-ಕೇಶವ ಕುಲಕರ್ಣಿ
ಕವಿತೆ ಕೊರೆಯುತಿದೆ ಎದೆಯ
ಪದಗಳ ಹುಡುಕಾಟದಲಿ
ಕೂತಂತೆ ಮಾಡಿ ಹಾರಿ ಹೋಗಿವ ಚಿಟ್ಟೆ
ಕಾಗದದ ಮೇಲೆ ಕಾಣುವುದೇ ಇಲ್ಲ
—————————————
ಹಗಲು ಆಗದೆ ಇರಲಿ ರಾತ್ರಿ ಕಳೆಯದೆ ಇರಲಿ
ಚುಕ್ಕೆ ಎಣಿಸುವ ಆಟ ಮುಗಿಯದಿರಲಿ
ಮೋಡ ಚಂದಿರನಾಟ ತಂಪು ತಿಂಗಳ ಬೇಟ
ನಿದ್ದೆ ರೆಪ್ಪೆಯ ಬಳಿಗೆ ಬಾರದಿರಲಿ
—————————————
ಕೈಗಳ ಹೊಚ್ಚಲೇ ಕಾಲನು ಮುಚ್ಚಲೇ
ಎದೆಯಲಿ ಮೊಗವನು ಹೊದುಗಿಸಲೇ
ಬೆನ್ನನು ಸವರಲೇ ತಲೆಯನು ತಟ್ಟಲೇ
ಜೋ ಜೋ ಮಗುವೇ ಜೋಗುಳ ಹಾಡಲೇ
—————————————
ಮುಂಗುರುಳು ಹಾರಿ ಹಾರಿ
ಗಾಳಿ ಘಂ ಎಂದಿತು
ಕಣ್ಣಂಚಿನ ಚಂಚಲತೆಗೆ
ಎದೆಯೆ ಝಲ್ ಎಂದಿತು
—————————————
ಏನೆಲ್ಲ ಓದಿದರೂ ಏನೆಲ್ಲ ಕೇಳಿದರೂ
ಮನ ಮುಚ್ಚಿಕೊಂಡರೆ ಏನು ದಕ್ಕುವುದು?
ಏನೆಲ್ಲ ಕಂಡರೂ ಏಸು ಅನುಭವಿಸಿದರೂ
ಮನನವಿರದಿದ್ದರೆ ಏನು ಉಕ್ಕುವುದು?
—————————————
ಕಣ್ಣ ಬಟ್ಟಲ ತುಂಬ
ನಶೆ ತುಂಬಿದ ನೋಟ
ತುಟಿಯ ಕೆಂಬೇಲಿಯಲಿ
ದಾಳಿಂಬೆ ತೋಟ






0 Comments