ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗೇಶ್ ಕಾಳೇನಹಳ್ಳಿ ನೋಡಿದ ‘ರವಿಕೆ ಪ್ರಸಂಗ’

ನಾಗೇಶ್ ಕಾಳೇನಹಳ್ಳಿ

**

ಈಗ ‘ರವಿಕೆ’ ಕೂಡಾ ಸಿನೆಮಾ ಹೀರೋ ಆಗಬಲ್ಲದು. ನಿನ್ನೆ ‘ರವಿಕೆ ಪ್ರಸಂಗ’ ಸಿನೆಮಾ ನೋಡಿದೆ. ಮೇಲ್ನೋಟಕ್ಕೆ ‘ಎಂಥ ಸಹಾ ಇಲ್ಲಾ’ ಇದರಲ್ಲಿ ಅನಿಸುವ ರವಿಕೆ ಪ್ರಸಂಗ ಘನವಾದ ವಿಚಾರಗಳನ್ನು ಮುಟ್ಟಿದೆ. ಸಾಧಾರಣ ಮಧ್ಯಮ ವರ್ಗದ ಕುಟುಂಬದಲ್ಲಿ ಮದುವೆ ವಯಸ್ಸು ಮೀರಿ ಮದುವೆಯಾಗದೆ ಇರುವ ಮಗಳ ಬಗ್ಗೆ ಕುಟುಂಬಸ್ಥರ ಕಾಳಜಿ-ಆತಂಕ ಕಾಣಿಸಲಾಗಿದೆ. ಪ್ರಧಾನ ಪಾತ್ರದ ಸಾನ್ವಿ (ಭಾರತಿ ಭಟ್) ಧಡೂತಿ ಎಂಬ ಕಾರಣಕ್ಕೆ ಬಂದ ಹುಡುಗರು ಒಪ್ಪಲಿಲ್ಲ ಎಂದು ಎಲ್ಲಿಯೂ ಡೈಲಾಗ್ ನಲ್ಲಿ ಹೇಳಲಿಲ್ಲವಾದರೂ, ಆ ಪಾತ್ರ ಸಪೂರ ಆಗಲು ಯೋಗ, ಜಿಮ್, ಡಯಟ್ ಮಾಡಲು ತೊಡಗುವುದರ ಮೂಲಕ ಸ್ಲಿಂ ಆಗಬೇಕಾದ ಅನಿವಾರ್ಯವನ್ನು ಮತ್ತು ಆಕೆಯನ್ನು ನೋಡಲು ಬಂದ 32 ಗಂಡುಗಳು ರಿಜೆಕ್ಟ್ ಮಾಡಿರಬಹುದಾದ ಕಾರಣವನ್ನು ನಿರೂಪಿಸಲಾಗಿದೆ.

ಸಾನ್ವಿಯ ಕಸಿನ್ ಸಿಸ್ಟರ್ ಲೈಫ್ ಸ್ಟೈಲ್ – ಯೋಗಾ ಡಯಟ್ ಹಾಗೂ ಫಿಟ್ ಅಂಡ್ ಫೈನ್ ಆಗಿರುವ ಕಾರಣಕ್ಕೇ ಒಂದೇ ನೋಟಕ್ಕೆ ಎನ್ ಆರ್ ಐ ನೊಂದಿಗೆ ಎಂಗೇಜ್ಮೆಂಟ್ ಆಗಿರುವ ಬಗ್ಗೆ ಉಲ್ಲೇಖಿಸಿ ಸ್ಲಿಂ ಆಗಿರುವುದರ ಹೆಚ್ಚುಗಾರಿಕೆಯನ್ನೂ ಹೇಳಿದ್ದಾರಾ? ಇನ್ನು ಚಂದ ಕಾಣಲು ಡಿಸೈನರ್ ಬ್ಲೌಸ್ ಹೊಲಿಸಿಕೊಳ್ಳಲು ಡಿಜ಼ೈನರ್ ಗೆ ಸಾವಿರಾರು ರೂಪಾಯಿ ಕೊಡಲಾಗದ ಮಧ್ಯಮ ವರ್ಗದ ಕುಟುಂಬದ ಸಾನ್ವಿ ಬ್ಲೌಸ್ ಹೊಲಿಸಿಕೊಳ್ಳಲು ತಮ್ಮೂರಿನ ಟೈಲರ್ ಚಂದ್ರಣ್ಣ ನ ಮೇಲೆ ಡಿಪೆಂಡ್ ಆಗುವುದೂ ಕಾಣಬಹುದು. ಕೊಟ್ಟ ಅಳತೆ ಒಂದು ಸಪೂರ ಆಗುತ್ತೇನೆಂಬ ಭರವಸೆಯಲ್ಲಿ ಕೋರಿದ ಅಳತೆ ಇನ್ನೊಂದು.

ಕಡೆಗೆ ರವಿಕ್ ಅನ್ ಸೈಜ಼್ ಆಗುತ್ತೆ. ಎನ್ ಆರ್ ಐ ಹುಡುಗನನ್ನು ಇಂಪ್ರೆಸ್ ಮಾಡಲು ಸಾನ್ವಿಯ ತಯಾರಿ ಕೈಗೂಡಲಿಲ್ಲ. ಸರಿಯಾದ ಉಡುಗೆ ಇಲ್ಲದೆ ಆಕೆ ಅವನನ್ನು ನೋಡಲು ಹೋಗಲೇ ಇಲ್ಲ. ಅದೇ ಸಿಟ್ಟಿನಲ್ಲಿ ಟೈಲರ್ ಚಂದ್ರಣ್ಣನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಾನ್ವಿ ಅವನಿಗೆ ಶಿಕ್ಷೆ ಕೊಡಿಸಲು ಮುಂದಾಗುತ್ತಾಳೆ. ಹುಡುಗಿಯರು ತಮ್ಮಿಷ್ಟದ ಡಿಜ಼ೈನರ್ ಉಡುಪುಗಳನ್ನು ತೊಟ್ಟಾಗ ಊರ ಮಂದಿ ದೃಷ್ಟಿ ಹೇಗಿರುತ್ತದೆಂದೂ ನಿರೂಪಿಸಿದ್ದಾರೆ. ಲಾಯರ್ ಎಸ್.ಎಸ್.ಬಿ ಅವರ ಮಾತುಗಳಲ್ಲಿ ಉಡುಗೆಯಿಂದ ಹುಡುಗಿಯರ ಕ್ಯಾರೆಕ್ಟರ್ ಅಳೆಯುವ ಇಲ್ಲಾಜಿಕಲ್ ‘ಲಾಜಿಕ್ ‘ ಕೂಡಾ ಪ್ರಕಟಗೊಂಡಿದೆ. ಒಟ್ಟಾರೆ ‘ರವಿಕೆ’ ನೆಪವಾಗಿಟ್ಟುಕೊಂಡು ಮಹಿಳೆಯರ ಘನತೆಯ ವಿಚಾರವನ್ನೂ ಹೇಳಲು ಹೊರಟಿದೆ ರವಿಕೆ ಪ್ರಸಂಗ.

ರವಿಕೆಯೇ ಹೀರೋ ಆಗಿರುವ ಈ ಕಥೆಯ ಸಂಭಾಷಣೆ ಬರೆದಿರುವ ಪಾವನಾ ಸಂತೋಶ್ ತಮ್ಮ ನೈಜ ನುಡಿ ಹಾಗೂ ಡಯಲೆಕ್ಟ್ ಬಳಸಿಕೊಂಡಿದ್ದಾರೆ. ಅನಗತ್ಯ ಚೀಪ್ ಜೋಕ್ಸ್ ಮೊರೆ ಹೋಗಿಲ್ಲ. ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಚಿತ್ರ. ನಿರ್ದೇಶಕ ಸಂತೋಷ್ ಭರವಸೆಯ ದಿನಗಳನ್ನು ಎದುರು ನೋಡಬಹುದಾಗಿದೆ. ಪ್ರಧಾನ ಪಾತ್ರಧಾರಿ ಸಾನ್ವಿ (ಭಾರತಿ ಭಟ್) ಅವರಿಗೆ ರವಿಕೆ ಪ್ರಸಂಗ ಹೊಸ ಅವಕಾಶಗಳಿಗೆ ಒದಗಿ ಬಂದಿರುವ ಜಂಪ್ ಬೋರ್ಡ್ ಆಗಬಲ್ಲದು.

ನೋಡುಗರಿಗೆ ತಮ್ಮ ಮನೆಯ ಹೆಣ್ಣು ಮಗಳೇ ಅನಿಸಿಬಿಡುವಷ್ಟು ಸಹಜವಾಗಿ ಪಾತ್ರವಾಗಿದ್ದಾರೆ ಭಾರತಿ ಭಟ್. ಒಟ್ಟಾರೆ ಚಿತ್ರತಂಡ ಒಂದೊಳ್ಳೆ ಪ್ರಯತ್ನ ಮಾಡಿದೆ. ಹೀರೋ, ಹೀರೋಯಿನ್ ಇಲ್ಲದೆ ಒಂದು ಸರಳವಾದ ಅಂಶವನ್ನಿಟ್ಟುಕೊಂಡು ಸಿನೆಮಾ ಮಾಡಿ ಥೀಯೇಟರ್ ಗೆ ರಿಲೀಸ್ ಮಾಡುವುದು ಕೊಂಚ ಧೈರ್ಯದ ಕೆಲಸ. ಆ ಧೈರ್ಯವನ್ನು ಚಿತ್ರ ತಂಡ ತೋರಿದೆ. ಅವರಿಗೆ ಶುಭವಾಗಲಿ. ಹೆಚ್ಚಿನ ಜನರು ಥೀಯೇಟರ್ ನಲ್ಲಿ ರವಿಕೆ ಪ್ರಸಂಗ ನೋಡುವುದರ ಮೂಲಕ ಹೊಸ ಮಂದಿಯನ್ನು ಕೈಹಿಡಿದು ಮುನ್ನೆಡಿಸಿ. ಪಾವನ ಮತ್ತು ಸಂತೋಷ್ ದಂಪತಿಗಳಿಗೆ ಅಭಿಮಾನದ ಅಪ್ಪುಗೆ.

ನಿಮಗೆ ಜಯವಾಗಲಿ…

‍ಲೇಖಕರು Admin MM

5 March, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading