ನಾ ದಿವಾಕರ ಕವಿತೆ- ಸತ್ವ ಕಳೆದ ಬೇರು…

ನಾ ದಿವಾಕರ

ಹೊಸಕಿ ಎತ್ತೆಸೆದ ಬೇರಿಗೂ
ಕವಲು ಹಾದಿಗಳಿರಬಹುದು
ಆಂತರ್ಯದ ಚಿಗುರು ಉಸಿರಾಡುವಾಗ
ಮುದಿಯಾದರೂ  ವಿಕಸಿಸಲೇನಡ್ಡಿ ?
ಅವ್ಯಕ್ತ ಭಾವಕೋಶಗಳನರಸಿ
ನೆರೆಬದಿಯ ಹಣತೆಯತ್ತ ಸಾಗಲೆಣಿಸಿಹ
ನಾಡಿಗಳಿಗೆ ಇಳೆಯ ಹಂಗಿರದು
ಕಳೆದ ನೆಲೆಯ ಹಂಗೂ ಇರದು ಮಗೂ ;

ಸಂತೆಯೊಳಗಿನ ಬದುಕಿಗೆ ವಾರಸುದಾರನೆಲ್ಲಿ ಇಳೆಪದರದ ಮೇಲೆ
ಅಚ್ಚೊತ್ತಿದ ಹೆಜ್ಜೆಗಳೇ ಅನಾಥವಾಗಿವೆ
ಎದೆಯಾಂತರಾಳದ ಕವಲುಗಳು ಸೊರಗಿ
ಸುರುಟಿಹೋದ ಜೀವನಾಡಿಗಳಲಿ
ಭಾವದುದ್ಧೀಪನ  ಸಾಧ್ಯವೇ ಮಗೂ
ಘನವೋ ದ್ರವವೋ
ತ್ಯಾಜ್ಯದ ಧಾತುವಿಗೆ ನಿರ್ವಾತವೂ ಶೂನ್ಯ ;

ಬೃಹದಲೆಗಳಲೂ ಇಬ್ಬನಿ ಅಡಗಿರಬಹುದು
ಅದು ಸ್ವಂತಿಕೆಯ ದ್ಯೋತಕ
ಕೊಚ್ಚಿಹೋದ ರಾಗಭಾವಗಳೆಂದಿಗೂ
ಮಾರ್ದನಿಸಲಾರವು ಮಗೂ
ಉಂಡೆಸೆದ ಕಾಳುಗಳ ಹೆಕ್ಕಲೆಣಿಸುವ
ಹಕ್ಕಿಗೂ ನೆಲೆಸೆಲೆಯ ಹಂಗಿರಬಹುದು
ಸತ್ವಹೀನ ಬೇರಿನಲೂ ಕನಸುಗಳ
ಕಾನನ ಅಡಗಿರಬಹುದು ;

ಇಂದಲ್ಲಾ ನಾಳೆ ಹಸಿರು ಕಪ್ಪಾದೀತು
ನಾಳೆ ಎಣಿಸುವ ತಪ್ತ ಕಂಗಳಲಿ
ನಿನ್ನೆಯ ಪಳೆಯುಳಿಕೆಗಳಿರಲುಂಟು
ಚಾಚಿದ ತೋಳುಗಳಲಿ
ಭೂತಾವಶೇಷಗಳು ಪ್ರತಿಫಲಿಸಿದಾಗ
ಅಂತರಾಳದ ಕ್ಷೀಣ ಧ್ವನಿ ಮರಳಿ
ಪಲ್ಲವಿಸಬಹುದು ; ಅಸ್ಥಿಗೂ ಅಸ್ತಿತ್ವವಿದೆ
ಕನಸುವ ಹಂಬಲವೂ ಸಹಜ
ಅಳಿದ ಹೆಜ್ಜೆಗಳಲಿ ಅಕ್ಷರಗಳಿರದು ಮಗೂ
ಶೋಧಿಸದಿರು ದೃಷ್ಟಿ ಮಸುಕಾದೀತು ! 

‍ಲೇಖಕರು Admin

October 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: