-ಮಿಝಾನುಲ್ ಹಕ್ ಬಾರ್ಬುಯಾ
~Mizanul Hoque Barbhuiya
ಕನ್ನಡಕ್ಕೆ- ಗೋವಿಂದರಾಜು
ನಾವು ಅಳುತ್ತೇವೆ.
ನಾವು ನಮ್ಮ ಕಣ್ಣೀರನ್ನು ಒರಸಿಕೊಳ್ಳುತ್ತೇವೆ.
ನಾವು ಎಲ್ಲವನ್ನೂ ದಾಖಲಿಸುತ್ತೇವೆ.
ನಾವು ಪ್ರತಿಯೊಂದನ್ನೂ ವಿವರವಾಗಿ ದಾಖಲಿಸುತ್ತೇವೆ.
ನಾವು ನಮ್ಮ ದಬ್ಬಾಳಿಕೆಗಾರರನ್ನು ದಾಖಲಿಸುತ್ತೇವೆ.
ನಾವು ನಮ್ಮ ಸಹ ನಾಗರಿಕರ ಮತ್ತು ಮಿತ್ರರು ಅಂತ ಕರೆಸಿಕೊಳ್ಳುವವರ ಮೌನವನ್ನು ದಾಖಲಿಸುತ್ತೇವೆ.
ನಾವು ನಮ್ಮ ಭವಿಷ್ಯದ ಪೀಳಿಗೆಗಾಗಿ ದಾಖಲಿಸುತ್ತೇವೆ.
ಎಲ್ಲವೂ ನೆನಪಿನಲ್ಲಿರಲಿದೆ.
ಪ್ರತಿಯೊಂದು ನೆನಪಿನಲ್ಲಿರಲಿದೆ.
ನಾವು ಕ್ಷಮಿಸುವುದಿಲ್ಲ
ನಾವು ಕ್ಷಮಿಸುವುದಿಲ್ಲ.
ಒಳ್ಳೆಯದು , ಕ್ಷಮಿಸಬೇಡಿ. ನೀವೂ ಆ ಕಡೆಯಿಂದ ಆರಿಸಿ ಆರಿಸಿ ಕೇರಿಗಳಿಗೆ ಕೊಳ್ಳಿಯಿಡುತ್ತ ಬನ್ನಿ. ಆಮೇಲೆ ಆ ಘನಕರ್ತವ್ಯವನ್ನು ನಿಮ್ಮ ಅವರ ಚಿರಂಜೀವಿಗಳು ಮುಂದುವರೆಸುತ್ತಾರೆ.
ಮನಸ್ಸು ರೋಸಿಹೋಗಿದೆ. ಈ ನೆಲದ ಸಾಮಾನ್ಯ ಜನ ಹೇಗೋ ಎರಡೊತ್ತಿನ ಕೂಳು ಹುಟ್ಟಿಸಿ ಕೊಂಡು ತಂತಮ್ಮ ಮಕ್ಕಳು ಮರಿಗಳ ನಾಳೆಗಳನ್ನು ಕಟ್ಟುವ ಯೋಚನೆಗಳಲ್ಲಿ ಬದುಕುತ್ತಿರುತ್ತಾರೆ. ಅವರನ್ನು ಎಡದವರೂ ಬಲದವರೂ ಸಮಾನವಾಗಿ ಉದ್ರೇಕಿಸಿ ಕೈಗೆ ಕೊಳ್ಳಿಯನ್ನೂ, ಬಾಯಿಗೆ ರುಚಿಯಾದ ಘೋಷಣೆಗಳನ್ನೂ ಒದಗಿಸುವರು. ಅವರ ಮೆದುಳುಗಳನ್ನು ಒಂದು ಸತ್ತ ಅಂಗವಾಗಿಸುವರು. ಎಲ್ಲಾ ಬೂದಿಯಾದ ಮೇಲೆ, ಬೂದಿಯಿಂದ ಹುಟ್ಟಿ ಬರುತ್ತವಪ್ಪ ,,, ಅಮೋಘ ಕವಿತೆ, ಕತೆ, ಲೇಖನ, ಭಾಷಣ , ಹಲ್ಕಾ ರಾಜಕೀಯ, ,,,,,,
ನಿಮ್ಮ ಮನೆ ಹಾಳಾಗ , ಎಡದವರೂ ಬಲದವರೂ ಸುಮ್ಮನಿರ್ರಿ. ಸಾಮಾನ್ಯ ಜನ ಸಾಬರು ಇತರರೆಂದು ವಿಂಗಡಿಸಿಕೊಳದೆ ತಮ್ಮ ಪಾಡಿಗೆ ತಾವು ಕಾಯಕ ಮಾಡಿ ಬದುಕಿಕೊಳ್ಳುತ್ತಾರೆ. ಯಾವೊಬ್ಬ ಸಾವ್ಕಾರನ ಮಕ್ಕಳೂ, ಹೊಲ ಮನೆ ತಕ್ಕಮಟ್ಟಿಗೆ ಇರುವವನ ಮಕ್ಕಳು ಬೀದಿಗೆ ಬಂದಿಲ್ಲ. ಎರಡೂ ಕಡೆಯವರು ಬಡಹುಡುಗರನ್ನು ಛೂ ಬಿಟ್ಟು ಅವರನ್ನು ಕೊಲ್ಲಿಸಿ , ಅವರಿಂದ ಕೊಲ್ಲಿಸಿದ್ದೀರಿ. ಒಬ್ಬರ ಬಾಯಿಂದಲೂ ಪಶ್ಚಾತ್ತಾಪದ ಮಾತು ಬಂದಿಲ್ಲ. ಬದಲಾಗಿ ನಿಮ್ಮನಿಮ್ಮ ಮೂಗಿನ ಅಳತೆಗೊಪ್ಪುವ ಫೋಟೋಗಳು ಬರಹಗಳನ್ನು ಆಯ್ದಾಯ್ದು ಉದ್ರೇಕಿಸುವ ಮಾತನ್ನೇ ಆಡುತ್ತಿದ್ದೀರಿ.
ಎರಡೂ ಕಡೆಯೂ ಇದ್ದಾರೆ ತಾಯಂದಿರು . ಅವರು ಉಸೂರ್ ಎಂದದ್ದು ತಟ್ಟದೆ ಬಿಡುವುದಿಲ್ಲ.
ಕ್ಷಮಿಸುವುದಿಲ್ಲ ಎನ್ನುವ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಲಲಿತಾ ಸಿದ್ದಬಸವಯ್ಯನವರ ಮಾತು ಅಕ್ಷರಶಃ ನಿಜ.