ಲೀಲಾ ಅಪ್ಪಾಜಿ
ನಿವೃತ್ತಿ ಹೊರೆಯಲ್ಲ
ಮೂವತ್ತೈದು ವರ್ಷಗಳ ವೃತ್ತಿ ಅದು. ಇಷ್ಟಪಟ್ಟು ಪ್ರೀತಿಯಿಂದ ಅನುಭವಿಸಿದ ವೃತ್ತಿ ಪ್ರವೃತ್ತಿಯೂ ಆಗಿತ್ತು. ಕಲಿತದ್ದನ್ನು ಕಲಿಸುತ್ತಾ, ಕಲಿಸುವ ಸಲುವಾಗಿ ಮತ್ತೆ ಮತ್ತೆ ಕಲಿಯುತ್ತಾ update ಆಗುತ್ತಾ ಹಳತರ ಒಳಗಿನ ಹೊನ್ನನ್ನು, ಹೊಸತರ ಆಳದ ತಿರುಳನ್ನು, ಶಾಸ್ತ್ರದ ಶಸ್ತ್ರಕ್ಕೆ ಒಂದಿಷ್ಟು ರಸ ತುಂಬಿ ಹೀಗೆ ತಲುಪಿಸುವ ಉಪನ್ಯಾಸಕ ವೃತ್ತಿ. ಗುರಿ ಮುಟ್ಟಲು ವೇಗವರ್ಧಕವಾಗುವ ಈ ವೃತ್ತಿ ಕ್ರಿಯಾಚೈತನ್ಯ ಜೀವೋತ್ಕರ್ಷ ಪರವೂ ಹೌದು.
ಕಲಿಸಿದುದು ಎಷ್ಟೋ ಕಲಿತದ್ದು ಅದಕ್ಕಿಂತ ಮಿಗಿಲು. ಪಠ್ಯದಾಚೆಗೆ, ಪಠ್ಯಪೂರಕ ಚಟುವಟಿಕೆಗಳ ಆಕರ್ಷಣೆಯೂ ಸದಾ ಜೊತೆಗೇ ಇರುತ್ತಿದ್ದ ಕಾರಣ ಮತ್ತಷ್ಟು ಸೆಳೆತ. ಕೊನೆಯ ಏಳೆಂಟು ವರ್ಷ ಆಡಳಿತದ ಚುಕ್ಕಾಣಿ. ಒಳಗೊಳಗೆ ಉಳಿದಿದ್ದ ಆಲೋಚನೆಗಳನ್ನು ಎಂತಹ ಅನುಕೂಲ ಪ್ರತಿಕೂಲ ಸನ್ನಿವೇಶಗಳಲ್ಲಿಯೂ ಕಾರ್ಯರೂಪಕ್ಕೆ ತರುವ ಅವಕಾಶ. ಬಳಸಿಕೊಂಡೆ, ಬೆಳೆಸಿಕೊಂಡೆ ಪ್ರೀತಿ ಮತ್ತು ದ್ವೇಷವನ್ನೂ. ಆದರೆಂದೂ ಪಶ್ಚಾತ್ತಾಪವೂ ಇಲ್ಲ, ಪ್ರಾಯಶ್ಚಿತ್ತದ ಅಗತ್ಯವೂ ಇಲ್ಲ.
ಎಲ್ಲಾ ಮುಗಿಯಿತು ಎನ್ನುವಾಗಲೇ ಹೊಸ ತಿರುವು. ಯಾವ ಮಣ್ಣಿನ ಕಣ್ಣು ಹೀಗೆ ಸೆಳೆದದ್ದು. ಆಚೆಯದ್ದಲ್ಲ, ಲೋಕಾತೀತವಾದದ್ದಂತೂ ಅಲ್ಲವೇ ಅಲ್ಲ. ಪಾಠ ಮಾಡುವುದೇ ಉಸಿರು, ಬಳಿಕ ಬದುಕಿಗೇನು ಅರ್ಥ. ಹೀಗೂ ಭಾವಿಸಿದ್ದವಳಿಗೆ ಯಾವುದಕ್ಕೂ ಮಿತಿಯಿಲ್ಲ ಎನ್ನುವ ಸರಳಸತ್ಯ ನಿವೃತ್ತಿಯ ನಂತರವೇ ಅರಿವಾದದ್ದು. ನಿವೃತ್ತಿಯ ತರುವಾಯವೇ sixty plus ಆದಾಗಲೇ ನಿಜವಾದ ಬದುಕು ಅಂದರೆ ಒತ್ತಡಗಳಿಲ್ಲದ ನನ್ನದೇ ಆದ ಸಮಯ ಇರುತ್ತದೆ ಜೀವಿಸಲಿಕ್ಕಾಗಿ.
ಏನು ಮಾಡುವುದು, ಏನೇನು ಮಾಡಬಹುದು… ಅಪರಿಮಿತ ಅವಕಾಶಗಳ ಅನಂತ ಆಕಾಶ. ಬಾಲ್ ಬ್ಯಾಟ್ ಕೋರ್ಟ್ ಎಲ್ಲ ನನ್ನದೇ. ರೈಟ್… ಆಗೇ ಚಲೋ ಧೀರೆಸೆ ಚಲೋ.
ಕ್ಯಾಮೆರಾದ ನಂಟು
ನನ್ನ ಬದುಕಿನ ಅರ್ಧ ಶತಮಾನದ ಆಚೀಚೆ ಉತ್ಸಾಹ ಪುಟಿಯುತ್ತಿದ್ದಂತೆ ಆಡುವ ಆಟಗಳಿಗೆ ಮತ್ತೂ ಖದರ್ ಸಿಗತೊಡಗಿತು. ನಲವತ್ತೈದನೇ ವಯಸ್ಸಿಗೆ ಇನ್ನೂ ಮುಂದೆ ಓದಲೇಬೇಕೆನ್ನುವ ಬಹುದಿನದ ಒತ್ತಡದ ಹುಚ್ಚಿಗೆ ಯು.ಜಿ.ಸಿ.ಯ ಎಫ್.ಐ.ಪಿ ಕೈ ಜೋಡಿಸಿತು. ಪಿಎಚ್.ಡಿಗೆ ಅದಾಗಲೇ ನೋಂದಣಿ ಮಾಡಿಸಾಗಿತ್ತು- ಬಿಳಿಗಿರಿರಂಗನ ಬೆಟ್ಟದ ಸಾಂಸ್ಕೃತಿಕ ಅಧ್ಯಯನ ಎಂದು ಊರು ಸುತ್ತುವ ಕೆಲಸದ ಸಂಶೋಧನೆ ಮಾಡುವುದು ಎಂದು.
ಎರಡು ವರ್ಷದ ಅಧ್ಯಯನ ರಜೆ ಸಿಕ್ಕ ಬಳಿಕ ಊರು ಬಿಟ್ಟೆ, ಮೈಸೂರು ಸೇರಿಬಿಟ್ಟೆ. ಬೆಟ್ಟದ ಯಾತ್ರೆ ಆರಂಭವಾಯಿತು. ಜೋಳಿಗೆ ಹೊತ್ತು ಬೆಟ್ಟದ ಕಾಡು ಮೇಡು ಅಲೆಯುವುದು ಅಭ್ಯಾಸ ಆಯಿತು. ಪೆನ್ನು ಪೇಪರ್ ಇರಲಿ, ಸಣ್ಣ ಟೇಪ್ ರಿಕಾರ್ಡರ್, ಸಣ್ಣ ಕ್ಯಾಮ್ ಕಾರ್ಡರ್ ಗಳೂ ನನ್ನ ಹತ್ಯಾರಗಳಾದವು. ಇಷ್ಟೆಲ್ಲ ಬಂದ ಮೇಲೆ ಕ್ಯಾಮೆರಾ ಬೇಡವೆ…
ನನ್ನ ದಂತವೈದ್ಯ ಗಂಡನಿಗೆ ಫೋಟೋಗ್ರಾಫರ್ ಫ್ರೆಂಡ್ ಒಬ್ಬರಿದ್ದರು. ಅವರು ವೃತ್ತಿಯಲ್ಲಿ ಇಂಗ್ಲೀಷ್ ಪ್ರೊಫೆಸರ್ ಆದರೂ ಪ್ರವೃತ್ತಿಯಲ್ಲಿ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡ್ತಿದ್ದರು. ಇವನಿಗೆ ಯಾವುದೋ ದಿವ್ಯ ಘಳಿಗೆಯಲ್ಲಿ ತಾನೂ ಆ ದಾರಿಯಲ್ಲಿ ಹೋಗಿಯೇ ಬಿಡಬೇಕೆಂಬ ಹುಕಿ ಹುಟ್ಟಿತು. ಕ್ಯಾನನ್, ಯಾಷಿಕಾ ಕ್ಯಾಮೆರಾಗಳು ಬಂದಿಳಿದವು, ಜೊತೆಗೆ ಬಗೆಬಗೆಯ ಲೆನ್ಸ್ ಗಳು.
ನಾನು ಬರಿಯ ದರ್ಶನಕ್ಕೆ ಅರ್ಹಳಾಗಿದ್ದೇನೆ ಹೊರತು ಸ್ಪರ್ಶದ ಸೌಭಾಗ್ಯ ಪಡೆದಿರಲಿಲ್ಲ. ಅವ ಒಂದು ವರ್ಷ ನಾಗರಹೊಳೆ, ಬಂಡೀಪುರ ರಂಗನತಿಟ್ಟಿಗೆ ಕ್ಯಾಮೆರಾ ಹೊತ್ತು ಅಲೆದ… ಅಲೆದ. ಸಿಕ್ಕಿದ ಮಕ್ಕಳು ಮುದುಕರೂ ಎಲ್ಲರ ಮೂತಿಗೂ ಕ್ಯಾಮೆರಾ ಹಿಡಿದ, ನನ್ ಕಡೆ ಒಂದು ಬಿಟ್ಟು. ನನ್ನನ್ನು ಎಲ್ಲಿಗೂ ಕರೆದುಕೊಂಡೂ ಹೋಗಲಿಲ್ಲ, ಕರೆಯಲೂ ಇಲ್ಲ. ನನಗೂ ತೀರಾ ಅಂತಹ ತುರ್ತೂ ಇರಲಿಲ್ಲ, ತೆಪ್ಪಗಿದ್ದೆ. ಆದರೆ ಅನಿರೀಕ್ಷಿತವಾಗಿ ಗಂಡನ ತಮ್ಮ ತೀರಿಕೊಂಡ ಬಳಿಕ ಕ್ಯಾಮೆರಾ ಹಿಡಿಯೋದು ಬಿಟ್ಟು ಬೀರುವಿಗೆ ಸೇರಿಸಿದ. ತೀರಾ ಅಪರೂಪಕ್ಕೆ ಚಿತ್ರ ತೆಗೆದರೂ ಊರಾಚೆ ಹೋಗಲೇ ಇಲ್ಲ. ಯಾವ ಹಕ್ಕಿ ಪ್ರಾಣಿಗಳೂ ಅವನ ಕ್ಯಾಮೆರಾದೊಳಕ್ಕೆ ಅನಂತರ ಬರಲೇ ಇಲ್ಲ.
ನಾನು ಬಿಳಿಗಿರಿಗೆ ಹೋಗುವಾಗ ಕ್ಯಾಮೆರಾ ಬೇಕು ಎಂದೆ 2000ದಲ್ಲಿ. ಅವ ತನ್ನ ಬಳಿ ಇದ್ದ ಕ್ಯಾಮೆರಾ ಕೊಡಲೇ ಇಲ್ಲ. ಡೌಟಿತ್ತು ಅವನಿಗೆ, ಇವಳು ಇದನ್ನೆಲ್ಲಾ ಹ್ಯಾಂಡಲ್ ಮಾಡೋಕೆ ಬರದವಳು ಎಂದು. ಡಬ್ಬ ಆಗ್ಫಾ ಮಾಡೆಲ್ ತಂದುಕೊಟ್ಟ. ಕ್ಯಾಮೆರಾದ ಬಗ್ಗೆ ಎಬಿಸಿಡಿ ಗೊತ್ತಿಲ್ಲದಿದ್ದ ನಾನು ಪರಮಭಿಕ್ಷೆ ಎಂದು ಅದನ್ನೇ ಪಡೆದೆ. ಅದಕ್ಕೆ ರೋಲ್ ತುರುಕಿ ತೆಗೆದದ್ದೇ ತೆಗೆದದ್ದು, ಬರದೇ ಇರೋ ಅರ್ಧ ರಾತ್ರಿಯಲ್ಲೂ ಕೂಡಾ.
ಯಾಕೆಂದರೆ ಸೋಲಿಗರ ಕೆಲವು ಹಬ್ಬಗಳು ಇರುತ್ತಿದ್ದುದ್ದೇ ಇರುಳಿನಲ್ಲಿ, ಫ್ಲ್ಯಾಷು ಇಲ್ಲದೆ ಈ ಪಡಪೋಶಿ ಕ್ಯಾಮೆರಾ ಏನು ತೆಗೆದೀತು. ಆ ಇರುಳು ಬಯಲಿನಲ್ಲಿ ಕತ್ತಲಲ್ಲಿ ಚುಕ್ಕಿ ನೋಡಿದ್ದು, ಸೋಲಿಗರ ಕುಣಿತ ಹಾಡು ಕೇಳಿ ನೋಡಿದ್ದು ಇಷ್ಟೆ ಉಳಿಯುತ್ತಿತ್ತು ರೀಲಿನಾಚೆಗೆ. ಕ್ಯಾಮೆರಾದಲ್ಲಿ ತೆಗೆದದ್ದರಲ್ಲಿ ಅರ್ಧ ಬರ್ತಿರಲಿಲ್ಲ. ಬಂದವುಗಳಲ್ಲಿ ಬ್ಲರ್ ಕ್ಯಾಟಗರಿಗೆ ಸೇರಿಕೊಂಡವೇ ಹೆಚ್ಚು.
ನಾನು ಬೆಟ್ಟದ ತುಂಬಾ ತಿರುತಿರುಗಿ ಭಾರಿ ಸ್ಟೈಲಾಗಿ ಕ್ಯಾಮೆರಾ ಕ್ಲಿಕ್ಕಿಸುತ್ತಿದ್ದೆ. ಕೊನೆಗೆ ಇನ್ನಾರು ತಿಂಗಳು ಇದೆ ಎನ್ನುವಾಗ ಒಂದು ಒಲಂಪಸ್ ಕ್ಯಾಮೆರಾ ತಂದುಕೊಟ್ಟ ನನ್ ಗಂಡ, ಅಯ್ಯೋ ಪಾಪ ಎಂದು ಕನಿಕರಿಸಿ. ಅದರಲ್ಲೂ ಒಂದಿಷ್ಟು ತೆಗೆದೆ. ಬೆಟ್ಟದ ನನ್ ಆಶ್ರಯದಾತರಲ್ಲಿ ಒಬ್ಬನಿಗೆ ಅವ ಎಲ್ಲಾದರೂ ಹೋಗುವಾಗ ನನ್ನಿಂದ ಕ್ಯಾಮೆರ ಪಡೆಯುತ್ತಿದ್ದ. ರೀಸರ್ಚ್ ಮುಗಿಸಿ ಥೀಸಿಸ್ ಒಪ್ಪಿಸಿದ ಬಳಿಕವೂ ಆತ ಕ್ಯಾಮೆರಾಗೆ ಕೋರಿಕೆ ಇಡುತ್ತಿದ್ದ.
ಕೊನೆಗೆ ನೀನೆ ಇಟ್ಟುಕೋ ಮಹಾರಾಯಾ ಎಂದು ಅವನ ಕೈಗೊಪ್ಪಿಸಿ ಮುಕ್ತಳಾದೆ. ಕ್ಯಾಮೆರಾ ಸಹವಾಸ ಬಿಟ್ಟು ಹೋಯಿತು. ಆದರೆ ಅಲ್ಲಿ ತೆಗೆದಿದ್ದ ಸಾವಿರಾರು ಫೋಟೊಗಳಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ಪಟಗಳನ್ನು ಥೀಸಿಸಿನಲ್ಲಿ ಹಾಕಿ ಅದೊಂದು ಚಿತ್ರ ಮಹಾಪ್ರಬಂಧ ಮಾಡಿಟ್ಟಿದ್ದೆ. ಅದರ ಮುಖಪುಟ-ಹಿಂಪುಟಕ್ಕೂ ನಾನೇ ತೆಗೆದ ಚಿತ್ರ ಹಾಕಿ ಬಣ್ಣ ತುಂಬಿದ್ದೆ. ನಮ್ಮ ಗೈಡ್, ‘ಮೇಡಂ ಕನ್ನಡದ ಮಹಾಪ್ರಬಂಧಗಳಲ್ಲಿ ಇಷ್ಟೊಂದು ಚಿತ್ರ ಹಾಕಿರುವವರಲ್ಲಿ ನೀವೆ ಮೊದಲಿಗರು ಅನ್ಸುತ್ತೆ’ ಅಂದರು. ಕಾಲರ್ ಇಲ್ಲದಿದ್ದರೂ ಎಳೆದುಕೊಂಡೆ.
ಸಂಶೋಧನೆ ಶುರುವಾದಾಗ ಮಂಡ್ಯದ ಕಾಲೇಜಿನಲ್ಲಿದ್ದವಳು ಮುಗಿಸುವಾಗ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿದ್ದೆ. ಕಾಲೇಜಿನಲ್ಲಿ ಕುವೆಂಪು ಶತಮಾನೋತ್ಸವ ಕಾರ್ಯಕ್ರಮ ನಡೆಸುವ ಜವಾಬ್ದಾರಿ ನನ್ನ ಹೆಗಲಿಗೆ ಬಂತು. ಸುಮ್ಮನೆ ಸ್ಟೇಜ್ ಪ್ರೋಗ್ರಾಂ ಮಾಡಿದರೆ ಏನ್ ಚಂದ, ಅಷ್ಟೆ ಬೇಡವೆನ್ನಿಸಿತು. ಇತರ ಕಾರ್ಯಕ್ರಮಗಳ ಬಗ್ಗೆ ಆಲೋಚಿಸಿದೆ, ಅದರಲ್ಲಿ ಕುವೆಂಪು ಚಿತ್ರ ಪ್ರದರ್ಶನವೂ ಒಂದಾಗಿತ್ತು.
ಚಿತ್ರಗಳ ಹುಡುಕಾಟ ಅಂದು ಶುರುವಾಯ್ತು. ಮನೆಮನೆ ತಿರುಗಿದೆ, ಸ್ಟುಡಿಯೋ ಹೊಕ್ಕು ಬಂದೆ, ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಠಳಾಯಿಸಿದೆ. ಚಿತ್ರ ಸೇರಿಸುತ್ತಾ ಪೇರಿಸುತ್ತಾ ಹೋದೆ. ಕುವೆಂಪು ಬದುಕಿದ್ದಾಗ ಒಂದಿಷ್ಟು ಹತ್ತಿರದಿಂದ ನೋಡಿದ್ದೆ ಅನ್ನೋದೆ ಈಗಲೂ ಉತ್ಸಾಹ ಹುರುಪು ಹುಟ್ಟಿಸುತ್ತಿದೆ ಅನ್ನೋದಾದರೆ ನಾನೇ ಅವರ ಚಿತ್ರ ತೆಗೆದಿದ್ದರೆ…. ಈ ‘ರೆ’ ಕನಸೆ ಸುಂದರ.. ಅಯ್ಯೊ ಅದು ಆಗಲಿಲ್ವೆ.
ಆದರೆ ನಾನು ಸಂಗ್ರಹಿಸಿದ ಕುವೆಂಪು ಭಾವಚಿತ್ರಗಳನ್ನು ಕುವೆಂಪು ಚಿತ್ರದರ್ಶನ ಪುಸ್ತಕ ಮಾಡುವಾಗ ಆ ಸಮಿತಿಗೆ ಕೊಟ್ಟದ್ದಲ್ಲದೆ, ಆ ಸಮಿತಿಯ ಸದಸ್ಯೆಯೂ ಆಗಿದ್ದೇ ಎನ್ನುವುದೇ ಒಂದು ರೋಮಾಂಚಕ ಪ್ರಯಾಣವಾಗಿ ಸಂಗ್ರಹಿಸುವಾಗ ಆಗಿದ್ದ ಶ್ರಮ ಸಾರ್ಥಕ ಆಯಿತು. ಆದರೆ 2004ರಲ್ಲಿ ಕುವೆಂಪು ಕಾವ್ಯಚಿತ್ರ ಮಾಡುವಾಗ ಕವಿತೆಗೆ ಸೂಕ್ತವಾಗಿ ಹೊಂದಿಕೆ ಆಗುವ ಚಿತ್ರಗಳು ಅಗತ್ಯವಿದ್ದವು.
ಕ್ಯಾಮೆರಾ ಬೇಕೆನಿಸಿದರೂ ಕೈಯಲ್ಲಿರಲಿಲ್ಲ, ಕೊಂಡು ಅಲೆಯಲೂ ಸಮಯವೂ ಆಗ್ತಿರಲಿಲ್ಲ. ಇವತ್ತು ಫೇಸ್ ಬುಕ್ಕಿನಲ್ಲಿ ನಾನೇ ತೆಗೆದ ಸಾವಿರಾರು ಫೋಟೊ ಹಾಕಿದ್ದೇನೆ… ಬಹುಪಾಲು ಹಕ್ಕಿಗಳದ್ದೆ. ಆದರೆ ಆಗ ಒಂದೇ ಒಂದು ಹಕ್ಕಿಯ ಫೋಟೋ ತೆಗೆದಿರಲಿಲ್ಲ, ಹಕ್ಕಿ ಬಿಡಿ, ಹೂವಿನದ್ದೂ ಇಲ್ಲ. ಮುಂದೊಂದು ದಿನ ಹೀಗೆ ಹಕ್ಕಿ ಹಿಂದೆ ಬೀಳ್ತೀನಿ ಅನ್ನೋ ಸೂಚನೆಯೂ ಇರಲಿಲ್ಲ, ಕನಸೂ ಇರಲಿಲ್ಲ. ಓ ಕಾಲವೇ ಏನು ನಿನ್ನ ಲೀಲೆ….
ಕುವೆಂಪು ಚಿತ್ರ ಕಾವ್ಯಕ್ಕೆ ಬೇಕೆನಿಸಿದ ಹಕ್ಕಿ, ಹೂ, ಮೋಡ, ಇಬ್ಬನಿ, ಮುಂತಾದವುಗಳ ಚಿತ್ರಗಳನ್ನು ಅಂತರ್ಜಾಲದಿಂದ ಕೆಳಗಿಳಿಸಿಕೊಂಡೆ, ಕವಿತೆ ಸೇರಿಸಿದೆ. ಎಪ್ಪತ್ತಕ್ಕೂ ಹೆಚ್ಚು ಕುವೆಂಪು ಕವಿತೆಗಳ ಚಿತ್ರಕಾವ್ಯ ರೆಡಿಯಾಯಿತು. ಯಾರದ್ದೋ ಚಿತ್ರ, ಯಾರದ್ದೋ ಕವಿತೆ, ಜೊತೆಗೂಡಿಸಿದವಳು ಮಾತ್ರ ನಾನು. ಇವತ್ತು ಯಾರಾದರೂ ನಾ ತೆಗೆದ ಚಿತ್ರಗಳನ್ನು ಹೀಗೆ ಆರಿಸಿಕೊಂಡರೆ ಖುಷಿಯಾಗುತ್ತದೆ, ಆ ದಿನಗಳ ನೆನಪು ಒತ್ತರಿಸಿಕೊಂಡು ನುಗ್ಗುತ್ತದೆ.
ಹೀಗೊಂದು ದಿನ ಈ ಲೀಲಾ ತೆಗೆದ ಚಿತ್ರಗಳನ್ನೇ ಇನ್ನೊಬ್ಬರು ಶೇರ್ ಮಾಡುವ ತಮಗೆ ಬೇಕಾದ್ದಕ್ಕೆ ಬಳಸಿಕೊಳ್ಳುವ ಕಾಲವೂ ಅವಳಿಗೆ ಕಾದಿದೆ ಎಂಬ ಕನಸೂ ಇರಲಿಲ್ಲ. ಈ ದಾರಿಗೆ ಹೋಗುವ ಹಾಗೆ ನನ್ನ ಬದುಕಿಗೆ ಹೊಸ ತಿರುವು ಕೊಟ್ಟ ಆ ಮಾನ್ಸ್ಟರ್ ಅಲ್ಲಲ್ಲ ಮಾಸ್ಟರ್ ಗಳಿಗೆ ಒಂದು ದೊಡ್ಡ ನಮಸ್ಕಾರ.
ಮೂವತ್ತೈದು ವರ್ಷ ಪ್ರಾಣದಂತೆ ಪ್ರೀತಿಸಿದ್ದ ವೃತ್ತಿಯಿಂದ ಆಚೆ ಬರುವ ಕ್ಷಣದಲ್ಲಿ ಅಸಹನೆಯ ಅತೃಪ್ತ ಮನಸುಗಳು ಒಗ್ಗೂಡಿ ಮನಸ್ಸು ಕದಡಿದ ನಂತರದಲ್ಲಿಯೇ ಹೊಸ ಹಾದಿಗೆ ಹೊರಳುವ ದಾರಿಯ ಹುಡುಕಾಟಕ್ಕೆ ತೊಡಗಿದ್ದು. ಇವತ್ತು ಈ ಲೀಲಾ ಒಬ್ಬ ಕನ್ನಡ ಪ್ರಾಧ್ಯಾಪಕಿ ಆಗಿದ್ದಳು, ಪ್ರಾಂಶುಪಾಲೆ ಆಗಿದ್ದಳು ಎನ್ನುವುದು ಹಿನ್ನೆಲೆಗೆ ಸರಿದೇ ಹೋಗಿದೆ, ಲೀಲಾಅಪ್ಪಾಜಿ ಒಬ್ಬ bird photographer ಎಂದೇ ಗುರುತಿಸುವ ಹಂತದಲ್ಲಿದ್ದೇನೆ.
ಮತ್ತೆ ಕ್ಯಾಮೆರಾ ಕೈಗೆ ಬಂತು
ಮೈಸೂರಿನಲ್ಲಿ ಇನ್ನೂ ಇದ್ದಾಗಲೇ ಒಂದು ಸೋನಿ ಕ್ಯಾಮೆರಾ ಬಂತು. ಆದರೆ ಚಿತ್ರ ತೆಗೆದದ್ದು ಕಡಿಮೆ. ಚೆಲುವಾಂಬ ಪಾರ್ಕ್ ಎದುರಿಗಿನ ಬೃಂದಾವನ ಅಪಾರ್ಟಮೆಂಟಿನ ಮೂರನೇ ಮಹಡಿಯಲ್ಲಿದ್ದ ನನಗೆ ಕಣ್ಣು ತುಂಬುತ್ತಿದ್ದುದು ಚಾಮುಂಡಿ ಬೆಟ್ಟ. ನೋಡು ಬಾ ನೋಡು ಬಾ ಮೈಸೂರ, ನಮ್ಮೂರ ಎಂದು ‘ಮಿಸ್ ಲೀಲಾವತಿ’ ಸಿನಿಮಾದಲ್ಲಿ ಒಂದು ಹಾಡಿದೆ. ಈ ಲೀಲಾ ಮೈಸೂರಲ್ಲೇ ಇದ್ದರೂ ಮೈಸೂರು ನೋಡಲಿಲ್ಲ, ಸುತ್ತಲೇ ಇಲ್ಲ. ದಿನಾ ಕುಕ್ಕರಹಳ್ಳಿ ಕೆರೆಯ ಪಕ್ಕ ಹೋದರೂ ಕೆರೆ ನೋಡಲೇ ಇಲ್ಲ.
ಎಲ್ಲಾ ಇರಲಿ ಮನೆ ಎದುರಿಗಿದ್ದ ಪಾರ್ಕ್, ಆಚೆಗೆ ಚಳಿಗಾಲದಲ್ಲಿ ಮಂಜು ಮುಸುಕಿ ಕಾಣೆಯಾಗುತ್ತಿದ್ದ ಚಾಮುಂಡಿಬೆಟ್ಟದ ಪಟ ಕೂಡಾ ತೆಗೆಯಲೇ ಇಲ್ಲ. ಪಾರ್ಕಿಗೆ ಕಾಲಿಟ್ಟಿದ್ದರೆ ನೂರಾರು ಬಗೆಯ ಹೂಗಳು, ಚಿಟ್ಟೆಗಳು, ಬರುತ್ತಿದ್ದ ಹತ್ತಾರು ಬಗೆಯ ಹಕ್ಕಿಗಳು, ಬೆಳಿಗ್ಗೆ ಸಂಜೆಯ ನಬೋವಿಲಾಸ ಯಾವುದೂ ಚಿತ್ರವಾಗದೆ ಕಣ್ಣೊಳಗೆ ಮಾತ್ರ ತುಂಬಿಕೊಂಡು ಖುಷಿ ಪಡುತ್ತಿದ್ದೆ.
ವಾಪಸ್ ಮಂಡ್ಯಕ್ಕೆ ಬಂದು ಪ್ರಿನ್ಸಿಪಾಲ್ ಆಗಿ ವಿರಾಜಪೇಟೆಗೆ ಹೊರಟೆ. ಆಹಾ ಎಂತಹ ಬೆಡಗಿನ ಕೊಡಗು. ಮೋಹಕ, ಮನಮೋಹಕ.. ಆದರೂ ಕ್ಯಾಮೆರಾ ಒಯ್ಯಲಿಲ್ಲ. ಅಲ್ಲಿದ್ದ ನಾಲ್ಕು ತಿಂಗಳ ಎಲ್ಲ ಹಗಲೂ ಕಾಲೇಜಿನ ಒಳಗೇ ಸ್ವಯಂಬಂಧಿಯಾಗಿದ್ದೆ ಸಂತೋಷದಿಂದಲೆ.. ಈಗಲೂ ಒಂದು ಸೀರಿಯಲ್ ತರಹಕ್ಕೆ ನೆನೆನೆನೆದು ಸಣ್ಣ ಸಂಭ್ರಮ ಪಡುವ ಅವಧಿ ವಿರಾಜಪೇಟೆಯದ್ದು.
ಆದರೆ ನಾಲ್ಕು ತಿಂಗಳ ಬಳಿಕ ಮಂಡ್ಯದ ಮದ್ದೂರು ಮಹಿಳಾ ಕಾಲೇಜಿಗೆ ಬಂದು ಇಳಿದೆ, ಹೊರೆ ಹೆಗಲೇರಿತು. ಕಾಲೇಜಿನ ಕಾಲೆಳೆಯುವವರ ನಡುವೆಯೇ ನಡೆದೆ. ಕಾಲೇಜಿಗೆ ಕ್ಯಾಮೆರಾ ಜೊತೆಗೆ ಬರ್ತಿತ್ತು. ಎಲ್ಲ ಬಗೆಯ ಕಾರ್ಯಕ್ರಮಗಳ ಪಟಗಳು ಆ ಡಿಜಿಟಲ್ ಕ್ಯಾಮೆರಾದಲ್ಲಿ ಸೆರೆಯಾದವು. ಪ್ರಿನ್ಸಿಪಾಲಳಾಗಿ ಪ್ರಗತಿಯ ವರದಿಗೆಲ್ಲ ಚಿತ್ರದಾಖಲೆ ಸಿದ್ಧಪಡಿಸುತ್ತಿದ್ದೆ. ಇದೇ ಕೆಲಸ ಮುಂದಿನ ಮಂಡ್ಯದ ಕಾಲೇಜಿನಲ್ಲೂ ಮುಂದುವರೆಸಿದೆ.
2009ರಲ್ಲೇ facebook ಲೋಕಕ್ಕೆ ಪ್ರವೇಶಿಸಿದ್ದೆ. ಕಾಲೇಜಿನ ಕಾರ್ಯಕ್ರಮಗಳ ಪಟ ಅಲ್ಲಿ ದಾಖಲಾಗುತ್ತಿದ್ದವು. ಮಂಡ್ಯಕ್ಕೆ ಬಂದ ಬಳಿಕ ಒಳಗಿನ ಆಲೋಚನೆಗಳೆಲ್ಲಾ ಕ್ರಿಯಾರೂಪಕ್ಕೆ ಬರತೊಡಗಿದವು. ಸರಿ, ಬೇರೆ ಪಾಯಿಂಟ್ ಅಂಡ್ ಶೂಟ್ ಸೋನಿ ಕ್ಯಾಮೆರಾ ಕೈಗೆ ಬಂತು. ಇವತ್ತಿಗೂ 2012-2015ರ ಅವಧಿಯ ನನ್ನ ಫೇಸ್ ಬುಕ್ ತೆರೆದರೆ ಹೆಚ್ಚು ಪಾಲು ಮಂಡ್ಯ ಕಾಲೇಜಿನ ವೈವಿಧ್ಯಮಯ ಕಾರ್ಯಕ್ರಮಗಳ ದಾಖಲೆಗಳೆ ತುಂಬಿವೆ. ನನ್ನ ಕಂಪ್ಯೂಟರಲ್ಲಿ, ಹಾರ್ಡ್ ಡಿಸ್ಕ್ ನಲ್ಲಿ ಮೂರು ವರ್ಷದ ಸಾವಿರಾರು ಪಟಗಳು ನೂರಾರು ಫೋಲ್ಡರುಗಳಲ್ಲಿ ಭರ್ತಿಯಾಗಿವೆ… ಆ ದಿನಗಳ ಯಾನದ ಹೆಗ್ಗುರುತಾಗಿ…
ವೃತ್ತಿಯಾಚೆ ಬಂದ ಬಳಿಕ….
2015ರ ಮೇ ತಿಂಗಳು ಮೂವತ್ತೈದು ವರ್ಷದ ಪ್ರಯಾಣಕ್ಕೆ ತೆರೆ ಎಳೆದು ಹೊರೆ ಕಳಚಿದ ಕ್ಷಣ. ಹೊರಬಂದೆ, ಆದರೆ ಹಗುರಾಗಿರಲಿಲ್ಲ. ಕಣ್ಣೀರು ಎದೆಯೊಳಗೆ ತಟ್ಟಾಡುತ್ತಿತ್ತು. ಅದೇ ಕಾಲೇಜಿನಲ್ಲಿ ಪದವಿ ಪಡೆದಿದ್ದ ನಾನೆಂಬೊ ನಾನು ಅಲ್ಲೆ ಉಪನ್ಯಾಸಕಿಯಾಗಿ, ವಿಭಾಗದ ಮುಖ್ಯಸ್ಥೆಯಾಗಿ, ಅದೇ ಕಾಲೇಜಿನ ಪ್ರಿನ್ಸಿಪಾಲಾಗಿ ನಿವೃತ್ತಳಾಗಿದ್ದೆ. ನೆನೆದರೆ ಸಂಭ್ರಮದ ಪಯಣ. ಆದರೂ ಕೊನೆಯ ದಿನಗಳು ಮಾಡಿದ ಪರಿವರ್ತನೆಯ ಪರಿಣಾಮ ಹಕ್ಕಿ ದಾರಿ.
ನಿವೃತ್ತಿ ಆದ ನಂತರವೂ ಕಾಡಿಸಿದ ಹಳೆಯ ನಂಜು ಉಳಿದಿತ್ತು. ಅದರಿಂದ ಹೊರಬಂದು ಬದುಕಿನ ಅರ್ಥ ಬೇರೆಯಾಗಿ ಕಂಡುಕೊಳ್ಳಬೇಕಿತ್ತು. ಮುಂಜಾನೆ ಮನೆಯ ಮುಂದಿನ ಲಾನಿನಲ್ಲಿ ಕೂತಿರುತ್ತಿದ್ದೆ ತಲೆಯ ಮೇಲೆ ಬೆಟ್ಟ ಬಿದ್ದವಳಂತೆ. ನಿಟ್ಟುಸಿರೂ ಮನೆಯ ನನ್ನ ರೂಮಿನಲ್ಲಿ ಜೋರಾಗಿ ಬಿಡಲಾಗದ ಸ್ಥಿತಿಯಲ್ಲಿದ್ದೆ. ತನ್ನ ಜೀವನದ ಕೊನೆಯ ದಿನಗಳನ್ನು ಅಮ್ಮ ನನ್ನೊಡನೆ ಕಳೆಯುತ್ತಿದ್ದರು, ತನ್ನ ಪತಿ ಗತಿಸಿದ ಬಳಿಕ.
ಅಪ್ಪ ಪ್ರಿನ್ಸಿಪಾಲ್, ತಮ್ಮಂದಿರಿಬ್ಬರು ಒಬ್ಬ ಇಂಜಿನಿಯರಿಂಗ್ ಮತ್ತೊಬ್ಬ ಡೆಂಟಲ್ ಕಾಲೇಜುಗಳ ಪ್ರಿನ್ಸಿಪಾಲ್, ತಂಗಿಯೂ ಒಂದು ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದವಳು. ಹೀಗೆ ಪ್ರಿನ್ಸಿಪಾಲ ಹುದ್ದೆಗಳ ಆಚೇಚೆಯೆ ಜೀವನ ನೋಡಿದ್ದ ಅಮ್ಮನೆದುರು ಪ್ರಿನ್ಸಿಪಾಲಾಗಿ ನಿವೃತ್ತಿ ಪಡೆದಿದ್ದ ನಾನು ಅಳು ನುಂಗಿ ಲಾನಿನಲ್ಲಿ ಮೂರ್ನಾಲ್ಕು ಗಂಟೆ ಕಾಲ ಕೂತಿರುತ್ತಿದ್ದೆ. ಇದ್ದ ಹೂಗಳು ಚಿಟ್ಟೆ ಎಲ್ಲವೂ ಕೈಬೀಸಿ ಮನಸಿಗೆ ಕನ್ನ ಕೊರೆದವು. ಮೊಬೈಲಿನಲ್ಲಿ ತೆಗೆದವಳು ಒಳಗೆ ಹೋಗಿ ಕ್ಯಾಮೆರಾ ಸಮೇತ ಹೊರಬಂದೆ. ಆದರೆ ಹೂ ಚಿತ್ರ ತೆಗೆವ ಮನಃಸ್ಥಿತಿ ಬದಲಾಯಿತು… ಯಾಕೋ ಏನೂ ಸವಾಲಲ್ಲ ಎಂದು ಕಾಡತೊಡಗಿತು. ಸವಾಲುಗಳು ಎದುರಾದಾಗಲೆಲ್ಲಾ ಲೀಲಾ ಗರಿಗೆದರಿ ಫೀಲ್ಡಿಗೆ ಇಳಿಯುವವಳು.
ಹೂ ಚಂದ ಇಲ್ಲಾಂತ ಅಲ್ಲ, ಆದರೆ ಚಂದಕಿಂತ ಹೆಚ್ಚಿನ ಚೈತನ್ಯ ಇಲ್ಲ, ನನಗೇನೊ ಕೊರತೆ ಕಂಡಾಗ ಅಂಗಳಕ್ಕೆ ಹಾರಿ ಬಂದ ಹಕ್ಕಿಯತ್ತ ಕ್ಯಾಮೆರಾ ತಿರುಗಿತು… ಅಯ್ಯಬ್ಬಾ ತಿರುಗಿದ್ದು ಕ್ಯಾಮೆರಾವೆ… ತಿರುತಿರುಗಿದ್ದು ನಾನು. ಲಾನ್ ಮಿತಿ ದಾಟಿ ಗೇಟಾಚೆಗೂ ಬಂದೆ, ವಾಕಿಂಗ್ ನೆಪದಲ್ಲಿ. ಬಚ್ಚಿಟ್ಟುಕೊಂಡು ಕ್ಯಾಮೆರಾವನ್ನು. ಏನು ಮಾಡೋದು, ರಸ್ತೆಯ ನಟ್ಟನಡುವೆ ಆ ಬದಿ ಈ ಬದಿ ಕ್ಯಾಮೆರಾ ಹಿಡಿದು ನಿಲ್ಲಲಾಗದ ಸಾಮಾಜಿಕ ಆವರಣದಲ್ಲಿದ್ದೆ, ಏನು ಮೇಡಂ ಇದು ಹೀಗೆ ಎನ್ನುವವರ ನಡುವೆ ಇರುವ ಹಾಗೆ ವೃತ್ತಿ ಆವರಣ ಇತ್ತು.
ವಾಕಿಂಗ್ ಬಿಟ್ಟುಬಿಟ್ಟೆ. ಈಗಲೂ ಬಿಡಲು ಗೊತ್ತಿರುವ ಒಂದೇ ವಾಹನವಾದ ಸ್ಕೂಟರ್ ಏರಿ ಮಂಡ್ಯ ಸಿಟಿ ಮಿತಿ ದಾಟಿ ಅಕ್ಕಪಕ್ಕದ ಹಳ್ಳಿಗಳ ಗದ್ದೆ ಹೊಲಗಳ ದಾರಿಯಲ್ಲಿ ಠಳಾಯಿಸತೊಡಗಿದೆ. ಈ ಮಧ್ಯದಲ್ಲಿ ಅಮ್ಮ ಅದರ ಹಿಂದಿನ ವರ್ಷ ವಿದಾಯ ಹೇಳಿದ್ದ ಅಪ್ಪನ ಜೊತೆಗೂಡಲು ಹೋಗಿಯೇ ಬಿಟ್ಟರು.
ಸೋನಿ ಪಕ್ಕಕ್ಕಿಟ್ಟು 2016ರ ಜನವರಿಯಲ್ಲಿ ಆನ್ ಲೈನಿನಲ್ಲಿ canon 700d ಕೊಂಡೆ, ಜೊತೆಗೆರಡು ಕಿಟ್ ಲೆನ್ಸ್. ಒಂದೆರಡು ವಾರ ಬಿಟ್ಟು 70-300. ಸೇರಿಕೊಂಡಿತು. ಪಕ್ಕಾ ಫೋಟೊ ಹೊಡೆಯುವವಳಾಗಿ ಬ್ಯಾಗೇರಿಸಿ ಸೀರೆಧಾರಿಯಾಗಿಯೇ ಫೀಲ್ಡಿಗಿಳಿದೆ.
ಎರಡು ತಿಂಗಳು ಕಳೆಯುವ ವೇಳೆಗೆ ಕ್ಯಾಮೆರಾ, ಡ್ರೆಸ್ ಎರಡೂ ಕಿರಿಕ್ ಎನಿಸಿತು… ಕಿರಿಕಿರಿ ತಾಳಲಾಗಲಿಲ್ಲ. ಬೆಂಗಳೂರಿಗೆ ಹೊರಟೇಬಿಟ್ಟೆ ಹೊಸ ಕ್ಯಾಮೆರಾ ಕೊಳ್ಳಲು. ನೆಟ್ಟಿನಲ್ಲೆ ಹುಡುಕಾಟ ಮಾಡಿದ್ದೆ, ಆದರೆ ಖಚಿತವಿರಲಿಲ್ಲ ಯಾವುದನ್ನು ಕೊಳ್ಳಬೇಕು ಎಂದು. ಕೇಳಿ ತಿಳಿಯಲು ಫೀಲ್ಡಿನಲಿ ಪರಿಚಿತರೂ ಇರಲಿಲ್ಲ. ನನ್ನ ಚಿಕ್ಕಪ್ಪನ ಮಗ ಒಂದಿಷ್ಟಿಷ್ಟು ಹಕ್ಕಿಪಕ್ಕಿ ಚಿತ್ರ ತೆಗೀತಿದ್ದ. ಕೇಳಿದೆ… ಅದೂ ಕ್ಯಾನನಿನಲ್ಲಿ ಮಾತ್ರ ಎಂದು ಸ್ಪಷ್ಟ ಪಡಿಸಿ.
ಅವ ಹೇಳಿದ ಕಲಿಯಲು ಇದು ತಗೊಳಿ ಆಮೇಲೆ ಬೇರೆ ಎಂದು. ಅರೆ ಕಲಿಯೋಕೆ ಒಂದು ಕ್ಯಾಮೆರಾನೆ, ತಗೊಂಡಿದ್ದರಲ್ಲೆ ಕಲಿಯೋದಲ್ವಾ! ನಾನು, ನನ್ ಲೈಫ್ ಬರಿ ಟ್ರಯಲ್ ಅಂಡ್ ಎರರ್ ಗಳೆ ತುಂಬಿದ್ದವು. ತಪ್ಪಾದರೆ ಒಂದು ಅನುಭವ, ಇಲ್ಲದಿದ್ದರೆ ಮುಂದೆ… ಇದೇ ದಾರಿ ಸವೆಸಿದ್ದೆ. ರೀಸರ್ಚ್ ಟೈಮಲ್ಲಿ ಕಂಪ್ಯೂಟರ್ ತಗೊಂಡಾಗಲೂ ‘ಏನೇನೂ ಗೊತ್ತಿಲ್ಲ, ಕಲಿಯೋದು ಹೇಗೆ’ ಎಂದು ಕೊಟ್ಟವನಿಗೆ ಕೇಳಿದ್ದೆ. ಅವ ಹೇಳಿದ `ಆನ್ ಅಂಡ್ ಆಫ್ ಕಲೀರಿ ಎಲ್ಲಾ ಬರುತ್ತೆ’. ಓಹೋ ಸ್ವಿಚ್ ಆನ್ ಮಾಡಿ ಆಫ್ ಮಾಡಿದರೆ ಕಂಪ್ಯೂಟರ್ ಕಲಿಯಬಹುದಾ ಬೆರಗಿನಿಂದ ನೋಡಿದ್ದೆ. ಅವನ ಮಾತು ನಿಜ, ಅವತ್ತು ಆನ್ ಮಾಡಿದ್ದು…. ಮುಂದೆ ನನಗೆ ಅವಶ್ಯ ಅನ್ನಿಸಿದ್ದನ್ನೆಲ್ಲಾ ಕೀಲಿ ಹೊಡೆದು ಹೊಡೆದು ಕಲಿತು ಫೋಟೊಶಾಪ್, ಇನ್ ಡಿಜೈನ್, ಲೈಟ್ ರೂಂ ಎಂದು ಸ್ವಯಂ ಕಲಿಕೆಯ ಹಾದಿಯಲ್ಲಿ ಸಾಗಿದ ಓಟದಿಂದ ಇಲ್ಲಿ ತನಕ ಆಫ್ ಮಾಡಿಲ್ಲ.
ಸರಿ ಈಗಲೂ ಟ್ರಯಲ್ ಎಂದೆ canon 700d ಹಿಡಿದದ್ದು, ಅದು ಸಾಕಾಗಿ ಬೆಂಗಳೂರಿಗೆ ಹೊರಟಿದ್ದು. ತಮ್ಮನಿಗೆ ಹೇಳಿದೆ ಆನಂದರಾವ್ ಸರ್ಕಲ್ ಹತ್ರ ಇದೀನಿ ಬಾ. ಅವ ಹೇಳಿದ ನನಗೆ ಮೀಟಿಂಗಿದೆ, ಅಲ್ಲೇ ಫೋಟೊ ಸರ್ಕಲ್ ಇದೆ ಹೋಗಿ ಅಂದ. ಇನ್ನೇನು ಮಾಡೋದು ಹೋದೆ. ಲೇಟೆಸ್ಟ್ ಯಾವುದು, ಅದ್ಯಾವುದು ಹತ್ತು ಹಲವು ಪ್ರಶ್ನೆ ಹಾಕಿದೆ, ಅಂಗಡಿಯವ ಕೇಳಿದ, ಏನು ಉದ್ದೇಶ? ಹೇಳಿದೆ ಹಕ್ಕಿ ಚಿತ್ರ ತೆಗೆಯೋಕೆ. ಅವನ ಮುಂದಿನ ಪ್ರಶ್ನೆ `ಯಾರಿಗೆ ಮೇಡಂ ಗಿಫ್ಟಾ ನಿಂ ಮಗನಿಗಾ..’
ಅರೆರೆ... ಮಗನಿಗಾ! ಆದರೆ ಮಗನೇ ಇಲ್ವಲ್ಲ, ಎಲ್ಲಿಂದ ತರೋದು. ಇರೋರು ಇಬ್ಬರೂ ಹುಡುಗಿಯರು, ವೈದ್ಯೆಯರು… ಈ ನಾನು ಆಡೋ ಆಟಗಳ ಕಡೆ ಗಮನ ಕೊಡದೋರು, ಕೊಡುವಷ್ಟು ಪುರಷೊತ್ತು ಇಲ್ಲದವರು. ಇರುವ ಇಬ್ಬರು ಮೊಮ್ಮಕ್ಕಳಲ್ಲಿ ಒಬ್ಬಳು ಕ್ಯಾಮೆರಾಕ್ಕೆ ಪೋಸ್ ಕೊಡುವವಳೆ ವಿನಾ ಹಿಡಿಯಲು ಮುಂದೆ ಬರುವವಳಲ್ಲ. ಈಗೀಗ ಮೂಡ್ ಇದ್ರೆ ಕ್ಲಿಕ್ ಮಾಡ್ತಾಳೆ. ಹಕ್ಕಿಗಿಂತ ನನ್ ಪಟ ಹಿಡಿದದ್ದೇ ಹೆಚ್ಚು. ಇನ್ನು ಚಿಕ್ಕವ ಮೊಮ್ಮಗ ಅವನಿಗೆ ಅವನ ಆಟದ ಲೋಕದಿಂದ ಪುರಸೊತ್ತಿರಲಿಲ್ಲ.
ಅಂಗಡಿಯವನಿಗೆ ಹೇಳಿದೆ ‘ಇಲ್ಲಪ್ಪ ಕ್ಯಾಮೆರಾ ನನ್ ನನಗೆ’. ಅವನು ಗಾಬರಿ ಬಿದ್ದ.… ಏನಿವಮ್ಮನಿಗೆ ಹುಚ್ಚಾ. ಅರವತ್ತು ದಾಟಿದ ಮುದುಕಿ ಮೂಲೆಲಿ ಕೂತು ಮಣಮಣ ಮಂತ್ರ ಹೇಳೊ ಬದಲು ಕ್ಯಾಮೆರಾ ಹಿಡಿದು ಹಕ್ಕಿ ಹಿಂದೆ ಅಲೀತಾಳಾ… ಮತ್ತೊಮ್ಮೆ ಕೇಳಿ ಖಚಿತ ಪಡಿಸಿಕೊಂಡ ಮೇಲೆ ಸ್ವಲ್ಪ ಗೌರವ ಕೊಡುತ್ತಾ ಈ ಮಾಡೆಲ್ ನೋಡಿ ಫುಲ್ ಪ್ರೇಮ್ ಕ್ಯಾಮೆರಾ ಇದೇ ರೀಸೆಂಟು ಎಂದು canon mark iii ಮುಂದಿಟ್ಟ. ನಿಜ ಏನೂಂದರೆ ಫುಲ್ ಫ್ರೇಂ, ಕ್ರಾಪ್ ಫ್ರೇಮು… ಹಾಗೆಂದರೇನೆಂಬ ಅಆ ಇಈ ಗೊತ್ತೇ ಇರಲಿಲ್ಲ.
ಲೆನ್ಸ್ 24-105 ಜೊತೆಗೆ ಬರುತ್ತೆ ಎಂದು ಅದನ್ನು ತೋರಿಸಿದ. ಲೆನ್ಸ್ ಬೇಡಾಂದ್ರೆ ಇಷ್ಟಾಗುತ್ತೆ, ಒಟ್ಟಿಗೆ ಸೇರಿದ್ರೆ ಇಷ್ಟು ಎಂದ. ನಾನು ಹಕ್ಕಿ ಮಾತ್ರ ಹಿಡಿಯೋಳು ಅಂತಾ ಡಿಸೈಡ್ ಮಾಡಾಗಿತ್ತಲ್ಲ 24-105 ಯಾಕೆ ಬೇಕು ಅನ್ನಿಸಿ ಬರಿ ಕ್ಯಾಮೆರಾ ಸಾಕು ಎಂದೆ. ಒಂದು ಲಕ್ಷದ ಎಂಬತ್ತು ಸಾವಿರ ಅಂದ, ಕ್ಯಾಮೆರಾ ಬೇಕೇ ಬೇಕಿತ್ತಲ್ಲ ಕಾಸು ಕೊಟ್ಟೆ, ಮುದ್ದಾದ ಕರಿಪೆಟ್ಟಿಗೆ ಖುಷಿಯಿಂದ ಕೈಗೆತ್ತಿಕೊಂಡೆ. ತಕ್ಕೊಂಡು ಹೋಗಿದ್ದ ಕಾಸೂ ಮುಗಿದಿತ್ತು. ಅಂಗಡಿ ಹುಡುಗ ಸಣ್ಣಪುಟ್ಟದು ತೆಗೆಯೋಕೆ ಈ 50 mm ನೋಡಿ ಎಂದು ಲೆನ್ಸ್ ತೆಗೆದು ಒಂದೆರಡು ಕ್ಲಿಕ್ ಮಾಡಿ ತೋರಿಸಿದ. ಮಕ್ಕಳ ತರಹ ಆಸೆಯಾಯ್ತು. ಆದರೆ ಕೈಲಿ ಕಾಸಿರಲಿಲ್ಲ.
ಮಾಲೀಕ ಹೇಳಿದ ಪರವಾಗಿಲ್ಲ ತಗೊಂಡೋಗಿ, ದುಡ್ಡು ಬ್ಯಾಂಕಿಗೆ ಹಾಕಿ ಎಂದು ಅಕೌಂಟ್ ನಂಬರ್ ಕೊಟ್ಟ. ನನ್ನ ಹತ್ರ ಕಾರ್ಡ್ ಇರಲಿಲ್ಲ, ಕಾರ್ಡ್ ಇದ್ದರೆ ಉಜ್ಜೋ ಅಭ್ಯಾಸ, ಬೇಡದ್ದೆಲ್ಲ ತಗೊಳೊ ಸೆಳೆತ ಎಂದು ಕಾರ್ಡ್ ಕೈಬಿಟ್ಟಿದ್ದೆ. ಡಿಜಿಟಲ್ ವ್ಯವಹಾರಕ್ಕೆ ಇನ್ನೂ ತನಕ ಕುದುರಿಲ್ಲದವಳು. ಆದರೆ ಒಂದೇ ದಿನದಲ್ಲಿ ನನ್ನ ಮೇಲೆ ನಂಬಿಕೆ ಇರಿಸಿ ಲೆನ್ಸ್ ಕೊಟ್ಟನಲ್ಲ ಥ್ಯಾಂಕ್ಸ್ ಅಂದೆ. ನಾಲ್ಕೈದು ದಿನಗಳಲ್ಲಿ ಅಲ್ಲಿಂದಲೇ canon 100-400 is ii ಕೂಡಾ ಮನೆಗೆ ಬಂತು. ಅತ್ಯದ್ಭುತ ಲೆನ್ಸ್ ಅದು.. ಇದುವರೆಗಿನ ನನ್ನ ಎಲ್ಲ ಹಕ್ಕಿ ಪಯಣಗಳಲ್ಲೂ ನಿಷ್ಠೆಯಿಂದ ತನ್ನಳತೆಯ ಕೆಲಸ ಮಾಡ್ತಿದೆ.
ಆದರೆ ಈ ಕೋವಿಡ್ ಅವಧಿಯಲ್ಲಿ ಮನೆಯಂಗಳದಲಿ ಗೂಡುಮಾಡಿದ್ದ ಸಿಂಪಿಗನನ್ನು ಹಿಡಿಯಲು ಟ್ರೈಪಾಡಿಗೆ canon 7 d mark ii ಗೆ ಈ 100-400 ಹಾಕಿ ಇಟ್ಟಿದ್ದೆ. ನನ್ ಗಂಡ ಹಿಂದೆ ನೋಡದೆ ನೆಲಕ್ಕುರುಳಿಸಿದ. ಲೆನ್ಸ್ ಕೆಲಸ ಮಾಡಲು ಮರೆತಿದೆ. ನಾನು ಅವನಿಗೂ ಬೈಯಲಿಲ್ಲ. ಯಾಕೆಂದರೆ ಕೊರೊನಾ ಅಂತಾ ಹೆದರಿಸಿ ಕ್ಲಿನಿಕ್ ಮುಚ್ಚಿಸಿ ಮನೇಲಿ ಕೂರಿಸಿದ್ದೆವು, ಅವ ಮೊದಲೇ ಕೊಯ್ಯ ಕೊಯ್ಯಾ ಕೊರ್ ಅಂತ ಕೂತಿದ್ದ. ಇನ್ನು ಬೈದು ಯಾಕೆ ಬೇಜಾರು ಮಾಡಿಕೊಳ್ಳೊದು ಎಂದು ಸುಮ್ಮನಾದೆ. ನಾಲ್ಕು ವರ್ಷದ ನಿಯತ್ತಿನ ಸೇವೆ ಸಲ್ಲಿಸಿದ ಲೆನ್ಸ್ ಮಲಗಿದೆ. ರಿಪೇರಿಗೆ ಬೆಂಗಳೂರಿಗೆ ಹೋಗಬೇಕು. ಕೊರೊನಾ…. ಕೊರೊನಾ… ಮೂಲೇಲಿ ಕೂರಿಸಿದ್ದೇನೆ ಅದನ್ನು ಮತ್ತು ನನ್ನನ್ನು.
2016ರ ಮಾರ್ಚ್ ವೇಳೆಗೆ ಈ 100-400 ಬಂತಲ್ಲಾ ಆಗಲೇ ಬಹಳ ದುರಾಸೆಯಿಂದಲೇ 100-600 tamaron ಲೆನ್ಸ್ ಕೊಂಡೆ… ಓಹೋಹೋ ಆಸೆಗೇನು ಆಕಾಶವೂ ಸಾಟಿಯಲ್ವಲ್ಲ. ಚಿತ್ರ ತೆಗೀತೀನೊ ಬಿಡ್ತೀನೊ ಆದರೆ gearwise full plegded photographer ಆಗಿ ರೆಡಿಯಾದೆ…. ಟ್ರೈಪಾಡ್ ಒಂದನ್ನು ಬಿಟ್ಟು. ನಾನು ಸ್ಟ್ರಾಂಗ್ ಅಲ್ವಾ, ಕೈಲಿ ಹಿಡಿದೇ ತೆಗೆಯುತ್ತೇನೆ ಎಂಬ ಒಣಜಂಭ.
ಅರೆರೆ ಅರೆರೆ….
ಇನ್ನೊಂದು ವಿಷಯ. ಸೀರೆಯದ್ದು. ಹದಿನೈದಕ್ಕೆ ಮದುವೆಯಾಗಿ ಸೀರೆ ಸುತ್ತಿಕೊಳ್ಳಲಾರಂಭಿಸಿ ನಂತರದ ಓದುವಾಟ ಓದಿಸುವಾಟದ ಉದ್ದಕ್ಕೂ ಏಕಮೇವಾದ್ವಿತೀಯವಾಗಿ ಸೀರೆಯೆಂಬ ವಸನಧಾರಿಯಾಗಿ ಅರವತ್ತರ ತನಕ ಪಯಣಿಸಿದ್ದು ಈ ಹಕ್ಕಿದಾರಿಯಲ್ಲಿ ಇಕ್ಕಟ್ಟಾಗತೊಡಗಿತು. ಅದರ ಸೆರಗು-ನಿರಿಗೆ ಎರಡೂ ಭಾರಿ ಕಾಟ ಕೊಡಲಾರಂಭಿಸಿತು. For the first time ವಿವಾಹೋತ್ತರ ಲೈಫಲ್ಲಿ ಸೀರೆ ಬಿಟ್ಟು ಬೇರೆ ಒಂದು ಡ್ರೆಸ್ಸಿಗೆ ಶಿಫ್ಟ್ ಆದೆ.. ಇದೂ ಒಂದು ವಿಷಯವೇ ಒದ್ದಾಟವೇ ಎಂದರೆ ಹೌದು ಎಂದೆ ಹೇಳುವೆ.
ಅಷ್ಟು ಸುಲಭವಲ್ಲ ದಾರಿ ಬದಲಿಸೋದು. ಆದರೆ ನಾನು ಹೊರಟು ಬಿಟ್ಟಿದ್ದೆ right about turn ದಾರಿಯಲ್ಲಿ… ಪ್ರವಾಹದಲ್ಲಿ. ಕಡಲು ಸೇರುವ ವಯಸಿನಲ್ಲಿ ನದಿಮೂಲ ಸೇರುವ ಹಾದಿಯಲ್ಲಿ. ಸುಮ್ಮನೆ ಕಡಲೊಳಗೆ ಅಡಗುವ ಬದಲು… ನಾನು ಯಾಕೆ ಹೀಗೆ ಹೊರಡಬಾರದೆಂದು ಹೊರಟವಳು. ಬಂಧನಗಳ ಬೇಲಿಯನ್ನು ದಾಟಿದವಳು. ಹೊಸ ದಾರಿಯ ಬಗ್ಗೆ ಮಾತುಗಳ ಬಾಣ ಬರದೆ ಇರುತ್ತವೆಯೇ. ಮನೆಯವರಿಗೆ ಗೊತ್ತಿತ್ತು…
ಈ ಗಾಂಧಿ ಪ್ರೇಮಿ ಅವನ ಹಾಗೆ. ಒಳ್ಳೆಯದ್ದೆ ಆಗಲಿ ಕೆಟ್ಟದ್ದೇ ಆಗಲಿ ಅವನ ಹಾಗೆ ಹಟಮಾರಿ, ಹೇಳಿದ ಹಾಗೆ ಮಾಡೋಳು ಎಂದು. ಇಷ್ಟಕ್ಕೂ ಮೀರಿ ಇದು ಒಳ್ಳೆಯದ್ದು, ಇದು ಕೆಟ್ಟದ್ದು ಎಂದು ನಮ್ಮ ಜೀವನದ ಬಗ್ಗೆ ಯಾರ್ಯಾರೋ ಹೇಗೆ ನಿರ್ಧರಿಸುತ್ತಾರೆ, ಅವರ್ಯಾರು ನಿರ್ಧರಿಸೋಕೆ. ಮಾತುಗಳ ಈಟಿ ಮೀಟಲು ಬಲ್ಲವರು ಮ್ಯಾಕ್ಸಿಮಮ್ ಏನು ಹೇಳ್ತಾರೆ ಇವಳಿಗೆ ಹುಚ್ಚು ಅಂತಾ ತಾನೆ. ಇಂತಹ ಹುಚ್ಚುಗಳಿಲ್ಲದೆ ಹೊಸದಾರಿ ಹೇಗೆ ತೆರೆಯೋದು.
ಇಂತಹ ಹುಚ್ಚುಗಳ ಬೆಂಬತ್ತಿ ವೃತ್ತಿ ಪ್ರವೃತ್ತಿಗಳಲ್ಲಿ ಪ್ರಯೋಗಗಳನ್ನು ಮಾಡಿದ್ದು. ಗಾಂಧಿ, ಕುವೆಂಪು, ಟ್ಯಾಗೂರ್ ಅಲ್ಲದೆ ಇನ್ನೂ ಹಲವು ಚಿತ್ರ ಸಂಗ್ರಹದ ಪ್ರದರ್ಶನದ ಬೆಂಬತ್ತಿದ್ದು. ಸಾವಿರಾರು ನೋಡುಗರ ಕಣ್ಣಿಗೆ ನಿಲುಕಿಸಿದ್ದು. ನನ್ನೊಳಗಿನ ನನ್ನನ್ನು ನಾನೇ ಕಂಡುಕೊಳ್ಳಲು ಸಾಧ್ಯವಾಗಿದ್ದು.
ಬಹುಶಃ ಗಾಂಧಿ ಹಿಂದೆ ಚಿತ್ರಕ್ಕಾಗಿ ಹೋಗದೆ ಇದ್ದಿದ್ದರೆ, ನನ್ನ ಮುಂದಿನ ಎಲ್ಲ ವೃತ್ತಿ ಸಂಬಂಧಿತ ಪ್ರಯೋಗಗಳಿಗೂ ಮುನ್ನುಗ್ಗುತ್ತಿರಲಿಲ್ಲ. My life, my experiments… ಹುರ್ರೆ… ಆಗ ಇಲಾಖೆಯಲ್ಲಿ ಇದ್ದ ಮೇಲಿನ ನಿರ್ಬಂಧ ಕೆಳಗಿನ ಕಾಲೆಳೆತಗಳು ಇಲ್ಲಿಲ್ಲ. ನೀನೆ ಆನೆ, ನೀನು ನಡೆದದ್ದೇ ಹೆದ್ದಾರಿ ನನ್ನ ಮಟ್ಟಿಗೆ ನನಗೆ… ನಡೆ ಮುಂದೆ ನಡೆ ಮುಂದೆ ಲೀಲಾ…
ಡಾ. ಲೀಲಾ ಅಪ್ಪಾಜಿ ಮೇಡಂ ಅವರು ಮಂಡ್ಯ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ನನ್ನ ಗುರುಗಳಾಗಿದ್ದರು. ಮೇಡಂ ಅವರದ್ದು ಬಹಳ ಚೈತನ್ಯದಾಯಕ ವ್ಯಕ್ತಿತ್ವ, ಕ್ರಿಯಾಶೀಲ ಮನಸ್ಸು. ನನ್ನಂತಹ ಹಲವಾರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದವರು.. ಅವರ ಹೆಸರು ನೆನೆದರೂ ಮನಸ್ಸು ಹಸಿರಾಗಿ ಹಕ್ಕಿಯಾಗಿ ಹಗುರಾಗುತ್ತದೆ… ಅವಧಿಯ ಈ ಲೇಖನಕ್ಕೆ ಧನ್ಯವಾದಗಳು
ಯುವ ಫೊಟೋಗ್ರಾಫರ್ ಗಳಿಗೆ ಹುರುಪು ತುಂಬುವ ಲೇಖನ.
ನಿಮ್ಮ ಚಿತ್ರಗಳನ್ನ ನೋಡ್ತಿದೀನಿ ಮೇಡಮ್ ಹಕ್ಕಿಗಳು ಚಿತ್ರಗಳಲ್ಲಿ ಹಾಡ್ತವೆ.
ಲೀಲಾ ಮೇಡಂ. ನಿಮ್ಮ ಹಕ್ಕಿಗಳ ಹಿಂದಿನ ಕಣ್ಣು, ಮನಸ್ಸುಗಳ ಅಭಿಮಾನಿ ನಾನು. ತಿರುವುಗಳನ್ನು ಚೆಂದಾಗಿ ಸೆರೆ ಹಿಡಿದಿದ್ದೀರಿ. ಕ್ಯಾಮೆರಾ ಬೇಗ ರಿಪೇರಿಯಾಗಲಿ. ನಿಮ್ಮೊಂದಿಗೆ ಚಿತ್ರಬೇಟೆಗೆ ನಾನೂ ಬರುತ್ತೇನೆ ಎಂದು ಈಗಾಗಲೇ ಹೇಳಿದ್ದೇನೆ.
ನಿಮ್ಮ ಹಕ್ಕಿ ಫ಼ೋಟೊಗಳು ನನ್ನ ಬೆರಗು…