ನಾಗ ಐತಾಳರು ಇನ್ನಿಲ್ಲ..

ಎಂ ಆರ್ ದತ್ತಾತ್ರಿ

ಕನ್ನಡದ ಹಿರಿಯ ಬರಹಗಾರರಾದ ನಾಗ ಐತಾಳರು ಇಂದು ಲಾಸ್ ಏಂಜಲಿಸ್ ಹತ್ತಿರದ ಆರ್ಕೇಡಿಯಾದಲ್ಲಿ ನಿಧನರಾಗಿದ್ದಾರೆ. ಕೊನೆಯತನಕ ತುಂಬಿತುಳುಕುವಷ್ಟು ಜೀವನೋತ್ಸಾಹವನ್ನು ಉಳಿಸಿಕೊಂಡಿದ್ದವರು. ಅವರಿಗೆ ತೊಂಬತ್ತು ದಾಟಿರಬಹುದು, ಆದರೆ ಉತ್ಸಾಹದಲ್ಲಿ ಯಾವತ್ತೂ ಮೂವತ್ತೇ. ಒಮ್ಮೆ ಒಂದು ಕಾರ್ಯಕ್ರಮಕ್ಕಾಗಿ ಅವರನ್ನು ಮತ್ತು ಅವರ ಪತ್ನಿ ಲಕ್ಷ್ಮಿಯವರನ್ನು ಲಾಸ್ ಏಂಜಲೀಸಿನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ನನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದೆ. ದಾರಿಯುದ್ದಕ್ಕೂ ನನ್ನನ್ನು ಹಗುರಭಾವದಲ್ಲಿಟ್ಟಿದ್ದರು. “ನಾನಿರುವ ಊರಿಗೆ ಆರ್ಕೇಡಿಯಾ ಎಂಬ ಹೆಸರು ಹೇಗೆ ಬಂತು ಗೊತ್ತಾ ದತ್ತಾತ್ರಿ?” ಎಂದು ಕೇಳಿದರು. “ಗೊತ್ತಿಲ್ಲ” ಎಂದೆ. “ಮೊದಲು ಐದು ಕೇಡಿಗಳಿದ್ದರಂತೆ, ಆಗ ಐದ್ಕೇಡಿಯಾ ಎನ್ನುತ್ತಿದ್ದರು. ನಾನು ಬಂದು ಆ ಊರು ಹೊಕ್ಕಿಕೊಂಡೆನಲ್ಲಾ, ಈಗ ಆರು ಕೇಡಿಗಳಾಗಲಿಲ್ಲವಾ?” ಎಂದು ಗಹಗಹಿಸಿ ನಕ್ಕಿದ್ದರು. ಇನ್ನೊಮ್ಮೆ ಮಾತನಾಡುತ್ತ, ಶಿವರಾಮ ಕಾರಂತರ ಮರಳಿ ಮಣ್ಣಿಗೆಯ ಮೊದಲ ರಾಮ ಐತಾಳ ನನ್ನ ಅಜ್ಜ ಎಂದಿದ್ದರು.

ಒಬ್ಬ ಹಿರಿಯ ಮತ್ತು ಲವಲವಿಕೆಯ ಸ್ನೇಹಿತನನ್ನು ಕಳೆದುಕೊಂಡ ದುಃಖ ನನ್ನದು.

ಅವರ ಬಹು ಮಹತ್ವಾಕಾಂಕ್ಷೆಯ ‘ಜೀವನ ರಹಸ್ಯ’ ಎನ್ನುವ ಪುಸ್ತಕಕ್ಕೆ ನಾನು ಹನ್ನೊಂದು ವರ್ಷಗಳ ಹಿಂದೆ ಬರೆದ ಲೇಖನವನ್ನು ಇದರೊಂದಿಗೆ ಹಾಕಿದ್ದೇನೆ. ಅದು ಒಂದು ಬಗೆಯಲ್ಲಿ ವಿಜ್ಞಾನಿ ನಾಗ ಐತಾಳರನ್ನು ಪರಿಚಯ ಮಾಡಿಕೊಡುತ್ತದೆ.

ಓಂ ಶಾಂತಿ.


ನಾಗ ಐತಾಳರ ‘ಜೀವನ ರಹಸ್ಯ’
ಪುಸ್ತಕ ಪರಿಚಯ – ಜೀವನ ರಹಸ್ಯ
(ಅಣು ಜೀವವಿಜ್ಞಾನದ ಒಂದು ಸ್ಥೂಲ ಪರಿಚಯ)
ಲೇಖಕ – ನಾಗ ಐತಾಳ
ಪ್ರಕಾಶಕರು – ಸಾಹಿತ್ಯಾಂಜಲಿ – ಕ್ಯಾಲಿಫೋರ್ನಿಯಾ, ಅಭಿನವ – ಬೆಂಗಳೂರು
ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಜೀವವಿಜ್ಞಾನ ಸಂಶೋಧಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ಲಾಸ್ ಏಂಜಲಿಸ್‌ನ ಸಮೀಪದ ಆರ್ಕೇಡಿಯಾ ಎನ್ನುವ ಊರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಡಾ. ನಾಗ ಐತಾಳರು ಇತ್ತೀಚೆಗೆ ಜೀವ ವಿಜ್ಞಾನದ ಮೇಲೆ ಕನ್ನಡದಲ್ಲೊಂದು ಪುಸ್ತಕವನ್ನು ಬರೆದಿದ್ದಾರೆ. ‘ಜೀವನ ರಹಸ್ಯ’ ಎನ್ನುವ ಈ ಪುಸ್ತಕವು ಮುನ್ನೂರ ಹದಿಮೂರು ಪುಟಗಳಲ್ಲಿ ಜೀವವಿಜ್ಞಾನದ ಪ್ರಮುಖ ಶಾಖೆಗಳನ್ನು ಸ್ಥೂಲವಾಗಿ ಪರಿಚಯಿಸಲು ನೋಡುತ್ತದೆ. ಒಬ್ಬ ವಿಜ್ಞಾನಿ ಮಾತ್ರ ಬರೆಯಬಲ್ಲಂತಹ ವೈಜ್ಞಾನಿಕ ಸೂಕ್ಷ್ಮಗಳ ಜೊತೆಗೆ ಐತಾಳರ ತುಂಬು ಜೀವನದ ಅನುಭಾವಗಳು ಮತ್ತು ವೈಚಾರಿಕತೆಯಿಂದಾಚೆಗೆ ನೋಡಬಲ್ಲ ತತ್ವಶಾಸ್ತ್ರಜ್ಞನ ಚಿಂತನೆಗಳೂ ಈ ಪುಸ್ತಕದಲ್ಲಿ ತುಂಬಿವೆ.

ಒಂಟಿ ಕೋಶದಿಂದ ಆರಂಭವಾಗುವ ಜೀವ ಅನೇಕ ಹಂತಗಳ ಪ್ರಕೃತಿ ಕ್ರಿಯೆಗಳಿಂದಾಗಿ ಬಹುಕೋಶಗಳಾಗಿ ಪರಿವರ್ತಿತಗೊಂಡು ಅನೇಕ ಅವಯವಗಳನ್ನು ಹೊಂದುವ ಮತ್ತು ಯೋಚಿಸಬಲ್ಲಂತಹ ಸಂಕೀರ್ಣ ಜೀವವಾಗಿ ಮಾರ್ಪಾಡಾಗುವ ಕ್ರಿಯೆಯನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದಷ್ಟೇ ಸಹಜವಾಗಿ ಬಾಲಕುತೂಹಲದಿಂದಲೂ ನೋಡುವ ಮುಗ್ಧತೆಯನ್ನು ನಾಗ ಐತಾಳರು ಇಡೀ ಪುಸ್ತಕದಲ್ಲಿ ಉಳಿಸಿಕೊಂಡಿದ್ದಾರೆ (ಎಂಭತ್ತರ ಹತ್ತಿರದ ನಾಗ ಐತಾಳರ ಮುಗ್ಧತೆ ಮತ್ತು ಬಾಲಕುತೂಹಲ ಅವರ ಪರಿಚಯಸ್ಥರಿಗೆ ಅಪರಿಚಿತವಲ್ಲ. ಒಮ್ಮೆ ನಾನು ಅವರ ಮನೆಯಲ್ಲಿ ಹರಟುತ್ತ ಕುಳಿತಿದ್ದಾಗ ‘ಈ ಊರಿನ ಹೆಸರು ಆರ್ಕೇಡಿಯಾ ಎಂದು ಏಕೆ ಗೊತ್ತೋ?’ ಎಂದರು. ನಾನು ಗೊತ್ತಿಲ್ಲ ಎಂದು ತಲೆಯಾಡಿಸಿದೆ. ‘ಮೊದಲು ಈ ಊರಿನಲ್ಲಿ ಐದು ಕೇಡಿಗಳಿದ್ದರಂತೆ. ಆಗ ಐದ್‍ಕೇಡಿಯಾ ಅನ್ನುತ್ತಿದ್ದರು. ಹನ್ನೊಂದು ವರ್ಷಗಳ ಹಿಂದೆ ನಾನು ಈ ಊರಿಗೆ ಬಂದು ನೆಲಸಿದ ಮೇಲೆ ಒಟ್ಟು ಆರು ಕೇಡಿಗಳಾಗಿ ಊರಿನ ಹೆಸರು ಆರ್ಕೇಡಿಯಾ ಎಂದು ಬದಲಾಯಿತು’ ಎಂದು ಜೋರಾಗಿ ಚಪ್ಪಾಳೆ ತಟ್ಟು ನಕ್ಕರು).

ಐತಾಳರ ಈ ವಿಶೇಷಗುಣದಿಂದಾಗಿ ಜೀವ, ಜನನ, ಮರಣ, ರೋಗಗಳು, ಅನುವಂಶೀಯತೆ, ತಳಿವಿಜ್ಞಾನ, ಕ್ಲೋನಿಂಗ್ ಮುಂತಾದ ಜೈವಿಕ ಕ್ರಿಯೆಗಳನ್ನು ಅವುಗಳ ರಾಸಾಯನ ಶಾಸ್ತ್ರದ ಭಾಷೆಯಲ್ಲಿ ವಿವರಿಸುವಷ್ಟೇ ಸುಲಭವಾಗಿ ವಿಜ್ಞಾನದಾಚೆಗೂ ಹೋಗಿ ಜನಸಾಮಾನ್ಯರಿಗೆ ದಕ್ಕುವಂತೆ ಹೇಳವ ಕಲೆ ಅವರಿಗೆ ಸಿದ್ಧಿಸಿದೆ. ಉದಾಹರಣೆಗೆ, ಪ್ರಕೃತಿ ಮತ್ತು ವಿಜ್ಞಾನವನ್ನು ಕುರಿತಾದ ಒಂದು ತಾತ್ವಿಕ ಚಿಂತನೆಯಲ್ಲಿ ಈ ಕೆಳಗಿನ ಸಾಲುಗಳನ್ನು ಗಮನಿಸಿ – ‘”ಜೀವ” ಎಂಬ ಪ್ರಕ್ರಿಯೆಯಲ್ಲಿ ಅಸಂಖ್ಯಾತ ರಾಸಾಯನಿಕ ಕ್ರಿಯೆಗಳು ಸೇರಿಕೊಂಡಿವೆ. ಅವು ಹೇಗೆ ಸೇರಿಕೊಂಡವೆಂಬುದು ನಮ್ಮ ತರ್ಕಕ್ಕೆ ಮೀರಿದ್ದು. ಆದರೆ ‘ಜೀವ’ ಮುಂದುವರೆಯಬೇಕಾದಲ್ಲಿ ಈ ರಾಸಾಯನಿಕ ಕ್ರಿಯೆಗಳು ಜರುಗುತ್ತಲೇ ಇರಬೇಕು. ಈ ಕ್ರಿಯೆಗಳನ್ನು ನಡೆಸಿಕೊಂಡು ಹೋಗುವಲ್ಲಿ ನಾವು ಅಸಮರ್ಥರಾದ ದಿನ ಸಾವು ಸಂಭವಿಸುವುದು. ಮರಣ ಒಂದು ವಿಧದಲ್ಲಿ ‘ಜೀವ’ವೆಂಬ ಶಬ್ಧವನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ. ಅದಕ್ಕೊಂದು ಉದಾಹರಣೆಯಾಗಿ ವೈರಸ್ ಇದೆ. ಒಂದು ಜೀವಿ ತನ್ನಂತೆಯೇ ತದ್ರೂಪದ ಮತ್ತೊಂದು ಜೀವಿಯನ್ನು ಉತ್ಪತ್ತಿ ಮಾಡುವ ಶಕ್ತಿ ಪಡೆದಿರುತ್ತದೆ ಎಂಬುದನ್ನು ಒಪ್ಪಿಕೊಂಡಲ್ಲಿ, ವೈರಸ್ ಈ ನಿಟ್ಟಿನಲ್ಲಿ ನಮಗೆ ಸವಾಲಾಗಿ ನಿಲ್ಲುತ್ತದೆ. ವೈರಸ್ ಕೂಡ ಮರು ಉತ್ಪತ್ತಿ ಮಾಡಬಲ್ಲುದು ಆದರೆ ಅದು ಅದಕ್ಕೆ ಸಾಧ್ಯವಾಗುವುದು ಯಾವುದಾದರೊಂದು ಜೀವಕಣವನ್ನು ದಾಳಿ ಮಾಡಿದಾಗಲೇ. ಅಂದರೆ, ಅತಿಥೇಯ ಜೀವಕೋಶದ ಹೊರಗೆ ವೈರಸ್‍ಗಳು ನಿರ್ಜೀವಿ ಜಡವಸ್ತುಗಳೇ!’
ಮೇಲಿನ ಸಾಲುಗಳನ್ನು ಉದಾಹರಿಸಿದ ಸಂದರ್ಭದಲ್ಲಿಯೇ ನಾನೊಂದು ಎಚ್ಚರಿಕೆಯ ಮಾತನ್ನೂ ಆಡಬೇಕು. ಇಡೀ ಪುಸ್ತಕವು ಮೇಲಿನ ಸಾಲುಗಳಷ್ಟು ಸರಳವಾಗಿಲ್ಲ. ಹಾಗೆ ಸರಳವಾಗಿಸುವುದೇ ಉದ್ಧೇಶವಾದಂತೆ ಲೇಖಕರಿಗೆ ಕಾಣುವುದಿಲ್ಲ. ವಿವರಣೆಗಳನ್ನು ಕೊಡುವ ರಭಸದಲ್ಲಿ ವಿಜ್ಞಾನಿ ನಾಗ ಐತಾಳರು ನಿಮಗೆ ಅನೇಕ ವಿಷಯಗಳು ಗೊತ್ತು ಎಂದು ಊಹೆ ಮಾಡಿಕೊಳ್ಳುತ್ತಾರೆ. ಹಾಗಾಗಿ, ಬರೀ ಕುತೂಹಲಕ್ಕೆ ಓದುವ ಪುಸ್ತಕ ಇದಾಗಿರದೆ ಜೀವವಿಜ್ಞಾನದಲ್ಲಿ ನಿಜವಾಗಿಯೂ ಆಸಕ್ತಿ ಮತ್ತು ಪರಿಶ್ರಮಗಳು ನಿಮಗಿದ್ದರೆ ಮಾತ್ರ ಇದು ಸೂಕ್ತವಾದ ಪುಸ್ತಕ ಎನ್ನಿಸಿಕೊಳ್ಳಬಹುದು. ‘ನಾನು ಹೈಸ್ಕೂಲು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಬರೆದದ್ದು’ ಎಂದು ಲೇಖಕರು ಹೇಳಿಕೊಂಡರೂ ನನ್ನ ಅನುಭವದಲ್ಲಿ ಇದು ಕಾಲೇಜು ಮಟ್ಟದ/ವಿಶ್ವವಿದ್ಯಾಲಯಗಳ ಮಟ್ಟದ ಪುಸ್ತಕ. ಕನ್ನಡ ಭಾಷೆಯಲ್ಲಿ ಜೀವ ವಿಜ್ಞಾನವನ್ನು ಕಾಲೇಜು ಮಟ್ಟದಲ್ಲಿ ಓದಲು ವಿಶ್ವವಿದ್ಯಾಲಯಗಳಲ್ಲಿ ಅವಕಾಶವಿದೆಯೇ? ನನಗೆ ಗೊತ್ತಿಲ್ಲ. ಹಾಗೇನಾದರೂ ಇದ್ದರೆ ನಾಗ ಐತಾಳರ ‘ಜೀವನ ರಹಸ್ಯ’ ಒಂದು ಅತ್ಯುತ್ತಮ ಕೈಪಿಡಿಯಾಗಬಲ್ಲದು.

ಜೀವವಿಜ್ಞಾನ ಎಂದಾಗ ಅದು ಬಹಳ ಮೇಲಿನ ಸ್ಥರದ ಮಾತಾಗುತ್ತದೆ. ನಿಜ ಅರ್ಥದಲ್ಲಿ ಈ ಪುಸ್ತಕದ ಕೇಂದ್ರವಿರುವುದು ‘ಅಣು ಜೀವವಿಜ್ಞಾನ’ದಲ್ಲಿ (Molecular Biology). ಜೀವಕೋಶವೊಂದರ ಸುತ್ತಲಿನ ಅಧ್ಯಾಯನವೇ ಅಣು ಜೀವವಿಜ್ಞಾನ. ಜೀವ ರಚನೆಯಲ್ಲಿ ಇಟ್ಟಿಗೆಯಂತಿರುವ ಜೀವಕೋಶವು ತನ್ನ ಆಂತರಿಕ ರಚನೆಯಲ್ಲಿ ಬಹಳ ಸಂಕೀರ್ಣವಾದುದು. ಅನೇಕ ರಾಸಾಯನಗಳು ಮತ್ತು ಅವುಗಳ ಬಂಧಗಳಿಂದಾದ ‘ಜೈವಿಕ ಕಾರ್ಖಾನೆ’ ಜೀವಕೋಶಗಳು. ಜೀವಕೋಶಗಳನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭದ್ದಾಗಿ ಕಾಣುವುದಿಲ್ಲ. ಅತಿ ಸರಳವಾದ ಈಸ್ಟ್ ಜೀವಕೋಶ ಒಂದನ್ನು ಒಡೆದರೆ ಅದರಲ್ಲಿರುವ ಬಿಡಿಭಾಗಗಳು ಬೋಯಿಂಗ್ ೭೭೭ ಜೆಟ್ ವಿಮಾನದ ಬಿಡಿಭಾಗಗಳಿಗೆ ಸಮವಂತೆ! ಮಾನವ ಜೀವಕೋಶಕ್ಕೆ ಹೋಲಿಸಿದರೆ ಈಸ್ಟ್ ಜೀವಕೋಶ ಅತಿ ಸರಳ. ಇನ್ನು ನಮ್ಮ ಕೋಶಗಳ ಸಂಕೀರ್ಣತೆಯನ್ನು ಊಹಿಸಿಕೊಳ್ಳಿ. ಮಾಲಿಕ್ಯುಲರ್ ಬಯಾಲಜಿಯಲ್ಲಿ ನಡೆಯುತ್ತಿರುವ ವೇಗದ ಸಂಶೋಧನೆಗಳೇ ಸಾಕು ಈ ವಿಜ್ಞಾನ ಕ್ಷೇತ್ರದ ಅಗಾಧತೆಯನ್ನು ಸೂಚಿಸಲು. ಉದಾಹರಣೆಗೆ – ಜೀನ್ ಮತ್ತು ಅವುಗಳಿಗೆ ಸಂಬಂಧಿಸಿದಂತೆ ಅನುವಂಶಿಕ ಗುಣಗಳ ವಿಶ್ಲೇಷಣೆ, ಜೀನ್‍ಗಳ ರಹಸ್ಯ ಒಡೆಯುವ ಮೂಲಕ ನಮ್ಮ ಮೂಲಭೂತ ರಚನೆಯನ್ನು ಅರಿತುಕೊಳ್ಳುವಲ್ಲಿ ಸಹಕಾರಿಯಾದ ಹ್ಯೂಮನ್ ಜಿನೋಮ್ ಪ್ರಾಜಕ್ಟ್, ಕ್ಯಾನ್ಸರ್, ಅಲ್‌ಜ಼ೈಮರ್ಸ್, ಮುಂತಾದ ಭಯಂಕರ ರೋಗಗಳಿಗೆ ಮದ್ದನ್ನು ಕಂಡು ಹಿಡಿಯುವಲ್ಲಿ ನಡೆಯುತ್ತಿರುವ ಸಂಶೋಧನೆಗಳು, ಕ್ಲೋನಿಂಗ್ ಮುಂತಾದ ತಳಿವಿಜ್ಞಾನದ ತಂತ್ರಗಳು. ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ತಂತ್ರಜ್ಞಾನದಷ್ಟೇ ವೇಗವಾಗಿ ಬೆಳೆಯುತ್ತ ಅನೇಕ ಸಾಧ್ಯತೆಗಳೆಡೆಗೆ ಕೈಚಾಚುತ್ತಿರುವ ಜ್ಞಾನ ಶಾಖೆ ಈ ಅಣು ಜೀವವಿಜ್ಞಾನ. ಮಾಲಿಕ್ಯುಲರ್ ಬಯಾಲಜಿಗೆ ಅಣು ಜೀವವಿಜ್ಞಾನವೆಂದು ಕರೆದು ಆ ಪದವನ್ನು ಇಡೀ ಪುಸ್ತಕದಲ್ಲಿ ನಾಗ ಐತಾಳರು ಬಳಸಿಕೊಂಡಿದ್ದಾರೆ. ಇದೇ ರೀತಿ ಇನ್ನೂ ಅನೇಕ ವೈಜ್ಞಾನಿಕ ಪದಪುಂಜಗಳನ್ನು ಈ ಪುಸ್ತಕದ ದೆಸೆಯಲ್ಲಿ ಕನ್ನಡಕ್ಕೆ ನೀಡಿದ್ದಾರೆ. ಈ ಪದಗಳು ಬಹುಶಃ ನಾಗ ಐತಾಳರ ಸೃಷ್ಟಿಯೋ ಅಥವ ಕನ್ನಡದ ವಿಜ್ಞಾನ ಸಾಹಿತ್ಯದಲ್ಲಿ ಆಗಲೇ ಬಳಕೆಯಲ್ಲಿವೆಯೋ ನನಗೆ ಗೊತ್ತಿಲ್ಲ. ಕನ್ನಡದಲ್ಲಿ ಬಂದ ವಿಜ್ಞಾನ ಸಾಹಿತ್ಯದ ಪ್ರಚಾರದಿಂದ ಮತ್ತು ಮಾದ್ಯಮಗಳಲ್ಲಿ ಇಂತಹ ಪದಪುಂಜಗಳ ಬಳಕೆಯಿಂದ ಇವು ಆಸಕ್ತ ಓದುಗರನ್ನು ತಲುಪಿ ಕನ್ನಡದ ಪರ್ಯಾಯಪದಗಳಾಗಿ ನೆಲೆಕಂಡಾವು. ಆದರೆ ಆತರಹದ ಪ್ರಯತ್ನಕ್ಕೆ ಒಬ್ಬ ಕಾರಂತರು, ಒಬ್ಬ ಜಿ.ಟಿ. ನಾರಾಯಣರಾಯರು, ಒಬ್ಬ ನಾಗೇಶ ಹೆಗಡೆಯವರು, ಒಬ್ಬ ಸುಧೀಂದ್ರ ಹಾಲ್ದೊಡ್ಡೇರಿ, ಇಲ್ಲೊಬ್ಬ ನಾಗ ಐತಾಳರು ಸಾಲುವುದಿಲ್ಲ. ಕರ್ನಾಟಕ ಮತ್ತು ಭಾರತ ಸರ್ಕಾರಗಳಿಂದ ಪೋಷಿತವಾದ ಸಾಂಘಿಕ ಪ್ರಯತ್ನಗಳು ಅಗತ್ಯ. ಎಲ್ಲಕ್ಕಿಂತಲೂ ಹೆಚ್ಚಾಗಿ, ಇಂಗ್ಲಿಷ್‍ನಲ್ಲಿ ಸಾಧ್ಯವಾಗುವ ಎಲ್ಲ ಬಗೆಯ ವಿಜ್ಞಾನ ಓದುಗಳು ವಿಶ್ವವಿದ್ಯಾಲಯದ ಮಟ್ಟದಲ್ಲಿ ಕನ್ನಡದಲ್ಲಿ ದಕ್ಕುವಂತಾಗಬೇಕು.
ಈ ಪುಸ್ತಕದಲ್ಲಿನ ಮೊದಲ ಅಧ್ಯಾಯಗಳು ಜೀವಕೋಶಗಳ ರಚನೆ ಮತ್ತು ಕಾರ್ಯವಿಧಾನ, ಡಿಎನ್‍ಎ ಮತ್ತು ಕ್ರೋಮೊಸೋಮ್‍ಗಳ ರಚನೆ ಮತ್ತು ಕಾರ್ಯ ವ್ಯವಸ್ಥೆಯನ್ನು ವಿವರಿಸುತ್ತವೆ. ಮುಂದಿನ ಅಧ್ಯಾಯಗಳು ಜೀವವಿಜ್ಞಾನದ ತಂತ್ರಗಳು ಮತ್ತು ಅವುಗಳ ಅಳವಡಿಕೆಗಳ ಬಗ್ಗೆ ಇದೆ. ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿರುವ ಅಮೆರಿಕದಲ್ಲಿ ನೆಲೆಸಿರುವ ಮತ್ತೊಬ್ಬ ಕನ್ನಡಿಗ ವಿಜ್ಞಾನಿ ಡಾ. ಎಸ್.ಸಿ. ಚಂದ್ರಶೇಖರಪ್ಪನವರು ಹೇಳುವಂತೆ ‘ದಿನಂಪ್ರತಿ ಸಂಶೋಧನೆ ನಡೆಸುವ ತಮ್ಮ ವೃತ್ತಿಯಿಂದ ನಿವೃತ್ತರಾದ ಮೇಲೂ, ತಾವು ಅಭ್ಯಾಸಿಸಿದ ವೈಜ್ಞಾನಿಕ ಜ್ಞಾನವನ್ನು ತಾವು ಅಭ್ಯಾಸಿಸಿದಷ್ಟೇ ಉತ್ಸಾಹ ಮತ್ತು ಉತ್ಕಟೆಯಿಂದ ಇತರರೊಂದಿಗೆ ಹಂಚಿಕೊಳ್ಳಬೇಕೆನ್ನುವ ಅವರ ಬಯಕೆ, ಇತರರೂ ಜೀವಶಾಸ್ತ್ರವನ್ನು ತಮ್ಮ ಅಭ್ಯಾಸದ ವಿಷಯವನ್ನಾಗಿಸಿಕೊಳ್ಳಬಹುದು ಎನ್ನುವ ಆಶಯ ಅವರ ಬರಹಕ್ಕಿದೆ.’

ನಾಗ ಐತಾಳರು ಮತ್ತು ಅವರ ಪತ್ನಿ ಲಕ್ಷ್ಮಿಯವರೊಂದಿಗೆ ಲೋಕಾಭಿರಾಮವಾಗಿ ಹರಟುತ್ತ ನಾನು ಅವರನ್ನು ಕೆಣಕುವಂತೆ ಒಂದು ಪ್ರಶ್ನೆಯನ್ನು ಕೇಳಿದೆ – ‘ಐತಾಳರೇ, ಅಸಲಿಯಾಗಿ ಕರ್ನಾಟಕದಲ್ಲಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ಕನ್ನಡ ಭಾಷೆಯಲ್ಲಿ ವಿಜ್ಞಾನದ ಓದೇ ಇದ್ದಂತಿಲ್ಲ. ಹಾಗಿರುವಾಗ ನೀವು ಕನ್ನಡದಲ್ಲಿ ಬರೆದಿರುವ ಈ ಜೀವವಿಜ್ಞಾನ ಗ್ರಂಥವನ್ನು ಯಾರು ಸ್ವಾಮಿ ಓದುತ್ತಾರೆ?’
ಅಮಿತಾಭ್ ಬಚ್ಚನ್ನನ್ನಷ್ಟೇ ಎತ್ತರವಿರುವ ನಾಗ ಐತಾಳರು ಬಾಗಿ ಕಣ್ಣುಗಳನ್ನು ಕಿರಿದಾಗಿಸಿಕೊಂಡು ನನ್ನನ್ನು ನೇರವಾಗಿ ನೋಡಿ ‘ಚೆನ್ನಾಯ್ತ್ರೀ ನೀವು ಹೇಳೂದು. ಅವನ್ನೆಲ್ಲಾ ಯೋಚ್ನೆ ಮಾಡಿ ನಾವು ಬರೆಯುವುದನ್ನ ನಿಲ್ಲಿಸುದಕ್ಕಾಗುತ್ತಾ?’ ಎಂದರು ತಮ್ಮ ಕುಂದಾಪುರ-ಕೋಟಾ ಕನ್ನಡದ ಸೊಗಡಿನಲ್ಲಿ.

ಬರೀ ಜೀವ-ವಿಜ್ಞಾನ ಪುಸ್ತಕವಲ್ಲ, ಐತಾಳರು ಒಂದು ಕಾದಂಬರಿ, ಅಮೆರಿನ್‌ ಒಬ್ಬನ ದಿನಚರಿಯಿಂದ ಎನ್ನುವ ತಮ್ಮ ಜೀವನ ಚರಿತ್ರೆ, ಕಾರಂತ ಕುವೆಂಪು ಬೇಂದ್ರೆ ಪುತಿನ ಮಾಸ್ತಿ ರಾಜರತ್ನಂರ ಮೇಲೆ ಸಾಹಿತ್ಯ ಸಮೀಕ್ಷಾ ಸಂಪಾದನ ಗ್ರಂಥಗಳು, ಎರಡು ಕಥಾಸಂಕಲನಗಳು, ಲೇಖನಗಳ ಸಂಗ್ರಹ ಹೀಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಇದೀಗ ತಾನೆ ಅವರು ಮುಗಿಸಿರುವ ಒಂದು ಕಾದಂಬರಿ ಮುದ್ರಣದ ಹಂತದಲ್ಲಿದೆ.
ಕೆಲವರ ಜೀವನೋತ್ಸಾಹ ಮತ್ಸರ ಹುಟ್ಟಿಸುವಷ್ಟು ಉಚ್ಛ್ರಾಯವಾಗಿರುತ್ತದೆ.

‍ಲೇಖಕರು Admin

October 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: