನ್ನು ಒಂದು ದಿನ ನೋಡುತ್ತಾ ನೋಡುತ್ತಾ ಒಂದು ಕವಿತೆ ಎದೆಯೊಳಗೆ ಹೆಜ್ಜೆಹಾಕತೊಡಗಿತು. ಉಯ್ಯಾಲೆ ಕಂಬವದು ಅಳಲಿದಾಗ ಎಂಬ ಕವಿತೆ ರೂಪಗೊಂಡದ್ದು ಹಾಗೆ. ಪದ್ಯ ಮುಗಿಸಿ ಗೆಳೆಯರಿಗೆ ತೋರಿಸಿದಾಗ ಅವರದನ್ನು ಬಹುವಾಗಿ ಮೆಚ್ಚಿದರು.

ಕೆ.ಮೂರ್ತಿ ಎಂಬ ದಪ್ಪಗಾಜಿನ ಕನ್ನಡಕದ ಗೆಳೆಯನೊಬ್ಬನಿದ್ದ ನನಗೆ! ರಾಜ್ಯಮಟ್ಟದ ಕವಿತಾಸ್ಪರ್ಧೆಯನ್ನು ಬೆಂಗಳೂರಿನ ಸಾಂಸ್ಕೃತಿಕ ಸಂಘ ಒಂದು ಏರ್ಪಡಿಸಿದೆ ಕಣಮ್ಮಾ…ಅದಕ್ಕೆ ಈ ಕವಿತೆ ಕಳಿಸೋಣ ಎಂದು ದುಂಬಾಲು ಬಿದ್ದ. ನನಗಂತೂ ಅದೊಂದು ಒಳ್ಳೆಯ ಕವಿತೆ ಎಂಬ ನಂಬಿಕೆ ಇರಲಿಲ್ಲ. ಗೆಳೆಯನೇ ನನ್ನಿಂದ ಕವಿತೆ ಕಿತ್ತುಕೊಂಡು ನೀಟ್ಕಾಪಿ ಮಾಡಿ ಅದನ್ನು ನಮ್ಮ ಕನ್ನಡ ಪ್ರಾಧ್ಯಾಪಕರ ಶಿಫಾರಸ್ಸಿನೊಂದಿಗೆ ಬೆಂಗಳೂರಿಗೆ ರವಾನಿಸಿಯೇಬಿಟ್ಟ. ನಾನು ವಿದ್ಯಾರ್ಥಿ ಎಂಬುದನ್ನು ಸಮರ್ಥಿಸಲು ಪ್ರಾಧ್ಯಾಪಕರ ಶಿಫಾರಸ್ಸಿನ ಅಗತ್ಯವಿತ್ತು. ಕವಿತೆಯನ್ನು ಸ್ಪರ್ಧೆಗೆ ಕಳಿಸಿದ್ದು ಕೂಡ ಮರೆತುಹೋಗಿರುವಾಗ ಒಂದುದಿನ ನಮ್ಮ ಕನ್ನಡ ಹೆಡ್ ಗುಂಡಣ್ಣ ನನಗೆ ಹೇಳಿಕಳುಹಿಸಿದರು. ಏನು ವಿಷಯ ಇರಬಹುದು ಎಂದು ಯೋಚಿಸುತ್ತಾ ನಾನು ಸ್ಟಾಫ್ ರೂಮಿಗೆ ಹೋದಾಗ, ಗುಂಡಣ್ಣನವರು, ನಿನ್ನ ಪದ್ಯಕ್ಕೆ ಬಹುಮಾನ ಬಂದಿದೆ ಕಾಣಯ್ಯ! ಪುತಿನ ತೀರ್ಪುಗಾರರಾಗಿದ್ದರಂತೆ. ಮುಂದಿನವಾರ ಕಾಲೇಜ್ ಕಾರ್ಯಕ್ರಮವೊಂದು ನಡೆಯುತ್ತಾ ಇದೆ. ಆ ಕಾರ್ಯಕ್ರಮದಲ್ಲಿ ಕವಿ ನಿಸಾರ್ ಅಹಮದರಿಂದ ನಿನಗೆ ಬಹುಮಾನ ಮತ್ತು ಸರ್ಟಿಫಿಕೇಟ್ ಕೊಡಿಸುತ್ತೇನೆ! ಎಂದರು.

ನಿಸಾರ್ ಅಹಮದರು ಹೊಸದಾಗಿ ನಮ್ಮ ಕಾಲೇಜಿಗೆ ಭೂವಿಜ್ಞಾನದ ಅಧ್ಯಾಪಕರಾಗಿ ಬಂದಿದ್ದರು. ಅವರ ಹೆಸರು ಆಗ ದುರ್ಗದಲ್ಲೆಲ್ಲಾ ಮನೆಮಾತಾಗಿತ್ತು. ಅದ್ಭುತ ವಾಗ್ಮಿ! ಒಳ್ಳೆಯ ಕವಿ! ಎಂದು ಸಾಹಿತ್ಯಾಸಕ್ತರು ಅವರ ಬಗ್ಗೆ ಮಾತಾಡಿಕೊಳ್ಳುತ್ತಿದ್ದ ಕಾಲವದು. ನಾನೂ ಅವರು ಕವಿತೆ ಓದುವ ಸಭೆಗೆ ಹೋಗಿ ಅವರ ಮಾತು ಮತ್ತು ಕವಿತಾವಾಚನ ಕೇಳಿಸಿಕೊಳ್ಳುತ್ತಿದ್ದೆ! ಅವರನ್ನು ಮಾತಾಡಿಸುವ ಧೈರ್ಯ ಇರಲಿಲ್ಲ! ಹಳ್ಳಿಯಿಂದ ಬಂದ ಹುಡುಗರಿಗೆ ಸಾಮಾನ್ಯವಾಗಿ ಇರುವ ಸಂಕೋಚ; ಹಿಂಜರಿಕೆ! ಕಾಲೇಜಿನ ಕಾರ್ಯಕ್ರಮದ ದಿನ ಬಂದೇಬಿಟ್ಟಿತು. ಸ್ಟೇಜ್ ಮೇಲೆ ಹೋಗಿ ಬಹುಮಾನ ಸ್ವೀಕರಿಸುವುದಕ್ಕೂ ನನಗೆ ಸಂಕೋಚ. ಗುಂಡಣ್ಣನವರು ನನ್ನ ಹೆಸರು ಹೇಳಿದಾಗ ಹೋಗೋ ಹೋಗೋ ಎಂದು ಗೆಳೆಯರು ನನ್ನನ್ನು ವೇದಿಕೆಯತ್ತ ನೂಕಿದರು! ನಿಸಾರ ಅಹಮದ್ ಯಥಾಪ್ರಕಾರ ಸೂಟಾಂಬರಧಾರಿಯಾಗಿದ್ದರು! ನನ್ನ ಕೈ ಕುಲುಕಿ” ಪದ್ಯ ಬರಿತಿಯೇನಪ್ಪಾ…ನಿನ್ನ ಪದ್ಯಗಳನ್ನು ನನಗೆ ತಂದು ತೋರಿಸು…” ಎಂದರು.

ಇದಾದ ವಾರದ ಮೇಲೆ ದುರ್ಬೀನ್ ಕಿಟ್ಟಿ ನನ್ನನ್ನು ನಿಸಾರಹಮದರ ಮನೆಗೆ ಬಲವಂತದಿಂದ ಕರೆದೊಯ್ದ. ನಿಸಾರ್ ಒಂದು ಬನಿಯನ್ , ಪಪ್ಪಳಿ ಪೈಜಾಮದಲ್ಲಿ ವರಾಂಡದಲ್ಲೇ ಟೀ ಹೀರುತ್ತಾ ಕೂತಿದ್ದರು. ಸ್ವಲ್ಪ ಮೊದಲು ಬಂದಿದ್ದರೆ ನಿಮಗೂ ಟೀಕೊಡುತ್ತಿದ್ದೆ-ಎಂದು ನಮ್ಮನ್ನು ಸ್ವಾಗತಿಸಿದರು. “ಸರ್! ಇವನು ಮೂರ್ತಿ ಅಂತ..ಪದ್ಯಗಿದ್ಯ ಬರೀತಾನೆ…ಮೊನ್ನೆ ಬಹುಮಾನ ಬಂತಲ್ಲ…ನೀವೇ ಬಹುಮಾನ ಕೊಟ್ಟಿರಿ…!”. ನಿಸಾರ್ ಅಹಮದರ ಮುಖ ಕೊಂಚ ಅರಳಿತು. ಓಹೋ ಅವನಾ ನೀನು? ಪದ್ಯ ತಂದಿದೀಯ…ಕೊಡು ಕೊಡು ನೋಡೋಣ ಎಂದರು ನಿಸಾರ ಟೀ ಕಪ್ ಕೆಳಗಿಡುತ್ತಾ. ಪದ್ಯಗಳನ್ನು ನಿಧಾನವಾಗಿ ಓದಿ…ಪರವಾಗಿಲ್ಲಯ್ಯ…ನಿನಗೆ ಬರೆಯೋ ಶಕ್ತಿಯಿದೆ…ಬರೀತಾ ಹೋಗು…ಬರದದ್ದು ತಂದು ನನಗೆ ತೋರಿಸು….ಎನ್ನುತ್ತಾ ನನ್ನ ಬೆನ್ನು ತಟ್ಟಿದರು! ಹೀಗೆ ಪ್ರಾರಂಭವಾಯಿತು ನನ್ನ ಮತ್ತು ಕೆ.ಎಸ್.ನಿಸಾರ್ ಅಹಮದರ ಸಂಬಂಧ. ವರ್ಷ ಮುಗಿಯುವುದರಲ್ಲಿ ಅದು ನಿಕಟವೂ ಆಯಿತು. ಕುವೆಂಪು ಬೇಂದ್ರೆ ಅಡಿಗ ನರಸಿಂಹಸ್ವಾಮಿ ಅವರ ಪದ್ಯಗಳನ್ನು ನಿಸಾರಹಮದರು ನನಗೆ ವಿವರಿಸಿದರು. ಆ ಕವಿತೆಗಳ ಸ್ವಾರಸ್ಯವೇನು ಹೇಳಿದರು. ಪದ್ಯ ಹ್ಯಾಗೆ ಓದಬೇಕು ಅಂತ ಅವನ್ನು ಓದಿ ತೋರಿಸಿದರು. ಲಯ ಛಂದಸ್ಸು ಎಂದರೆ ಏನು ವಿವರಿಸಿದರು. ಸೈನ್ಸ್ ಹುಡುಗನಿಗೆ ಭೂವಿಜ್ಞಾನದ ಮೇಷ್ಟ್ರು ಹೀಗೆ ಕಾವ್ಯದರ್ಶಿಯಾದದ್ದು!

***

ಪಿಯುಸಿ ಮುಗಿಸಿ ನಾನು ಮೆಕಾನಿಕಲ್ ಇಂಜಿನೀರಿಂಗ್ ಡಿಪ್ಲೊಮಾಕ್ಕಾಗಿ ಭದ್ರಾವತಿಯ ಎಸ್.ಜೆ.ಪಾಲಿಟೆಕ್ನಿಕ್ ಸೇರಿದೆ. ನನ್ನ ಬದುಕಿನ ದಿಕ್ಕು ದೆಸೆ ಬದಲಾಯಿತು! ಆದರೆ ಕಾವ್ಯದ ಹುಚ್ಚು ಮಾತ್ರ ನನ್ನನ್ನು ಸಂಪೂರ್ಣ ಆವರಿಸಿತ್ತು. ನಿಸಾರರೊಂದಿಗೆ ಪತ್ರವ್ಯವಹಾರವೂ ಮುಂದುವರೆದಿತ್ತು. ಅವರು ಸಹ್ಯಾದ್ರಿ ಕಾಲೇಜಲ್ಲಿ ಪ್ರಾಧ್ಯಾಪಕರಾಗಿದ್ದಾಗ ಯಾವುದೋ ಕೆಲಸಕ್ಕೆ ಶಿವಮೊಗ್ಗಕ್ಕೆ ಹೋಗಿದ್ದ ನಾನು ಹೇಗೋ ಪತ್ತೆ ಮಾಡಿ ಸಂಜೆ ಅವರ ಮನೆಗೆ ಹೋದೆ. ಒಂದು ಸಣ್ಣ ಬ್ರಹ್ಮಚಾರಿ ಮನೆಯಲ್ಲಿ ನಿಸಾರರ ವಾಸ್ತವ್ಯ. ಅವರ ಮನೆಯ ಪಕ್ಕದಲ್ಲಿ ದೊಡ್ಡ ವಾಟರ್ ಟ್ಯಾಂಕ್ ಇತ್ತು ಎಂಬುದಷ್ಟೇ ಈಗ ನೆನಪಿನಲ್ಲಿ ಉಳಿದಿದೆ. ನಿಸಾರ್ ತಾವೇ ಟೀಮಾಡಿ ಕೊಟ್ಟರು. ಏನ್ರೀ ಹ್ಯಾಗಿದ್ದೀರಿ ? ಎಂದು ಬಹುವಚನದಲ್ಲಿ ಮಾತಾಡಿಸಿದರು. ಏನಪ್ಪಾ ಮತ್ತೇನಾದರೂ ಬರೆದೆಯಾ ಎಂದು ಏಕವಚನಕ್ಕೆ ಬಂದರು. ಓಹೋ …ಪರವಾಗಿಲ್ಲಾ ಕಣ್ರೀ ಕವಿತೆಯ ಹುಚ್ಚು ಬಿಟ್ಟಿಲ್ಲ ನಿಮಗೆ ಎಂದು ಮತ್ತೆ ಬಹುವಚನ. ಈಗಲೂ ಹಾಗೆ. ನಿಸಾರ್ ಯಾವಾಗ ಏಕವಚನ ಬಳಸುತ್ತಾರೆ ಯಾವಾಗ ಬಹುವಚನ ಬಳಸುತ್ತಾರೆ ಹೇಳಲಿಕ್ಕೇ ಬರುವುದಿಲ್ಲ.

ಅವರು ಮಲಗುವ ದಿವಾನದ ಕೆಳಗೆ ಒಂದು ಸೂಟ್ಕೇಸ್ ಇತ್ತು. ನಿಸಾರ್ ತಮ್ಮ ಪಪ್ಪುಳಿ ಲುಂಗಿ ಮುದುರಿಕೊಂಡು ಕುಕ್ಕರುಗಾಲಲ್ಲಿ ಕೂತು ಆ ಸೂಟ್ಕೇಸ್ ಹೊರಗೆ ಎಳೆದರು. ಸಾವಧಾನ ಅದರ ಬಾಗಿಲು ತೆರೆದರು. ಅದರೊಳಗೆ ಜೋಡಿಸಿಟ್ಟಿದ್ದ ಹೊಸ ಪುಸ್ತಕಗಳಿದ್ದವು. ಅವು ಸಂಜೆ ಐದರ ಮಳೆ ಎಂಬ ಅವರ ಹೊಸಾದಾಗಿ ಪ್ರಕಟವಾಗಿದ್ದ ಕವಿತಾಸಂಗ್ರಹದ ಪ್ರತಿಗಳು. ಒಂದು ಪ್ರತಿ ಹೊರಗೆ ತೆಗೆದು ಮೆಲ್ಲಗೆ ಅದರ ನುಣ್ಣನೆ ಹೊದಿಕೆ ಸವರುತ್ತಾ: ನೋಡಯ್ಯಾ…ಇದನ್ನು ನಾನು ಎಲ್ಲರಿಗೂ ಕೊಡುವುದಿಲ್ಲ…ಪಬ್ಲಿಷರ್ ಕೆಲವೇ ಪ್ರತಿ ಕೊಟ್ಟಿದ್ದಾರೆ. ನಿನಗೆ ಒಂದು ಕೊಡುತಾ ಇದೀನಿ! ತಿಳಕೋ! ಅನ್ನುತ್ತಾ ತಮ್ಮ ಮುತ್ತಿನಂಥ ಕೈಬರಹದಲ್ಲಿ ಪ್ರವರ್ಧಮಾನ ಕವಿ ಮೂರ್ತಿಗೆ ಪ್ರೀತಿಯಿಂದ ಎಂದು ಬರೆದು ಪುಸ್ತಕ ಕೊಟ್ಟರು. ಕವರ್ ಕೊಡಲಾ? ಕವರಲ್ಲಿ ಇಟ್ಟುಕೊ ಎಂದು ನಿಸಾರ್ ಎಚ್ಚರಿಕೆ ಕೊಡುವುದನ್ನು ಮರೆಯಲಿಲ್ಲ!ಹಸುಗೂಸನ್ನು ಬೇರೆಯವರ ಕೈಗೆ ಕೊಡುವಾಗ ಬಾಣಂತಿ ವಹಿಸುವ ಕಾಳಜಿ ಅವರ ಮಾತಲ್ಲಿತ್ತು!

***

ನಾನು ಮಲ್ಲಾಡಿಹಳ್ಳಿಯಲ್ಲಿದ್ದಾಗ ಕೆಲವು ಪದ್ಯಗಳನ್ನು ಹಿಡಿದುಕೊಂಡು ಅವನ್ನು ಅಚ್ಚು ಮಾಡಿಸಬೇಕೆಂದು ಬೆಂಗಳೂರಿಗೆ ಹೋದೆ. ಈಶ್ವರಚಂದ್ರ ನಾನು ಬಾಲ್ಯದ ಗೆಳೆಯರು. ಪುಸ್ತಕ ಯಾವ ಪ್ರೆಸ್ಸಿಗೆ ಕೊಡುವುದೆಂದು ಇಬ್ಬರೂ ಚರ್ಚಿಸಿದೆವು. ನಿಸಾರರ ಮನಸು ಗಾಂಧಿಬಜಾರ್ ನನಗೆ  ತುಂಬ ಪ್ರಿಯವಾದ ಪುಸ್ತಕ. ಅದರಂತೆಯೇ ಅಚ್ಚಾಗಬೇಕೆಂಬ ನನ್ನ ಆಸೆಯನ್ನು ಗೆಳೆಯನಿಗೆ ಹೇಳಿದೆ. ಅದು ಅಚ್ಚಾಗಿದ್ದು ಅವಿನ್ಯೂ ರೋಡಿನ ಯಾವುದೋ ಪ್ರೆಸ್ಸಲ್ಲಿ. ಅದನ್ನು ಹುಡುಕಿಕೊಂಡು ಇಬ್ಬರೂ ಅಲೆದೂ ಅಲೆದೂ ಕೊನೆಗೆ ಸಣ್ಣ ಅಂಗಡಿಯ ಮಳಿಗೆಯಂತಿದ್ದ ಆ ಮುದ್ರಣಾಲಯವನ್ನು ಪತ್ತೆ ಹಚ್ಚಿದೆವು! ಆರುನೂರು ರೂಪಾಯಿ-ಒಂದು ಸಾವಿರ ಪ್ರತಿಗೆ. ಪ್ರೆಸ್ಸಿಗೆ ಹಣಕೊಟ್ಟು ನಾನು ಊರಿಗೆ ಹಿಂದಿರುಗಿದೆ. ಈಶ್ವರಚಂದ್ರನ ಮೇಲ್ವಿಚಾರಣೆಯಲ್ಲಿ ಪುಸ್ತಕ ಸಿದ್ಧವಾಯಿತು! ಮುಖ ಚಿತ್ರವನ್ನೂ ಅವನೇ ಬರೆದಿದ್ದ! ರೈಲ್ವೇ ಮೂಲಕ ಒಂದು ಸಾವಿರ ಪ್ರತಿಗಳ ಬಂಡಲ್ ಹೊಳಲಕೆರೆ ರೈಲ್ವೇ ಸ್ಟೇಷನ್ನಿಗೆ ಬಂದೇ ಬಿಟ್ಟಿತು. ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಷಡಕ್ಷರಪ್ಪ ಎಂಬ ಗೆಳೆಯರನ್ನು ಸ್ಟೇಷನ್ ಗೆ ಕಳಿಸಿ ಬಂಡಲ್ ತರಿಸಿಕೊಂಡೆ! ಬಂಡಲ್ ಬಿಚ್ಚಿ ನೋಡಿ ರೋಮಾಂಚಿತನಾದೆ. ಹೊಸ ಪುಸ್ತಕದ ಗಂಧ ಮತ್ತೇರಿಸುವಂತಿತ್ತು. ಅಲ್ಲಿ ಇಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಪುಸ್ತಕವನ್ನು ಇಟ್ಟು ನೋಡಿ ನೋಡಿ ಸಂತೋಷಪಟ್ಟೆ. ನಿಸಾರರಿಗೆ ಮಾರನೆಯ ದಿವಸವೇ ಒಂದು ಗೌರವ ಪ್ರತಿಕಳಿಸಿಕೊಟ್ಟೆ! ಒಂದೇ ವಾರದಲ್ಲಿ ಕವಿಗಳ ಉತ್ತರ ಬಂತು.ಸಹಜ ಕವಿ ಮಾತ್ರ ಇಂಥ ಸಾಲುಗಳನ್ನು ಬರೆಯಲು ಸಾಧ್ಯ ಎಂದು ಬಾಯ್ತುಂಬ ಪ್ರಶಂಸಿದ್ದರು.ಇದು ಸರಿಯಾಗಿ ಐವತ್ತು ವರ್ಷಗಳ ಹಿಂದಿನ ಮಾತು! ನಿಸಾರ್ ಅಹಮದರಿಗೆ ಈವತ್ತೂ ನನ್ನ ಬಗ್ಗೆ ಅದೇ ಅಭಿಮಾನ. ಅವರಿಗೆ ಎಲ್ಲೇ ಸನ್ಮಾನವಾದರೂ ನಾನು ಅವರ ಬಗ್ಗೆ ಮಾತಾಡಬೇಕು. ಮೈಸೂರಿಗೆ ನಾನೂ ನರಹಳ್ಳಿ ಹೋಗಿ ನಿಸಾರ್ ಅಹಮದರ ಸನ್ಮಾನ ಸಂದರ್ಭದಲ್ಲಿ ಮಾತಾಡಿದ್ದು ಇತ್ತೀಚೆಗೆ! ಸನ್ಮಾನ ಕಾರ್ಯಕ್ರಮ ಆದಮೇಲೆ ಸುತ್ತೂರಿಗೆ ನಮ್ಮ ಪ್ರಯಾಣ. ರಾತ್ರಿ ಮಠದಲ್ಲಿ ಪ್ರಸಾದ ಸ್ವೀಕಾರ. ಸುತ್ತೂರಿಂದ ಬಂದಮೇಲೆ ನಿಸಾರ್ ನನಗೆ ಫೋನ್ ಮಾಡಿದರು. ಸುತ್ತೂರಲ್ಲಿ ಹುರುಳೀ ಕಟ್ಟು ಅದೆಷ್ಟು ಅದ್ಭುತವಾಗಿತ್ತು! ಮೈಸೂರಲ್ಲಿ ನೀವಿಬ್ಬರೂ ನನ್ನ ಬಗ್ಗೆ ಮಾತಾಡಿದ್ದು ಅದೆಷ್ಟು ಸೊಗಸಾಗಿತ್ತು! ಎಂದು ಹೃದಯಬಿಚ್ಚಿ ಮಾತಾಡಿದರು.

ಪುತಿನ ಟ್ರಸ್ಟಿನಿಂದ ಕಳೆದ ವರ್ಷ ನಿಸಾರ್ ಅಹಮದರಿಗೆ ಜೀವಮಾನ ಸಾಧನೆಗಾಗಿ ಪುತಿನ ಪುರಸ್ಕಾರ ದೊರೆತಾಗ ಪುತಿನ ಅವರನ್ನು ಅವರ ಹಿರಿಮೆಯನ್ನು ಎದೆತುಂಬ ಹೊಗಳಿ ಭಾವುಕರಾದರು. ಅವರ ಕಣ್ಣಲ್ಲಿ ಕಂಬನಿ ತುಂಬಿಕೊಂಡಿತ್ತು.  ಕಾರ್ಯಕ್ರಮ ಮುಗಿದ ಮೇಲೆ ಒಟ್ಟಿಗೇ ಊಟ ಮಾಡೋಣ ಬನ್ನಿ ಎಂದೆ. ನನ್ನೊಂದಿಗೆ ನನ್ನ ಸ್ನೇಹಿತರೂ ಇದ್ದರೆ ಎಂದು ಹಿಂಜರಿದರು. ಸರ್! ಇದು ಟ್ರಸ್ಟ್ ನೀಡುವ ಔತಣವಲ್ಲ. ನಿಮ್ಮ ಮೂರ್ತಿ ನೀಡುವ ಔತಣ ಎಂದೆ. ಪುರಸ್ಕಾರದಷ್ಟೇ ನಿನ್ನ ಈ ಅಭಿಮಾನವೂ ನನಗೆ ಮಹತ್ವದ್ದಪ್ಪ! ಎಂದು ನಿಸಾರ್ ಮತ್ತೆ ಹನಿಗಣ್ಣಾದರು. ಮಗುವಿನ ಮುಗ್ಧತೆ, ಮಗುವಿನ ಹಠಮಾರಿತನ, ಮಗುವಿನ ಚೇಷ್ಟೆ, ಮಗುವಿನ ಮನಸುಖರಾಯತ್ವ! ನಿಸಾರ್ ಅಹಮದರು ಹೇಳಿದರು: ನೀನು ಎಲ್ಲಿ ಕೇಳಿದರೆ ಅಲ್ಲಿ ನಿನಗೆ ಊಟಹಾಕಿಸುತ್ತೇನೆ. ನಿನ್ನ ಜೊತೆಗೆ ಆ ಲಕ್ಷ್ಮಣನಿಗೂ! ಎನ್ನುತ್ತಾ ನಿಸಾರಹಮದ್ ತೆರೆದಾಹ್ವಾನ ನೀಡಿದರು. ಇಂಥ ಔತಣ ಎಷ್ಟೊಬಾರಿ ಅವರಿಂದ ನಮಗೆ ಸಿಕ್ಕಿದೆ. ಇದು ಅಂಥದೇ ಮತ್ತೊಂದು ಆಹ್ವಾನ! ಸಹನೋ ಭವತು, ಸಹನೌ  ಭುನಕ್ತು ಎಂಬ ಮಾತನ್ನೀಗ ನನ್ನೊಳಗೆ ನಾನೇ ಗುನುಗುನಿಸಿದೆ.

***

ಈಗ ನಿಸಾರ್ ಅಹಮದರ ಆರೋಗ್ಯ ಮೊದಲಿನಷ್ಟು ಚೆನ್ನಾಗಿಲ್ಲ. ಆದರೂ ನಾನು ಆಹ್ವಾನಿಸಿದ ನನ್ನ ಯಾವ ಕಾರ್ಯಕ್ರಮಕ್ಕೂ ಬರಲಾರೆ ಎಂದು ಅವರು ಹೇಳಿಲ್ಲ. ಮೊದಲು ಸ್ವಲ್ಪ ನುಸುನುಸು ಮಾಡುತ್ತಾರೆ. ಕೊನೆಗೆ ನೀನು ಕರೆದಾಗ ಹ್ಯಾಗೆ ಬರೋದಿಲ್ಲ ಅನ್ನಲಿ. ಬರ್ತೀನಿ. ನನ್ನ ಬೇಗ ಕಳಿಸಿಕೊಡಬೇಕು. ಸರಿಯಾ… ನಾನು ನಗುತ್ತೇನೆ! ನೀವು ಎಷ್ಟು ಬೇಗ ಭಾಷಣ ಮುಗಿಸುವಿರೋ ಅಷ್ಟು ಬೇಗ ನಿಮಗೆ ಬಿಡುಗಡೆ! ಸಭೆಯಲ್ಲಿ ನಿಸಾರರಿಗೆ ಪ್ರಿಯರಾದ ಎಷ್ಟೊ ಜನ ಇರುತ್ತಾರೆ. ಕಂಡಕಂಡವರ ಹೆಸರೆತ್ತಿ ಅವರ ಬಗ್ಗೆ ನಿಸಾರ್ ತಮ್ಮ ಅಭಿಮಾನದ ಮಾತು ಆಡೇ ಆಡುತ್ತಾರೆ. ಹಾಗಾಗಿ ಅವರ ಮಾತು ಬೇಗ ಮುಗಿಯ ತಕ್ಕದ್ದಲ್ಲ ಎಂದು ನನಗೆ ಗೊತ್ತು! ಅವರು ಹೆಸರು ಹೇಳಿ ಪ್ರಸ್ತಾಪಿಸಿದ ವ್ಯಕ್ತಿಯನ್ನು ಸ್ವಲ್ಪ ಮೇಲೆದ್ದು ನಿಂತು ಸಭೆಗೆ ನಿಮ್ಮ ಮುಖ ತೋರಿಸಿರಿ ಎಂಬ ಪ್ರೀತಿಯ ತಾಖೀತು ಬೇರೆ! ಮೇಷ್ಟ್ರು ಈವತ್ತೂ ಹಾಜರಿ ತೆಗೆದುಕೊಳ್ಳೋದನ್ನು ಬಿಟ್ಟಿಲ್ಲ!-ಎಂದು ನಾವು ಚೇಷ್ಟೆ ಮಾಡುತ್ತೇವೆ.

ನಿಸಾರ್ ಇರೋದೇ ಹಾಗೆ. ಅವರಿಗೆ ಜನಬೇಕು. ಜನಕ್ಕೆ ನಿಸಾರಹಮದ್ ಬೇಕು. ಅವರು ಮಾತು ಮುಗಿಸಿದಾಗ ಎಲ್ಲರಿಗೂ ಸಮಾಧಾನ. ಅವರೊಂದಿಗೆ ಖಾಸಗಿ ಮಾತು ಕಥೆಯಲ್ಲಿ ತೊಡಗುವುದು ಇನ್ನೂ ಸೊಗಸು. ಅವರಿಗೆ ದೇಶಕಾಲದ ಸಮೇತ ದಶಕಗಳ ಘಟನೆಗಳೆಲ್ಲಾ ನೆನಪಿನಲ್ಲಿರುತ್ತವೆ. ಬೋಧಿಯ ನಂತರ ಬುದ್ಧನಿಗೆ ಜನ್ಮಜನ್ಮಾಂತರದ ಸ್ಮರಣೆಗಳು ಸುರುಳಿಬಿಚ್ಚಿದ ಹಾಗೆ ಸುರುಳಿಬಿಚ್ಚುತ್ತವೆ! ಅವರ ಸ್ಮರಣೆ ಯಾವತ್ತೂ ಅವರಿಗೆ ಕೈಕೊಡುವುದಿಲ್ಲ! ರಸವತ್ತಾಗಿ ಪ್ರಸಂಗಗಳನ್ನು ಕಣ್ಮುಂದೇ ನಡೆದಂತೇ ವರ್ಣಿಸುತ್ತಾರೆ. ಆಯಾ ಪಾತ್ರಧಾರಿಗಳ ಆಂಗಿಕ ಮತ್ತು ಮಾತಿನ ಶೈಲಿಗಳ ಸಮೇತ! ಜೊತೆಗೆ ಮನಸ್ಸಿಗೆ ಚುಚ್ಚದ ತಿಳಿಯಾದ ಹಾಸ್ಯ! ತದ್ವತ್ತಾಗಿ ಮಾಸ್ತಿಯೇ ಅಡಿಗರೇ ನರಸಿಂಹಸ್ವಾಮಿಯವರೇ ಎದುರಿಗೆ ಬಂದು ಮಾತಾಡಿದಂಥ ಅನುಕರಣೆಯ ಅನುಸಂಧಾನ.

“ಆಲ್ವೇಸ್ ಕೋಟ್ ನಿಸಾರ ಅಹಮದ್! ಅನ್ಕೋಟ್ ಇಲ್ಲವೇ ಇಲ್ಲ!”ಎಂದು ನಾನು ಆಗಾಗ ಸಲುಗೆಯಿಂದ ಅವರನ್ನು ಹಾಸ್ಯಮಾಡುವುದುಂಟು! ಅವರು ಇಂಥ ಹಾಸ್ಯವನ್ನು ತಾವೇ ಎಂಜಾಯ್ ಮಾಡಿ ಗಟ್ಟಿಯಾಗಿ ನಗುತ್ತಾರೆ.

ಎಷ್ಟೊಂದು ಮುಗಿಲು ಎಂಬ ಸಾನೆಟ್ ಸಂಗ್ರಹವನ್ನು ನೋಡಿ ನಿಸಾರ ನನಗೆ ಬರೆದ ಪತ್ರ ನನ್ನ ಬಹುದೊಡ್ಡ ಸಂಪಾದನೆ! “ಉಯ್ಯಾಲೆ, ಕೃತ್ತಿಕೆ, ಮಲಾರಗಳ ಸಾಲಿಗೆ ಎಷ್ಟೊಂದು ಮುಗಿಲು ನಿಲ್ಲುವ ಅರ್ಹತೆ ಗಳಿಸಿಕೊಂಡಿದೆ” ಎಂಬ ಅವರ ಅಭಿಮಾನದ ಮಾತು  ವಾಸ್ತವವೂ ಆಗಿ ಪರಿಣಮಿಸಲಿ ಎಂದು ಏಕಾಂತದಲ್ಲಿ ನಾನು ಮತ್ತೆ ಮತ್ತೆ ಹಲುಬಿದ್ದುಂಟು. ಅದೃಷ್ಟವೇ! ಅಸ್ತು ಎನ್ನುವ ಅದೃಶ್ಯ ದೇವತೆಗಳ ಕಿವಿಗೆ ಈ ಮಾತುಗಳು ಬೀಳಲಿ!-ಎಂಬುದು ಯಾವತ್ತೂ ನನ್ನ ಮನದಾಳದ ಹಾರೈಕೆ.

‍ಲೇಖಕರು avadhi

May 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Jayalaxmi Patil

    ಸರ್, ನಿಮ್ಮೀ ಬರಹದಿಂದ ನಿಸಾರ್ ಅಹಮದ್ ಸರ್ ಸರಳತೆ ಇನ್ನಷ್ಟು ಸ್ಪಷ್ಟವಾಯಿತು.

    ಪ್ರತಿಕ್ರಿಯೆ
  2. Vasundhara k m

    ಅನನ್ಯ ಅನುಭವಗಳು… ಕನ್ನಡ ಸಾರಸ್ವತ ಲೋಕದ ಅಮೂಲ್ಯ ಸಂಗ್ರಹ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: