ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಜಕ್ಕೂ ಈತ ನಿಜ ಮಣ್ಣಿನ ಅವಧೂತ

ಧ್ವನಿ ಮತ್ತು ಬೆಳಕು ಹಾಗೂ ಸಂಗೀತವೆ ಇಲ್ಲಿ ಹೈಲೆಟ್

ಶಿವು ಮೋರಿಗೇರಿ

ಥ್ಯಾಂಕ್ಯು ವಿಶುಕುಮಾರ್ ಸರ್,

ಎಲ್ಲಾ ಅವಕಾಶಗಳಿದ್ದೂ ಒಂದು ಕಾರ್ಯಕ್ರಮವನ್ನು ನೋಡಲು ಒಂದು ತಿಂಗಳವರೆಗೂ ಕಾದಿರೋದು ನನ್ನ ಜೀವನದಲ್ಲಿ ಯಾವುದಾದ್ರೂ ಇದ್ರೆ ಅದು ‘ಭಾರತ ಭಾಗ್ಯ ವಿಧಾತ’. ಈ ಕಾರ್ಯಕ್ರಮ ರಾಜ್ಯದ ಮುವತ್ತೂ ಜಿಲ್ಲೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ ಅನ್ನೋ ಅಪ್ ಡೇಟ್ ಸಿಕ್ಕಿದ್ದರಿಂದಲೂ, ಸಮಾರೋಪ ಪ್ರದರ್ಶನ ಸಂಡೇ ಇದ್ದಿದ್ದರಿಂದಲೂ ನನ್ನೊಳಗೇ ವಿಪರೀತ ಕುತೂಹಲವಿದ್ದಿದ್ದರಿಂದಲೂ ಈ ಕಾರ್ಯಕ್ರಮವನ್ನು ನೆನ್ನೆ ಮಿಸ್ ಮಾಡ್ಕೊಳ್ಳೋಕ್ಕೆ ಚಾನ್ಸೇ ಇರಲಿಲ್ಲ.

ಸಂಜೆ ಬಸವೇಶ್ವರ ನಗರದ ಡಾ. ಬಿ.ಆರ್ ಅಂಬೇಡ್ಕರ್ ಗ್ರೌಂಡ್ ನಲ್ಲಿ ನಿಲ್ಲುವಷ್ಟರಲ್ಲಿ ಸಾವಿರಾರು ಪ್ರೇಕ್ಷಕರು ಬಂದಾಗಿತ್ತು. ನಮ್ಮ ಜನಾರ್ಧನ ಕೆಸರಗದ್ದೆ ಯವರ ತಂಡದಿಂದ ಗಾಯನ ನಡೆದಿತ್ತು. ಮುಗಿಲಲ್ಲಿ ಡ್ರೋನ್ ಹಾರಾಡ್ತಾ ಹದ್ದಿನ ಕಣ್ಣಿಟ್ಟಿತ್ತು. ಇಡೀ ಕಾರ್ಯಕ್ರಮದ ಒಂದೇ ಒಂದು ಕ್ಷಣವನ್ನೂ ಮಿಸ್ ಮಾಡ್ಕೊಬಾರ್ದು ಅಂದ್ಕೊಂಡು ಒಬ್ಬನೇ ಹಿಂದೆ ಹೋಗಿ ಕೂತಿದ್ದೆ. ಒಂದೆರಡು ಗೀತೆಗಳ ಬಳಿಕ ವೇದಿಕೆಯ ಮೇಲ್ಬಾಗದಲ್ಲಿದ್ದ ಲೇಸರ್ ಸ್ಕ್ರೀನ್ ನಲ್ಲಿ ರಾಷ್ಟ್ರಕವಿ ಕುವೆಂಪು ಅವರ ಭಾರಿಸು ಕನ್ನಡ ಡಿಂಡಿಮವ ಗೀತೆ ಪ್ರಸಾರವಾಗ್ತಾ ಇತ್ತು ಆಗ ಬಂದ್ರು ಸಿಎಂ.

ಕಾರ್ಯಕ್ರಮ ಉದ್ಘಾಟನೆಯಾದ ಬಳಿಕ ಮುಂದೆ ನಡೆದದ್ದು ಅದ್ಭುತ ಲೋಕದ ಅನಾವರಣ. ವಾಟ್ ಎ ಇಂಟ್ರಡಕ್ಷನ್ ದಟ್ ವಾಜ್ ಸೂಪರ್. ಅದ್ರಲ್ಲೂ ಈ ಟೈಟಲ್ ಸಾಂಗ್ ಮಾಡೋ ಮೋಡಿಗೆ ಫಿದಾ ಆಗ್ದೋರಿಲ್ಲಬಿಡಿ. ಹೇ ಮಮ್ತಲ್ಲಯ್ಯಾ…. ಅಂತ ಶುರುವಾಗೋ ಕಾರ್ಯಕ್ರಮ ಕಾರ್ಯಕ್ರಮ ತನ್ನದೇ ಲೋಕಕ್ಕೆ ಪ್ರತೀ ಪ್ರೇಕ್ಷಕನನ್ನು ಕರೆಯ್ದೊಯ್ಯುತ್ತೆ. ಪ್ರೇಕ್ಷಕನಲ್ಲಿ ಕುತೂಹಲವನ್ನು ಕಾಯ್ದುಕೊಳ್ಳವಲ್ಲಿ ಪ್ರತಿ ಜನಪದ ಕಲೆಯೂ ಗೆಲುವು ಕಂಡಿವೆ. ವೇದಿಕೆ ಮೇಲಿನ ಲೇಸರ್ ಸ್ಕ್ರೀನ್ ನಲ್ಲಿ  ಆಕ್ಸ್ ಫರ್ಡ್ ಯುನಿವರ್ಸಿಟಿಯ ಸಿಬ್ಬಂದಿ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಹೆಮ್ಮೆಯಿಂದ ಹೊಗಳುತ್ತಿದ್ದಾಗ ಇಡೀ ಪ್ರೇಕ್ಷಕ ಗಣ ಚಪ್ಪಾಳೆ ಬಾರಿಸಿದ್ದು ಮೈಝುಂ ಅನ್ನುವಂತಿತ್ತು.

ನಾನು ಮರೆತೇ ಹೋಗಿದ್ದ ಗೀಗೀ ಪದ, ಒಂದೆರಡು ಬಾರಿ ನೋಡಿದ್ದ  ಭೂತದ ಕೋಲು, ಮಂಟೆಸ್ವಾಮಿ ಪದಗಳು ಎಲ್ಲವೂ ಆ ಸಂವಿಧಾನ ಶಿಲ್ಪಿಯ ಜೀವನಗಾಥೆಯನ್ನು ಮೆಲುಕುತ್ತಾ ಹೋಗ್ತವೆ. ಡಾ. ಬಿ.ಆರ್ ಅಂಬೇಡ್ಕರ್ ಅಂದ್ರೆ ಬರೀ ಸಂವಿಧಾನ ಶಿಲ್ಪಿ, ಒಂದು ಮೊಹರ್ ಜನನಾಯಕ ಅಂತಷ್ಟೇ ಮಾತ್ರ ತಿಳ್ಕಂಡೋರಿಗೆ ಈ ಕಾರ್ಯಕ್ರಮವನ್ನು ನೋಡಲಿಕ್ಕೆ ಹೇಳಿ ನಿಜಕ್ಕೂ ಆತ ಭಾರತ ಭಾಗ್ಯ ವಿಧಾತ ಅನ್ನೋದು ಖಾತ್ರಿಯಾಗುತ್ತೆ.

ಪಕ್ಕಾ ಮಾಸ್ ಪ್ರೇಕ್ಷಕನಿಂದಲೂ ಶಿಳ್ಳೆ ಗಿಟ್ಟಿಸಿಕೊಳ್ಳುವ ಗಟ್ಟಿತನದ ಈ ಪ್ರದರ್ಶನದ ಪ್ರತಿ ಕಲಾವಿದರ ಕಾಲುಗಳಲ್ಲೂ ಪಾದರಸ ತುಂಬಿದವರಾರೋ. ಜಿಂಕೆ ಥರಾ ಕುಣಿಯೋದನ್ನ ನೋಡಿದ್ರೆ ಖುಷಿಯಾಗುತ್ತೆ. ಅದೆಂಥಹ ಲವಲವಿಕೆಯ ನಟನೆ ಅಂದ್ರೆ ಎಂಥಹವರಿಗೂ ಇಷ್ಟವಾಗಿಬಿಡುತ್ತೆ. ಅದ್ರಲ್ಲೂ ಧ್ವನಿ ಮತ್ತು ಬೆಳಕು ಹಾಗೂ ಸಂಗೀತವೆ ಇಲ್ಲಿ ಹೈಲೆಟ್. ಅವುಗಳೇ ಇಲ್ಲಿ ಕ್ಯಾಪ್ಟನ್. ಮತ್ತೆ ಮತ್ತೆ ನೋಡಬೇಕು, ಕೇಳಬೇಕು ಅನ್ನಿಸೋದು ಮಾತ್ರ ಕಾರ್ಯಕ್ರಮದ ಟೈಟಲ್ ಸಾಂಗ್.

ಇಡೀ ಕಾರ್ಯಕ್ರಮದಲ್ಲೆಲ್ಲೂ ಇದು ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮ ಅನ್ನಿಸದೇ ಇರುವಂತೆ ಕಾರ್ಯಕ್ರಮವನ್ನು ರೂಪಿಸಿದ್ದೀರಲ್ಲಾ  ವಿಶುಕುಮಾರ್ ಸರ್, ಅದ್ಕೆ ನಿಮಗೆ ಥ್ಯಾಂಕ್ಸ್ ಹೇಳಿದ್ದು. ಒಂದು ಬಾಕ್ಸ್ ಆಫೀಸ್ ಉಡೀಸ್ ಮಾಡಿದ ಬ್ಲಾಕ್ ಬಾಸ್ಟರ್ ಮೂವಿ ನೋಡಿದಂತಾಗುತ್ತೆ ಇಡೀ ಕಾರ್ಯಕ್ರಮವನ್ನು ಕಣ್ತುಂಬಿಕೊಂಡಾಗ. ನನ್ನ ಮಟ್ಟಿಗೆ ಹೇಳೋದಾದ್ರೆ ಈ ಕಾರ್ಯಕ್ರಮ ಮನೆ ಮನೆಗಳನ್ನು ತಲುಪಬೇಕು. ಪ್ರತಿ ಹಳ್ಳಿಯ ಪ್ರತಿ ಪ್ರಾಥಮಿಕ ಶಾಲೆಗಳಲ್ಲಿ ಪ್ರದರ್ಶನ ಕಾಣಬೇಕು. ಪ್ರತಿ ಮನ ಮನಗಳಲ್ಲಿ ಬೆಳಗಬೇಕು. ಈ ಹೊತ್ತಿನ ಅವಸರ ಮತ್ತು ಅಗತ್ಯ.

ಇನ್ನು ಈ ಪ್ರದರ್ಶನದ ತಂಡದಲ್ಲಿ ಒಟ್ಟು ಎಂಭತ್ತು ಕಲಾವಿದರಿದ್ದಾರೆ. ಅದು ನಮ್ಮ ರಾಜ್ಯದ ಮುವತ್ತು ಜಿಲ್ಲೆಯಿಂದಲೂ ಕಲಾವಿದರುಗಳ ಆಯ್ಕೆ ನಡೆದಿದೆ. ಹೊರ ರಾಜ್ಯಗಳಾದ ತಮಿಳುನಾಡು, ಆಂಧ್ರಗಳಿಂದಲೂ ಈ ಕಲಾವಿದರುಗಳ ಆಯ್ಕೆ ನಡೆದಿದೆ ಅಂತ ಗೊತ್ತಾದಾಗ ಹೆಮ್ಮೆ ಅನ್ನಿಸುತ್ತೆ, ಬೆಂಗಳೂರು, ಮಂಡ್ಯದವರು ಜಾಸ್ತಿ ಇರಬೇಕೇನೋ ಅನ್ನಿಸಿದ್ರೂ ನಮ್ಮ ಮರಿಯಮ್ಮನಹಳ್ಳಿಯ ಒಬ್ಬ ಕಲಾವಿದನಿಗೆ ಈ ಮಹತ್ವದ ಪ್ರದರ್ಶನದಲ್ಲಿ ಅವಕಾಶ ನೀಡಿದ್ದಾರಲ್ಲಾ ಅನ್ನೋದು ನಂಗೆ ಹೆಮ್ಮೆಯ ವಿಷಯ.

ಎಷ್ಟೊತ್ತು ಈ ಕಾರ್ಯಕ್ರಮ ನಡೀತು ಅನ್ನೋದೇ ಗೊತ್ತಾಗದಂತೆ ಹೇಳಬೇಕಿರುವುದೆಲ್ಲವನ್ನೂ ಹೇಳಿ ಮುಗಿಸೋದು ಈ ಕಾರ್ಯಕ್ರಮದ ಹೆಗ್ಗಳಿಕೆ. ಪ್ರತಿ ಪಾತ್ರಧಾರಿಗೂ ಅಚ್ಚುಕಟ್ಟಾದ ವಸ್ತ್ರವಿನ್ಯಾಸ ಧ್ವನಿ ಬೆಳಕುಗಳ ವೈಭವಕ್ಕೆ ಮತ್ತೊಂದು ಮೆರಗು ತಂದಿದೆ. ಈ ಕಾರ್ಯಕ್ರಮದ ನಿರ್ದೇಶನ ಮತ್ತು ಸಂಗೀತಕ್ಕೆಫುಲ್ ಮಾರ್ಕ್ಸ್. ಈಗಾಗ್ಲೇ ಈ ತಂಡ ಮುವತ್ತು ಪ್ರದರ್ಶನಗಳನ್ನು ಒಟ್ಟಿಗೇ ಮುಗಿಸಿರೋದ್ರಿಂದ ಒಂದೇ ಕುಟುಂಬದವರಂತೆ ಬೆರತಿದಾರೆ ಅನ್ಸುತ್ತೆ ಅವರುಗಳ ಫರ್ ಫಾರ್ಮೆನ್ಸ್ ಕಂಡಾಗ. ನಿಜಕ್ಕೂ ಮತ್ತೆ ಮತ್ತೆ ಮತ್ತೆ ಹೇಳಬಹುದಾದ್ದೇನಂದ್ರೆ ಭಾರತ ಭಾಗ್ಯ ವಿಧಾತ ಈತ ನಿಜ ಮಣ್ಣಿನ ಅವಧೂತ.

 

‍ಲೇಖಕರು admin

19 March, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading