ಸಂತೆಬೆನ್ನೂರು ಫೈಜ್ನಟ್ರಾಜ್
ನಾನು ನಾನಲ್ಲ
ಬರಿ ಹೆಣ ಸತ್ತು ಎಷ್ಟೋ ದಿನಗಳಾದವು
ನಾರುತ್ತಿಲ್ಲ; ಅತ್ತರಿನ ಮಂಪರಿದೆ ಅಷ್ಟೆ..ಕಾಗದದ ಹೂಗೆ
ಅದೇನೋ ಸುರಿದಂಗೆ!
ಮಾತುಗಳ ಚೂರಿ ಇಡೀ ದೇಹ ಘಾಸಿ
ಜಾತಿ-ಕತ್ತಿ
ಕರುಳ ಬಗೆದಿದ್ದು ಎಷ್ಟು ಸಲವೋ….
ಒಳ ಮಾತು ಹೊರ ಹಾಕಿ
ನಮ್ಮವರಿಂದಲೇ’ಹೊರಗಾಗಿದ್ದೇನೆ’
-ಲೆಕ್ಕವಿಲ್ಲದಷ್ಟು ಸಾರಿ!
ಮಾನವೀಯತೆಯ ಗುರಾಣಿ ಎಂದಿಗೂ ‘ಅಡ್ಡ’ ಬರಲಿಲ್ಲ
ಬಂದರೂ ಅಕ್ರಮಣ
ಅತ್ತಿಂದಿತ್ತ ನಡೆದೇ ಇತ್ತಲ್ಲ!?
ಜಾತಿಗೆ ಬಸಿದ ರಕ್ತ
ನೀತಿಗೆ ಹೆಪ್ಪುಗಟ್ಟಿತ್ತು.
‘ಖಂಡವಿದೆಕೋ,ಮಾಂಸವಿದೆಕೋ…ಎಂದ ತಪ್ಪಿಗೆ
ಬಕ್ರೀದ್-ನ ಕುರಿ ನಾನಾದೆ!
ನಿಮ್ಮ ಚೂರಿ,ಕತ್ತಿ ನಿಮಗೆ ಮುಬಾರಕ್!
ಜಾನೆ ದೋ ಸಾಬ್
ನಾನು ಹೆಣ
ನಿಮ್ಮ ನದಿಗೆ ತೊರೆಯಾಗದ ನಾನು
ಸಮುದ್ರವಾಗಲಾರೆ
ಪ್ರೀತಿ ಹೆಗಲು ಸಿಗದೆ
ಸುಮ್ಮನಲೆವ ಹೆಣಕೆ ನಿಮ್ಮ ಧೋಖಾ ದರ್ದಿನ ಮಾತು ಬೇಡ!
ಮಸೀದಿಗೆ ಬಾಗದ ತಲೆಯ ಕಡಿದ
ಉದಾಹರಣೆ ಇಲ್ಲ;
ನಾಳೆಯ ಉದಯಕೆ ಇಂದು ಹುಂಜ ತಂದಿಡುವ ನಿಮ್ಮ
ಮತಲಬೀ ಮಸಲತ್ತಿಗೆ ಹೆಣದ ಧಿಕ್ಕಾರವಿದೆ
ನಾನಾಗಲು ನನ್ನ ಬಿಡದೆ
ನಿಮ್ಮ ಧರ್ಮದ ಬ್ರಷ್ಷಿನಿಂದ ನಿಮ್ಮಂತಾಗಿಸಲು
ಹೆಣಗುವುದ ಕಂಡು ಹೆಣ ನಗುತ್ತಿದೆ
ನನ್ನೊಳಗಿನ ನಾನು ಸತ್ತು
ನಿಮ್ಮ ಮುಂದೆ ನಗುವ ನವರಂಗಿ ಬೊಂಬೆ ಹೆಣ
ನಡೆದಾಡುತಿದೆ
ನೆನಪಿರಲಿ ಒಳಗೆ ಕರುಳಿಲ್ಲ,ರಕ್ತ-ಮಾಂಸವಿಲ್ಲ
ಛೋಟಾ ಹೃದಯವಿದೆ
ಅದರ ಬಡಿತ
ಮಾನವ-ಮಾನವನಾಗೋ ಸಣ್ಣ ಸದ್ದು;
ನಿಮಗೆ ನಾಳೆ ನಗಾರಿ…
ನಾನು ನಾನಲ್ಲ
ಬರಿ ಹೆಣ ಸತ್ತು ಎಷ್ಟೋ ದಿನಗಳಾದವು!
nice..saab!
tumba arthagarbitavagide…shoshanegalu hegella..aguttave…artha kedisikonda dharmagalindaaguva anaahuthavidu…..congrats…
Samakaalina kavite geleya.